Panchakshari Hiremath; ಬಹು ಭಾಷಾ ಪಂಡಿತ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ವಿಧಿವಶ

Date: 15-03-2025

Location: ಬೆಂಗಳೂರು


ಧಾರವಾಡ: ಬಹು ಭಾಷಾ ಪಂಡಿತರು, ಹಿರಿಯ ಸಾಹಿತಿಗಳು, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪಂಚಾಕ್ಷರಿ ಹಿರೇಮಠ (92) ಶುಕ್ರವಾರ ನಿಧನರಾದರು.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಾ.15 (ಶನಿವಾರ) ಸಂಜೆ 4 ಗಂಟೆಗೆ ಅವರ ಹುಟ್ಟೂರಾದ ಕೊಪ್ಪಳ ಜಿಲ್ಲೆ ಬಿಸರಳ್ಳಿ ಗ್ರಾಮದಲ್ಲಿ ನೆರವೇರಲಿದೆ. ಬೆಳಗ್ಗೆ 8ಗಂಟೆಗೆ ಧಾರವಾಡದ ಜಯನಗರ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಪಂಚಾಕ್ಷರಿ ಹಿರೇಮಠ ಅವರ ಕುರಿತು: ಪಂಚಾಕ್ಷರಿ ಹಿರೇಮಠ ಅವರು 1933ರ ಜನೆವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು. 

ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ  ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು.

ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದ ಪ್ರಥಮ ಕನ್ನಡಿಗರು

ಪತ್ರಕರ್ತರಾಗಿ, ಪ್ರಕಾಶಕರಾಗಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ, ಉರ್ದು, ಹಿಂದಿ, ಗುಜರಾತಿ  ಭಾಷೆಯಲ್ಲೂ ಸಾಹಿತ್ಯ ರಚಿಸಿದ್ದಾರೆ. ಮಾತ್ರವಲ್ಲ; ರಷ್ಯಾ, ಜಾರ್ಜಿಯಾ ಹಾಗೂ ಉಝೇಕಿಸ್ತಾನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ ನಂತರ 1993ರಲ್ಲಿ ಸೇವಾ ನಿವೃತ್ತಿ ಪಡೆದರು.

ಪಂಚಾಕ್ಷರಿ ಹಿರೇಮಠ ಅವರ ಕತೆಯು ಕೋರಿಯಾದಿಂದ ಪ್ರಕಾಶಿತವಾದ Asian Literature ಪುಸ್ತಕದಲ್ಲಿ ಸ್ಥಾನ ಪಡೆದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಎನ್.ಬಿ.ಟಿ.ಗಾಗಿ ಅವರು ಅನೇಕ ಪುಸ್ತಕಗಳನ್ನು ಅನುವಾದಿಸಿದ್ದಾರೆ. 1954 ರಿಂದಲೇ ಹಿರೇಮಠ ಅವರು ಆಕಾಶವಾಣಿಯಲ್ಲಿ ಹಾಗೂ ದೂರದರ್ಶನದಲ್ಲಿ ಭಾಷಣ, ಕಾವ್ಯವಾಚನ, ನಾಟಕ, ಸಂದರ್ಶನ ಗಳಲ್ಲಿ ಭಾಗವಹಿಸಿದ್ದಾರೆ. ಗ್ರೀಸ್, ಕೋರ್ಪೂದಲ್ಲಿ ನಡೆದ ವಿಶ್ವ ಕವಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಈಜಿಪ್ತ್ ಗೆ ಹೋದಾಗ ಅಲ್ಲಿಯ ರೇಡಿಯೋ ಇವರ ಸಂದರ್ಶನ ಮಾಡಿ ಕವಿತೆಗಳನ್ನು ಪ್ರಸಾರ ಮಾಡಿತ್ತು. 'ಮಿತ್ರದೇಶದ ಕವಿತೆಗಳು ’ (1988) ಈ ಕವನಸಂಕಲನಕ್ಕೆ ದಿ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ದೊರಕಿದೆ. 

ಚೈತ್ಯಾಕ್ಷಿ, ನೀ ರುದ್ರನಾಗು, ಗಾಳಿ-ಗಂಧ, ಮಿತ್ರದೇಶದ ಕವಿತೆಗಳು (ಕವನ ಸಂಕಲನಗಳು) , ರವೀಂದ್ರ ರವೀಂದ್ರರು, ಕವಿ-ಕಾವ್ಯ-ಕಲ್ಪನೆ, ಕವಿ-ಕಾವ್ಯ-ಚಿಂತನ, ಚೆಲುವಿನ ಅಲೆಗಳು, ಹದಿನಾರು ಪ್ರಬಂಧಗಳು, ಜ್ಞಾನಪೀಠ ಪ್ರಶಸ್ತಿ ವಿಜೇತ- 'ಫಿರಾಕ್ ' ಗೋರಖಪುರಿ, ಮಹಾಯೋಗಿನಿ ಲಲ್ಲೇಶ್ವರಿ, ಭೂದಾನ, ಆರ್.ಸಿ.ಭೂಸನೂರಮಠ (ಸಂ), ಉರ್ದು ಸಾಹಿತ್ಯ-ಒಂದು ಪರಿಚಯ(ಪ್ರಬಂಧ/ವಿಮರ್ಶೆಗಳು) , ಈ ಬದುಕು ಬಂಗಾರ, ಏನೆಂಥ ಮಧುರವೀ ಬದುಕು (ಕರಂದೀಕರ ಸಾಹಿತ್ಯ ಬಹುಮಾನ ಪಡೆದಿದೆ).-ಇವು ಪತ್ರ ಸಾಹಿತ್ಯಗಳು, ಹಾನಗಲ್ಲ ಕುಮಾರಸ್ವಾಮಿಗಳು, ವಿಜಯ ಮಹಾಂತ ಸ್ವಾಮಿಗಳು, ಪುಣ್ಯಚಿತ್ತರು-ಜೀವನ ಚರಿತ್ರೆಗಳು, ಚಾಕ್ಲೆಟ್ ಮತ್ತು ಇತರ ಕತೆಗಳು, ನೀತಿ ಕತೆಗಳು-ಮಕ್ಕಳ ಸಾಹಿತ್ಯ, ಮಣಿಮುಕುರ ಪ್ರಭೆ, ಶಿವಯೋಗ, ಶಿವಲಿಂಗದೀಪ್ತಿ, ಗವಿದೀಪ್ತಿ (ಇತರರೊಡನೆ), ಶಿವದೇವ ( ಇತರರೊಡನೆ), ಪದ್ಮಶ್ರೀ (ಇತರರೊಡನೆ) -ಇವು ಸಂಪಾದಿತ ಕೃತಿಗಳು,

ಅವರ ಅನುವಾದ ಸಾಹಿತ್ಯವಂತೂ ವಿಫುಲ; ಬಯಲ ಬಾನಿನಲ್ಲಿ (ಹಿಂದಿ/ಕವನ), ಕಾಶ್ಮೀರದ ಹೂ (ಉರ್ದು/ಕಥೆ), ಮಗ್ಗ ಚೆಲ್ಲಿದ ಬೆಳಕು (ಹಿಂದಿ/ಕಾದಂಬರಿ), ಬೋರಬನ್ ಕ್ಲಬ್ (ಉರ್ದು/ಕಾದಂಬರಿ), ಕಪ್ಪು ಹೊತ್ತಗೆ (ಗುಜರಾತಿ/ ಕಾದಂಬರಿ), ಪುರಾತನ ಲಖನೌ (ಉರ್ದು/ಇತಿಹಾಸ), ಮೂರು ಪಂಜಾಬಿ ನಾಟಕಗಳು (ಪಂಜಾಬಿ/ನಾಟಕ) ಸೇರಿದಂತೆ ಸುಮಾರು 21ಕ್ಕೂ ಅಧಿಕ ಕೃತಿಗಳನ್ನು ಅನುವಾದಿಸಿದ್ದಾರೆ.

MORE NEWS

ಕಥೆಯನ್ನು ಓದುತ್ತಾ ಓದಂತೆ ಲೇಖಕರ ವ್ಯಕ್ತಿತ್ವ ಇಲ್ಲಿ ತೆರೆದುಕೊಳ್ಳುತ್ತದೆ; ಮಂಜುಳಾ

16-03-2025 ಬೆಂಗಳೂರು

ಬೆಂಗಳೂರು: ಲೇಖಕ ಪುರುಷೋತ್ತಮ ದಾಸ್ ಅವರ ‘ಯಯಾತಿ’ ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2025 ಮಾ 16 ಭಾನ...

ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ ಎಂ.ಆರ್. ದತ್ತಾತ್ರಿಯವರ 'ಸರ್ಪಭ್ರಮೆ' ಭಾಜನ

16-03-2025 ಬೆಂಗಳೂರು

ಧಾರವಾಡ: ಸಾಹಿತ್ಯ ಗಂಗಾ ಧಾರವಾಡದ ವತಿಯಿಂದ ಕೊಡಮಾಡುವ 2024ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಪ್ರಕಟವಾ...

ಕನ್ನಡ-ತುಳು ವಿದ್ವಾಂಸ ವಾಮನ ನಂದಾವರ ಇನ್ನಿಲ್ಲ

15-03-2025 ಬೆಂಗಳೂರು

ಮಂಗಳೂರು: ಕನ್ನಡ-ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಮನ ನಂದಾವರ (82) ಶನಿವಾರ ನಿಧ...