'ಭರವಸೆಯ ಬೇರು' ಶಿಲ್ಪ ಕೆ.ಸಿ ಅವರ ಕೃತಿಯಾಗಿದೆ.ಭರವಸೆಯ ಬೇರು ಕವನಸಂಕಲನದಲ್ಲಿ ದೇವತಾ ಪ್ರಾರ್ಥನೆ ಇದೆ, ಗುರುಕಾರಣ್ಯಕ್ಕೆ ನಮನವಿದೆ, ದೇಶಪ್ರೇಮವಿದೆ, ಕನ್ನಡದ ಪ್ರೀತಿಯ ಹೊನಲಿದೆ, ವೈರಾಗ್ಯವಿದೆ, ಜೀವನೋತ್ಸಾಹವಿದೆ, ಜೀವಪ್ರೀತಿಯಿದೆ, ಹೆಣ್ಣಿನ ಅಭಿಮಾನವಿದೆ, ಪ್ರೀತಿ ಇದೆ, ನಿಸರ್ಗಪ್ರೇಮವಿದೆ, ಕೆಟ್ಟ ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲುವ ಛಲವಿದೆ, ನಮ್ಮನ್ನೆಲ್ಲ ಬಿಡದೆ ಕಾಡಿದ ಕರೋನಾದ ಬಗ್ಗೆಯೂ ಚಿಂತನೆ ಇದೆ. ಹೀಗೆ ಶ್ರೀಮತಿ ಶಿಲ್ಪಾರವರ ಕವಯಿತ್ರಿ ಮನಸ್ಸು ಹತ್ತಾರು ಪ್ರಪಂಚಗಳನ್ನು ಒಳಹೊಕ್ಕು, ಅಲ್ಲಿಯ ವಿಶೇಷಗಳನ್ನು ಹೊರಗೆಳೆದು ತಂದಿದೆ, ಈ ಸಂಕಲನವನ್ನು ಸುಂದರವಾಗಿಸಿದೆ. ಬೇಂದ್ರೆಯವರ ಬಗ್ಗೆ ಶಿಲ್ಪಾರಿಗೆ ಪ್ರೀತಿ, ಗೌರವ. ತಾನು ಬರೆದ ಕವನಗಳನ್ನು ಅವರಿಗೆ ಅರ್ಪಿಸುವ ಆಸೆ ಹೀಗೆ ವಿವರಿಸುತ್ತ ಹೊರಟರೆ ಅವರ ಪ್ರತಿಯೊಂದು ಕವನಗಳ ಬಗ್ಗೆ ಬರೆಯುವ ಮನಸಾಗುತ್ತದೆ. ನನ್ನ ಕೆಲಸ ಗ್ರಂಥವನ್ನು ಪರಿಚಯಿಸಿ ಅದರ ಸೊಗಸನ್ನು ಮಿತಿಯಲ್ಲಿ ತಿಳಿಸುವುದು, ದೀರ್ಘ ವಿಮರ್ಶೆಯಲ್ಲ. ಈ ಕವನ ಸಂಕಲನದ ಹೆಸರಿನಂತೆ ಶ್ರೀಮತಿ ಶಿಲ್ಪಾ ಓದುಗರ ಮನಸ್ಸಿನಲ್ಲಿ ಭರವಸೆಯನ್ನು ಬಿತ್ತಿದ್ದಾರೆ. ಅದನ್ನು ಹೆಚ್ಚು ಬೆಳೆಸುವ ಜವಾಬ್ದಾರಿ ಅವರದು. ಅವರದು ಶ್ರದ್ಧೆಯ ಪರಿಶ್ರಮ. ಆದ್ದರಿಂದ ಮುಂಬರುವ ಕವನಗಳು ಹೆಚ್ಚೆಚ್ಚು ಕಸುವಾಗಿ, ಆಳವಾಗಿ, ಚಿಂತನೆಯನ್ನು ಚುಚ್ಚಿ ಎಬ್ಬಿಸುವ ರೀತಿಯಲ್ಲಿ ಬರುವುದರಲ್ಲಿ ಸಂದೇಹವಿಲ್ಲ ಎಂದು ಗುರುರಾಜ ಕರಜಗಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.