ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರು 'ಕುಮಾರವ್ಯಾಸ ಕಥಾಂತರ'ದ ಮೂರನೆಯ ಸಂಪುಟವನ್ನು ಹೊರತಂದಿದ್ದಾರೆ. ಈ ಸಂಪುಟದ ವ್ಯಾಪ್ತಿಯಲ್ಲಿ ಉದ್ಯೋಗಪರ್ವ, ಭೀಷ್ಮ ಪರ್ವ ಮತ್ತು ದ್ರೋಣ ಪರ್ವ ಸೇರಿವೆ. ಗದುಗಿನ ನಾರಣಪ್ಪನ 'ಕುಮಾರವ್ಯಾಸ ಭಾರತ'ದ ಈ ಕಥಾಂತರವು ವಿಶೇಷವೆನಿಸಿದೆ.
'ತಾರ್ಕಿಕ ಮತ್ತು ಆಶಯ ಪ್ರಧಾನ ಓದುಗಾರಿಕೆಯಿಂದ ಜಡ್ಡುಗಟ್ಟಿ ಹೋಗಿರುವ ಈವತ್ತಿನ ಸಾಂಸ್ಕೃತಿಕ ವಾತಾವರಣದಲ್ಲಿ ಪ್ರಕಟವಾಗುತ್ತಿರುವ ಕುಮಾರವ್ಯಾಸ ಕಥಾಂತರದ ಸಂಪುಟಗಳು ನಾರಣಪ್ಪನ ಶ್ರೀಮಂತ ಕಾವ್ಯ ಸಂಪತ್ತನ್ನು ಆಸ್ವಾದಿಸಲು ಹೊಸ ಕಾಲದ ಓದುಗರಿಗೆ ಪ್ರವೇಶ ಪಠ್ಯವಾಗುವುದರ ಜೊತೆಗೇ ನಮ್ಮ ಮಹತ್ವದ ಸಾಂಸ್ಕೃತಿಕ ಪಠ್ಯಗಳನ್ನು ನಾವೆಲ್ಲಾ ಓದಬೇಕಾದ ಪರ್ಯಾಯ ಮತ್ತು ಯುಕ್ತವಾದ ಕ್ರಮವನ್ನು ಕೂಡ ಅಂತಃಕರಣಪೂರ್ವಕವಾಗಿ ಸೂಚಿಸುತ್ತವೆ.
ಒಂದು ಕೃತಿಯನ್ನು ಏಕಕಾಲದಲ್ಲಿ ಎಷ್ಟು ವೈವಿಧ್ಯಮಯ ನೆಲೆಗಳಿಂದ ಓದಬಹುದು ಎಂಬುದಕ್ಕೆ ಈ ಕೃತಿ ಸಹಾಯಕವಾಗಿದೆ. ಇಲ್ಲಿ ಲೇಖಕರು ಕವಿಯಾಗಿ, ಭಾಷಾ ಶಾಸ್ತ್ರಜ್ಞನಾಗಿ,ದೇಸಿನುಡಿಗಟ್ಟುಮತ್ತು ಸಂಸ್ಕೃತಿಯ ವಕ್ತಾರರಾಗಿ ಹತ್ತು ಹಲವು ನೆಲೆಗಳಲ್ಲಿ ಕುಮಾರವ್ಯಾಸ ಭಾರತವನ್ನು ಗ್ರಹಿಸುವ ರೀತಿ ವಿಭಿನ್ನವಾಗಿದೆ.
©2025 Book Brahma Private Limited.