ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಲೇಖಕಿ ಬಿ.ಎ. ಮಮತಾ ಅರಸೀಕೆರೆ ಅವರ ‘ನೀರ ಮೇಲಿನ ಮುಳ್ಳು’. 50 ಕವನಗಳನ್ನು ಹೊಂದಿರುವ ಈ ಕವನ ಸಂಕಲನದ ಪ್ರತೀ ಕವನದ ವಸ್ತುವಿನ ಆಯ್ಕೆಯೇ ಗಮನ ಸೆಳೆಯುವ ಮೊದಲ ವಸ್ತು. ‘ಅಮ್ಮ’ನಿಂದ ಹಿಡಿದು ‘ಗಾಂಧೀಜಿ’ಯವರೆಗೆ ನಾನಾ ವಿಷಯಗಳು ಕವಯತ್ರಿಯನ್ನು ಕಾಡಿವೆ. ‘ಸದ್ದುಗಳು’ ಎಂಬ ಕವನದಲ್ಲಿ ‘ಕೇಳದ ಸದ್ದುಗಳ’ನ್ನು ಮಮತ ಸೂಕ್ಷ್ಮವಾಗಿ ಆಲಿಸಿದ್ದಾರೆ. ಪಿಡುಗಿನ ತಲ್ಲಣದ ನಡುವೆ ‘ವೈರಸ್ಸಿಗೊಂದು ಮನವಿ’ ಮಾಡಿ ಮತ್ತೆ ನಗಬೇಕಾಗಿದೆ ಈ ಜಗ ನಿರುಮ್ಮಳವಾಗಿ ಎಂದಿದ್ದಾರೆ. ಹೀಗಾಗಿಯೇ ಇಲ್ಲಿನ ಕವಿತೆಗಳು ಆರೋಗ್ಯಕರವಾದ ಚರ್ಚೆಗೆ ಒಳಗಾಗಗಲಿ ಎನ್ನುತ್ತಾರೆ ಬೆನ್ನುಡಿ ಬರೆದ ಕವಯತ್ರಿ ಎಚ್.ಎಲ್.ಪುಷ್ಪ. ರೈತರ ಜೀವನ, ಸಂಕಷ್ಟ, ಆತ್ಮಹತ್ಯೆಯನ್ನು ಪ್ರಶ್ನಿಸುತ್ತಾ ಸಾಗುವ ‘ಜಗದ ಕಣಜ’ ಕವನ ರೈತನ ಜೀವನ ಸುಭದ್ರವಾಗಲಿ ಎನ್ನುವ ಆಶಯ ಹೊತ್ತಿದೆ. ನಗರೀಕರಣ, ತಂತ್ರಜ್ಞಾನದ ಹಸಿವನ್ನು ಪ್ರಶ್ನಿಸುವ ‘ಹಟ್ಟಿ ಮತ್ತು ಆತ್ಮ’ ಆರ್ಥಿಕ ಸ್ಥಿತ್ಯಂತರದ ಪರಿಣಾಮಗಳನ್ನು ನಿರೂಪಿಸಿದೆ.
©2025 Book Brahma Private Limited.