‘ಆದ್ರೆ ಮಳೇಲಿ ಆದವ್ನೆ ಗಂಡ’ ನೆಂಪೆ ದೇವರಾಜ್ ಅವರ ಅಂಕಣಗಳ ಸಂಕಲನವಾಗಿದೆ. ನೆಂಪೆಯವರು ರೈತ ಸಂಗಾತಿ ಪತ್ರಿಕೆಯ ಅಂಕಣಕಾರರಾಗಿ ಬರೆಯುತ್ತಿದ್ದ ಲೇಖನಗಳನ್ನೇ ಇಲ್ಲಿ ಸಂಗ್ರಹಿಸಿ ತಮ್ಮ ಗೆಳೆಯರ ಒತ್ತಾಯದ ಮೇರೆಗೆ ಇಂತಹ ಒಂದು ಅದ್ಭುತ ಅಪರೂಪದ ಕೃತಿಯನ್ನು ನಮ್ಮ ಮುಂದೆ ಇರಿಸಿದ್ದಾರೆ. ಈ ಕೃತಿಯಲ್ಲಿ ನದಿ, ಅಣೆಕಟ್ಟು, ಮಳೆ, ನೆರೆ, ಸೇತುವೆ, ರೈತ ಹೋರಾಟ, ಎಪ್ಪತ್ತು ಎಂಭತ್ತರ ದಶಕದ ರಾಜಕೀಯ, ಮೀನು, ಏಡಿಗಳಂತಹ ಮಲೆನಾಡಿನ ಮೂಸೆಯಲ್ಲಿನ ಮಿಳಿತವಾದ ಅನುಭವಗಳ ವಿಸ್ಮಯಗಳ ಅಸ್ಮಿತೆಯನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿನ ಈ ಕೃತಿಯಲ್ಲಿ ಮಲೆನಾಡಿನ ಮಳೆಯ ವಿಶೇಷತೆಗಳಿದೆ, ನೆರೆ, ಪ್ರವಾಹ, ಅಣೆಕಟ್ಟುಗಳಿಂದ ಜೀವನ ಕಳೆದುಕೊಂಡ ಮತ್ತು ರೈತ ಹೋರಾಟದ ಜನರ ನೋವಿನ ಸೆಳೆತವಿದೆ. ವಿವಿಧ ಬಗೆಯ ಮತ್ಸ್ಯಲೋಕದ ಪರಿಚಯವಿದೆ. ಮಲೆನಾಡಿನ ಕೃಷಿ ಬದುಕು ಹಾದು ಹೋಗುತ್ತಿರುವ ಪರಿವರ್ತನೆಯ ಕಥನಗಳಿವೆ. ಆಧುನಿಕತೆಯ ಧಾವಂತದಿಂದಾಗುವ ಅನಾಹುತಗಳು, ಸಂಸ್ಕೃತಿ ಪಾರಂಪರಿಗಳ ಮೇಲೆ ಅವುಗಳ ದುಷ್ಪರಿಣಾಮಗಳ ಚಿತ್ರಣಗಳಿವೆ. ಜನ ಜೀವನದೊಂದಿಗೆ ಹಾಸುಹೊಕ್ಕಾಗಿರುವ ಅಧಿಕಾರಶಾಹಿ ಮತ್ತು ದುಷ್ಟರಾಜಕಾರಣದ ಭ್ರಷ್ಟತೆಯ ಕಥನಗಳಿವೆ.
©2025 Book Brahma Private Limited.