ಮಧ್ಯಯುಗೀನ ದಕ್ಷಿಣ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಪ್ರಮುಖ. ಆದಿಲ್ಶಾಹಿಗಳ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖಣಿ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಮುಖ ಕೆಲಸವನ್ನು ಡಾ. ಎಂ.ಎಂ. ಕಲಬುರ್ಗಿ ಅವರ ನೇತೃತ್ವವದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಕೈಗೆತ್ತಿಕೊಂಡಿತ್ತು. ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಸಂಪಾದಕತ್ವದಲ್ಲಿ ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಈ ಸರಣಿಯ 9ನೇ ಸಂಪುಟ ’ಊರುಸೇ-ಇರ್ಫಾನ್’. ದಖನಿ ಭಾಷೆಯ ಹೆಸರಾಂತ ಕವಿ ಹಜ್ರತ್ ಖ್ವಾಜಿ ಮಹಮೂದ್ ಬಹರಿ ರಚಿಸಿದ ’ಮನ್ ಲಗನ್’ ಕೃತಿಯ ಕನ್ನಡ ಅನುವಾದವನ್ನು ರಿಯಾಜ್ ಅಹ್ಮದ್ ಬೋಡೆ ಅವರು ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಸಾರ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ ಅವರು ಇತಿಹಾಸ-ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರು. ಬಿಜಾಪುರ ಜಿಲ್ಲೆಯ ಕೋಲ್ಹಾರದವರಾದ ಅವರು ಕಾದಂಬರಿ, ನಾಟಕ ಜೀವನ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆದಿಲ್ ಷಾಹಿ ಕಾಲದ ಪಠ್ಯಗಳ ಕನ್ನಡ ಅನುವಾದ ಯೋಜನೆಯ ಸಂಪಾದಕರಾಗಿದ್ದರು. ಸಿಂದಗಿಯ ಬಿಂದಗಿ, ಕರ್ನಾಟಕ ವೈಭವ ವಾರಪತ್ರಿಕೆ, ಮಾಧ್ವಮಠಗಳು, ಆದಿಲ್ಶಾಹಿ ಆಸ್ಥಾನದ ಸಾಹಿತ್ಯ (ಸಂಶೋಧನೆ), ಮಹಿಮಾಪತಿರಾಯರ ಕೀರ್ತನೆಗಳು, ಕೃಷ್ಣದಾಸರ ಕೀರ್ತನೆಗಳು, ತಿಂಮಾಯಣ, ಶ್ರೀಸತ್ಯಧ್ಯಾನದರ್ಶನ (ಸಂಪಾದನೆ), ರತ್ನಾಕರ, ಮನೆ ಮುಳುಗಿತು (ಕಾದಂಬರಿ), ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಪ್ರಕಟಿತ ಕೃತಿಗಳು. ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು (2006). ...
READ MORE