ನನ್ನೊಳಗಿನ ಅಪ್ಪ-ಲೇಖಕ ಆತ್ಮಾನಂದ ಅವರ ಆತ್ಮಕತೆ. ಕೃತಿಯ ಕುರಿತು ಬರಹಗಾರ ಎಚ್. ಎಸ್. ರಾಘವೇಂದ್ರ ರಾವ್ ಅವರು ‘ನನ್ನೊಳಗಿನ ಅಪ್ಪ; ನಾನು ಈಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲಿ ಒಂದು. ಸಮುದಾಯಗಳ ಆತ್ಮಕಥೆ ಮತ್ತು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳ ನಿವೇದನೆ ಎರಡೂ ಆಗಬೇಕಾದ ತಂತಿನಡಿಗೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೀ ಆತ್ಮಾನಂದ ಅವರು ಸುಮಾರು ನೂರು ವರ್ಷಗಳ ಅವಧಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಆಲೋಚನೆಗಳು ದಲಿತ ಜೀವನದ ನರನಾಡಿಗಳನ್ನು ಆವರಿಸಿರುವ ಬಗೆಯನ್ನು ಮೂರು ಪೀಳಿಗೆಗಳ ಕಥಾನಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಕೇವಲ ಹಿಂಸೆ, ಶೋಷಣೆ ಮತ್ತು ವಿವಾದಗಳ ನಿವೇದನೆಯಷ್ಟೇ ಆಗದೆ, ಎಚ್ಚರ, ಪ್ರತಿಭಟನೆ, ಪ್ರಗತಿಗಳ ಕಥೆಯೂ ಆಗಿರುವುದು ಇದರ ಹೆಚ್ಚುಗಾರಿಕೆ" ಎಂದು ಪ್ರಶಂಸಿಸಿದ್ದಾರೆ.
ಲೇಖಕ ಆತ್ಮಾನಂದ ಅವರು 1961 ಅಕ್ಟೋಬರ್ 03ರಂದು ಮಂಡ್ಯದಲ್ಲಿ ಜನಿಸಿದರು. ಪ್ರಾಥಮಿಕದಿಂದ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಮಂಡ್ಯದಲ್ಲಿ, ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ‘ಕನ್ನಡ ಸಾಹಿತ್ಯದಲ್ಲಿ ಪರಕೀಯತೆಯ ಪ್ರತಿನಿಧಿಕರಣ' ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎನ್. ಎಂ. ಕೆ. ಆರ್. ವಿ. ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ನನ್ನೊಳಗಿನ ಅಪ್ಪ (ಆತ್ಮಕಥೆ) ಅವರ ಚೊಚ್ಚಲ ಕೃತಿ. ...
READ MORE