ವಾಲ್ಮೀಕಿ ರಾಮಾಯಣದ ಸೌಂದರ್ಯವನ್ನು ಸರಳ ಕನ್ನಡದಲ್ಲಿ ಕವಿ ಸಾಲಿ ರಾಮಚಂದ್ರರಾಯರು ಪ್ರಕಟಿಸಿದ ಕೃತಿ-ಶ್ರೀ ರಾಮಚರಿತದ ಬಾಲಕಾಂಡವು. ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ ಎ.,ಟಿ. ಸಾಸನೂರು ‘ಭಾರತೀಯ ಸಾಹಿತ್ಯದ ಬಹುಭಾಗವು ಅಂದರೆ ಕಾವ್ಯ, ಕಾದಂಬರಿ, ನಾಟಕ ಹೀಗೆ ಯಾವುದೇ ಆದರೂ ರಾಮಾಯಣ ಆವರಿಸಿದೆ. ರಾಮಾಯಣವು ಪೃಕೃತಿ ವರ್ಣನೆಗಲ್ಲ; ಅಲಂಕಾಲ ಸಂಪತ್ತಿಗೂ ಅಲ್ಲ; ರಾಮಚಂದ್ರನ ದಿವ್ಯ ಚರಿತ್ರೆಗೆ ಹಾಗೂ ಆತನ ಆದರ್ಶಪ್ರಾಯವಾದ ಸಂದೇಶದ ಪ್ರಸಾರಕ್ಕೆ ರಾಮಾಯಣ ಇಂದಿಗೂ ಇದ್ದು ಭಾರತೀಯ ಸಾಹಿತ್ಯಕ್ಕೆ ಅನುಪಮವಾದ ಸೌಂದರ್ಯ ನೀಡುತ್ತಿದೆ. ಆದರೆ, ರತ್ನದಂತಹ ಇಂತಹ ಕೃತಿಗೆ ಮುಂದೆ ಯಾವುದ್ಯಾವುದೋ ಕಾರಣಕ್ಕೆ ಧೂಳು ಮುತ್ತಿದೆ. ಅದನ್ನು ಬೆಳಗಿಸುವ ಕಾರ್ಯ ಆಗಬೇಕಿದೆ. ಸಾಲಿ ರಾಮಚಂದ್ರರಾಯರು ಈ ಕೆಲಸ ಮಾಡಿದ್ದಾರೆ. ರಾಮಾಯಣ ಮೂಲದ ಸಾರವನ್ನು ಮಾತ್ರ ಕೃತಿಯಲ್ಲಿ ತಂದಿರಿಸಿದ್ದಾರೆ. ಸಂಸ್ಕೃತದಿಂದ ಕನ್ನಡೀಕರಿಸಿದ ಈ ಕೃತಿಯಲ್ಲಿ ಬಳಸಿದ ಭಾಷೆ ಸರಳವಾಗಿದೆ. ಸಹಜವಾಗಿದೆ. ಅಶುದ್ಧವಾದ ಪದಗಳ ಪ್ರಯೋಗವಿಲ್ಲ. ಭಾಷೆಯನ್ನು ವಿಕಾರಗೊಳಿಸದೇ ಭಾವವನ್ನು ಹೃದಯಂಗಮವಾಗಿ ವ್ಯಕ್ತ ಮಾಡಲು ಯತ್ನಿಸಿದ್ದೇ ಈ ಕೃತಿಯ ಹೆಗ್ಗಳಕೆ.ಸಣ್ಣ ಮಕ್ಕಳೂ ಸಹ ಈ ಕಾವ್ಯದ ಮಾಧುರ್ಯಕ್ಕೆ ಮನ ಸೂತು ಹಾಡುವಂತಿದೆ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.