ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...


"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್ತಿ. ಕಥೆಗಳೆಂದರೆ ಉಪರಿಯ ಕಥೆಗಳ ಹಾಗಿರಲಿ ಎಂದು ಬಯಸುವ ಹಾಗೆ ಹದವಾದ ರಸ ಮಿಶ್ರಣವಿದು. ಕಥೆಗಳಲ್ಲಿ ಕ್ರಿಸ್ಪ್ನೆಸ್ ಬಯಸುವವರಿಗೆ ಒಂದೊಳ್ಳೆಯ ಓದು," ಎನ್ನತ್ತಾರೆ ಕವಿತಾ ಹೆಗಡೆ ಅಭಯಂ. ಅವರು ಅಜಿತ್ ಹರೀಶಿಯವರ ‘ಉಪರಿ’ ಕೃತಿ ಕುರಿತು ಬರೆದಿರುವ ವಿಮರ್ಶೆ.

“ಅಂತರ್ಗತ” ಎಂಬ ಕಥೆಯಲ್ಲಿ ಲೇಖಕನೇ ಕಲ್ಪಿಸಿಕೊಂಡು ಕಥೆಯಲ್ಲಿ ಸೃಷ್ಟಿಸಿದ ಶಿವರಾಮರಾಯರ ಪಾತ್ರವೊಂದು ಅಚಾನಕ್ಕಾಗಿ ಅವನ ಮುಂದೆ ಬಂದು ‘ನನ್ನ ಕಥೆಯನ್ನೇ ಅದು ಹೇಗೆ ಬರೆದಿರಿ? ಯಾರನ್ನು ಕೇಳಿ ಬರೆದಿರಿ?’ ಎಂದು ಪ್ರಶ್ನಿಸುವ ಸಂದರ್ಭ ತುಂಬ ಜಾಣ್ಮೆಯಿಂದ ವ್ಯಕ್ತವಾಗಿದೆ. ಅವರ ಕುಟುಂಬದ ಇತರ ಪಾತ್ರಗಳನ್ನೂ ತೋರಿಸಿ ಶಿವರಾಮರಾಯರು ತಮ್ಮ ಕುಟುಂಬವನ್ನು, ವೈಯಕ್ತಿಕ ಬದುಕನ್ನು ಸಾರ್ವಜನಿಕರ ಎದುರು ಹರಾಜು ಹಾಕುವುದು ನ್ಯಾಯವೇ ಎಂದು ಪ್ರಶ್ನಿಸುವುದು ಕಥೆಗಾರರ ಅಂತಃಸಾಕ್ಷಿಗೇ ಎಸೆದ ಪ್ರಶ್ನೆ. ಕಥೆಗಾರನಿಗೆ ಇದರ ಹೊರತು ಬೇರೆ ದಾರಿಯಿಲ್ಲ. ಪಾತ್ರಗಳು ಅವನು ಹೇಳಿದಂತೆ ಕುಣಿಯಲೇ ಬೇಕು. ಆದರೆ ಅಂಥ ಪಾತ್ರಗಳು ಒಂದೊಮ್ಮೆ ಜೀವಂತವಾಗಿ ಕಣ್ಮುಂದೆ ಬಂದುಬಿಟ್ಟರೆ? ಆಹಾ! ಸೊಗಸಾಗಿದೆ ಈ ಕಥೆ.

“ಉಪರಿ” ನನ್ನ ಮೆಚ್ಚಿನ ಕಥೆ. ಒಂದರ ಮೇಲೊಂದು ತಿಥಿ ಅಥವಾ ತಿಂಗಳು ಬಂದಾಗ ಉಪರಿ ಎನ್ನುತ್ತೇವೆ. ಚೌತಿ, ಹುಣ್ಣಿಮೆ, ಅಮಾವಾಸ್ಯೆ ಅಥವಾ ಆಷಾಢದಂಥವು ಡಬಲ್ ಬಂದು ಎರಡು ದಿನ ಆಚರಣೆ ಅಂದುಬಿಟ್ಟರಂತೂ ಎಲ್ಲರಿಗೂ ಕನ್ಫ್ಯೂಶನ್. ಆದರೂ ಏನೋ ಸಂಭ್ರಮ. ಇಲ್ಲಿ ಉಪರಿ ಎಂಬ ಶಬ್ದದ ಬಳಕೆ ಬಹಳ ಕೌಶಲ್ಯಪೂರ್ಣವಾಗಿ ಆದ ಹಾಗನಿಸಿತು. ಮನಸ್ಸಿನ ಆಟವನ್ನು ಅಜಿತ್ ಅವರು ಮರ್ಮಿಕವಾಗಿ ನಿರೂಪಿಸಿದ್ದನ್ನು ಓದೇ ಅರಿಯಬೇಕು.

“ಕಾಲ ವಟಿ”ಯ ಕೈಲಾಜಿ ಬಹುಕಾಲ ನೆನಪಿರಬಲ್ಲ ವಿಶಿಷ್ಟ ಪಾತ್ರ.

“ತಾರೆ”, “ತುಂಬೀತೆ ಒಲವು”, “ನೀಲಿ ಕಮಲ”ಗಳು ಆಕರ್ಷಕ ಶೈಲಿಯಲ್ಲಿವೆ

“ರೆಕ್ಕೆಯಗಲ ಪದ” ಇನ್ನೊಂದು ಕಾಡುವ ಕಥೆ. ತನ್ನ ವೈವಾಹಿಕ ಬದುಕಿನ ಸಂಭ್ರಮಗಳೆಲ್ಲ ಮಿಥ್ಯವೆಂದು ತಿಳಿದ ಸುಭಾಷಿಣಿಯ ಬಿಡುಗಡೆಯ ಕಥೆ. ತಾನು ಯಾವುದನ್ನು ತನ್ನ ಗಂಡನ ಪ್ರೀತಿ ಎಂದು ಉಮೇದಿಯಲ್ಲಿದ್ದೆನೋ ಆದು ಪ್ರೀತಿಯಲ್ಲ, ಕಿರುಕುಳ ಅನಿಸಿದ ಕ್ಷಣ ಅವಳಿಗೆ ಎಷ್ಟು ತಲ್ಲಣ ನೀಡಿರಬಹುದು? ತುಂಡು ಬಟ್ಟೆ ತೊಡಿಸಿ ವಿಕೃತಿ ಮೆರೆಯುವ ಗಂಡ ರಮಾನಂದನ ಬಗ್ಗೆ ಅವಳ ಮುಜುಗರ ಎಷ್ಟಿರಬೇಡ? ತನ್ನ ಒಳಗುದಿಗೆ ತಾನೇ ಪರಿಹಾರ ಕಂಡುಕೊಳ್ಳುತ್ತ ಅವಳು ಸ್ವತಂತ್ರಳಾಗಿ ಹೊರ ನಡೆವ ಸಂದರ್ಭದ “ತನು ಬಂಧನವ ಮೀರಿ ಮನಗುದುರೆಯ ರೆಕ್ಕೆ ಬಿಚ್ಚಿ ಬಡಿದು” ಎಂಬ ವಾಕ್ಯ ಎದೆಯಲ್ಲಿ ಸ್ಥಿರವಾಗಿಬಿಡುತ್ತದೆ.

ಬಿಳಿ ಮಲ್ಲಿಗೆಯ ಬಾವುಟ, ಸೂರು ಹಿಡಿಯದ ಹನಿಗಳು, ಕನಸಿನ ದನಿ ಎಂಬ ಕವನ ಸಂಕಲನಗಳು, ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಎಂಬ ಕಥಾ ಸಂಕಲನಗಳ ನಂತರ ಬಂದ ಪುಸ್ತಕ ಸಮತೋಲಿತ ಚಿತ್ತದ ಕಥೆಗಾರನ ಒಂದು ಕುಶಲ ಕುಸುರಿ.

ಈ ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು. ಓದದಿದ್ದರೆ ನೀವೊಂದು ಸುಖದ ಓದನ್ನು ತಪ್ಪಿಸಿಕೊಳ್ಳುವುದು ಕೂಡ ಹೌದು.

ಅಜಿತ್ ಇನ್ನಷ್ಟು ಬರೆಯಲಿ. ಇನ್ನಷ್ಟು ಓದಿಸಲಿ ಎಂಬ ಹಾರೈಕೆಯೊಂದಿಗೆ ಉಪರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಕೋರುತ್ತೇನೆ.

- ಕವಿತಾ ಹೆಗಡೆ ಅಭಯಂ

MORE FEATURES

ನಾವು ಬದುಕುತ್ತಿರುವ ಪರಿಸರವೇ ಕುಂ.ವೀ ಅವರ ಬರವಣಿಗೆಯ ಶಕ್ತಿಯಾಗಿದೆ

16-09-2024 ಬೆಂಗಳೂರು

“ಕುಂ.ವೀರಭದ್ರಪ್ಪ ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ...

ಮೊಸಳೆ ಸೆರೆ ಹಿಡಿದ ಪ್ರಸಂಗ

16-09-2024 ಬೆಂಗಳೂರು

"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತ...

ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು `ಚೆನ್ನಭೈರಾದೇವಿ'

16-09-2024 ಬೆಂಗಳೂರು

"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧ...