ಓದುತ್ತ ಹೋದಂತೆ ನಾನು ನೆನಪಿನ ದೋಣಿಯಲ್ಲಿ ಹಿಂದಿರುಗಿ ನೋಡುವಂತೆ ಮಾಡಿವೆ


"ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸಾಧನೆಯನ್ನು ಮಾಡಿದ್ದರೂ ತಮ್ಮ ಸರಳ ಸ್ವಭಾವದಿಂದಾಗಿ ಹಿತೈಷಿಗಳ ಮತ್ತು ಸ್ನೇಹಿತರ ದೊಡ್ಡ ಬಳಗವನ್ನೇ ಪಾರ್ವತಿಯವರು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಖಿನ್ನತೆಗೊಳಗಾದ ಗೆಳತಿಯರನ್ನು ಮೇಲೆತ್ತುವ ಅಪ್ತ ಸಮಾಲೋಚಕಿಯೂ ಆಗಿರುವುದು ಅಚ್ಚರಿಯ ಸಂಗತಿ," ಎನ್ನುತ್ತಾರೆ ವಿಮಲಾ ನಾವಡ, ಕುಂದಾಪುರ. ಅವರು ಪಾರ್ವತಿ ಜಿ. ಐತಾಳ್ ಅವರ 'ಅಂತರಂಗದ ಸ್ವಗತ' ಕೃತಿ ಕುರಿತು ಬರೆದ ವಿಮರ್ಶೆ.

ಪಾರ್ವತಿ ಜಿ.ಐತಾಳ್ ಅವರ ಆತ್ಮಕಥನ 'ಅಂತರಂಗದ ಸ್ವಗತ' ಓದಲು ಶುರು ಮಾಡಿದರೆ ಕೆಳಗಿಡಲು ಬಿಡದೆ ಓದಿಸಿಕೊಂಡು ಹೋಯಿತು. ಅವರ ಬರವಣಿಗೆಯ ರೀತಿಯೇ ಅಂತಹದು. ಐದು ಅಧ್ಯಾಯಗಳಲ್ಲಿ ಅವರು ತಮ್ಮ ಇದುವರೆಗಿನ ಬದುಕನ್ನು ಪ್ರಾಮಾಣಿಕವಾಗಿ ಅನಾವರಣಗೊಳಿಸಿದ ಪರಿ ಅನನ್ಯವಾದುದು. ಅವರ ಬಾಲ್ಯಜೀವನ, ಕಾಲೇಜಿನ ನೆನಪುಗಳು, ಹಳ್ಳಿಯ ಜೀವನ-ಎಲ್ಲವೂ ರಸವತ್ತಾಗಿ ವರ್ಣಿಸಲ್ಪಟ್ಟು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಓದುತ್ತ ಹೋದಂತೆ ನಾನು ನೆನಪಿನ ದೋಣಿಯಲ್ಲಿ ಹಿಂದಿರುಗಿ ನೋಡುವಂತೆ ಮಾಡಿವೆ.

ಪಾರ್ವತಿಯವರ ಸ್ವಗತವನ್ಮು ಓದುತ್ತ ಹೋದಂತೆ ನನಗಲ್ಲಿ ಆತ್ಮರತಿ ಕಾಣಿಸಲಿಲ್ಲ. ಯಾವುದೇ ಸೌಕರ್ಯಗಳಿಲ್ಲದ ಕುಗ್ರಾಮದಲ್ಲಿ ಹುಟ್ಟಿ ಕಟ್ಟುನಿಟ್ಟಾದ ಸಂಪ್ರದಾಯದ ರೀತಿ-ರಿವಾಜುಗಳನ್ನು ನೋಡುತ್ತಾ, ಅನುಭವಿಸುತ್ತಾ ಆಚರಿಸುತ್ತಾ ಆನಂದಿಸುತ್ತಾ ಎಲ್ಲವನ್ನೂ ವಿಮರ್ಶಾ ದೃಷ್ಟಿಯಿಂದ ನೋಡಿ, ವಿದ್ಯಾಭ್ಯಾಸದಲ್ಲೂ ಅಗ್ರಸ್ಥಾನವನ್ನು ಹೊಂದಿ, ಸಾಂಸಾರಿಕ ಜೀವನವನ್ನೂ ಸಮರ್ಥವಾಗಿ ನಿಭಾಯಿಸಿದ್ದು ಅನುಕರಣೀಯ. ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸಾಧನೆಯನ್ನು ಮಾಡಿದ್ದರೂ ತಮ್ಮ ಸರಳ ಸ್ವಭಾವದಿಂದಾಗಿ ಹಿತೈಷಿಗಳ ಮತ್ತು ಸ್ನೇಹಿತರ ದೊಡ್ಡ ಬಳಗವನ್ನೇ ಪಾರ್ವತಿಯವರು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಖಿನ್ನತೆಗೊಳಗಾದ ಗೆಳತಿಯರನ್ನು ಮೇಲೆತ್ತುವ ಅಪ್ತ ಸಮಾಲೋಚಕಿಯೂ ಆಗಿರುವುದು ಅಚ್ಚರಿಯ ಸಂಗತಿ.

ಕೊನೆಯ ಅಧ್ಯಾಯವನ್ನು ಓದುತ್ತಾ ನಾನೂ ದುಃಖದಿಂದ ಮೈಮರೆತಿದ್ದೆ. ಸಾವರಿಸಿಕೊಂಡು ಇಷ್ಟು ಹೊತ್ರು ನನ್ನ ಬಳಿ ಕುಳಿತುಕೊಂಡು ಅಂತರಂಗದ ಸ್ವಗತವನ್ನು ಹೇಳಿಕೊಳ್ಳುತ್ತಿದ್ದ ಪಾರ್ವತಿಯವರು ಎಲ್ಲಿಗೆ ಹೋದರು ಎಂದು ಹುಡುಕುವಂತಾಯಿತು. ಹಾಗಿದೆ ಅವರ ಶೈಲಿ..!

ಹುಟ್ಟು ಪ್ರತಿಭಾವಂತರು ತಮ್ಮ ಧೈರ್ಯ-ಪ್ರಾಮಾಣಿಕತೆಗಳಿಂದ ಯಶಸ್ಸನ್ನು ಸಾಧಿಸುತ್ತಾರೆ, ಪ್ರತಿಭೆಯನ್ನು ಹತ್ತಿಕ್ಕಲು ಸಾಧ್ಯವಾಗದು ಎಂಬುದು ಪಾರ್ವತಿಯವರ ಯಶೋಗಾಥೆಯಿಂದ ಸಾಬೀತಾಗಿದೆ‌ 'ಅಂರಂಗದ ಸ್ವಗತ' ಓದುಗರಿಗೆ-ಅದರಲ್ಲೂ ಯುವಜನಾಂಗಕ್ಕೆ - ಸ್ಫೂರ್ತಿದಾಯಕವಾಗಿದೆ.

- ವಿಮಲಾ ನಾವಡ, ಕುಂದಾಪುರ

MORE FEATURES

ಕೊನೆಗೆ ಎಲ್ಲರೂ ಸೇರುವುದು ಮಣ್ಣನ್ನೇ

16-04-2025 ಬೆಂಗಳೂರು

"ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತ...

ಇವು ಕಥೆಗಳೋ ಆತ್ಮ ಚರಿತ್ರೆಯ ಪುಟಗಳೋ

16-04-2025 ಬೆಂಗಳೂರು

"ಇಲ್ಲಿ ಬಳಸುವ ಭಾಷೆಯಲ್ಲಿ ಕೂಡಾ ಈ ಪ್ರಾಂತ್ಯದ ಸೊಗಡು ದಟ್ಟವಾಗಿ ಓದುಗರಿಗೆ ತಗಲುತ್ತದೆ. ಹೆಂಗಸರ ಬೀದಿ ಜಗಳಗಳ ಭಾ...

ಹಳೆಯದನ್ನು ಬಿಡದವರು; ಹೊಸದನ್ನು ಹೊದ್ದವರು

16-04-2025 ಬೆಂಗಳೂರು

"ಹಿತ ಎನ್ನುವ ಪದದಲ್ಲಿ ಒಂದು ನೆಮ್ಮದಿಯ ಅನುಭವವಿದೆ. ಚಳಿಗಾಲದಲ್ಲಿ ಕಂಬಳಿ ಸಿಕ್ಕರೆ ಬೆಚ್ಚನೆಯ ಹಿತದ ಅನುಭವವಾಗುತ...