ಓದು ಇಬ್ಬನಿ ಸ್ಪರ್ಶಿಸಿದ ಅನುಭವ ನೀಡುತ್ತದೆ


"ಖಾಲಿ ಹಾಳೆಯ ಮೇಲೆ ಹರದಿತ್ತು ನದಿ ಎಂಥಾ ನದಿ ತಿಳಿ ನೀರು ತಳ ಕಾಣುವ ಹಾಗೆ ನಾನು ಮುಳುಗಿದರೆ ಮಾತ್ರ ನದಿ ಇಲ್ಲದಿದ್ದರೆ ಇಲ್ಲ. ಅದು ಹಾಳೆಯ ನದಿ ಯಾದ್ರು ಅಷ್ಟೆ ಹರಿಯುವ ನದಿಯಾದರು ಅಷ್ಟೆ ನಾವು ಮುಳುಗದೆ ಇಳಿಯದೆ ಹೋದರೆ? ನದಿಯ ಹಾಡು ನುಂಗಿದರೆ ಮತ್ತೆ ಬಿಳಿ ಹಾಳೆ. ಹೀಗೆ ಕವಿತೆಯ ಸಾಲುಗಳು ಮತ್ತೆ ಮತ್ತೆ ಓದಬೇಕೆನಿಸುತ್ತವೆ," ಎನ್ನುತ್ತಾರೆ ಅಜಯ್ ಬಣಕಾರ್. ಅವರು ‘ಪದ ಸಂಚಾರ’ ಕುರಿತು ಬರೆದ ವಿಮರ್ಶೆ.

ಹೆಸರೇ ಸೂಚಿಸುವಂತೆ ಮಮತೆಯ ಸಾಗರದಂತಿರುವ ಮಮತಾ ಸಾಗರ್ ಮೇಡಂ, ಕವಿತಾ ಸಂಕಲನ ಪದ ಸಂಚಾರ ಓದುತ್ತಾ ತಲ್ಲೀನನಾದೆ. ಹುಣ್ಣಿಮೆ ಬೆಳದಿಂಗಳಲ್ಲಿ ಏಕಾಂತದಲ್ಲಿ ಕೂತು ಕೊಳಲು ನಾದ ಆಲಿಸಿದಂತೆ ಭಾಸವಾಗುತ್ತದೆ ಕವಿತೆಗಳ ಓದು ಮುಂದುವರೆದಂತೆಲ್ಲ.

ನುಡಿದರೆ ಮುತ್ತಿನ ಹಾರದಂತಿರಬೇಕು, ಬರೆದರೂ ಮುತ್ತಿನ ಹಾರ ಏಕಾಗಬಾರದು ಎಂಬಂತೆ ಪದಗಳ ಜೋಡಣೆ ಚಿಕಿತಗೊಳಿಸುತ್ತದೆ. ಅತ್ಯಂತ ಸ್ಮಾರ್ಟ್ ಆಗಿ ಸಾಲುಗಳು ಈ ಪದ್ಯಕ್ಕೆ ಇಷ್ಟೇ ಮತ್ತೇನು ಬರೆಯಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತುತ್ತ ತುದಿ ಮೇಲೆ ಭಾವ ಲಯ ಶಬ್ದಾರ್ಥ ವಿನ್ಯಾಸ ಕಾವ್ಯಾಕರ್ಷಣೆ ಇದೆ. ಓದು ಇಬ್ಬನಿ ಸ್ಪರ್ಶಿಸಿದ ಅನುಭವ ನೀಡುತ್ತದೆ.
ಉದಾಹರಣೆಗೆ

ಬರಬಾರದು ಹೀಗೆ ನೀವು
ನಮ್ಮೊಳಗೆ
ನವಿಲುಗರಿಯೊಳಗೆ ಬಂದ
ನೀಲಿ ಕಣ್ಣಂತೆ

‘ಗೌರಿಗೆ ‘ ಕವಿತೆಯಲ್ಲಿ
ಒಂದಲ್ಲ ಎರಡಲ್ಲ ಸಾಲಾಗಿ ಏಳು
ತೂರಿದ್ದು ಗೌರಿಗೆ, ತಾಗಿದ್ದು ನಮ್ಮೆದೆಗೆ
ಇಲ್ಲಿ ಎರಡನೇ ಸಾಲು ಬರೆಯಲು ಹೃದಯದಲ್ಲಿ ಮಮತೆಯ ಸಾಗರವಿರುವ ಕವಿಗೆ ಮಾತ್ರ ಸಾಧ್ಯ.
ಖಾಲಿ ಹಾಳೆಯ ಮೇಲೆ ಹರದಿತ್ತು ನದಿ ಎಂಥಾ ನದಿ ತಿಳಿ ನೀರು ತಳ ಕಾಣುವ ಹಾಗೆ ನಾನು ಮುಳುಗಿದರೆ ಮಾತ್ರ ನದಿ ಇಲ್ಲದಿದ್ದರೆ ಇಲ್ಲ. ಅದು ಹಾಳೆಯ ನದಿ ಯಾದ್ರು ಅಷ್ಟೆ ಹರಿಯುವ ನದಿಯಾದರು ಅಷ್ಟೆ ನಾವು ಮುಳುಗದೆ ಇಳಿಯದೆ ಹೋದರೆ? ನದಿಯ ಹಾಡು ನುಂಗಿದರೆ ಮತ್ತೆ ಬಿಳಿ ಹಾಳೆ. ಹೀಗೆ ಕವಿತೆಯ ಸಾಲುಗಳು ಮತ್ತೆ ಮತ್ತೆ ಓದಬೇಕೆನಿಸುತ್ತವೆ

ಯಾವ ದೀಪದ ಬೆಳಕೊ
ಯಾವ ಚುಕ್ಕಿಯ ಹೊಳಪೊ
ಯಾವ ಬೆಂಕಿಯ ಕಾವೊ
ತಣ್ಣಗೆ ಎದೆ ಸುಟ್ಟು
ಅಲ್ಲಿ ಹುಟ್ಟಲಿ ಮತ್ತೆ
ಹೊಸದೊಂದು ಪುಟ್ಟ ಹಾಡು … ಎಂದು
ಕನವರಿಸುವ ಕಾವ್ಯ ಪ್ರೀತಿ ಅನನ್ಯ. ಪ್ರೀತಿಯ ಹುಡುಗ ಕವಿತೆಯಲ್ಲಿ ‘ಪ್ರೀತಿಯ ಹುಡುಗ’ ಹಾಗೆ ಮತ್ತೊಬ್ಬನೂ ಅವನೂ ಹಾಗೆ ಪ್ರೀತಿಯ ಹುಡುಗನ ಹಾಗೆ.. ಪ್ರೀತಿ ಸ್ನೇಹ ನಂಬಿಕೆ ಎಲ್ಲವನ್ನು ಎಲ್ಲರಲ್ಲೂ ಒಂದೇ ರೀತಿಯಾಗಿ ನೋಡುವುದಿದೆಯಲ್ಲ ಅದು ಕವಿಯ ಹೃದಯವಂತಿಕೆ, ಬೇದವರಿಯದ ಕವಿ ಮನಸ್ಸಿನ ಕಾವ್ಯ ಶಕ್ತಿಯ ಪ್ರಾಂಜ್ವಲತೆ ಕಾಣ ಸಿಗುತ್ತದೆ. ಇನ್ನು ಮತಂಗ ಪರ್ವತದ ಕವಿತೆ ಮತಂಗ ಪರ್ವತಾರೋಹಣ ಮಾಡಿದವರಿಗೆ ಆಪ್ತವಾಗುತ್ತದೆ.

ಬಂಡೆಗಳಿಂದ ಪ್ರಾಕೃತಿಕವಾಗಿ ಅದ ಅಲ್ಲೊಂದು ಗುಹೆ ಇದೆ, ಗುಹೆಯ ಒಂದು ಬಾಗಿಲು ಪ್ರವೇಶಿಸಿ ಮತ್ತೊಂದು ಕಡೆ ತೇಲಬಹುದು ಇದು ಪ್ರಾಕೃತಿಕ ವಿಸ್ಮಯ. ಹಾಗೆ ಮತಂಗ ಪರ್ವತ ಮೇಲಿಂದ ವಿಜಯನಗರ ಸಾಮ್ರಾಜ್ಯ ಸುತ್ತಲೂ ಇರುವ ಬೆಟ್ಟ ಸಾಲುಗಳ ರಮ್ಯತೆ ನೋಡಬಹುದು. ಕವಿತೆ ಇವನ್ನೆಲ್ಲ ನೆನಪಿಸುತ್ತದೆ.

ಕವಿತೆ ಹೇಗಿರಬೇಕು? ಅನ್ನೋದಕ್ಕೆ ಪದ ಸಂಚಾರದ ಕವಿತೆಗಳು ಉತ್ತರಿಸುತ್ತವೆ. ಸಾಮಾಜಿಕ ಜವಾಬ್ದಾರಿ ನಮ್ಮ ಮೇಲೇ ಇದೆ ಎಂಬ ಮಹಾ ಭ್ರಮೆಯಲ್ಲಿ ರಚಿಸಲ್ಪಡುವ ಇತ್ತೀಚಿನ ಕೆಲ ಕವಿತೆಗಳು ಓದಲು ಸಪ್ಪೆ ಎನಿಸುವ ಸಂದರ್ಭಗಳಲ್ಲಿ ಈ ಸಂಕಲನ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಕವಿತೆಗಳ ಸಾಲುಗಳು ಕೈ ಹಿಡಿದು ನಿಲ್ಲಿಸಿ ಮತ್ತೆ ಮತ್ತೆ ಓದಲು ಮನಸ್ಸನ್ನು ಒತ್ತಾಯಿಸುತ್ತವೆ.

MORE FEATURES

ಕನ್ನಡ ಆಧುನಿಕ ಕಥನ ಸಾಹಿತ್ಯವು ಪ್ರಾರಂಭದಲ್ಲಿ ಹೊಂದಿದ್ದ ವೈವಿಧ್ಯ ಈಗ ಕಾಣಿಸುತ್ತಿಲ್ಲ

23-03-2025 ಬೆಂಗಳೂರು

"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...

ಪ್ರಕೃತಿ ಸಹಜವಾದ ಆಕರ್ಷಣೆಯ ಆದರ್ಶ ಜೀವನ ಎಲ್ಲರಿಗೂ ಬೇಕು

23-03-2025 ಬೆಂಗಳೂರು

"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...

ಒಂದು ಐತಿಹಾಸಿಕ ಸಮ್ಮೇಳನಕ್ಕೆ ಹಾಜರಾದ ಸಾರ್ಥಕತೆ

23-03-2025 ಬೆಂಗಳೂರು

"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ...