ಒಂದು ನಿಸ್ತಂತುವಿನೆಳೆ ರೂಪ ಹಾಸನ ಅವರ ಕೃತಿಯಾಗಿದೆ. ನನ್ನ ಪಾಲಿಗೆ ಕವಿತೆಯೆಂಬುದು ನನ್ನೊಂದಿಗೆ ನಾನು ಏಕಾಂತದಲ್ಲಿ ಇರಬಹುದಾದ, ಮಾತಾಡಿಕೊಳ್ಳಬಹುದಾದ, ನಿವೇದಿಸಿಕೊಳ್ಳಬಹುದಾದ, ತಪ್ಪೋಪ್ಪಿಕೊಳ್ಳಬಹುದಾದ, ಕ್ಷಮೆ ಯಾಚಿಸಬಹುದಾದ, ದೂರಬಹುದಾದ, ಬಂಧನ, ನಿಬರ್ಂಧಗಳನ್ನು ಮೀರಬಹುದಾದ ಖಾಸಗಿ ಕ್ಷಣಗಳು. ಇದು ಆ.. ಈ.. ಎಲ್ಲಾ ಹಂಗುಗಳನ್ನು ಮರೆತು ತನ್ನಷ್ಟಕ್ಕಿರಬಹುದಾದ ಕ್ಷಣ ಕಾಲದ ನಿರಾಳತೆಯ ತಂಗುದಾಣ. ಇಷ್ಟಾಗಿಯೂ ಪದಗಳಲ್ಲಿ ವ್ಯಕ್ತವಾಗಲೊಲ್ಲದ, ಹಿಡಿದಿಡಲಾಗದ ಕವಿತೆಗಳನ್ನು ಅದರಷ್ಟಕ್ಕೇ ಜೀವಿಸಲು ಬಿಟ್ಟಿದ್ದೇನೆ... ನನ್ನೊಳಗೆ ನೂರೆಂಟು ಜಂಜಡಗಳನ್ನು ಕಟ್ಟಿಕೊಂಡಿರುವ ನನಗೆ ಇಂತಹ ಏಕಾಂತದ ಕ್ಷಣಗಳೇ, ಎಲ್ಲವನ್ನೂ ಎದುರಿಸುವ ಜೀವ ಚೈತನ್ಯ ನೀಡುತ್ತವೆ. ಅದು ಕೇವಲ ಹಾತೊರೆದರೆ ದಕ್ಕುವಂತದ್ದಲ್ಲ, ಬಹುಶಃ ಅದಕ್ಕೊಂದು ಮನಃಸ್ಥಿತಿ ತಾನಾಗಿಯೇ ಒದಗಬೇಕು. ಅದು ಆಗೀಗಲಾದರೂ ಸಾಧ್ಯವಾಗಿರುವುದರಿಂದಲೇ ನನ್ನಲ್ಲಿನ್ನೂ ಜೀವಂತಿಕೆ ಉಳಿದಿದೆ ಎನಿಸುತ್ತಿರುತ್ತದೆ. ಇನ್ನು ನನ್ನ ಕವಿತೆಗಳನ್ನು ಪ್ರೀತಿಯಿಂದ ಪ್ರಕಟಿಸಿದ ಎಲ್ಲ ಪತ್ರಿಕೆ, ನಿಯತಕಾಲಿಕ, ವೆಬ್ ಪೋರ್ಟಲ್ ಸಂಪಾದಕರುಗಳಿಗೆ, ಓದಿ ಸ್ಪಂದಿಸಿದ ಸಹೃದಯರ ಅಕ್ಕರೆಗೆ ವಂದನೆಗಳು. ಆಗೀಗ ಬರೆದಿಟ್ಟ ಕವಿತೆಗಳನ್ನು ಆಯ್ದು, ಐದು ವರ್ಷಕ್ಕೊಮ್ಮೆ ಸಂಕಲನ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಪಲ್ಲವ ನನ್ನ ಈ ಒಂದು ನಿಸ್ತಂತುವಿನೆಳೆ' ಸಂಕಲನ ಪ್ರಕಟಿಸಲು ಪ್ರೀತಿಯಿಂದ ಮುಂದಾಗಿದ್ದಾರೆ. ಅವರಿಗೆ ಮತ್ತು ಸುಂದರ ಮುಖಪಟ ರಚಿಸಿದ ಡಿ.ಕೆ.ರಮೇಶ ಅವರಿಗೆ, ಪುಟವಿನ್ಯಾಸ ಮಾಡಿದ ಶ್ರೀಮತಿ ಬಿ.ರಶ್ಮಿ, ಮುದ್ರಿಸಿದ ಎಲ್.ಕೆ.ಪ್ರೆಸ್ ಇಂಕ್ ಬೆಂಗಳೂರು ಅವರಿಗೆ ಋಣಿ ಎನ್ನುತ್ತಾರೆ ರೂಪ ಹಾಸನ.
©2025 Book Brahma Private Limited.