ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು

Date: 28-03-2025

Location: ಬೆಂಗಳೂರು


"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ಪ್ರದರ್ಶನ ಕಲೆಯ ವಸ್ತುಗಳು ಅಸಭ್ಯತೆಯ ಮಾಂಸದ ಮುದ್ದೆಗಳು. ಅದರಲ್ಲೂ ಅವರ ವಿಶೇಷ ಆಯ್ಕೆಗಳಲ್ಲಿ "ಫಸ್ಟ್ ನೈಟ್ ಸ್ಕಿಟ್"ಗಳದ್ದೇ ಮೇಲೋಗರ. ಹೂಮಂಚದ ಹಸಿ ಹಸಿ ಭೋಗವಿಸರ್ಜನೆಯ ರಸಿಕ ದೃಶ್ಯಗಳದ್ದೇ ಪಾರಮ್ಯ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು' ಕುರಿತು ಬರೆದ ಲೇಖನ.

ಪ್ರಾಯಶಃ ಮೊದ ಮೊದಲಿಗೆ ಹಿಂದಿ, ಇಂಗ್ಲಿಷ್, ಮತ್ತಿತರೆ ಭಾಷೆಗಳಲ್ಲಿದ್ದ ಕಾಮೆಡಿ ಷೋಗಳ ಗುದುಮುರಿಗೆ ಕನ್ನಡಕ್ಕೂ ಅಮರಿಕೊಂಡು ಅದೀಗ ದಶಕವೇ ಮೀರಿದ ದಾಟುಹಾದಿಯಲ್ಲಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಕನ್ನಡದ ಕಿರುತೆರೆಯ ಸಾಂಸ್ಕೃತಿಕ ಸೌರಭದ ಚಹರೆ ಪಟ್ಟಿಗಳು ಸಭ್ಯತೆಯ ಎಲ್ಲೆಗಳನ್ನು ಮೀರಿ ಎಗರುತ್ತಲಿವೆ. ಅವು ಮನರಂಜನೆಯ ನೆವನದಲ್ಲಿ 'ಮಜಾ' ಗೋಜಲಿನ ಅಸಭ್ಯತೆಯ ಆಗರವೇ ಆಗುತ್ತಲಿವೆ. ಕಾಮೆಡಿ ಸ್ಕಿಟ್ ಅರ್ಥಾತ್ ಹದಿನೈದಿಪ್ಪತ್ತು ನಿಮಿಷಗಳ ಪುಟ್ಟ, ಪುಟ್ಟ ರಂಗರೂಪಕ ಗಿಲಿಗಿಚ್ಚಿ ಪ್ರದರ್ಶನಗಳ ಮೂಲಕ ಗಿಲೀಟಿನ ಪೈಪೋಟಿಗೆ ಇಳಿದು ಬಿಟ್ಟಂತಿವೆ. ಮತ್ತೆ ಕೆಲವು ರಿಯಾಲಿಟಿ ಶೋಗಳು ಕ್ರುಯಾಲಿಟಿಯ ಹಾದಿ ಹಿಡಿದಿರುವುದು ಹಳೆಯ ಸುದ್ದಿ.

ಇನ್ನೂ ಕೆಲವು ಹಿಂದೀ ಕಾಮೆಡಿ ಷೋಗಳ ತಾಸೊಪ್ಪತ್ತಿನ ರೋಲ್ ಮಾಡೆಲ್ ಮಾದರಿಯಲ್ಲಿ ಕನ್ನಡಿಗರ ವಿನೋದ ಲೋಕವನ್ನು ಆವರಿಸಿಕೊಂಡು 'ಷೋ'ವೊಂದು ಹಣದ ತೈಲಿ ತುಂಬಿಸಿಕೊಂಡಿತು. ದುರಂತವೆಂದರೆ ವಿನೋದ ಪ್ರಜ್ಞೆಯ ವಿವೇಕವನ್ನೇ ಗಾಳಿಗೆ ತೂರಿದಂತಿದೆ. ಒಂದುಕಾಲಕ್ಕೆ ಹಾಸ್ಯದ ರಸ ಋಷಿಗಳಿದ್ದ ಕನ್ನಡ ಸಿನೆಮಾ ಮತ್ತು ವೃತ್ತಿ ರಂಗಭೂಮಿಯ ಭೂಮತ್ವವನ್ನೇ ಮರೆತಿರುವ ಕಾಮೆಡಿ 'ಷೋ' ಜಗತ್ತನ್ನು ಯಾರು ಎಚ್ಚರಿಸಬೇಕು.? ಸೋಜಿಗವೆಂದರೆ ಕಿರುತೆರೆಯ ಕಾಮೆಡಿ ಷೋಗಳ ಬಹಳಷ್ಟು ಕಲಾವಿದರು ಪ್ರತಿಭಾಶಾಲಿಗಳೇ ಆಗಿರುವುದನ್ನು ಅಕ್ಷರಶಃ ಅಲ್ಲಗಳೆಯಲಾಗದು. ಆದರೆ ರಂಗಭೂಮಿಯ ಅದರಲ್ಲೂ ಬಹುತೇಕ ಗ್ರಾಮಭಾರತದ ಈ ಪ್ರತಿಭೆಗಳನ್ನು ಕಮರ್ಸಿಯಲ್ ಲಾಭಕೋರತೆಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ಪ್ರದರ್ಶನ ಕಲೆಯ ವಸ್ತುಗಳು ಅಸಭ್ಯತೆಯ ಮಾಂಸದ ಮುದ್ದೆಗಳು. ಅದರಲ್ಲೂ ಅವರ ವಿಶೇಷ ಆಯ್ಕೆಗಳಲ್ಲಿ "ಫಸ್ಟ್ ನೈಟ್ ಸ್ಕಿಟ್"ಗಳದ್ದೇ ಮೇಲೋಗರ. ಹೂಮಂಚದ ಹಸಿ ಹಸಿ ಭೋಗವಿಸರ್ಜನೆಯ ರಸಿಕ ದೃಶ್ಯಗಳದ್ದೇ ಪಾರಮ್ಯ. ಇನ್ನೇನು ಮಿಲನ ಮಹೋತ್ಸವ ಜರುಗೇ ಬಿಟ್ಟಿತ್ತೆಂಬುವ ಕಟ್ಟಕಡೆಯ ಕ್ಷಣಗಳ ತೂರ್ಯಾವಸ್ಥೆ. ಅಂತಹ ಕ್ಲೈಮ್ಯಾಕ್ಸ್ ಚಣ ಗಣನೆಯ ಗಳಿಗೆಯಲ್ಲಿ ಧುತ್ತೆಂಬಂತೆ ಸಣ್ಣದೊಂದು ಆತಂಕ ಒಡ್ಡುವ ಗಿಡ್ಡ ಕಡ್ಡಿಯಂತಹ ಅಡ್ಡಿಯ ಅವತಾರ. ಆ ಎಲ್ಲ ಸಂದರ್ಭದಲ್ಲಿ ಕಲಾತ್ಮ'ಕತೆ'ಯೆಲ್ಲವೂ ಮುಂಡಾಮೋಚಿ ಅಸಭ್ಯತೆ ಮತ್ತು ಅಸೂಕ್ಷ್ಮತೆಗಳ ಅಂಡಾವರಣ.

ಅಬ್ಬಬ್ಬಾ! ಸ್ಕಿಟ್ ಗಳ ಮೈತುಂಬಾ ಬಳಕೆಯಾಗುವ ಭಾಷೆಯ ವಿಷಯದಲ್ಲಂತೂ ಸಾಂಸ್ಕೃತಿಕವಾಗಿ ಹೇಳತೀರದ ಅಪಸವ್ಯ ಸಂಗತಿಗಳ ಅಟ್ಟಹಾಸ. "ಏನ್ ಕಿಸಿತಿಯಾ ಕಿಸಿ. ಅದೇನ್ ದಬಾಕ್ತಿಯಾ ದಬಾಕು." ಇವಂತೂ ಸಾಮಾನ್ಯತೀ ಸಾಮಾನ್ಯದ ಮಾತುಗಳು. ಗಂಡು ಹೆಣ್ಣು ತಾರತಮ್ಯ ಇಲ್ಲದೇ ಸಹಜ ಎನ್ನುವಂತೆ ಯಾವ ಎಗ್ಗೂ ಇಲ್ಲದೇ ಕೆಲವರ ಬಾಯಲ್ಲಿ ಮತ್ತೆ ಮತ್ತೆ ಈ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆ ಮೂಲಕ ಅವರು ಕಾಮೆಡಿ ಷೋಗಳ ಪಿತಾಮಹ ಪಟ್ಟ ಕಟ್ಟಿಕೊಂಡಿರುತ್ತಾರೆ. ಅವರಿಗೆ ಸದಾ ದಡಿಯಾ ವಯಸ್ಸನ್ನು ಬಚ್ಚಿಡುವುದೇ ಕೊರೊನಾ ಮೀರಿಸುವ ಈ ಕಾಲದ ಮಹಾರೋಗ. ಅದೆಲ್ಲ ಹೋಗಲಿ 'ಕ್ಷಮೆಯಿರಲಿ' ಎಂಬಂತೆ ಇದ್ದುದರಲ್ಲೇ ಇಂತಹ ಮಾತುಗಳನ್ನೇ ಅಂಥವರ ಪಾಲಿಗೆ ಪ್ರಾಯಶಃ ಪರಮ ಸಭ್ಯವೆಂದು ಕರೆಯಬಹುದೇನೋ.!?

ಕಾಮೆಡಿ ಸ್ಕಿಟ್ ಷೋಗಳೆಂದರೆ ಬಹುತೇಕ ಸದಭಿರುಚಿಯ ವಿರುದ್ಧದ ಪೆಟೆಂಟ್ ಪದಾರ್ಥಗಳು ಎಂಬ ಅರ್ಥಕ್ಕೆ ಹೇಳಿ ಮಾಡಿಸಿದಂತಹ ಷೋಗಳೆಂಬುದನ್ನು ಅವು ಸಾಬೀತು ಮಾಡಿದಂತಿರುತ್ತವೆ. ಅದರ ಸೃಷ್ಟಿಕರ್ತ ಪುಣ್ಯಾತ್ಮರು ಅವರದೇ ಆದ ಭಾಷೆ ಮತ್ತು ಭಾವವಿನ್ಯಾಸ ಹುಟ್ಟಿಸಿ ಬಿಟ್ಟಿದ್ದಾರೆ. ಅದಕ್ಕಾಗಿಯೇ ಎಂಬಂತ ಹೊಸಬಗೆಯ ಶೀಘ್ರ ಸ್ಖಲನದ ಗ್ಯಾಜೆಟ್ ನುಡಿಗಟ್ಟುಗಳನ್ನೇ ಕೂಡಿಟ್ಟು ಕೊಂಡಿದ್ದಾರೆ. ಆ ಮೂಲಕ ಅವರು ತಮ್ಮ ಅಸ್ಮಿತೆಯನ್ನು ಬಂದೋಬಸ್ತ್ ಮಾಡಿಕೊಂಡು ಬಿಟ್ಟಿದ್ದಾರೆ.

ಮಜಾ ಷೋಗಳ ಒಂದೆರಡು ನಿದರ್ಶನ ಇಲ್ಲಿ ಉಲ್ಲೇಖಿಸುವ ಮೂಲಕ ಅವುಗಳ ಗುಣಮಟ್ಟದ ಲೆಕ್ಕಾಚಾರ ಗುಣಿಸ ಬಹುದಾಗಿದೆ. ಕನ್ನಡದ ಹೆಸರಾಂತ ಆ್ಯಂಕರ್ ನಾಮಾಂಕಿತ ಷೋ ನಿರೂಪಕ ಮಹಾಶಯ ತನ್ನದೇ ಷೋ ಮಧ್ಯದಲ್ಲಿ ಹೀಗೆ ಸಂಭಾಷಣೆಗೆ ಇಳಿಯುತ್ತಾನೆ. " ಏಯ್ ಹುಡುಗಾ ನಿಮ್ಮ ಅಣ್ಣ ನಿನಗೆ ಖರ್ಚಿಗೆ ಹಣ ಕೊಡಲಿಲ್ಲವೆಂದು ನೀನು ನಿಮ್ಮಣ್ಣನ ಒಂದು ಕೈ ಕಟ್ ಮಾಡಿದೆ. ಇಟ್ಸ್ ಓಕೆ. ಒಂದುವೇಳೆ ನಿಮ್ಮ ಅಣ್ಣನಿಗೆ ಮಕ್ಕಳಾಗದಿದ್ದರೇ ನೀನು ಏನ್ ಕಟ್ ಮಾಡ್ತಿಯಾ.?" ಎಂದು ಗಂಭೀರವಾದ ಮುಖಭಾವದಲ್ಲಿ ತನ್ನದೊಂದು ಬಹುಮುಖ್ಯ ಪ್ರಶ್ನೆ ಅದೆನ್ನುವ ಸ್ವರದಲ್ಲಿ ಸೊಂಟದ ಮೇಲೆ ಪೊಗದಸ್ತಾಗಿ ಕೈ ಇಟ್ಟು ಕೇಳುತ್ತಾನೆ.

ಇಂತಹ ಅಸಭ್ಯ ಅರ್ಥದ ಮಾತುಗಳು ನಿರೂಪಕನ ಬಾಯಲ್ಲಿ ಬರುತ್ತಿದ್ದಂತೆ 'ಹೋಯ್' ಎಂಬ ಅರಚಾಟಗಳು. ಹಾಗೆ ನೋಡಿದರೆ ಅವೆಲ್ಲ ವಿಕೃತ ಬಗೆಯ ಕಿರುಚಾಟಗಳೇ. ಅಂತಹದೇ ಸಿಳ್ಳೆ, ಪಿಳ್ಳೆ ಚಪ್ಪಳಿಗೆಗಳ ಗೌಜು ಗದ್ದಲ. ಅವರೇನೋ ಕೆಲವೇ ಕೆಲವು ಮಂದಿ ಸ್ಟುಡಿಯೋದಲ್ಲಿ ಕುಂತು ಟೀವಿಯಲ್ಲಿ ಕಾಣಿಸಿಕೊಂಡ ಮತ್ತು ಕೇಳಿಸಿಕೊಂಡ ಉಮೇದಿನಲ್ಲಿ ಕಳೆದು ಹೋಗಬಹುದು. ಆದರೆ ಮನೆಗಳಲ್ಲಿ ಕುಂತ ಲಕ್ಷಾಂತರ ಮಂದಿ ಅದನ್ನು ನೋಡುತ್ತಾರೆಂಬ ಖಬರು ಅವರಿಗೆ ಬೇಡವೇ.?

ಇದಕ್ಕೆ ವ್ಯತಿರಿಕ್ತವಾದ ಮತ್ತೊಂದು ಸಂಭಾಷಣೆ ಸಂದರ್ಭವನ್ನು ಇಲ್ಲಿ ಉಲ್ಲೇಖಿಸಬೇಕಿದೆ. ಅಂದರೆ ಕಾಮೆಡಿ ಷೋ ತೀರ್ಪುಗಾರರನ್ನು ಉದ್ದೇಶಿಸಿ ಕಲಾವಿದನೊಬ್ಬನು ಟೆಲಿಕ್ಯಾಷ್ಟ್ ಸಂದರ್ಭದ ಸ್ಕಿಟ್ ನಡುವೆ ಕೇಳುವ ಪ್ರಶ್ನೆಯೊಂದು ನನಗಂತೂ ಮುಜುಗರ ತರಿಸಿದೆ. ಆದರೆ ಅವರ ಪಾಲಿಗೆ ಅದು ಡಬಲ್ ಮೀನಿಂಗ್ ಡೈಲಾಗ್ ಅಲ್ವಂತೆ!. ಅವರ ಆ ಸಂಭಾಷಣೆ ಕಿರಿದುಗೊಳಿಸಿ ಪ್ರಸ್ತುತ ಪಡಿಸುವೆ.

"ಜಗ್ಗಣ್ಣ, ಒಂದ್ ವಿಷ್ಯಾ ಗೊತ್ತಾ.? ಮದುವೆಗೆ ಮುಂಚೆ ನನ್ನ ಬಂದೂಕು ನೆಟ್ಟಗೆ ನಿಂತ್ಕೋತಿತ್ತು. ಎಂದು ತನ್ನ ಬಲಗೈಯನ್ನು ಮುಷ್ಟಿಮಾಡಿ ಎದೆಮಟ್ಟಕೆ ಕೈ ನೆಟ್ಟಗೆ ನಿಲ್ಲಿಸಿ ಬಿಟ್ಟ. ಅರೆಗಳಿಗೆ ತಡೆದು ಮದುವೆ ಆದ ಮೇಲೆ ನನ್ನ ಬಂದೂಕು ಠುಸ್ಸಂತ್ ಮಲಗಿ ಬಿಟ್ಟಿತೆಂದು ನೆಟ್ಟಗೆ ಮಾಡಿದ್ದ ಬಲಗೈ ಮುಷ್ಟಿಯನ್ನು ತೊಡೆತನಕ ಮೆತ್ತಗೆ ಕೆಳಗಿಳಿಸಿ ಬಿಟ್ಟ." ಅವನ ಬಂದೂಕಿನ ಈ ಖರಾಬು ಕತೆಯನ್ನು ಕೇಳುತ್ತಿದ್ದಂತೆ ತೀರ್ಪುಗಾರ ಮಹೋದಯ ಕಿಸಿ ಕಿಸಿ ನಗ ತೊಡಗಿದ. ಮಹಿಳಾ ತೀರ್ಪುಗಾರಳು ಮುಖಕ್ಕೆ ತನ್ನೆರಡು ಹಸ್ತಗಳನ್ನು ಮುಚ್ಚಿಕೊಳ್ಳುತ್ತಾ ಸಹ ತೀರ್ಪುಗಾರನಿಗಿಂತ ತಾನೇನು ಕಮ್ಮಿ ಎನ್ನುವಂತೆ ಅವನಿಗಿಂತ ಜೋರಾಗಿ ನಗ ತೊಡಗಿದಳು. ಮತ್ತೆ ಮತ್ತೆ ಇಬ್ಬರೂ ನಗತೊಡಗಿದರು.

ಸ್ಟುಡಿಯೋದಲ್ಲಿದ್ದವರು ಜಿದ್ದಿಗೆ ಬಿದ್ದವರಂತೆ ಅವರಿಬ್ಬರಿಗಿಂತ ಮತ್ತಷ್ಟು, ಇನ್ನಷ್ಟು ಎನ್ನುವಂತೆ ಅಧಿಕ ಸ್ವರಗಳಲ್ಲಿ ಬಿದ್ದು ಬಿದ್ದು ನಗಾಡ ತೊಡಗಿದರು. ಈ ಎರಡು ಸಂದರ್ಭಗಳ ರೂಪಕದಲ್ಲಿನ ಯಾವುದನ್ನು ಕಟ್ ಮಾಡ್ತಿದ್ದೆ ಮತ್ತು 'ಬಂದೂಕು' ಯಾವುದರ ಸಂಕೇತ ಎಂಬುದನ್ನು ಬಿಚ್ಚಿ ಹೇಳುವ ಅಗತ್ಯವೇ ಇಲ್ಲ. ಈ ಎರಡೂ ರೂಪಕಗಳಲ್ಲಿ ಬಳಕೆಯಾದ ಡಬಲ್ ಮೀನಿಂಗ್ ಏನೆಂಬುದು ಗೊತ್ತಾಗದೇ ಇದ್ದೀತೇ.? ಈಗ ಹೇಳಿ ಈ ಬಗೆಯ ಗಲೀಜು ರೇಟಿನ ಮೀಮಾಂಸೆಯ ಪ್ರದರ್ಶನಗಳಿಂದ ವಿನೋದ ಸಂಸ್ಕೃತಿ ಬಾಳಿ ಬದುಕ ಬಲ್ಲದೇ.? ಅದೊತ್ತಟ್ಟಿಗಿರಲಿ ಮನೆಯಲ್ಲೇ ಕುಂತು ಖಾಸಗಿ ದೂರದರ್ಶನಗಳ ಇಂತಹ ಕಚಡಾ ಅಭಿರುಚಿಯ ಕಾಮೆಡಿ ಕಾರ್ಯಕ್ರಮ ವೀಕ್ಷಿಸುವ ಕುಟುಂಬಸ್ಥರೆಲ್ಲ ಅವುಗಳಿಂದ ನಾವೇನು ಕಲಿಯ ಬಹುದು.?

ಇನ್ನು ಮಹಿಳಾ ಕಲಾವಿದೆಯರ ಡೈಲಾಗ್ಸ್ ಇದಕ್ಕಿಂತ ಹೊಲಸು. ನಿನಗ್ಯಾಕ ಮಕ್ಕಳಾಗಿಲ್ಲಂತ ಕೇಳುವ ಸಹ ಕಲಾವಿದೆಯ ಮಾತಿಗೆ ಇನ್ನೋರ್ವ ಕಲಾವಿದೆ ಕೊಡುವ ಉತ್ತರ ಹೀಗಿದೆ. " ನನ್ಗಂಡ ಕಬಡ್ಡಿ ಆಟಗಾರ. ಕಬಡ್ಡಿ, ಕಬಡ್ಡಿ ಅಂತ ಹತ್ರ ಬರ್ತಾನೆ. ನನ್ನ ಮುಟ್ತಿದ್ದಂಗೇ 'ಔಟ್' ಅಂತ ಹೊರಟೋಯ್ತಾನೆ. ಅದ್ಹೆಂಗೆ ಮಕ್ಕಳಾಗ್ತವೆ." ಮಕ್ಕಳಾಗದ್ದಕ್ಕೆ ಅವಳು ಕೊಡುವ ಈ ಉತ್ತರದ ಅರ್ಥ ಏನಂತ ಸಣ್ಣ ಮಕ್ಕಳಿಗೂ ಆಗ್ತದಲ್ಲವೇ‌.?

ನಮ್ಮ ರಂಗಸಂಸ್ಕೃತಿ ವಿಮರ್ಶಕ ಬೃಹಸ್ಪತಿಗಳು ವೃತ್ತಿ ರಂಗಭೂಮಿಯ ನಾಟಕಗಳನ್ನು ಡಬಲ್ ಮೀನಿಂಗ್ ಡೈಲಾಗುಗಳ ಕಾರ್ಖಾನೆಗಳು ಎಂಬಂತೆ ಕಡೆಗಣ್ಣಿನಿಂದ ಕಾಣುತ್ತಾರೆ. ಆದರೆ ಕಿರುತೆರೆಯ ಇಂತಹ ಶೀಘ್ರ ಸ್ಖಲನದ ಕಾಮೆಡಿ ಸ್ಕಿಟ್ಟುಗಳ ಪಠ್ಯದ ಮಾತುಗಳನ್ನು ಕೇಳಿದರೆ, ಅಂತಹ ದೃಶ್ಯಗಳನ್ನು ಕಂಡರೆ ಪ್ರಾಯಶಃ ಡಬಲ್ ಅಲ್ಲ ನೇರವಾದ ಮೀನಿಂಗ್ ಎಂದು ಅರ್ಥವಾಗಿ ಬಾಯಿ ಮಾತ್ರವಲ್ಲ ಎಲ್ಲ ಮುಚ್ಚಿಕೊಂಡು ಅವರುಗಳು ಸುಮ್ಮನಿರಬಹುದೇನೋ.? ಅಷ್ಟಕ್ಕೂ ಮುದ್ರಣ ಮಾಧ್ಯಮದ ಓದುವಿಕೆಯೇ ಔಟ್ ಡೇಟೆಡ್ ಎಂಬಂತೆ ಪರಿಗಣಿಸುವ ವರ್ತಮಾನದ ವಿದ್ಯುನ್ಮಾನ ಮಾಧ್ಯಮದ ಮಂದಿಗೆ ಇದ್ಯಾವ ಲೆಕ್ಕ ಎನ್ನುವಂತಾಗಿರ ಬಹುದೇನೋ.? ಅದೊಂದು ರೀತಿಯಲ್ಲಿ ಟೀವಿ ಟಾಕೀಜಿನ ಮೋಜು - ಮಸ್ತಿ, ಕೊಳಕು - ಕಾಮೆಡಿ ಮತ್ತು ಕಿಲಾಡಿತನವೂ ಆಗಿದ್ದೀತು.?

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯಿತ್ತಿರುವ ರಂಗಮೌಲ್ಯಗಳು
ನಲವತ್ತೆಂಟು ವರುಷಗಳ ಹಿಂದೆ ಡಾವಣಗೇರಿ ಸೀಮೆಗೆ ಕಾಲಿಟ್ಟ ಹೊಸತರಲ್ಲಿ...

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ
ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...
ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...
ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?
ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು

27-03-2025 ಬೆಂಗಳೂರು

"ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆ...

ಸಂಬಂಧ ಕಥೆಯಲ್ಲಿ ಕಾಣುವ ಜಾತಿ ಮತ್ತು ಲಿಂಗರಾಜಕಾರಣ

26-03-2025 ಬೆಂಗಳೂರು

"“ತಪ್ತ, ಫಿನಿಕ್ಸ್, ಗಿಜ್ಜಗನಗೂಡು”, ಇವು ಇವರ ಕಥಾಸಂಕಲನಗಳು. “ಪರಸಂಗದ ಗೆಂಡೆತಿಮ್ಮ, ಭುಜಂ...

ಕನ್ನಡ ವಿಮರ್ಶೆ -5 

24-03-2025 ಬೆಂಗಳೂರು

"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದ...