ಡುಂಡಿರಾಜ್ರವರು ಬರೆದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಕಾರ್ಡಿದ್ರೆ ಕೈಲಾಸ. ರಾಜ್ಯದ ಮತ್ತು ದೇಶದ ರಾಜಕೀಯ ವಿಪರ್ಯಾಸಗಳು, ಜನರ ಭಕ್ತಿಯನ್ನು ದುರುಪಯೋಗಪಡಿಸಿಕೊಂಡು ಕೋಟಿಗಟ್ಟಲೆ ಆಸ್ತಿ ಮಾಡುವ ಢೋಂಗಿ ಸನ್ಯಾಸಿಗಳು ಹೀಗೇ ಹಲವು ವಿಷಯಗಳ ಬಗೆಗೆ ಡುಂಡಿರಾಜ್ರವರು ಪ್ರಜಾವಾಣಿಯಲ್ಲಿ ಬರೆದ ಹನಿಗವನ ಸೇರಿದ ಲೇಖನಗಳ ಸರಮಾಲೆ ಈ ಪುಸ್ತಕ. ಪುಸ್ತಕದ ಹಿನ್ನುಡಿಯಲ್ಲಿ ಲೇಖಕರಾದ ಡಾ. ಚಿಂತಾಮಣಿ ಕೊಡ್ಲೆಕೆರೆಯವರು ‘ಮಾನವನಾಗಿ ಹುಟ್ಟಿದ ಮೇಲೆ ಜೋಗದ ಗುಂಡಿಯನ್ನು ನೋಡಲೇಬೇಕು, ಹಟ್ಟಿಕುದುರು ಡುಂಡಿಯನ್ನು ಓದಲೇಬೇಕು’ ಎಂದು, ಡುಂಡಿರಾಜ್ರವರ ಬರೆವಣಿಗೆಯ ಶೈಲಿಯನ್ನು ಹೊಗಳಿದ್ದಾರೆ. ಸಾಮಾಜಿಕವಾಗಿ ಕಾಣ ಸಿಗುವ ಹಲವು ಸಮಸ್ಯೆ ಹಾಗೂ ನೋವುಗಳನ್ನು ಹಾಸ್ಯಭರಿತ ವ್ಯಂಗ್ಯದ ರೂಪದಲ್ಲಿ ಪ್ರಸ್ತುತ ಪಡಿಸುವ ಡುಂಡಿರಾಜ್ರವರ ಸಾಂಪ್ರದಾಯಿಕ ಶೈಲಿ ಈ ಪುಸ್ತಕದಲ್ಲಿ ಕೂಡ ಕಾಣಬಹುದು. ಬದುಕಿನ ಬಗ್ಗೆ, ರಾಜಕೀಯದ ಬಗ್ಗೆ ಎಲ್ಲೋ ಕಿಂಚಿತ್ತು ಆಶಾಭಾವ ಇಲ್ಲದೆ ಹೋದರೆ ಈ ನೋಟ, ಈ ಹಾಸ್ಯ ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಕಾಣಿಸಿಕೊಳ್ಳುವ ಅಣಕವಾಡುಗಳು ಓದಿನ ರುಚಿ ಹೆಚ್ಚಿಸಿವೆ. ಹನಿಗವನಗಳ ಮೂಲಕ ಓದುಗರನ್ನು ನಗಿಸುವುದಲ್ಲದೇ, ಸಾಮಾಜಿಕ ಕಳಕಳಿಯ ಕುರಿತಾಗಿ ಚಿಂತನೆಯನ್ನು ಮೂಡಿಸುವಲ್ಲಿ, ಡುಂಡಿರಾಜ್ರವರ ಕಾರ್ಡಿದ್ರೆ ಕೈಲಾಸ ಪುಸ್ತಕ ಸಫಲವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
©2025 Book Brahma Private Limited.