‘ಕಳೆದ ಕಾಲ ನಡೆದ ದೂರ’ ಕೃತಿಯು ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರ ಆತ್ಮಕಥನವಾಗಿದೆ. ಕೃತಿಯ ಕುರಿತು ಲೇಖಕ ಗೊ.ರು ಚನ್ನಬಸಪ್ಪ ಹೀಗೆ ಹೇಳುತ್ತಾರೆ; ಈ ಆತ್ಮಕಥನದ ಉದ್ದಕ್ಕೂ ಹರಿದಿರುವ ಜೀವದ್ರವ್ಯವೆಂದರೆ , ವ್ಯಕ್ತಿಯ ಘನತೆ ಗೌರವ, ಪ್ರಾಮಾಣಿಕ ಪ್ರಯತ್ನ, ಸರಳ ಸಜ್ಜನಿಕೆ, ಸಹಿತ ಮೀರಿದ ಸೇವೆಯ ಹಂಬಲ, ನ್ಯಾಯನಿಷ್ಠೆ, ನಡೆ ನುಡಿಗಳ ಸಮನ್ವಯ ಇಂತಹ ಮಾನವೀಯ ಮೌಲ್ಯಗಳು. ನ್ಯಾ. ಶಿವರಾಜ ಪಾಟೀಲ ಅವರ ವ್ಯಕ್ತಿತ್ವ ಎಲ್ಲಿಂದಲೋ ಕೊಸರಿ ಬಂದ ಉಸಿರಲ್ಲ; ಅದು ಮಳೆ-ಮಣ್ಣಿನ ಸಂಯೋಗದಿಂದ ಹೊಮ್ಮಿದ ಸಹಜ ಉಸಿರು. ನ್ಯಾ. ಶಿವರಾಜ ಪಾಟೀಲ ಅವರು ತಮ್ಮ ಈ ಆತ್ಮಕಥನವನ್ನು ಮುಗಿಸುತ್ತಾ “ನನಗೆ ವಯಸ್ಸಾಗಿದೆ ಎಂದು ನಾನು ಭಾವಿಸುವುದಿಲ್ಲ. ಕಳೆದ ಶತಮಾನದಲ್ಲಿ ಹುಟ್ಟಿ, ಈ ಶತಮಾನದಲ್ಲಿ ಬದುಕಿರುವ ಸೇತುವೆಯಾಗುವ ಸಂತಸ-ಸಮಾಧಾನಗಳಿಂದ ಮುಂದಿನ ದಿನಗಳಲ್ಲಿ ಬದುಕುತ್ತೇನೆ” ಎಂದಿರುವ ಮಾತು ಅವರ ಜೀವವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ನವರು. 1940 ರಲ್ಲಿ ಜನನ. ತಂದೆ ವಿರುಪಣ್ಣ ಪಾಟೀಲರು, ತಾಯಿ ಮಲ್ಲಮ್ಮನವರು. ಪ್ರಾಥಮಿಕ ಶಿಕ್ಷಣ ಹುಟ್ಟೂರಾದ ಮಲದಕಲ್ ನಲ್ಲಿ, ಮಾಧ್ಯಮಿಕ ಶಿಕ್ಷಣ ರಾಯಚೂರಿನ ಹಮ್ ದರ್ದ್ ಪ್ರೌಢಶಾಲೆಯಲ್ಲಿ, ಬಿ.ಎಸ್,ಸಿ ಪದವಿಯನ್ನು ಗುಲಬರ್ಗಾದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಗುಲಬರ್ಗಾದ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುತ್ತಾರೆ. ಕೃತಿಗಳು: ಮುಂಜಾವಿಗೊಂದು ನುಡಿಕಿರಣ , ...
READ MORE