ಜಂಬವಿಲ್ಲದ ಜಂಬಣ್ಣ ಅಮರಚಿಂತ ಅವರ ಕಾವ್ಯವೇ ಅಮರಚಿಂತನವಾಗಿವೆ


“ಇಡೀ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾಗಿರತಕ್ಕಂತಹ ಕಾವ್ಯವನ್ನ ಕೊಟ್ಟಿರುವ ಸರಳ ಸಜ್ಜನಿಕೆ ಕವಿ ಎಂದು ನಾವೆಲ್ಲರೂ ಗುರುತಿಸಿದ್ದೇವೆ,” ಎನ್ನುತ್ತಾರೆ ಡಾ. ಪೀರಪ್ಪ ಬಿ. ಸಜ್ಜನ. ಅವರು ‘ಜಂಬಣ್ಣ ಅಮರಚಿಂತ’ ವಾಚಿಕೆ 9ಕ್ಕೆ ಬರೆದ ಪ್ರಸ್ತಾವನೆ ನಿಮ್ಮ ಓದಿಗಾಗಿ.

"ನೀವೆಲ್ಲಿಯವರೊ ನಾವಲ್ಲಿಯವರೇ
ನಡೆದ ದಾರಿ ಒಂದೆ, ಒಂದೆ ತವರೂರು”
"ಮೆದುವಾಗಬೇಕು ಕವಿ ಮೃದುವಾಗಬೇಕು
ಮಾಗಿದಂತೆ ಕವಿ ಹೃದಯ ಸುಧೆಯಾಗಬೇಕು"

ಎನ್ನುವಂತಹ ಕಾವ್ಯದ ಸಾಲುಗಳನ್ನು ಕಟ್ಟಿಕೊಟ್ಟಿರತಕ್ಕಂತ ನಿಜವಾದ ಸತ್ವ ಹಿತವಾದ ಜಂಬವಿಲ್ಲದ ಜಂಬಣ್ಣ ಅಮರಚಿಂತ ಅವರ ಕಾವ್ಯವೇ ಅಮರಚಿಂತನವಾಗಿವೆ. ಇವರು ಮೂಲತಃ ಆಂಧ್ರಪ್ರದೇಶಕ್ಕೆ ಸೇರಿರತಕ್ಕಂತವರು. ಮೆಹಬೂಬ್ ನಗರ್ ಜಿಲ್ಲೆಯ ಗದ್ವಾಲ್ ತಾಲೂಕಿನ ಅಮರಚಿಂತ ಗ್ರಾಮದಿಂದ ರಾಯಚೂರಿಗೆ ಬಂದು ನೆಲೆಸಿದರು. ಉಪ್ಪೇರ ಲಕ್ಷ್ಮಣ್ಣ ಮತ್ತು ಕುರುಮವ್ವರ ಮಗನಾಗಿ ರಾಯಚೂರಿನಲ್ಲಿ 07-07- 1945ರಲ್ಲಿ ಜನಿಸಿದರು. ಜಂಬಣ್ಣ ಅಮರಚಿಂತ ಅವರು ಈ ನಾಡ ಬಹು ಮುಖ್ಯ ಕವಿಗಳಾಗಿ ನಮಗೆ ಕಂಡುಬರುತ್ತಾರೆ.
ಅಮರಚಿಂತರು ನಗರದ ಅನೇಕ ಕಡೆಗೆ ಶಿಕ್ಷಣವನ್ನ ಪಡೆದು. ನಂತರ ಹಮದರ್ದ ಪ್ರೌಢ ಶಾಲೆಯಲ್ಲಿ 10ನೇ ತರಗತಿಯನ್ನು ಪಾಸಾದವರು. ನಂತರ ಅಲ್ಲಿಂದ ಪಿ.ಯು.ಸಿ ಪಾಸಾದರು. ಎಲ್.ವಿ.ಡಿ. ಕಾಲೇಜಿನಿಂದ ಬಿ.ಎ. ಪದವಿ, ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಎಂ.ಎ.ಕನ್ನಡ ಪದವಿ ಪಡೆದವರು.

ಆರೋಗ್ಯ ಇಲಾಖೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಕಳೆದ ಮೂರುವರೆ ದಶಕಗಳವರೆಗೆ ಜಿಲ್ಲೆಯ ಹಲವು ತಾಲೂಕಿನಲ್ಲಿ ಸೇವೆ ಸಲ್ಲಿ ಕಛೇರಿ ಮುಖ್ಯಸ್ಥರಾಗಿ ವೃತ್ತಿಯನ್ನು ಪೊರೈಸಿ ನಿವೃತ್ತರಾದವರು. ಇವರಿಗೆ ಶಾಂತರಸರು ವಿದ್ಯಾ ಗುರುಗಳಾಗಿದ್ದರು. ನಂತರದಲ್ಲಿ ಶಾಂತರಸರು, ಚಂದ್ರಕಾಂತ ಕುಸನೂರ, ಕಿಷನ್ ರಾವ್, ಕೆ.ಮುದ್ದಣ್ಣ, ಜಯತೀರ್ಥ ರಾಜಪುರೋಹಿತ, ರಾಜಶೇಖರ ನೀರಮಾನ್ವಿ ಅವರು ಹಿರಿಯರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಅದೇ ಹೊತ್ತಿಗೆ ಡಾ. ಚೆನ್ನಣ್ಣ ವಾಲೀಕಾರ ಅವರು ರಾಯಚೂರಿಗೆ ಬಂದರು. ಆಗ ಅಮರಚಿಂತರು, ಬೋಳಬಂಡೆಪ್ಪನವರು ಸೇರಿ ಹಿಂದಿ, ತೆಲುಗು, ಇಂಗ್ಲಿಷ್, ಜೊತೆ ಕನ್ನಡ ಸಾಹಿತ್ಯದ ಅಧ್ಯಯನ ಪ್ರಾರಂಭಿಸಿದವರು. ಹಿಂದಿ ಮುಕ್ತಿಬೋಧೆ, ಆಗ್ನಿಯ, ತೆಲುಗಿನ ಶ್ರೀ ಶ್ರೀ, ಚೆರಬಂಡರಾಜು, ವರವರರಾವ್, ದಿಗಂಬರ, ವಿಪ್ಲವ, ವಿರಸಂ, ಚಿಲಿ ದೇಶದ ಪಾಲ್ಲೋ, ನೆರೂಡ, ಮಹಾರಾಷ್ಟ್ರದ ಪ್ಯಾಂಥರ್ ಪ್ರಭಾವ ಬೀರಿದವು. ಇವರನ್ನೆಲ್ಲ ಓದಿದ ಮೇಲೆ ಕಲೆಗಾಗಿ ಕಲೆ ಅಲ್ಲ; ಜೀವನಕ್ಕಾಗಿ ಕಲೆ ಎಂಬ ವಿಚಾರಧಾರೆ ಅರಿತುಕೊಂಡವರು. ಆಗಾಗಲೇ ಕವಿಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು. ನವ್ಯ ಕಾವ್ಯದ ಪ್ರಭಾವದಿಂದ ಸಾಹಿತ್ಯವನ್ನು ರಚಿಸುವಂತಹ ಸಂದರ್ಭದಲ್ಲಿ ಇವರೆಲ್ಲರ ಪ್ರಭಾವಕ್ಕೆ ಒಳಗಾಗಿ ಅವರ ಜೊತೆಗೆ ಕೂಡಿ ಕಥೆಗಳನ್ನು, ಕಾವ್ಯಗಳನ್ನು ಓದ ತೊಡಗಿದರು. ಪ್ರಗತಿಪರ ಸಾಹಿತ್ಯದತ್ತ ತೊಡಗಿದರು. ರಾಯಚೂರು ಜಿಲ್ಲೆಯ ಪ್ರಥಮ ಡಿಎಸ್‌ಎಸ್‌ ಸಂಚಾಲಕರಾಗಿ ಕೆಲಸವನ್ನು ನಿರ್ವಹಿಸಿದರು. ಆ ಸಂದರ್ಭದಲ್ಲಿ ಬೋಳಬಂಡೆಪ್ಪ, ಕರಿಯಪ್ಪ ಮಾಸ್ಟರ್, ಬಾಬು ಭಂಡಾರಿಗಲ್, ಅಮರಚಿಂತರು ಅನೇಕರು ಹಳ್ಳಿಗಳಿಗೆ ತೆರಳಿ ತಮ್ಮದೇ ಆಗಿರುವ ವಿಚಾರಗಳನ್ನು ಅಭಿವ್ಯಕ್ತಿಪಡಿಸುವಂತಹ ಕೆಲಸವನ್ನು ಮಾಡಿದರು. ದೌರ್ಜನ್ಯಗಳನ್ನು ಪ್ರತಿಭಟಿಸಿದರು. ಆರೋಲಿ ಜಾತ್ರೆಯ ಬೆತ್ತಲ ಸೇವೆ, ಮೆದಕಿನಾಳದ ಭೂ ಹೋರಾಟ, ಜಾಲಿಬೆಂಚಿ ರೈತರಿಗೆ ನಿವೇಶನ ಕೊಡಿಸುವಲ್ಲಿ ಇವರ ಪಾತ್ರವಿದೆ. ತೆಲಗು ಹಾಡು ತರ್ಜುಮೆ ಮಾಡಿ ಕನ್ನಡದಲ್ಲಿ ಹಾಡಿ ಹೂಗಳನ್ನು ಕೊಟ್ಟು ಹೋರಾಟ ಮಾಡಿದವರು. ಇಂತಹ ಚಂಡಮಾರುತಕ್ಕೆ ಸಿಲುಕಿ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿ ಸಂಕಷ್ಟಕ್ಕೆ ಒಳಗಾಗಿರತಕ್ಕಂತಹ ಜನರಿಗೆ ಅನೇಕ ಸಮಾನ ಮನಸ್ಕರರ ಮನೆಗೆ ತೆರಳಿ ಹಣವನ್ನು ಸಂಗ್ರಹಿಸಿ ಕೊಟ್ಟ ಮಾನವೀಯತೆ ಕವಿ ನಮ್ಮ ಜಂಬಣ್ಣ ಅಮರಚಿಂತವರು, ಇವರು ರಾಯಚೂರು ಸ್ವಚ್ಛಗೊಳಿಸುವ ಹೋರಾಟ ಸಂಘದ ಸಲಹೆಗಾರರಾದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕಾರ್ಯವನ್ನು ನಿರ್ವಹಿಸಿದ್ದಾರೆ. ಅಲ್ಲದೆ ಇವರ ಕವಿತೆಗಳು, ಕಾವ್ಯ, ಗಜಲ್, ಕಾದಂಬರಿ ಕಲಬುರಗಿ, ಮೈಸೂರು. ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ಪಿಯುಸಿ ದ್ವಿತೀಯ ಮತ್ತು ಪ್ರಾಥಮಿಕ 5ನೇ ತರಗತಿ, ಪ್ರೌಢ ಶಿಕ್ಷಣ 9ನೇ ತರಗತಿ ಪಠ್ಯಪುಸ್ತಕದಲ್ಲಿ ಇವರ ಕವಿತೆಗಳು, ಗಜಲ್, ಪಠ್ಯದಲ್ಲಿವೆ. ಬೂಟುಗಾಲಿನ ಸದ್ದು ಎನ್ನುವ ಕಾದಂಬರಿ ನಾಟಕ ರೂಪಾಂತರಗೊಂಡು ಪ್ರದರ್ಶನವ ಕೂಡ ಆಗಿದೆ.

2009ರಲ್ಲಿ ಚೆನ್ನೈ ನಡೆದ ಬಹುಭಾಷೆ ಕವಿಗೋಷ್ಠಿಯಲ್ಲಿ ಕವಿತೆ ವಾಚನವನ್ನು ಮಾಡಿದ್ದಾರೆ. ಭದ್ರಾವತಿಯ ಕೃಷ್ಣಪ್ಪನವರು ದಲಿತ ಲೇಖಕರ ಬಳಗವನ್ನು ಹುಟ್ಟು ಹಾಕಿ 1979ರಲ್ಲಿ ಪ್ರಾರಂಭವಾದ ದಲಿತ ಜಾಗೃತಿಯಲ್ಲಿ ಇವರ ಪಾಲನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಧರ್ಮಸ್ಥಳದಲ್ಲಿ1979ರಲ್ಲಿ ನಡೆಯುವ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ನವ್ಯ ಕವಿ ಗೋಪಾಲಕೃಷ್ಣ ಅಡಿಗರು ಆಯ್ಕೆಗೊಂಡ ಸಂದರ್ಭದಲ್ಲಿ ಡಾ. ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಇತರರು ಸೇರಿಕೊಂಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಗೋಷ್ಠಿಯನ್ನು ಇಡಬೇಕೆಂದು ಪತ್ರವನ್ನು ಬರೆದರು. ಇದು ಪ್ರಜಾವಾಣಿ ವಾಚಕರ ವಾಣಿಯಲ್ಲಿಯೂ ಕೂಡ ಪ್ರಕಟವಾಯಿತು. ಇದನ್ನು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಂಪನಾ ಅವರು ಕನ್ನಡ ಸಾಹಿತ್ಯದಲ್ಲಿ ಇರುವುದು ಒಂದೇ ಸಾಹಿತ್ಯ ಇದರಲ್ಲಿ ದಲಿತ, ಬಲಿತ, ಕಲಿತ ಇಲ್ಲ ಎನ್ನುವಂತ ಪ್ರಾಸಬದ್ಧವಾಗಿ ಹಗುರವಾದ ಮಾತು ಕೇಳಿದಾಗ ಇದನ್ನು ಕಂಡು ಇಡೀ ಕನ್ನಡದ ಪ್ರಗತಿಪರ ಲೇಖಕರೆಲ್ಲರೂ ಸೇರಿಕೊಂಡು ಪ್ರತಿಭಟನೆಯನ್ನು ಮಾಡುವುದರ ಮೂಲಕವಾಗಿ ಸ್ವಾಭಿಮಾನಿಗಳಾಗಿರುವ ಡಿ. ಆರ್. ನಾಗರಾಜ, ದೇವನೂರು ಮಹಾದೇವ್‌, ಸಿದ್ದಲಿಂಗಯ್ಯ, ಬರಗೂರ ರಾಮಚಂದ್ರಪ್ಪ ಮುಂತಾದವರು ಸೇರಿಕೊಂಡು, ಬಂಡಾಯ ಸಾಹಿತ್ಯ ಸಂಘಟನೆ ಸಂಘಟನೆಯನ್ನು ಬೆಂಗಳೂರಿನಲ್ಲಿ ಆಂಧ್ರದ ಹೆಸರಾಂತ ಕವಿಗಳಾಗಿರುವ ಶ್ರೀ ಶ್ರೀ ಅವರ ಮೂಲಕ ಉದ್ಘಾಟನೆಯನ್ನು ಮಾಡಿಸಿದರು. ಅಲ್ಲಿಂದ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾಗಿ 'ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ' ಎಂಬ ಧೈಯ ವಾಕ್ಯವಾಗಿಸಿಕೊಂಡಿತು. ನಾವೆಲ್ಲರೂ ಕೂಡ ನೋಡಿದ್ದೇವೆ. ಇಂಥ ಒಂದು ಚಳವಳಿಗೆ ಕಾರಣರಾಗಿರತಕ್ಕಂತವರು ಅಮರಚಿಂತವರು. ಇಡೀ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾಗಿರತಕ್ಕಂತಹ ಕಾವ್ಯವನ್ನ ಕೊಟ್ಟಿರುವ ಸರಳ ಸಜ್ಜನಿಕೆ ಕವಿ ಎಂದು ನಾವೆಲ್ಲರೂ ಗುರುತಿಸಿದ್ದೇವೆ.

1967ರಲ್ಲಿ ರಾಯಚೂರನ್ನು ವಾಲೀಕಾರು ಸೇರಿಕೊಂಡಾಗ ವಾಲೀಕಾರರು ಬೇಂದ್ರೆ ಕಾವ್ಯದ ಆರಾಧಕರಾಗಿದ್ದರು, ಎಮ್. ಲಕ್ಷ್ಮಣ ಅವರು ಕುವೆಂಪುರವರ ಆರಾಧಕರಾಗಿ, ಜಂಬಣ್ಣ ಗೋಪಾಲಕೃಷ್ಣ ಅಡಿಗರ ಆರಾಧಕರಾಗಿ ಮೂವರು ಒಂದೇ ಕಡೆ ಸೇರಿಕೊಂಡು ಜೋಡಿಹಕ್ಕಿಗಳಾಗಿ ರಾಯಚೂರಿನ ಲೇಖಕ ಬಳಗದಲ್ಲಿ ಇವರು ಸೇರಿಕೊಂಡು ಬರಿ ಕವಿತೆಯನ್ನು ಬರೆಯುವಂತಹ ಮಾತ್ರ ಪಾಲ್ಗೊಳ್ಳದೆ ಪ್ರತಿಯೊಂದು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಜರಾಗುತ್ತಾ ಇದ್ದರು. ಮುಂದೆ ಬಿ.ಬಸಲಿಂಗಪ್ಪ ನವರ ಭೂಸಾ ಪ್ರಕರಣ, ಇಡೀ ದಲಿತ ಲೋಕಕ್ಕೆ ಗಂಟೆಯನ್ನು ಬಾರಿಸಿದರೆ ಅದರಲ್ಲಿ ಪಾಲ್ಗೊಂಡಿರತಕ್ಕಂತವರು ಅಮರಚಿಂತರು. ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಿದಾಗ ಅಮರಚಿಂತವರು ಎಲ್ಲರ ಜೊತೆಗೆ ಪಾಲನ್ನು ಹೊಂದಿರತಕ್ಕಂತವರು. ಆನಂತರದಲ್ಲಿ ಜಂಬಣ್ಣ ಅಮರಚಿಂತರವರು ಬಂಡಾಯದ ಸಾಹಿತ್ಯ ಸಂಘಟನೆಯ ನೇರವಾದ ಪಾಲುದಾರಿಕೆಯನ್ನು ಪಡೆದುಕೊಂಡು ಕವಿತೆಯನ್ನು ಬರೆಯುವುದರ ಮೂಲಕವಾಗಿ ಸಾಮಾಜಿಕ ಎಚ್ಚರಿಸುವ ಕೆಲಸವನ್ನು ಅವರು ಮಾಡಿದರು. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಯಚೂರು ಜಿಲ್ಲೆಯ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದರು. ಅಲ್ಲಿಯೂ ತಮ್ಮ ಮಹತ್ವಪೂರ್ಣ ವಾದ ಭಾಷಣವನ್ನು ಮಾಡಿ ಹೆಸರಾದರು. ಅತ್ಯಂತ ಸರಳ, ಸೌಜನ್ಯ ಮತ್ತು ಮೃದು ಸ್ವಭಾವದ ಜಂಬಣ್ಣ ಅಮರಚಿಂತವರು. ಅವರು ಬದುಕಿನಲ್ಲಿ ಹೇಗೆ ಬದುಕಿದ್ದರೋ; ಬರಹದಲ್ಲಿಯೂ ಕೂಡ ಅದೇ ರೀತಿಯಾದ ಬರಹವು ಕೂಡ ಅವರಲ್ಲಿ ನಾವು ಕಾಣುತ್ತೇವೆ. ಮೃದುವಾದ ಬರಹ ಹರಿತವಾದ ಕಾವ್ಯ. ಇವುಗಳ ಮೂಲಕ ಅಮರಚಿಂತನದ ಚಿಂತನೆಗಳನ್ನು ಕೊಟ್ಟಿರುವ ಕವಿ. ಹೀಗಾಗಿ ಜಂಬಣ್ಣ ಅಮರಚಿಂತವರು ಮುಖ್ಯವಾಗಿ ನಾವು ಗುರುತಿಸುವುದು ಕವಿಯಾಗಿ ಮುಂಜಾವಿನ ಕೊರಳು, ಅಧೋ ಜಗತ್ತಿನ ಆ ಕಾವ್ಯ, ಮಣ್ಣಲ್ಲಿ ಬಿರಿದ ಅಕ್ಷರ, ಅಮರಚಿಂತ ಕಾವ್ಯ, ಹರಿಯುವ ನದಿಗೆ ಮೈಯೆಲ್ಲಾ ಕಾಲು, ಪದಗಳು ನಡೆದಾಡುತ್ತಿವೆ ಪಾದಗಳಾಗಿ, ಅಕ್ಕನ ಹೃದಯ ಗೀತಾಂಜಲಿ ಎನ್ನುವ ಏಳು ಕವನ ಸಂಕಲನಗಳನ್ನು ಅವರುಗಳ ತಂದಿದ್ದಾರೆ. ವಿಶೇಷವಾದ ಅರ್ಥವನ್ನು ಕೊಡುವ ಮತ್ತು ಸಾಮಾಜಿಕ ಚಿಂತನೆಯ ಗಜಲುಗಳನ್ನು ರಚನೆಯನ್ನು ಮಾಡಿ ಮುಳ್ಳಿನ ಬಾಯಲ್ಲಿ ಹೂ ನಾಲಿಗೆ, ಬಾಧೆಯ ವೃಕ್ಷದಲ್ಲಿ ಬೋಧಿಯ ಪರಿಮಳ, ಎನ್ನುವ ಎರಡು ಗಜಲ್ ಸಂಕಲನಗಳನ್ನು ಕೂಡ ತಂದಿದ್ದಾರೆ. ಅವರ ಸಂಶೋಧನಾ ಮತ್ತು ಜೀವನ ಚರಿತ್ರೆ ಆಧಾರಿತ ಮಡಿವಾಳ ಮಾಚಿದೇವ ಎನ್ನುವ ಗದ್ಯ ಕೃತಿಯು ಹೊರಬಂದಿದೆ. ಕುರಮಯ್ಯ ಮತ್ತು ಅಂಕುಶದೊಡ್ಡಿ ಮತ್ತು ಬೂಟುಗಾಲಿನ ಸದ್ದು ಎನ್ನುವ ಎರಡು ಕಾದಂಬರಿಗಳನ್ನು ರಚಿಸಿದ್ದಾರೆ. ಒಟ್ಟಾರೆಯಾಗಿ 12 ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಪೂರ್ವ ಚೇತನ.

ಜಂಬಣ್ಣ ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಸುಧೀಂದ್ರ ಸಾಹಿತ್ಯ ಪ್ರಶಸ್ತಿ, ಕನಕಸಿದ್ದ ಶ್ರೀ ಪ್ರಶಸ್ತಿ, ತರಾಸು ಸಾಹಿತ್ಯ ಪ್ರಶಸ್ತಿ ಆರ್ಯಭಟ ಪ್ರಶಸ್ತಿ, ಕಾಯಕ ಸಮಾನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನವರತ್ನ ಪ್ರಶಸ್ತಿ, ಕರುನಾಡು ಸಾಹಿತ್ಯ ಶ್ರೀ ಪ್ರಶಸ್ತಿ, ಕನ್ನಡ ನಾಡು ಸಾಹಿತ್ಯಶ್ರೀ ಪ್ರಶಸ್ತಿ, ಕೃಷ್ಣಪ್ಪ ಗೌರವ ಸಮರ್ಪಣೆ, ಬೂದಿ ವರ್ಧನ ಪ್ರಶಸ್ತಿ, ಬೋಳಬಂಡೆಪ್ಪ ಸಾಹಿತ್ಯ ಪ್ರಶಸ್ತಿ, ಮಹಾಂತ ಸಿರಿ ಪ್ರಶಸ್ತಿ ಹೀಗೆ 15ಕ್ಕೂ ಹೆಚ್ಚು ಪ್ರಶಸ್ತಿ ಗೌರವಗಳನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಗಜಲುಗಳು ಮತ್ತು ಕಾದಂಬರಿಗಳು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ರಾಯಚೂರು ಜಿಲ್ಲಾ ಮಡಿವಾಳ ಸಂಘದ ಸಲಹೆಗಾರರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘ ಸಂಸ್ಥೆಗಳಿಗೆ ಸಲಹೆಗಾರರು ಆಗಿದ್ದರು. ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಂಘದ ಸಲಹೆಗಾರರಾಗಿ ಕುರುಮಯ್ಯ ಮತ್ತು ಅಂಕುಶದೊಡ್ಡಿ ಆಧಾರಿತ ಕಾದಂಬರಿ ವರಹ ಪುರಾಣ ಎನ್ನುವ ನಾಟಕವಾಗಿ, ಮೈಸೂರು, ಬೆಂಗಳೂರು, ದೆಹಲಿ, ಮುಂಬೈ, ರಾಯಚೂರುಗಳಲ್ಲಿ ಪ್ರದರ್ಶನವಾಗಿದೆ, ಅಮರಚಿಂತ ಅವರ ಕಾವ್ಯ, ಕಾವ್ಯಗಳನ್ನು ಇಂಗ್ಲೀಷ್, ತೆಲುಗು, ಗುಜರಾತಿ, ನೇಪಾಳಿ ಭಾಷೆಗಳಿಗೆ ಅನುವಾದವನ್ನು ಮಾಡಲಾಗಿದೆ. ರಾಜ್ಯದಲ್ಲಿರುವ ದೇವದಾಸಿ ಮತ್ತು ಬೆತ್ತಲ ಸೇವೆ ನಿರ್ಮೂಲನೆ ಮಾಡಲು ಹೋರಾಟವನ್ನು ಮಾಡಿರುವ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು. ದೀನ, ದಲಿತ, ದಮನಿತ ವರ್ಗಗಳ ಜನಪರ ಹೋರಾಟ, ಪಿಕೆ ಹೋರಾಟ, ಯಾಪಲ್ ದಿನ್ನಿ ಹೋರಾಟಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ರಾಯಚೂರು ರಂಗಮಂದಿರ ಕಟ್ಟಡ ನಿರ್ಮಾಣವಾಗಲು ಮುಂಚೂಣಿಯಲ್ಲಿದ್ದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುವ ವ್ಯಕ್ತಿ. ಅವರು ಸಾಹಿತ್ಯ, ಸಮಾಜ, ಸಾಂಸ್ಕೃತಿಕ ಕೊಡುಗೆಯನ್ನು ಕೊಟ್ಟಿದ್ದಾರೆ. ಆ ಕೊಡುಗೆಗಳು ಇಂದಿಗೂ ಕೂಡ ಅಮರವಾಗಿ ಇವೆ ಎಂದು ಹೇಳಬಹುದು.

-ಡಾ. ಪೀರಪ್ಪ ಬಿ. ಸಜ್ಜನ

MORE FEATURES

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದುರ್ಗತಿಯ ಮೇಲೆ ಬೆಳಕು ಚೆಲ್ಲುವ ಕೃತಿಯಿದು

30-09-2024 ಬೆಂಗಳೂರು

"ಈ ಗ್ರಂಥವು ಮಾಧ್ಯಮದಲ್ಲಿ ಮಹಿಳೆ ಎಂಬ ವಿಷಯದ ನೆಪದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಲೈಂಗಿಕ, ಸಾಂಸ್ಕೃತಿಕ ಶೋಷ...

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...