ಅಂಬೇಡ್ಕರ್ ಸಮಾನತೆ ಮತ್ತು ಧರ್ಮನಿರಪೇಕ್ಷ ಭಾರತದ ನಿರ್ಮಾತೃ: ನಟರಾಜ್ ಹುಳಿಯಾರ್

Date: 19-04-2022

Location: ಶಂಕರಘಟ್ಟ


ಶಂಕರಘಟ್ಟ: ಡಾ. ಬಿ. ಆರ್. ಅಂಬೇಡ್ಕರ್ ಭಾರತದ 130 ಕೋಟಿ ಜನರಿಗೆ ಮುಕ್ತವಾಗಿ ಸಾಮಾಜಿಕ ನ್ಯಾಯದ ಬಾಗಿಲು ತೆರೆದವರು. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಹೀಗೆ ಎಲ್ಲರಿಗೂ ಮುಕ್ತ ಅವಕಾಶಗಳಿರುವ ಸಮಾನತೆ ಮತ್ತು ಧರ್ಮನಿರಪೇಕ್ಷ ಭಾರತವನ್ನು ಕಟ್ಟಿದ ಆಧುನಿಕ ಭಾರತದ ನಿರ್ಮಾತೃ ಎಂದು ಹಿರಿಯ ಸಾಹಿತಿ ಮತ್ತು ಬೆಂಗಳೂರು ವಿವಿ ಇಂಗ್ಲಿಷ್ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಜ್ಞಾನಸಹ್ಯಾದ್ರಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯಾವಸ್ಥೆಯಿಂದ ಹಿಡಿದು ಜೀವನದ ಅಂತಿಮ ಘಟ್ಟದವರೆವಿಗೂ ಹತ್ತು ಹಲವು ಜಾತಿ ತಾರತಮ್ಯಗಳ ಅವಮಾನಗಳನ್ನು ಅನುಭವಿಸಿದರೂ ವಿಚಲಿತರಾಗದ ಅಂಬೇಡ್ಕರ್ ಅವರಿಗೆ ಶ್ರೇಣೀಕರಣ ಜಾತಿವ್ಯವಸ್ಥೆ ಹಾಸುಹೊಕ್ಕಾಗಿರುವ ಸಾಂಪ್ರದಾಯಿಕ ಸಮಾಜವೇ, ದೀನ ದಲಿತರಷ್ಟೇ ಅಲ್ಲದೆ ಸರ್ವರ ಒಳಿತಿಗೆ ಶ್ರಮಿಸುವ ನಿಟ್ಟಿನಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರಣೆಯಾಯಿತು.

ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ ವಿಮೋಚನೆಯ ಸೈದ್ಧಾಂತಿಕ ಚಿಂತನೆಯನ್ನು ಕಠಿಣ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದ ಸಾಧಿಸಿ ನಾವು ಕಾಣದ ಭಾರತವನ್ನು ತೋರಿಸಿದವರು ಅಂಬೇಡ್ಕರ್. ನೆಹರು ಅನಾವರಣಗೊಳಿಸಿದ ಭಾರತದರ್ಶನಕ್ಕಿಂತ ಅಂಬೇಡ್ಕರ್ ಮತ್ತು ಗಾಂಧಿ ತೋರಿದ ಭಾರತ ಈ ನೆಲಕ್ಕೆ ಹೆಚ್ಚು ಹತ್ತಿರವಾದದ್ದು. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಮೋಚನಕಾರರಾಗಿ ಅಂಬೇಡ್ಕರ್ ಈ ದೇಶಕ್ಕೆ ಸಾರ್ವಕಾಲಿಕವಾಗಿ ಮಾದರಿಯಾಗಿ ನಿಲ್ಲುವ ಮೇರು ವ್ಯಕ್ತಿತ್ವ ಎಂದರು.

14 ಕೃತಿಗಳ ಲೋಕಾರ್ಪಣೆ: ಅಂಬೇಡ್ಕರ್ ಚಿಂತನೆ ಮತ್ತು ವಿಚಾರಧಾರೆಗಳ ಅನ್ವಯಿಕತೆಯ ಬಗ್ಗೆ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ 14 ಕೃತಿಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಕೃತಿಗಳ ಕುರಿತು ಸಾಹಿತಿ ಪ್ರೊ. ಎಚ್. ಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಕೇವಲ ಸಂವಿಧಾನ ತಜ್ಞರಾಗಿರಲಿಲ್ಲ, ಎಲ್ಲ ವಿಷಯಗಳಿಗೂ ವ್ಯಾಪಿಸಿರುವ ತತ್ವಜ್ಞಾನಿಯಾಗಿದ್ದರು ಎನ್ನುವುದಕ್ಕೆ ಶಿಕ್ಷಣ, ಆಧ್ಯಾತ್ಮ, ನಿರ್ವಹಣಾ ಶಾಸ್ತ್ರ ಮಹಿಳಾವಾದ, ಸಂವಹನಶಾಸ್ತ್ರ, ಸಾಹಿತ್ಯ, ಹೀಗೆ ಹತ್ತು ಹಲವು ವಿಚಾರಗಳ ಮೇಲೆ ಬಂದಿರುವ ಈ ಸಂಶೋಧನಾ ಕೃತಿಗಳೇ ಸಾಕ್ಷಿ ಎಂದು ಶ್ಲಾಘಿಸಿದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆಯೇ ಸಿಂಡಿಕೇಟ್ ಸಭೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಅತಿ ಶೀಘ್ರದಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಂಭಾಗ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಅಂಬೇಡ್ಕರ್ ಅವರು ಸಾಧಿಸಿದ ಅಧ್ಯಯನಶೀಲತೆ, ಶೈಕ್ಷಣಿಕ ಶಿಸ್ತು, ಮತ್ತು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತ ನಾಯಕತ್ವ ಈ ತಲೆಮಾರಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂಬ ಸದಾಶಯದಿಂದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು. ಅಂಬೇಡ್ಕರ್ ಜೊತೆಗೆ ಬುದ್ಧ, ಬಸವಣ್ಣ ಮತ್ತು ಗಾಂಧಿ ಪ್ರತಿಮೆಗಳನ್ನು ಕೂಡ ಸೂಕ್ತ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು ಎಂದರು.

ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಿ. ಎಚ್. ಅಂಜನಪ್ಪ, ಪ್ರೊ. ಎ. ರಾಮೇಗೌಡ, ಪ್ರೊ. ಕೃಷ್ಣ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಡಾ. ಅಣ್ಣಯ್ಯ, ಕೃತಿಗಳ ಲೇಖಕರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅಧ್ಯಾಪಕೇತರ ನೌಕರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಫೋಟೋಗಳು:

 

 

 

 

 

 

 

 

 

 

 

 

 

 

 

 

 

 


 

 

 

 

 

 

 

 

 

 

MORE NEWS

ಬೆಂಗಳೂರಿನ ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಥಮ ಮಹಿಳೆ ಲೀಲಾದೇವಿ; ಶಂಕರ್

17-10-2024 ಬೆಂಗಳೂರು

ಬೆಂಗಳೂರು: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಕನ್ನಡ ಸಾಂಸ್ಕೃತಿಕ ಪರಿ...

ಜ್ಞಾನ ವಿಶಾರದೆ ಪುರಸ್ಕಾರಕ್ಕೆ `ಎಲೆಮರಿಯ ಕಾಯಿಗಳು' ಕೃತಿ ಆಯ್ಕೆ

17-10-2024 ಬೆಂಗಳೂರು

ವಿಜಯನಗರ: ಶ್ರೀ ಉತ್ಸವಾಂಬ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ನೀಡಲಾಗುವ ‘ಜ್ಞಾನ ವಿಶಾರದೆ...

ತಂದೆಯ ವಿದ್ವತ್ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ನಾವಡ ಮಾಡುತ್ತಿದ್ದಾರೆ; ಹಂಪನಾ

16-10-2024 ಬೆಂಗಳೂರು

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶ...