‘ವಾದಿ ಸಂವಾದಿ’ ಸಂಗೀತ ಕುರಿತು ಪಂಡಿತ್ ರಾಜೀವ ತಾರಾನಾಥ ಅವರ ಚಿಂತನೆಗಳನ್ನು ಲೇಖಕ ಟಿ.ಎಸ್. ವೇಣುಗೋಪಾಲ್ ಹಾಗೂ ಲೇಖಕಿ ಶೈಲಜಾ ಅನುವಾದಿಸಿ ಸಂಪಾಸಿದ್ದಾರೆ. ಆ ಮಾಲಿಕೆಯಲ್ಲಿ ಆರು ಭಾಗಗಳಾಗಿ ವಿಂಗಡಿಸಲಾದ ಲೇಖನಗಳನ್ನು ಕಾಣಬಹುದು, ಮೊದಲ ಭಾಗದಲ್ಲಿ ಔತ್ತಮ್ಯದ ದಾರಿ ಹುಡುಕುತ್ತಾ, ಎರಡನೇ ಭಾಗದಲ್ಲಿ- ನಾನೊಬ್ಬ ದೂತ ಅಷ್ಟೇ, ಮಾಧ್ಯಮವನ್ನೇ ಬದಲಿಸಿಬಿಟ್ಟ ಖಾನ್ ಸಾಹೇಬರು, ಸರೋದ್ ಹಿಡಿದ ಸಾವಂತ ಹಾಗೂ ಮೂರನೇ ಭಾಗದಲ್ಲಿ - ಸಿನಿಮಾದೊಂದಿಗಿನ ಒಡನಾಟ, ನಾಲ್ಕನೇ ಭಾಗದಲ್ಲಿ ನೆನಪಿನಾಳದಿಂದ, ಪಂಡಿತ್ ಭೀಮಸೇನ್ ಜೋಶಿ, ಶುದ್ಧ ಅಭಿಜಾತ ಹಿಂದೂಸ್ತಾನಿ ಸಂಗೀತದ ಒರೆಗಲ್ಲು, ಸಂಗೀತ ಮತ್ತು ನಾನು, ಅಭಿಜಾತ ಕಲೆಗಳು ಮತ್ತು ಸೌಂದರ್ಯ ಮೀಮಾಂಸೆಯ ಕೆಲವು ಸಮಸ್ಯೆಗಳು, ಭಾರತೀಯ ಸಿನಿಮಾದಲ್ಲಿ ಹಾಡು, ಪ್ರಸ್ತಾವನೆ, ಸೇರಿದಂತೆ ಆರು ಭಾಗಗಳಲ್ಲೂ ಸಂಗೀತಕ್ಕೆ ಸಂಬಂಧಿಸಿದ ವಿಭಿನ್ನ ಲೇಖನಗಳನ್ನು ಕಾಣಬಹುದಾಗಿದೆ.
(ಹೊಸತು, ಮೇ 2015, ಪುಸ್ತಕದ ಪರಿಚಯ)
ಸರೋದ್ ಮಾಂತ್ರಿಕ' ಎಂದೇ ಖ್ಯಾತರಾದ ರಾಜೀವ್ ತಾರಾನಾಥರ ಸಂಗೀತದ ಬಗೆಗಿನ ಚಿಂತನೆಗಳು – ಅನಿಸಿಕಗಳು ಇಲ್ಲಿ ದಾಖಲಾಗಿವೆ. ಇಲ್ಲಿ ಪುಸ್ತಕದ ತು೦ಬ ರಾಜೀವ್ ತಾರಾನಾಥರೇ ಮಾತನಾಡಿದ್ದಾರೆ. ಬದುಕಿನ ವಿವರಗಳನ್ನು ಸಂಗೀತದ ಜೊತೆಗಿರಿಸಿ, ಆತ್ಮೀಯವಾಗಿ ಹೇಳಿಕೊಂಡಿದ್ದಾರೆ. ಸಂಗೀತದ ಮಧ್ಯೆಯೇ ಹುಟ್ಟಿ ಬೆಳೆದು, ಸಂಗೀತವನ್ನೇ ಆರಾಧಿಸಿ ಉಸಿರಾಡಿದ ರಾಜೀವ್ ತನ್ನ ಬಗ್ಗೆ ಮಾತ್ರ ಹೇಳಿಕೊಳ್ಳದೆ ತನ್ನನ್ನು ರೂಪಿಸಿದ ಅಂದಿನ ಇನ್ನೂ ಅನೇಕ ಪ್ರಸಿದ್ಧ ಸಂಗೀತ ದಿಗ್ಗಜರನ್ನೂ ನೆನಪಿಸಿಕೊಂಡಿದ್ದಾರೆ. ಸಂದರ್ಶನಗಳಲ್ಲಿನ ಮಾತುಗಳು, ಪ್ರಸಿದ್ಧರು ಹಾಗೂ ಜನಸಾಮಾನ್ಯರೊಂದಿಗಿನ ಸಂಭಾಷಣೆಗಳು, ತನ್ನ ನೆನಪಿನಾಳದಿಂದ ತೋಡಿಕೊಂಡ ಆತ್ಮೀಯ ಭಾವನೆಗಳು ಕೃತಿಯ ಸಾಲು ಸಾಲುಗಳಲ್ಲೂ ಪ್ರತಿಧ್ವನಿಸಿ ಸಂಗೀತಮಯ ಸನ್ನಿವೇಶವನ್ನೇ ಸೃಷ್ಟಿಸಿಬಿಟ್ಟಿವೆ, ಸರೋದ್ ಕೇಳುತ್ತಿರುವೆವೋ ರಾಜೀವ್ ಮಾತುಗಳನ್ನೋ ಎಂಬಷ್ಟು ತಾದಾತ್ಮ ಮೂಡಿಬಂದಿದೆ. ಇಷ್ಟೆಲ್ಲ ಮಾತನಾಡುವಾಗ ರಾಜೀವ್ ತನಗೆ ಅತಿ ಪೂಜ್ಯರಾದ, ತನಗೆ ಬಾಲ್ಯದಲ್ಲಿ ಗುರುಗಳಂತಿದ್ದ ತನ್ನ ತಂದೆ ತಾರಾನಾಥರನ್ನು ಮರೆತಿಲ್ಲ. ತನ್ನ ತಾಯಿಯನ್ನು ಕೃತಜ್ಞತೆಯಿಂದ ಸ್ಥರಿಸಿದ್ದಾರೆ. ಅಪರೂಪದ ಛಾಯಾಚಿತ್ರಗಳು ಪ್ರಸ್ತಕಕ್ಕೆ ಮೆರಗನ್ನು ನೀಡಿವೆ.
©2025 Book Brahma Private Limited.