‘ಡಿ.ವಿ.ಜಿ.’ ಎಂದೇ ಖ್ಯಾತಿಯ ಡಾ. ಡಿ.ವಿ. ಗುಂಡಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ದ ರಸಧಾರೆಯ ಸಂಪುಟ-1-ಈ ಕೃತಿ. ‘ಕಗ್ಗ’ ವಾಙ್ಮಯಕ್ಕೆ ಲೇಖಕ ರವಿ ತಿರುಮಲೈ ರಚಿಸಿರುವ ‘ಕಗ್ಗ ರಸಧಾರೆ’ ಸೇರ್ಪಡೆಯಾಗುತ್ತಿದೆ. ಪ್ರತಿ ಕಗ್ಗಕ್ಕೂ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ನೀಡಲಾಗಿದ್ದು, ಕಗ್ಗದ ರಸಧಾರೆಯು ಮತ್ತಷ್ಟು ಧುಮ್ಮಿಕ್ಕುವಂತೆ ರಭಸ ನೀಡಿದ್ದಾರೆ. ಈ ಸತ್ತ್ವವಂತಿಕೆಯ ಕಾರಣದಿಂದ ‘ಕಗ್ಗ’ವನ್ನು ಕುರಿತು ಈಗಾಗಲೇ ಹಲವಾರು ಕೃತಿಗಳು ಹೊರಬಂದಿದ್ದರೂ ನೂತನ ಅರ್ಥಶೋಧಗಳಿಗೆ ಸದಾ ಅವಕಾಶ ಉಳಿದೇ ಇರುತ್ತದೆ. ಪ್ರಸ್ತುತ ‘ಕಗ್ಗ ರಸಧಾರೆ’ ವ್ಯಾಖ್ಯಾನ ಕೃತಿಯಲ್ಲಿ ಶ್ರೀ ರವಿ ತಿರುಮಲೈ ಅವರು ಒಂದು ವಿನೂತನ ಪ್ರಸ್ಥಾನವನ್ನು ಸಂಯೋಜಿಸಲು ಯತ್ನಿಸಿದ್ದಾರೆ. ಇಲ್ಲಿ ಪ್ರತಿ ಪದ್ಯದ ಪದವಿಭಾಗ, ಅಲ್ಲಲ್ಲಿ ಕಠಿಣ ಶಬ್ದಾರ್ಥ ಇದ್ದು ಅನಂತರ ಇಂಗಿತಾರ್ಥದ ವ್ಯಾಖ್ಯೆ ಇದೆ. ಓದಿದಷ್ಟು, ತಿಳಿದಷ್ಟು ಕಗ್ಗದ ಪಕ್ವತೆ ಹೆಚ್ಚುತ್ತಿದೆ. ಉತ್ತಮ ಸಾಹಿತ್ಯದ ಸಾಲಿನಲ್ಲಿ ಕಗ್ಗಕ್ಕೊಂದು ವಿಶಿಷ್ಟ ಸ್ಥಾನವಿದೆ. ಹೀಗೆ ‘ಕಗ್ಗ’ದ ಪದ್ಯಗಳ ಆಶಯದ ತಳಹದಿಯಾಗಿರುವ ಸತರ್ಕ ಚಿಂತನ ವಿನ್ಯಾಸದ ಹಂತಗಳನ್ನು ಸ್ಫುಟಗೊಳಿಸುವ ರೀತಿಯಲ್ಲಿ ಪ್ರಕೃತ ‘ಕಗ್ಗ-ರಸಧಾರೆ’ ವ್ಯಾಖ್ಯಾನವು ರೂಪುಗೊಂಡಿದೆ. ಪ್ರಕೃತ ಸಂಪುಟದಲ್ಲಿ ‘ಕಗ್ಗ’ದ ಮೊದಲ ಇನ್ನೂರು ಪದ್ಯಗಳ ಮೇಲಣ ವ್ಯಾಖ್ಯಾನವಿದೆ.
©2025 Book Brahma Private Limited.