ಒಂದು ಕಥೆಯೊಳಗೆ ಎಷ್ಟೆಲ್ಲ ಕಥೆಗಳು!


"ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್ಟಗಳ ಮೂಲಕ ದಾಖಲಿಸುತ್ತಾ ಹೋಗುತ್ತೇವೆ.‌ ಆದರೆ ಆ ಅಂತಿಮ ಘಟ್ಟವನ್ನು ತಲುಪುವಾಗಿನ ಪ್ರಯಾಣವಿತ್ತಲ್ಲ? ಅದು ಮಾತ್ರ ಎಲ್ಲೂ ದಾಖಲಾಗುವುದಿಲ್ಲ. ಆದರೆ ನಿಜದಲ್ಲಿ ನಾವು ಬದುಕುವುದೇ ಅಂಥಾ ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಆ ನಿಮಿಷಗಳ ನಗು, ಅಳು, ಆತಂಕ, ಸಂಭ್ರಮಗಳಲ್ಲಿ," ಎನ್ನುತ್ತಾರೆ ವಿನಾಯಕ ಅರಳಸುರಳಿ. ಅವರು ಕಾವ್ಯಾ ಕಡಮೆ ಅವರ ‘ತೊಟ್ಟು ಕ್ರಾಂತಿ’ ಕುರಿತು ಬರೆದಿರುವ ವಿಮರ್ಶೆ.

ನಮ್ಮೆಲ್ಲರ ಬದುಕಿನ ಬಹುಭಾಗ ಯಾವುದೋ ಒಂದು ಘಳಿಗೆಗಾಗಿ ಕಾಯುತ್ತ ಕಾಯುತ್ತಲೇ ಸವೆಯುತ್ತದೆ. ಕಚೇರಿ ಮುಗಿದು ಸಂಜೆಯಾಗಿ ಮನೆ ಸೇರಿದರೆ ಅಲ್ಲಿಂದ ದಿನ ಶುರು. ರಜೆಯಿರುವ ವೀಕೆಂಡ್ ಬಂದರೆ ಅದು ನಮ್ಮ ಸಮಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಗನ ಫಲಿತಾಂಶ ಬಂದ ಕ್ಷಣ, ಪ್ರೀತಿ ಮಾಡಿ ಮದುವೆಯಾದ ದಿನ, ಬೆಳೆದ ಬೆಳೆಗೆ ಹಣ ದೊರೆತ ದಿನ, ಸ್ಯಾಲರಿ ಸಿಕ್ಕಿದ್ದು, ಭಡ್ತಿ ದೊರಕಿದ್ದು, ಕಾರು ಕೊಂಡಿದ್ದು.. ಹೀಗೆ ಯಾವುದೋ ಒಂದು ಬಿಂದುವನ್ನು ನಾವು ಬದುಕು ಅಂತ ನಂಬುತ್ತೇವೆ. ಅದರಲ್ಲಿ ಮಾತ್ರ ನಾವು ಬದುಕಿರುವುದು ಅಂದುಕೊಳ್ಳುತ್ತೇವೆ. ಆ ಒಂದು ಘಳಿಗೆಯ ಹೊರತಾಗಿ ಉಳಿದೆಲ್ಲ ಕ್ಷಣವೂ ಆ ಬಿಂದುವನ್ನು ತಲುಪಲೋಸುಗ ಸವೆಯುವ ಪಯಣವೇ ಎಂದು ನಂಬುತ್ತೇವೆ.

ಇವೆಲ್ಲದರ ಮಧ್ಯೆ ಸಂಜೆ ಮನೆಗೆ ಹೊರಡುವ ಮುನ್ನ ಒಂಬತ್ತು ಗಂಟೆ ಆಫೀಸಿನಲ್ಲಿ ಕೆಲಸ ಮಾಡಿದ, ಸಹೋದ್ಯೋಗಿಗಳೊಟ್ಟಿಗೆ ಹರಟಿದ, ಯಾರದೋ ಹಾಸ್ಯಕ್ಕೆ ಜೋರಾಗಿ ನಕ್ಕ, ಇನ್ಯಾರಿಗೋ ಸಹಾಯ ಮಾಡಿದ, ಮತ್ಯಾರಿಂದಲೋ ಸಹಾಯ ಮಾಡಿಸಿಕೊಂಡ, ಬಾಸಿಂದ ಬೈಸಿಕೊಂಡ, ಇನ್ಯಾರನ್ನೋ ಬೈದ, ಹೋಗುವಾಗ ದಾರಿಯಲ್ಲಿ ಚೌಕಾಶಿ ಮಾಡಿ ಮೊಳಕ್ಕೆ ಮೊವ್ವತ್ತಿದ್ದ ಮಲ್ಲಿಗೆಯನ್ನು ಇಪ್ಪತೈದಕ್ಕೆ ಕೊಂಡ ಕ್ಷಣಗಳಿರುತ್ತವೆ. ಕೂತು ಓದಲೊಲ್ಲದ ಮಗನಿಗೆ ಪೂಸಿ ಹೊಡೆದು, ಕೂರಿಸಿ, ಓದಿಸಿ, ಅವನ ಒಂದಷ್ಟು ಸಮಯವನ್ನು ಅವನಿಗೆ ಕೊಟ್ಟು, ಏನೇನೋ ಹೇಳಿ ಮುದ್ದಿಸಿದ ದಿನಗಳಿರುತ್ತವೆ. ಕಾರಿನ ಡೌನ್ ಪೇಮೆಂಟಿಗೆ ಉಳಿಸಬೇಕಾದ ಹಣಕ್ಕಾಗಿ ಮಾಡಿದ ಒದ್ದಾಟವಿರುತ್ತದೆ. ಬೆಳೆಯ ಪಕ್ಕದ ಕಳೆಯನ್ನು ಕಿತ್ತು, ಹೊಲದಂಚಿನ ಕಟ್ಟಕಡೆಯ ಗಿಡಕ್ಕೂ ನೀರು ತಾಗಿದೆಯಾ ನೋಡಿ, ಸಾಯಲು ಹೊರಟ ಸಸಿಗೊಂದಷ್ಟು ಶುಶ್ರೂಷೆ ಮಾಡಿ, ನಡು ಮಧ್ಯಾಹ್ನದ ಬಿಸಿಲಲ್ಲಿ ಮರದಡಿ ಕುಳಿತು, ಬೆಲ್ಲ ತಿಂದು, ನೀರು ಕುಡಿದು, ಮರದ ನೆರಳಲ್ಲೇ ನಿದ್ರಿಸಿದ ಘಳಿಗೆಗಳಿರುತ್ತವೆ.

ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್ಟಗಳ ಮೂಲಕ ದಾಖಲಿಸುತ್ತಾ ಹೋಗುತ್ತೇವೆ.‌ ಆದರೆ ಆ ಅಂತಿಮ ಘಟ್ಟವನ್ನು ತಲುಪುವಾಗಿನ ಪ್ರಯಾಣವಿತ್ತಲ್ಲ? ಅದು ಮಾತ್ರ ಎಲ್ಲೂ ದಾಖಲಾಗುವುದಿಲ್ಲ. ಆದರೆ ನಿಜದಲ್ಲಿ ನಾವು ಬದುಕುವುದೇ ಅಂಥಾ ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಆ ನಿಮಿಷಗಳ ನಗು, ಅಳು, ಆತಂಕ, ಸಂಭ್ರಮಗಳಲ್ಲಿ. ಒಂದು ಸಂಬಂಧವನ್ನು ಬೆಳೆಸುವ ಅಥವಾ ಮುಗಿಸುವ ತನಕದ ತಾಕಲಾಟಕ್ಕೆ ಆ ಬಂಧದ ಅಂತಿಮ ಫಲಿತಾಂಶವನ್ನು ಮೀರಿದ ತೂಕವಿದೆ. ಇಳಿದ ಎಲ್ಲ ನಿಲ್ದಾಣಗಳ ಹಿಂದೆ ಮುಗಿದ ಪಯಣಗಳಿವೆ. ಅಂಥಾ ನಿಮಿಷಗಳನ್ನು, ಭಾವದಲೆಗಳನ್ನು, ಏರಿಳಿತಗಳನ್ನು ಹಿಡಿದಿಟ್ಟ ಸಂಕಲನದಂತೆ ನನಗೆ 'ತೊಟ್ಟು ಕ್ರಾಂತಿ'ಯಲ್ಲಿನ ಕಥೆಗಳು ಕಂಡವು. ಇದು ಕಥೆಗಳ ಸ್ವರೂಪದ ವಿವರವಲ್ಲ. ಅವು ಹೇಳುವ ಸಂಗತಿಗಳ ಭಾವ ವಿವರಣೆಯಷ್ಟೇ.

ಕಥೆ ಹೇಳುವುದು ಒಂದು ಕಲೆ. ಕಥೆಯೊಳಗಿನ ಕಥೆಗಳನ್ನು ಕಟ್ಟಿಕೊಡುವುದು ಅದನ್ನೂ ಮೀರಿದ ಕಲೆ. ಪಾತ್ರವೊಂದು ಹೊರಳಿಕೊಂಡ ತಿರುವಿನ ಬಗ್ಗೆ ಮಾತ್ರವಲ್ಲದೆ ತಿರುವೇ ಇಲ್ಲದ ನೇರ ದಾರಿಯಲ್ಲಿ ಸಾಗುವಾಗ ಅನುಭವಿಸಿದ ಏಕಾನತೆಯನ್ನು ಕಟ್ಟಿಕೊಡುವುದು ಎಲ್ಲದಕ್ಕಿಂತ ದೊಡ್ಡ ಕಲೆ! ಅಂಥ ಎಲ್ಲ ಕಂಪನಗಳನ್ನೂ ಲೇಖಕಿ ಚಂದದ ಶೈಲಿಯಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

- ವಿನಾಯಕ ಅರಳಸುರಳಿ

MORE FEATURES

ಸಾಹಿತ್ಯ ಸಾಧಕರಲ್ಲಿ ನಿಲ್ಲುವ ಅಪ್ರತಿಮ ವ್ಯಕ್ತಿತ್ವವುಳ್ಳ ಸೃಜನಾತ್ಮಕ ಸಾಹಿತಿ ಗವಿಸಿದ್ಧಪ್ಪ

19-09-2024 ಬೆಂಗಳೂರು

“ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಮುಟ್ಟದ ವಿಷಯವಿಲ್ಲ ಎಂಬ ನಾಡ ನುಡಿಯಂತೆ ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ ಅವರ...

ನಿಗೂಢ, ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು..

19-09-2024 ಬೆಂಗಳೂರು

“ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತ...

ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವೇ ಸ್ವತಃ ಕಂಡುಂಡ ರಣರೋಚಕ ಅನುಭವಗಳನ್ನು ದಾಖಲಿಸಿದ್ದಾರೆ

18-09-2024 ಬೆಂಗಳೂರು

"ಕಳೆದ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತು ಅಮೆರಿಕ, ನ್ಯಾಟೋ ಪಡೆಗಳ ನಡುವೆ ನಡೆದ ಸುಧೀರ್ಘ ...