About the Author

ಸಾರ್ವಜನಿಕ ಬದುಕು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಅವರು ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 1893ರ ನವೆಂಬರ್ 7ರಂದು ಜನಿಸಿದ ಅವರ ತಂದೆ ಶಿವಯೋಗಪ್ಪ ತಾಯಿ ಸಿದ್ಧಮ್ಮ. ಮೆಟ್ರಿಕ್ ಪರೀಕ್ಷೆ (1910) ಮುಗಿಸಿದ ನಂತರ ಪುಣೆಗೆ ತೆರಳಿದ್ದು, ಅಲ್ಲಿಯ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. (1915) ಪೂರ್ಣಗೊಳಿಸಿದರು. 

ಸರ್ಕಾರಿ ಕೆಲಸಕ್ಕೆ ಸೇರದೆ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿ ಸ್ಥಾಪಿಸಿ, ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ನಂತರ ಕೆಎಲ್ಇ ಸೊಸೈಟಿಯ ಕಾರ್ಯದರ್ಶಿಯಾಗಿದ್ದರು.

ಪ್ರಬೋಧ ಮಾಸಪತ್ರಿಕೆ, ಜಯಕರ್ನಾಟಕದ ಮಾಸಪತ್ರಿಕೆಗಳ ಸಂಪಾದಕರಾಗಿ, ಸಾಹಿತ್ಯ ಸಮಿತಿ, ಪತ್ರಿಕೆ ಸ್ಥಾಪಕರಾಗಿ ಶ್ರಮಿಸಿದ್ದರು. ಬೆಳಗಾವಿ ಜಿ. ಐ. ಹೈಸ್ಕೂಲ್,  ಧಾರವಾಡದ ಲಿಂಗರಾಜು  ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದ ಸ್ಥಾಪನೆಗಳಲ್ಲಿ ಇವರ ಕೊಡುಗೆ ಅಪಾರ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.

ರಬಕವಿಯಲ್ಲಿ ನಡೆದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ (1944) ಅಧ್ಯಕ್ಷರಾಗಿದ್ದ ಅವರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ 13ನೇ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಗಂಗಾದಲ್ಲಿ ನಡೆದ ವೀರಶೈವ ತರುಣ ಸಂಘಗಳ ಸಮ್ಮೇಳನ (1926) ಸಭಾಧ್ಯಕ್ಷರಾಗಿದ್ದರು. ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ ಶಿ ಶಿ. ಬಸವನಾಳರು 1951ರ ಫೆಬ್ರುವರಿ 22ರಂದು ನಿಧನರಾದರು.

ಅವರ ಕೃತಿಗಳು- ಚೆನ್ನಬಸವಪುರಾಣ, ಪ್ರಭುಲಿಂಗಲೀಲೆ, ಶಬರಶಂಕರ ವಿಳಾಸ, ಗಿರಿಜಾ ಕಲ್ಯಾಣ ಮೊದಲಾದ ವೀರಶೈವ ಕಾವ್ಯಗಳ ಸಂಪಾದನೆ. ಕಾವ್ಯಾವಲೋಕನ, ಬಸವಣ್ಣನವರ ಷಟ್ಸ್ಥಲ ವಚನಗಳು, ಸಂಶೋಧನೆ ಸಂಪಾದನೆ, ವೀರಶೈವ ತತ್ವಪ್ರಕಾಶ (ಪಂಡಿತ ಬರಹಗಳ ಸಂಕಲನ), ಮ್ಯೂಸಿಂಗ್ಸ್ ಆಫ್ ಬಸವ (ಬಸವಣ್ಣನವರ ವಚನಗಳ ಆಂಗ್ಲಾನುವಾದ).

 

ಶಿ.ಶಿ. ಬಸವನಾಳ

(07 Nov 1893-22 Feb 1951)