ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ

Date: 19-08-2024

Location: ಬೆಂಗಳೂರು


"ಐದೇ ಐದು ವರ್ಷಗಳ ಹಿಂದೆ ಹುಟ್ಟಿದ ಕನ್ನಡದ "ಬುಕ್ ಬ್ರಹ್ಮ" ಎಂಬ ಸ್ವತಂತ್ರ ಮಾಧ್ಯಮ ಹಮ್ಮಿಕೊಂಡ ಹಬ್ಬ. ನಾಕೈದು ವರ್ಷಗಳಲ್ಲಿ ಬುಕ್ ಬ್ರಹ್ಮ ಬೆಳೆದಿರುವ ಸಾಂಸ್ಥಿಕ ಮತ್ತು ಸಾಂಸ್ಕೃತಿಕ ಸ್ವರೂಪ, ಬೆಳವಣಿಗೆ ಅತ್ಯಂತ ಅಚ್ಚರಿದಾಯಕ. ಮೂರು ಹಗಲು, ಮೂರು ಸಂಜೆಗಳ ಬೆರಗು ಬೆಡಗಿನಿಂದ ಕೂಡಿತ್ತು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣದಲ್ಲಿ ‘ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ’ ಕುರಿತು ಬರೆದಿರುವ ಲೇಖನ.

ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಬೃಹತ್ ಮಾತ್ರವಲ್ಲ, ಅತ್ಯಾಧುನಿಕವಾದ ಆಡಿಟೋರಿಯಂ. ಅದು ಮತ್ತು ಅದರ ಸುತ್ತಮುತ್ತಲಿನ ವಾತಾವರಣದ ತುಂಬಾ ಮೂರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬದ ಕಲರವ. 2024 ರ ಆಗಸ್ಟ್ 9, 10, 11 ಈ ಮೂರು ದಿನ ಅಲ್ಲಿ ಅಕ್ಷರಶಃ ಅಕ್ಷರ ಜಾತ್ರೆಯೇ ಜರುಗಿತು. ಅದು ಅಂತಿಂತಹ ಸಾಹಿತ್ಯದ ಜಾತ್ರೆಯಲ್ಲ. ಭಾಷೆ, ಸಾಹಿತ್ಯ, ಸಂಗೀತ, ಪುಸ್ತಕೋದ್ಯಮ, ಮಾಧ್ಯಮ, ಕಾವ್ಯಾಭಿನಯಗಳ ಸಾಂಸ್ಕೃತಿಕ ಸುದೀಪ್ತ ತುಂಬಿ ತುಳುಕಿದ ಸಮೃದ್ಧ ಹಬ್ಬವೇ. ಐದೇ ಐದು ವರ್ಷಗಳ ಹಿಂದೆ ಹುಟ್ಟಿದ ಕನ್ನಡದ "ಬುಕ್ ಬ್ರಹ್ಮ" ಎಂಬ ಸ್ವತಂತ್ರ ಮಾಧ್ಯಮ ಹಮ್ಮಿಕೊಂಡ ಹಬ್ಬ. ನಾಕೈದು ವರ್ಷಗಳಲ್ಲಿ ಬುಕ್ ಬ್ರಹ್ಮ ಬೆಳೆದಿರುವ ಸಾಂಸ್ಥಿಕ ಮತ್ತು ಸಾಂಸ್ಕೃತಿಕ ಸ್ವರೂಪ, ಬೆಳವಣಿಗೆ ಅತ್ಯಂತ ಅಚ್ಚರಿದಾಯಕ. ಮೂರು ಹಗಲು, ಮೂರು ಸಂಜೆಗಳ ಬೆರಗು ಬೆಡಗಿನಿಂದ ಕೂಡಿತ್ತು.

ಮೂರು ದಿನಗಳ ಕಾಲ ನಾಲ್ಕು ಭಾಷೆಗಳ ಸಾಹಿತ್ಯದ ಮಹಾಸಂಗಮ. ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ನಾಲ್ಕು ಜಾಗತಿಕ ಭಾಷೆಗಳ ಸಾಹಿತ್ಯ, ಸಿನೆಮಾ, ರಂಗಭೂಮಿ, ಸಮೂಹ ಮಾಧ್ಯಮಗಳ ಕುರಿತು ಒಳನೋಟದ ವಿಚಾರಗಳ ಮಂಥನ. ನಾಲ್ಕು ರಾಜ್ಯಗಳ ವಾಙ್ಮಯ ಜಗತ್ತು ಅಲ್ಲಿತ್ತು. ಪ್ರಸ್ತುತ ಭಾಷಾ ಬಾಂಧವ್ಯ ಮತ್ತು ಸಾಹಿತ್ಯಕ ಆದಾನ ಪ್ರದಾನ ಬಹಳ ಮುಖ್ಯ. ಅಂತೆಯೇ ಅಂತಹ ಅಪ್ಡೇಟ್ ಸಂವಾದಗಳು ಏರ್ಪಟ್ಟವು. ಸಂವಾದ ಸಂಸ್ಕೃತಿಯೇ ಕಣ್ಮರೆಯಾಗಿ ಕಿರುಚಾಟದ ಕೊಳಕಾಟಗಳೇ ಮೇಲುಗೈ ಸಾಧಿಸುತ್ತಿರುವಾಗ ಸೋಪಜ್ಞಶೀಲ 'ಸಂವಾದ' ಸಂಸ್ಕೃತಿ ಮುನ್ನೆಲೆಗೆ ಬರಬೇಕಿದೆ. ಸಾಂಸ್ಕೃತಿಕ ಮತ್ತು ಭಾಷಿಕ ನೆಲೆಯ ಸಂವಾದಗಳು ಏರ್ಪಡಬೇಕಿದೆ. ಆ ನಿಟ್ಟಿನ ಬಿಬಿಎಲ್ಎಫ್ 2024 ಅಂದರೆ ಬುಕ್ ಬ್ರಹ್ಮ ಲಿಟ್ರೇಚರ್ ಫೆಸ್ಟಿವಲ್ 2024 ರ ಸಾರ್ಥಕ ಪ್ರಯತ್ನ ಅದಾಗಿತ್ತು.

ರಾಷ್ಟ್ರ ಮಟ್ಟದಲ್ಲಿ ಇಂಗ್ಲಿಷ್ ಸಾಹಿತ್ಯ ಕುರಿತು ಜರುಗುವ ಸುಪ್ರಸಿದ್ಧ "ಜೈಪುರ ಸಾಹಿತ್ಯ ಉತ್ಸವ" ಎಂಬುದು ಅನೇಕರಿಗೆ ಕೇಳಿ ಗೊತ್ತಿತ್ತು. ಆದರೆ ಬಹುತೇಕರು ಕಂಡಿರಲಿಲ್ಲ. ಅದೇ ಹಾದಿಯ ಇದೊಂದು ಅಪರೂಪದ ಮತ್ತು ಹೊಸ ಮಾದರಿಯ ಲಿಟ್ರೇಚರ್ ಫೆಸ್ಟಿವಲ್. ಅದರಲ್ಲೂ ದಕ್ಷಿಣದ ನಾಲ್ಕು ಪ್ರಮುಖ ಭಾಷೆಗಳ ಸಂವೇದನಾಶೀಲ ಸಾಹಿತ್ಯದ ಸುಗ್ಗಿ, ಸಾಂಸ್ಕೃತಿಕ ಸಂಭ್ರಮ. ನಾಲ್ಕು ಭಾಷೆಗಳ ಸಹಸ್ರಾರು ಮಂದಿ ಸಹೃದಯರು ಮೂರು ದಿನ ಸಂಭ್ರಮಿಸಿದ್ದರು. ಸಾಹಿತ್ಯದ ಜತೆಯಲ್ಲಿ ಶಾಸ್ತ್ರೀಯ ಸಂಗೀತ, ರಂಗಭೂಮಿ, ಯಕ್ಷಗಾನ, ಚಿತ್ರಕಲೆಗಳ ಮಹತಿಯಿಂದಾಗಿ ಇಡೀ ಉತ್ಸವಕ್ಕೆ ಕ್ಲಾಸಿಕ್ ರಂಗು ಫಳಫಳಿಸಿದ್ದು ಸುಳ್ಳಲ್ಲ.

ಬುಕ್ ಬ್ರಹ್ಮ ಸಮಾವೇಶವು "ಸೋಲ್ ಆಫ್ ಸೌಥ್" ಎಂಬ ಚಿಕ್ಕ ಹೆಸರಿನ ಚೊಕ್ಕ ಟ್ಯಾಗ್ ಲೈನ್ ಪಡೆದಿತ್ತು. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಕರ್ನಾಟಕದ ಬೀದರಿನಿಂದ ಹಿಡಿದು ಚಾಮರಾಜ ನಗರದವರೆಗೆ ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಒಟ್ಟಾರೆ ಸಂಸ್ಕೃತಿ ಪ್ರಿಯರಿಂದ ಸಾಹಿತ್ಯ ಜಾತ್ರೆ ಹುಲುಸುಗೊಂಡಿತ್ತು. ಎಲ್ಲ ವಯೋಮಾನದ ಪ್ರಬುದ್ಧ ಸಾಹಿತಿಗಳ ಸಮಾವೇಶ ಅದಾಗಿತ್ತು. ವಿಶೇಷವೆಂದರೆ ಯುವಜನಾಂಗದ ಪ್ರಾತಿನಿಧ್ಯ ಹೆಚ್ಚಿನದಾಗಿತ್ತು. ನೆನಪಿರಲಿ ಅಲ್ಲೊಂದು ಚಿಣ್ಣರಲೋಕವೂ ಇತ್ತು. ಪುಟ್ಟ ಮಕ್ಕಳಿಗೆ ಅಗ್ದೀ ಸೋಜಾಗಿ ಕತೆ ಹೇಳುವ ಮುಕ್ತಲೋಕ. ಅಲ್ಲಿಯೂ ಮಕ್ಕಳೊಂದಿಗೆ ಹದುಳಮಯದ ಮಾತುಕತೆ.

ಅಂದುಕೊಂಡಂತೆ ಅಲ್ಲಿ ಕಾರ್ಪೊರೇಟ್ ಸಂಸ್ಕೃತಿಯ ಸುವ್ಯವಸ್ಥೆ. ನಿರೀಕ್ಷೆ ಮೀರಿದ ಅಚ್ಚುಕಟ್ಟುತನ. ಅಂತಹದೇ ಸಮಯಪ್ರಜ್ಞೆ. ಗೋಷ್ಠಿಯ ಸಮಯ ಮುಗಿಯುತ್ತಿದ್ದಂತೆ ಗಳಗಂಟೆ ಬಾರಿಸುತ್ತಿತ್ತು. ಅಂದರೂ ಮತ್ತೆರಡು ಮೂರು ನಿಮಿಷ ಗೋಷ್ಠಿ ಮುಂದುವರೆದು ಸಂಪನ್ನವಾಗುವುದೇ ಸಹಜವಾಗಿತ್ತು. ಅಬ್ಬಾ! ಅಲ್ಲಿ ಅದೆಷ್ಟು ಮಂದಿ ಸುಸಂಸ್ಕೃತ ಸ್ವಯಂಸೇವಕರ ತಂಡ. ತಂಡದಲ್ಲೂ ವಿಶೇಷವಾಗಿ ಯುವತಿಯರದೇ ಮೇಲುಗೈ. ಒಟ್ಟಿನಲ್ಲಿ ಅದೊಂದು ಯಶಸ್ವಿ ಸಾಹಿತ್ಯ ಸಮಾವೇಶ. ಅದೆಲ್ಲ ಸುಮ್ಮನಲ್ಲ. ತಿಂಗಳುಗಟ್ಟಲೇ ತಯಾರಿ ಅದಕ್ಕೆಲ್ಲ. ಬುಕ್ ಬ್ರಹ್ಮ ಮುಖ್ಯಸ್ಥರಾದ ದೇವು ಪತ್ತಾರ ಮತ್ತು ಸತೀಶ್ ಚಪ್ಪರಿಕೆ ಹಾಗೂ ಅವರ ತಂಡ ಅದಕ್ಕಾಗಿ ಅಹರ್ನಿಶಿ ಶ್ರಮಿಸಿದ್ದು ಅಕ್ಷರಶಃ ಶ್ಲಾಘನೀಯ.

'ಮಂಟಪ' ಹೆಸರಿನ ಮುಖ್ಯವೇದಿಕೆ. ಮಥನ, ಅಕ್ಷರ, ಅಂಗಳ, ಪುಸ್ತಕ, ಚಿಣ್ಣರಲೋಕ ಹೆಸರಿನ ಪುಟ್ಟ ಪುಟ್ಟ ವೇದಿಕೆಗಳು. ಎಲ್ಲವೂ ಸಂವಾದಗಳಿಗೆ ಸಾಂಗತ್ಯಗೊಂಡಿದ್ದವು. ಆದರೆ ಪ್ರೇಕ್ಷಕರಿಗೆ ಸಂವಾದದ ಅವಕಾಶವೇ ಇರಲಿಲ್ಲ ಎನ್ನುವಷ್ಟು ಕ್ವಚಿತ್ತಾಗಿತ್ತು. ಬೇರೆ ಕಡೆಗಳಲ್ಲಿ ಜರುಗುವ ಬಹುತೇಕ ಸಾಹಿತ್ಯ ಗೋಷ್ಠಿಗಳಲ್ಲಿ ಚರ್ಚೆಯಾಗುವ ವಿಷಯಗಳಿಗಿಂತ ಇಲ್ಲಿ ತುಸು ಭಿನ್ನ ಸಂಗತಿಗಳು ಚರ್ಚೆಯಾದುದು ವಿಶೇಷ. ಶ್ರೇಷ್ಠತೆಯ ವ್ಯಸನಗಳು ಸೇರಿದಂತೆ ಅನೇಕ ಬಗೆಯ ವಿಷಯಗಳು. ಎಡ ಮತ್ತು ಬಲಗಳನ್ನು ಮೀರಿದ ಪಂಥ ತಮ್ಮದೆಂದು ಅಲ್ಲಿ ಕರೆದುಕೊಂಡವರು ಅನೇಕರು. ತಾವು ಎಡ ಮತ್ತು ಬಲ ಎರಡೂ ಅಲ್ಲ ಅಂತ ಅಂದುಕೊಂಡ ಕೆಲವರ ಧ್ವನಿಗಳಲ್ಲೆ ಬಲದ ಒಲವಿನ ವಾಸನೆ ಬರುವಂತಿತ್ತು.

ವೇದಿಕೆಗಳ ಚರ್ಚೆಗಳಿಗಿಂತ ಟೀ ಕಾಫಿ ಸ್ಟಾಲುಗಳೆದುರು ಜರುಗುತ್ತಿದ್ದ ಖಾಸಗಿ ಚರ್ಚೆಗಳು ಸಹಿತ ಹೆಚ್ಚು ಖುಷಿ ಕೊಡುತ್ತಿದ್ದವು. ತಾನು ಜೈಪುರ ಸಾಹಿತ್ಯ ಜಾತ್ರೆ ಕಂಡು ಬಂದವನು ಅದಕ್ಕೇನೂ ಕಮ್ಮಿ ಇಲ್ಲದ ಇದು ಯಶಸ್ವಿ ಉತ್ಸವ. ಎಲ್ಲೂ ಲೆಫ್ಟ್ ರೈಟ್ ಸೊಲ್ಲಿಲ್ಲ. ಹಾಗಂತ ಅನ್ನುತ್ತಿದ್ದಂತೆ ಮತ್ತೋರ್ವರು ಸಿಹಿಗಚ್ಚಿನ ಕಾಫಿ ಕುಡಿಯುತ್ತಾ 'ಪ್ರಕಾಶ್ ರಾಜ್' ಬಂದು ಖುದ್ದಾಗಿ ಕಾರ್ಯಕ್ರಮ ನೀಡಿದ ಮೇಲೆ ಮುಗೀತು. ರೈಟ್ ವಾಸನೆ ಹುಡುಕ ಬಾರದೆಂಬ ನವಿರು ಚಿಂತನೆಯ ಚರ್ಚೆಗಳಿಗೇನು ಕಡಿಮೆ ಮಹತ್ವ ಕೊಡಬಾರದು. ಹೇಳಬೇಕೆಂದರೆ ಜಾಗತೀಕರಣದ ನೆರಳಲ್ಲಿ ನಲುಗಿದ ಸಾಹಿತ್ಯ ಸಂವೇದನೆಗಳು, ತಲ್ಲಣಗಳು ಗಂಭೀರ ಚರ್ಚೆಯ ವಸ್ತುಗಳಾಗಿದ್ದವು. ಗೋಡೆಗಳು ಬೇಡ. ಸೇತುವೆಗಳು ಬೇಕು. ಇದು ನಿರ್ದಿಂಗತದ ಸ್ಪಷ್ಟ ಸಂದೇಶವಾಗಿತ್ತು. ಗೆಳೆಯ ಶ್ರೀಪಾದಭಟ್ ನಿರ್ದೇಶಿಸಿದ "ನಿರ್ದಿಂಗತ" ಪ್ರಸ್ತುತಿಯ ಎರಡೂ ಕಾರ್ಯಕ್ರಮಗಳು ಬಹಳೇ ಪರಿಣಾಮಕಾರಿ ಆಗಿದ್ದವು.

ಕನ್ನಡ ಸಾಹಿತ್ಯ ಸಮಾಗಮಗಳ ಸ್ಟಾರ್ ನಿರೂಪಕಿ ವತ್ಸಲಾ ಮೋಹನ್ ಅವರ ವಾತ್ಸಲ್ಯ ತುಂಬಿದ ಮನಮೋಹಕ ಮಾತುಗಳು. ಮುಖ್ಯ ವೇದಿಕೆ 'ಮಂಟಪ'ದಲ್ಲಿ ಆಂಗ್ಲಭಾಷೆಯ ಸಹನಿರೂಪಕಿ ಶಾಲಿನಿ ಇವರೀರ್ವರ ಸೊಗಸಾದ ನಿರೂಪಣೆಯೊಂದಿಗೆ ಸಾಹಿತ್ಯ ಉತ್ಸವದ ಶುಭಾರಂಭ. ಅದುವೇ ತೆಂಕಣ ನುಡಿಕೌದಿ ಹೆಸರಿನ ಆರಂಭೋತ್ಸವ‌. ಸಭಾಂಗಣದ ತುಂಬೆಲ್ಲ ವಾತಾನುಕೂಲಿ ಗಾಳಿ. ಆದರದು ಅಲ್ಲದಿರಬಹುದು ತೆಂಕಣದ ಗಾಳಿ. ಆದರೆ ದಕ್ಷಿಣ ಭಾರತದ ಹೆಸರಾಂತ ಐವರು ಸಾಹಿತ್ಯ ದಿಗ್ಗಜರು ವೇದಿಕೆ ಮೇಲಿದ್ದರು. ಕನ್ನಡದ ಹಿರಿಯ ಅನುಭಾವಿ ಕವಿ ಎಚ್. ಎಸ್. ಶಿವಪ್ರಕಾಶ್, ವಿವೇಕ ಶಾನಭಾಗ್, ಸಚ್ಚಿದಾನಂದನ್, ವೋಲ್ಗಾ, ಮತ್ತು ಜೆಯಮೋಹನ್. ಎಲ್ಲರ ಸಾಹಿತ್ಯದ ಮಾತುಗಳು ಚೊಕ್ಕದಾಗಿದ್ದವು. ಒಟ್ಟಾರೆ ಸಾಂಸ್ಕೃತಿಕ ಲೋಕದ ಬಿಕ್ಕಟ್ಟುಗಳನ್ನು ಚರ್ಚಿಸುವಾಗ ಇಡೀ ಸಮಾವೇಶ ಅಕಾಡೆಮಿಷಿಯನ್ ಪ್ರಣೀತವಾಗಿರಲಿಲ್ಲ. ಸಾಮಾನ್ಯ ಓದುಗರಿಗೂ ಬೇಕಾದ ಕಾಲದ ಅಗತ್ಯದಂತಿತ್ತು.

ಮೊದಲ ದಿನ ನಗುಮೊಗದ ಮಾನಸಿ ಸುಧೀರ್ ಕಾವ್ಯಾಭಿನಯ ಖುಷಿಕೊಟ್ಟಿತು. ಕನ್ನಡ ಸೇರಿದಂತೆ ಪಾರ್ಸಿ, ಮತ್ತಿತರೆ ಮತ್ತು ಅಮೀರ ಖುಶ್ರೋ ಕೃತಿಗಳನ್ನು ಬಿಂದುಮಾಲಿನಿಯ ಕ್ಲಾಸಿಕ್ ಗಾಯನ, ಬೆಳಗಿನ ಗಾಯನ ಮತ್ತು ವಿದ್ವಾನ್ ಆರ್.ಕೆ. ಪದ್ಮನಾಭ್ ಅವರ ಶಾಸ್ತ್ರೀಯ ಗಾಯನ ಎಲ್ಲರನ್ನೂ ನಾದಲೋಕದಲ್ಲಿ ತೇಲಿಸಿತು. ಹಿಂದುಸ್ತಾನಿ ಸಂಗೀತದ ರಾಷ್ಟ್ರೀಯ ಖ್ಯಾತಿ ಪಂಡಿತ ವೆಂಕಟೇಶ ಕುಮಾರ ಅವರ ಗಾಯನ ಕೇಳಲು 'ಮಂಟಪ' ಸಭಾಂಗಣದ ಬಾಲ್ಕನಿಯಲ್ಲೂ ಕಿಕ್ಕಿರಿದ ಜನಸಂದಣಿ. ಎರಡು ತಾಸುಗಳಿಗೂ ಹೆಚ್ಚು ಕಾಲ ನಡೆಸಿಕೊಟ್ಟ ಅವರ ಕಛೇರಿ ನಮ್ಮೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿತ್ತು ಎಂದು ಮಾತ್ರ ಹೇಳಿದರೆ ಒಂದು ಸೀಮಿತ ಶಬ್ಧವಾದೀತು. ಅದನ್ನು ಮೀರಿದ ಪರಮಾನಂದ ಅದಾಗಿತ್ತು. ಬಿಬಿಎಲ್ಎಫ್ ಅಕ್ಷರಶಃ ಸಂಸ್ಕೃತಿಯ ಹಬ್ಬ ಎನ್ನುವುದನ್ನು ಅದು ಸಾಬೀತು ಪಡಿಸಿತು. ಕೆರೆಮನೆ ಶಿವಾನಂದ ಹೆಗಡೆ ನಿರ್ದೇಶನದ ಪಂಚವಟಿ ಯಕ್ಷಗಾನ, ಮೇಘನಾ ಚಂದ್ರಮೌಳಿ ಅವರ ಕಾವ್ಯಾಭಿವ್ಯಕ್ತಿ ಮುದ ನೀಡಿದವು.

ಸಾಹಿತ್ಯ ಕಾರ್ಯಕ್ರಮಗಳಿಗೆ ಮುಕುಟವಿಟ್ಟಂತೆ ಕತೆ ಕಾದಂಬರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಲಕ್ಷಗಟ್ಟಲೆ ಹಣದ ಬಹುಮಾನವಿತ್ತುದು ಪ್ರಸ್ತುತ ಕನ್ನಡ ಸಾಹಿತ್ಯ ಸಂದರ್ಭದ ಬಹುದೊಡ್ಡ ಮೊತ್ತದ ಹಿರಿಮೆ ಮತ್ತು ಹೆಗ್ಗಳಿಕೆ.
ಹೀಗೆ ಮೂರು ದಿವಸಗಳ ಕಾಲದ ಬಿಬಿಎಲ್ಎಫ್ ಉತ್ಸವ ಬೆರಗು ಬೆಡಗುಗಳ ಸಂಸ್ಕೃತಿ ಸಮಾವೇಶವೇ ಆಗಿತ್ತು. ವರ್ತಮಾನದ ಹತ್ತು ಹಲವು ಸಾಂಸ್ಕೃತಿಕ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಸಾಂಸ್ಕೃತಿಕ, ಭಾಷಿಕ ಹಬ್ಬ ಸಂಭ್ರಮದಿಂದ ಸಂಪನ್ನಗೊಂಡಿತು. ಅಂದಹಾಗೆ ಪ್ಲಾಟಿನಮ್, ಗೋಲ್ಡನ್, ಸಿಲ್ವರ್ ಸ್ಪಾನ್ಸರ್ಸ್ ಎಂಬ ಹೆಸರಲ್ಲಿ ಸವಡಿಕಾರರಾಗಿ ಬುಕ್‌ ಬ್ರಹ್ಮ ಸಾಹಸಕ್ಕೆ ಮೂವತ್ತೈದಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈ ಜೋಡಿಸಿದ್ದವು.

ಮಲ್ಲಿಕಾರ್ಜುನ ಕಡಕೋಳ
- 9341010712

ಈ ಅಂಕಣದ ಹಿಂದಿನ ಬರಹಗಳು:
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ

14-09-2024 ಬೆಂಗಳೂರು

"ಚರಿತ್ರೆಯ ಬಗೆಗಿರುವ ಅವರ ಆಸಕ್ತಿ ಚರಿತ್ರೆಯ ಸಂಗತಿಗಳನ್ನು ಮಾನವಶಾಸ್ತ್ರಿಯ ದೃಷ್ಟಿಕೋನದಲ್ಲಿ ವಿಶ್ಲೇಷಿಸುವಂತೆ ...

ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ

13-09-2024 ಬೆಂಗಳೂರು

"ಶಿಕ್ಶಣ ಎನ್ನುವಂತದ್ದು ಮಗು ಪ್ರಯತ್ನಪೂರ‍್ವಕವಾಗಿ ಕಲಿಯಬೇಕಾಗಿರುವಂತದ್ದು. ಆದ್ದರಿಂದ ಇದು ಮನುಶ್ಯರ ಆಂತರಿ...

ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..

09-09-2024 ಬೆಂಗಳೂರು

"ನಮ್ಮ ಕಾರು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಕಮಾನಿನೊಳಗೆ ಕಾಲಿಡುತ್ತಿದ್ದಂತೆ ಅವನ ಗೆಳೆಯರ ತಂಡ ಕಾರಿಗೆ ಅಡ್ಡ ಹ...