ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರಾದ ಡಾ. ಶಂಕರಗೌಡ ಬೆಟ್ಟದೂರು ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ಪರಿಚಯಿಸಿದವರು. ಕರ್ನಾಟಕದಲ್ಲಿ ಚಿತ್ರಕಲಾ ಮಂಟಪ ಸ್ಥಾಪಿಸಿದವರು. ಇಂತಹ ಕಲಾ ಪ್ರತಿಭೆಯನ್ನು ಗೌರವಿಸಿ, ಪರಿಚಯಿಸುವ ನಿಟ್ಟಿನಲ್ಲಿ ಕನ್ನಡದ ಲೇಖಕ ಚಿದಾನಂದ ಸಾಲಿಯವರು ’ಚೌಕಟ್ಟಿನಾಚೆ...’ಎನ್ನುವ ಶಂಕರಗೌಡರ ಕಲಾಕೃತಿಗಳ ಅಕ್ಷರನೋಟವನ್ನು ಪ್ರಕಟಿಸಿದ್ಧಾರೆ. ಶಂಕರಗೌಡರ ಕಲಾ ಶೈಲಿ, ರಚನಾ ವಿನ್ಯಾಸ, ಕಲಾಭಿರುಚಿಯ ವಿವಿಧ ಆಯಾಮ, ಅವರ ವ್ಯಕ್ತಿತ್ವ ನೋಟಗಳೆಲ್ಲವನ್ನೂ ಈ ಪುಸ್ತಕದಲ್ಲಿ ಮಾಹಿತಿಪೂರ್ಣವಾಗಿಯೂ ಮತ್ತು ಅಷ್ಟೇ ಸೃಜನಾತ್ಮಕವಾಗಿಯೂ ಕಟ್ಟಿಕೊಟ್ಟವರು ಚಿದಾನಂದ ಸಾಲಿ. ಕಲಾವಿದನ ಬದುಕಿನ ಒಳನೋಟಗಳನ್ನು, ಮತ್ತು ಅವನ ಕಲಾ ಪ್ರಪಂಚದ ವಿವಿಧ ಮಜಲುಗಳನ್ನು ಅರಿಯುವ ಅಭಿಲಾಷೆ ಮತ್ತು ತಿಳಿಸಿಕೊಡುವ ಸಾಹಿತ್ಯಾಸಕ್ತಿ ಇವೆರಡೂ ಸಹ ’ಚೌಕಟ್ಟಿನಾಚೆ...’ಯಲ್ಲಿ ತಿಳಿಯಬಹುದು.
©2025 Book Brahma Private Limited.