ಕಿಬ್ಬಚ್ಚಲ ಮಂಜಮ್ಮ ವಿರಚಿತ ಯಕ್ಷಗಾನ ಪ್ರಸಂಗಗಳು ಹಾಗೂ ಕೀರ್ತನೆಗಳ ಕೃತಿ ʻವೇದಾಂತ ತತ್ವಸಾರʼ. 1886ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು 1889ರಲ್ಲಿ ಮರು ಮುದ್ರಣ ಕಂಡ ಅಪೂರ್ವ ಕೃತಿ. ನಾರಾಯಣ ಯಾಜಿ ಸಾಲೆಬೈಲು ಅವರು ಈ ಪುಸ್ತಕವನ್ನು ಸಂಪಾದನೆ ಹಾಗೂ ಪರಿಚಯಿಸಿದ್ದಾರೆ. ಕಿಬ್ಬಚ್ಚಲ ಮಂಜಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಂಸಗಾರು ಸಮೀಪದ ಕಿಬ್ಬಚ್ಚಲಿನವರು. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಹವ್ಯಕ ಬ್ರಾಹ್ಮಣತಿ, ವಿವಾಹಿತೆ ಹಾಗೂ ತಪಸ್ವಿನಿ ಎಂದು ತಿಳಿದುಬಂದಿದೆ. ಜೊತೆಗೆ ಇವರು ಯಕ್ಷಗಾನದ ವಿಶಿಷ್ಟ ಪದ್ಯಬಂಧಗಳಲ್ಲಿ ಆಧ್ಯಾತ್ಮಕ್ಕೆ ಸಂಬಂಧಿಸಿದ ಪದ್ಯಗಳನ್ನು ಹೇಳುತ್ತಿದ್ದರು. ಹೀಗೆ ಯಕ್ಷಗಾನದ ಸತ್ವವನ್ನು ಬೆಳೆಸಿ ಅನಾಮಧೇಯರಾಗಿ ಉಳಿದ ಅನೇಕ ಮಹಿಳೆಯರಿಗೆ ಇವರು ಪ್ರತಿನಿಧಿಯಾಗಿ ಕಾಣುತ್ತಾರೆ. ಹಾಗಾಗಿ ನಾರಾಯಣ ಯಾಜಿ ಅವರು ಪ್ರಸ್ತುತ ಕೃತಿಯಲ್ಲಿ ಮಂಜಮ್ಮನ ಕುರಿತು ಹಾಗೂ ವೇದಾಂತ ತತ್ವಸಾರ ಕೃತಿಯಲ್ಲಿರುವ ಯಕ್ಷಗಾನ ಪ್ರಸಂಗಗಳಾದ ಜೀವ ಪರಮರ ಕಲ್ಯಾಣ ಮತ್ತು ಮನೋಬುದ್ಧಿ ಸಂವಾದ ಬಗೆಗಿನ ಮಾಹಿತಿಗಳನ್ನು ನೀಡಿದ್ದಾರೆ.
©2025 Book Brahma Private Limited.