ತುಳಸಿ ವೇಣುಗೋಪಾಲ ಅವರ `ಸಮಗ್ರ ಕತೆಗಳು’ ಸಂಕಲನದಲ್ಲಿ ಇಪ್ಪತ್ತು ಕತೆಗಳಿವೆ. ಈ ಕಥೆಗಳು ಕನ್ನಡದ ಕಥನಗಾರಿಕೆಯನ್ನು ವಿಸ್ತರಿವೆ. ಬದುಕನ್ನು ಸೂಕ್ಷ್ಮ ನೋಟದಿಂದ ನೋಡುವ ಈ ಕತೆಗಳು ಮನಸ್ಸಿಗಿಳಿಯುತ್ತವೆ. ಓದುಗನ ಅಂತರಂಗವನ್ನು ಕಲುಕಿ, `ಗಂಡುತನದ’ ಚಹರೆಯನ್ನು ನಿಕಷಕ್ಕೊಡ್ಡಿಕೊಳ್ಳುವಂತೆ ಮಾಡತ್ತವೆ. ಪುರುಷನ ಒಳಗಿರುವ ಯಜಮಾನಕಿಯ ಸ್ವರೂಪವನ್ನು ತೀಕ್ಷ್ಣವಾಗಿ ಶೋಧಿಸುತ್ತವೆ. ಗಂಡಾಳಿಕೆಯ ದರ್ಪದಲ್ಲಿರುವ ಮನಸ್ಸುಗಳ ವಿಕಾರಗಳನ್ನು ಯಾವ ಸೈದ್ದಾಂತಿಕ ಭಾರವಿಲ್ಲದೆ ಸಹಜವಾಗಿ ತೆರದಿಡುತ್ತವೆ. ಮನುಷ್ಯ ಸಂಬಂಧಗಳಲ್ಲಿರುವ ಆಳದ ಹಿಂಸೆಯನ್ನು ತಣ್ಣಗೆ ಅಬ್ಬರವಿಲ್ಲದೆ ಕಟ್ಟಿಕೊಡುತ್ತವೆ. ಮನುಷ್ಯನ ಕಾಮ. ಪ್ರೇಮ, ಸಂಬಂಧ, ಕುಟುಂಬ, ಸಮಾಜ, ನಗರದ ಬದುಕಿನ ವಿನ್ಯಾಸವನ್ನು ಇವರ ಕತೆಗಳು ಅನ್ವೇಷಿಸುತ್ತಾ ಹೋಗುತ್ತವೆ. ಮಹಿಳೆಯ ತಪ್ತ ಮನಸ್ಸನ್ನು ಅನಾವರಣಗೊಳಿಸುತ್ತಾ, ಗಂಡಸಿನ ದಂದುಗವನ್ನು ನಿರೂಪಿಸುತ್ತವೆ. ವೈಚಾರಿಕ ನೆಲೆಯಲ್ಲಿ ಹೆಣ್ಣಿನ ಪ್ರತಿರೋಧದ ಮನಸ್ಸನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಈ ಕತೆಗಳನ್ನು ಓದುವುದೆಂದರೆ ನಮ್ಮ ಅಂತರಂಗದೊಂದಿಗೆ ಸಂವಾದಿಸಿ, ಮಾನವೀಯ ಸೆಲೆಯೊಂದು ಹೃದಯದಲ್ಲಿ ಹರಿಯುತ್ತದೆ. ಈ ಕತೆಗಳ ಭಾಷೆಯು ಅನುಭವದೊಂದಿಗೆ ಸಂಯೋಗಗೊಂಡು ಹೊಸ ಜೀವಲಯವೊಂದನ್ನು ಸೃಷ್ಟಿಯಾಗುತ್ತದೆ. ಗಟ್ಟಿ ಕಥನ ಕುಸುರಿಯಿಂದ ಸಂದ್ರವಾದ ಜೀವನಾನುಭವ ಈ ಕತೆಗಳಲ್ಲಿ ಮೈ ಪಡೆಯುತ್ತದೆ.
ಕಥೆಗಾರ್ತಿ ತುಳಸಿ ವೇಣುಗೋಪಾಲ್ ಅವರು ಕನ್ನಡದ ಸಣ್ಣ ಕಥೆಗಳ ಬರಹಗಾರರು. 1954 ನವೆಂಬರ್ 18 ರಂದು ಮಂಗಳೂರಿನಲ್ಲಿ ಹುಟ್ಟಿದರು. ಕನ್ನಡದ ಸ್ನಾತಕೋತ್ತರ ಪದವೀಧರರು. ’ಮುಂಜಾವಿಗೆ ಕಾದವಳು, ಪುಟಗಳ ಮಧ್ಯದಲ್ಲೊಂದು ನವಿಲುಗರಿ, ಜುಗಲಬಂದಿ’ ಕಥಾ ಸಂಕಲನ ರಚಿಸಿದ್ಧಾರೆ. ಮುಗಿಲ ಮಲ್ಲಿಗೆ ಎಟಕಿಸಿ, ಬೊಗಸೆಯಲ್ಲಿಷ್ಟು ಬೆಳಕು ತುಂಬಿ ಅವರ ಸಂಪಾದಿತ ಕೃತಿ. ಅವರ ಮೊದಲ ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್. ಶಿವರುದ್ರಪ್ಪ ಬಹುಮಾನ ಪಡೆದಿದ್ಧಾರೆ. ...
READ MORE