‘ಪದ್ಯದ ಮರ’ ಕೃತಿಯು ಕೃಷ್ಣಮೂರ್ತಿ ಬಿಳಿಗೆರೆ ಅವರ ಮಕ್ಕಳ ಸಾಹಿತ್ಯ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮಕ್ಕಳ ಮನೋಭಿತ್ತಿಯ ಮೇಲೆ ಪದಚಿತ್ತಾರ ಬಿಡಿಸುವ ಛಾತಿಯ ಗಾಯಕ ಕೃಷ್ಣಮೂರ್ತಿ ಬಿಳಿಗೆರೆ, ಹಾಡುಗಾರಿಕೆಯಲ್ಲೂ ಎತ್ತಿದ ಕೈ. ಸಾವಯವ ಕೃಷಿಯಲ್ಲಿ ನಂಬಿಕೆ ಇಟ್ಟಿರುವ ಇವರು, ಸ್ಥಳೀಯ ಜ್ಞಾನಪರಂಪರೆಯನ್ನು ಪ್ರಚಾರ ಮಾಡುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಸುತ್ತಲಿನ ಪರಿಸರವನ್ನು ಗಾಢವಾಗಿ ಪ್ರೀತಿಸುವ ಇವರು, ಮಗುಮನದ ಅನನ್ಯ ಚಿಂತಕ. ಏಕತಾರಿ ಹಿಡಿದು ಹಾಡಲು ಆರಂಭಿಸಿದರೆ ತಾವೇ ರಚಿಸಿದ, ದಾಸವರೇಣ್ಯರು ರಚಿಸಿರುವ ಹಾಡುಗಳಿಗೆ ರಾಗಹಾಕಿ ರುಚಿಕಟ್ಟಾಗಿ ಆಲಿಸುವ ತಾಳ್ಮೆಯನ್ನು ಕೇಳುಗರಲ್ಲಿ ಸೃಷ್ಟಿಸುವ ಗಾನಗಾರುಡಿಗ. ಬಿಸ್ಲು ಬಾಳೆಹಣ್ಣು ಮತ್ತು ಇತರ ಪ್ರಬಂಧಗಳು, ಅನ್ನದೇವರ ಮುಂದೆ, ಮಳೆನೀರ ಕುಡಿ ಮುಂತಾದ ವೈಚಾರಿಕ, ಪರಿಸರ ಸಂಬಂಧಿ ಕೃತಿಗಳ ಮೂಲಕ ಕನ್ನಡ ಸಾರಸ್ವತಲೋಕಕ್ಕೆ ಪರಿಚಿತರು’ ಎಂದು ವಿಶ್ಲೇಷಿತವಾಗಿದೆ.
©2025 Book Brahma Private Limited.