ಕೊಡಗಿನ ಸಂಸ್ಥಾನದ ರಾಜೇಂದ್ರ ನಾಮೆ-ಎಂಬ ಕೃತಿ ರಚಿಸಿದವರು ಫ.ಗು. ಹಳಕಟ್ಟಿ. 1780-1809 ಅವಧಿಯಲ್ಲಿ ಕೊಡಗಿನಲ್ಲಿ ಆಳಿದ ದೊಡ್ಡ ವೀರರಾಜೇಂದ್ರ ಅರಸರ ಚರಿತ್ರೆ ಇದು. ಕೊಡಗನ್ನು ಅತಿಕ್ರಮಿಸಬೇಕು ಎಂದು ಟಿಪ್ಪು ಸುಲ್ತಾನನ ಹೆಬ್ಬಯಕೆ ಆಗಿತ್ತು. ಆದರೆ, ಇದರಿಂದ ರಕ್ಷಣೆ ಪಡೆಯಲು ವೀರರಾಜೇಂದ್ರರು ಬ್ರಿಟಿಷರ ಸಹಾಯ ಪಡೆದು ರಾಜ್ಯವನ್ನು ಉಳಿಸಿಕೊಂಡರು. ವೀರರಾಜೇಂದ್ರರ ಜೀವಿತಾವಧಿಯಲ್ಲಿ ನಡೆದ ಘಟನೆ-ಸನ್ನಿವೇಶಗಳೂ ಸೇರಿದಂತೆ ಕೊಡಗು ದೊರೆಗಳ ವಂಶಾವಳಿಯಿಂದ ಹಿಡಿದು ತನ್ನ ಆಡಳಿತವರೆಗಿನ ಸರ್ವ ವೃತ್ತಾಂತ-ಆಡಳಿತವನ್ನು ಬರೆಯಿಸಿದ್ದೇ ಮತ್ತು ಅಲ್ಲಿಯ ವಿವರಗಳನ್ನು ಆಧರಿಸಿದ್ದೇ ಈ ಕೃತಿಯ ವೈಶಿಷ್ಟ್ಯ. ಅಂದಿನ ಕಾಲದಲ್ಲಿ ಕೊಡಗು ಪರಸರದಲ್ಲಿ ಕನ್ನಡ ಭಾಷೆಯ ಸ್ವರೂಪ ಹೇಗಿತ್ತು ಎಂಬುದೂ ಈ ಕೃತಿಯಿಂದ ತಿಳಿಯಬಹುದು. ಹೀಗಾಗಿ. ರಾಜೇಂದ್ರನಾಮೆ ಎಂಬುದು ಕರ್ನಾಟಕದ ಇತಿಹಾಸ ಗ್ರಂಥಗಳಲ್ಲಿ ಪ್ರಮುಖವಾದದ್ದು ಎಂದು ಹೇಳಲಾಗುತ್ತದೆ.
‘ವಚನ ಪಿತಾಮಹ’ ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಾದೇವಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಉನ್ನತ ಶಿಕ್ಷಣವನ್ನು ಮುಂಬಯಿನಲ್ಲಿ ಪಡೆದರು. 1904ರಲ್ಲಿ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. 1923ರಲ್ಲಿ ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಮುಂಬಯಿ ವಿಧಾನಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ...
READ MORE