‘ತನ್ನ ಇಂದ್ರಿಯಗ್ರಹೀತ ಅನುಭವವನ್ನು ಅಕ್ಷರಗಳಿಂದ ಓದುಗನಿಗೆ ತಲುಪಿಸುವುದು ಲೇಖಕನ ಕೆಲಸ’ ಎನ್ನುತ್ತಾರೆ ಗುರುಪ್ರಸಾದ ಕಾಗಿನೆಲೆ. ಅವರು ‘ಸತ್ಕುಲ ಪ್ರಸೂತರು’ ಕಾದಂಬರಿ ಕುರಿತು ಬರೆದ ಲೇಖಕರ ಮಾತು ಇಲ್ಲಿದೆ..
ಇದು ನನ್ನ ಐದನೆಯ ಕಾದಂಬರಿ. ಮೊದಲ ಕಾದಂಬರಿ 'ಬಿಳಿಯ ಚಾದರ' ಬರೆದು ಹದಿನೇಳು ವರ್ಷಗಳಾಗಿವೆ. ನನ್ನ ಹಿಂದಿನ ಕಾದಂಬರಿಗಳಿಗಿಂತ ಬಹಳ ಬೇರೆ ಹುಡುಕಾಟ ಇಲ್ಲಿನ ಪಾತ್ರಗಳದ್ದು ಮತ್ತು ತನ್ಮೂಲಕ ನನ್ನದು ಎಂದು ನನಗನಿಸಿದೆ. ಬರವಣಿಗೆ ಮನಸಿಗೆ ಮತ್ತು ಮೆದುಳಿಗೆ ಮುದಕೊಟ್ಟಿದೆ. ಆ ಸಂತೋಷ ನಿಮ್ಮದೂ ಆದಲ್ಲಿ ಕೃತಾರ್ಥ.
ತನ್ನ ಇಂದ್ರಿಯಗ್ರಹೀತ ಅನುಭವವನ್ನು ಅಕ್ಷರಗಳಿಂದ ಓದುಗನಿಗೆ ತಲುಪಿಸುವುದು ಲೇಖಕನ ಕೆಲಸ. ಅದನ್ನು ಓದುಗ ಬರೇ ಅಕ್ಷರಗಳಿಂದ ತನ್ನದಾಗಿಸಿಕೊಳ್ಳುವುದು ಮತ್ತು ಆ ಅನುಭವಕ್ಕೋಸ್ಕರವೇ ಓದುವುದು ಇಂದಿನ ಶ್ರಾವ್ಯ, ದೃಶ್ಯ ಜಗತ್ತಿನಲ್ಲಿ ಒಂದು ದೊಡ್ಡ ಸವಾಲು. ಅಕ್ಷರಗಳ ಮಧ್ಯಸ್ತಿಕೆಯಿಲ್ಲದೇ ಅನುಭವಗಳನ್ನು ಯಶಸ್ವಿಯಾಗಿ ಹಂಚಿಕೊಳ್ಳಬಲ್ಲ ಸಾಧ್ಯತೆಯಿರುವ ಇಂದಿನ ಪ್ರಪಂಚದಲ್ಲಿ ಅಕ್ಷರಗಳ ಶಕ್ತಿಯ ಬಗ್ಗೆ ವಿಶ್ವಾಸವನ್ನಿಟ್ಟುಕೊಂಡು ಬರೆಯುತ್ತಿರುವ ನನ್ನಂಥ ಕಾದಂಬರಿಕಾರರನ್ನು ಪೊರೆಯುತ್ತಿರುವ ಕನ್ನಡ ಓದುಗ ಜಗತ್ತಿಗೆ ನಮೋನಮ.
ಈ ಕಾದಂಬರಿಯ ಮೂಲ ಎಳೆಯನ್ನು ನನಗೆ ಹೊಳೆಯಿಸಿದ್ದು ಸ್ನೇಹಿತರಾದ ತ್ರಿವೇಣಿ ಮತ್ತು ಶ್ರೀನಿವಾಸ ರಾವ್ ಅವರು. ಅವರಿಗೆ ನಾನು ಮನಸಾ ಧನ್ಯವಾದಗಳನ್ನು ಹೇಳಬಯಸುವೆ. ಈ ಕಾದಂಬರಿಯನ್ನು ಓದಿ ತಮ್ಮ ಅನುಭವ ಹಂಚಿಕೊಂಡವರು ಬಹಳ ಮಂದಿ. ಹಿರಿಯರಾದ ದಿವಾಕರ್, ಎಚ್ ಎಸ್ ರಾಘವೇಂದ್ರ ರಾವ್, ಕೆ ಸತ್ಯನಾರಾಯಣ, ಓ.ಎಲ್. ನಾಗಭೂಷಣ ಸ್ವಾಮಿ, ಟಿ.ಪಿ ಅಶೋಕ, ಕೆ.ವಿ ನಾರಾಯಣ, ಎಚ್.ಎಸ್ ಶ್ರೀಮತಿ ಮತ್ತು ರಾಜೇಂದ್ರ ಚೆನ್ನಿಯವರಿಗೆ ಅನಂತ ವಂದನೆಗಳು. ಗೆಳೆಯರಾದ ಶ್ರೀಧರ ಬಳಗಾರ, ವಿವೇಕ ಶಾನಭಾಗ, ವಸುಧೇಂದ್ರ, ನಾಗರಾಜ ವಸ್ತಾರೆ, ದತ್ತಾತ್ರಿ, ಕರ್ಕಿ ಕೃಷ್ಣಮೂರ್ತಿ, ಕಾವ್ಯಾ ಎಲ್ಲರಿಗೂ ಧನ್ಯವಾದಗಳು. ಎಂದಿನಂತೆ ನನ್ನ ಈ ಕಾದಂಬರಿಯನ್ನು ಪ್ರಕಟಿಸುತ್ತಿರುವ ಅಂಕಿತ ಪುಸ್ತಕ'ದ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ಅವರಿಗೆ ಶರಣು ಸುಂದರವಾದ ಮುಖಪುಟ ಅಪಾರ, ಪುಟವಿನ್ಯಾಸ ಮಾಡಿದ ಸತ್ಯಕುಮಾರಿ ಮತ್ತು ನಿಂದವಾಗಿ ಮುದ್ರಿಸಿಕೊಳ್ಳಿ ಸ್ಕ್ಯಾನ್ ಪ್ರಿಂಟರ್ಸ್ನ ಕೃಷ್ಣಮೂರ್ತಿ ಅವರಿಗೆ ಪ್ರಣಾಮಗಳು. ಒಪ್ಪಿಸಿಕೊಳ್ಳಿ.
-ಗುರುಪ್ರಸಾದ ಕಾಗಿನೆಲೆ
“ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ...
“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...
"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...
©2024 Book Brahma Private Limited.