“ಮಹಿ: ನೀಲಿಬೆಟ್ಟಗಳ ಮೇಲೆ ಹಾರಿದ ಆನೆ ಕತೆಯು ಮಕ್ಕಳ ಪುಸ್ತಕದ ವಿಚಾರದಲ್ಲಿ ಒಂದು ಮೈಲಿಗಲ್ಲನ್ನು ಹುಟ್ಟುಹಾಕಲು ಮಾಡಿದ ಪ್ರಾಮಾಣಿಕ ಪ್ರಯತ್ನವಾಗಿದೆ. ಮುಂದೊಂದು ದಿನ, ಈ ಕತೆ ಅನಿಮೇಶನ್ ರೂಪದಲ್ಲಿ ನಾವೆಲ್ಲರೂ ನೋಡುವಂತೆ ಆಗಲಿದೆ ಎಂಬುದು ನನ್ನ ಬಯಕೆ” ಎನ್ನುತ್ತಾರೆ ಆನಂದ್ ನೀಲಕಂಠನ್. (ಕನ್ನಡಕ್ಕೆ ಅನುವಾದ ರತೀಶ ಬಿ.ಆರ್) ಅವರು ‘ಮಹಿ: ನೀಲಿಬೆಟ್ಟಗಳ ಮೇಲೆ ಹಾರಿದ ಆನೆ’ ಮಕ್ಕಳ ಕಾದಂಬರಿಗೆ ಬರೆದ ಲೇಖಕರ ಮಾತು ಇಲ್ಲಿದೆ.
ಮಕ್ಕಳಿಗಾಗಿ ನಾನು ಬರೆಯುತ್ತಿರುವ ಮೊದಲ ಸರಣಿ ಪುಸ್ತಕ ಇದು. ಆದರೆ ಈ ಕತೆಯನ್ನು ದೊಡ್ಡವರೂ ಓದಿ ಮನರಂಜನೆ ಪಡೆಯಬಹುದಾಗಿದೆ. ಈಗ ಈ ಕತೆಯನ್ನು ಓದುವ ಮಕ್ಕಳು ಮುಂದೆ ಹಲವು ವರ್ಷಗಳಾಗಿ ದೊಡ್ಡವರಾದ ಮೇಲೆ ಮತ್ತೊಮ್ಮೆ ಇದೇ ಕತೆಯನ್ನು ಓದಿ ಕತೆಯಲ್ಲಿರುವ ಒಳ-ಪದರಗಳನ್ನು ಅರಿತುಕೊಳ್ಳುತ್ತಾರೆ ಎಂದು ನಂಬಿದ್ದೇನೆ.
ಡಿಸ್ನಿ ಹಾಗೂ ಪಿಕ್ಸರ್ ಕಂಪನಿಗಳು ಎಡಬಿಡದೇ ಹೊರತರುವ ಲಯನ್ ಕಿಂಗ್, ಮೋನ ಹಾಗೂ ಇನ್ನಿತರ ಅನಿಮೇಶನ್ ಸಿನೆಮಾಗಳಂತೆ ನಾವು ಏಕೆ ಸಿನೆಮಾಗಳನ್ನು ಮಾಡಬಾರದು, ಎಂದು ಒಬ್ಬ ಕತೆಗಾರನಾಗಿ ಹಾಗೂ ಚಿತ್ರಕತೆ ಬರಹಗಾರನಾಗಿ ನನಗೀ ಆಲೋಚನೆ ಯಾವಾಗಲೂ ಬರುತ್ತಿರುತ್ತದೆ. ನಮ್ಮಲ್ಲಿ ಅನಿಮೇಶನ್ ಮಾಡಲು ಸಾಧ್ಯವಾಗುವಂತಹ ಮಕ್ಕಳ ಕತೆಗಳು ಮೂಡಿ ಬರುತ್ತಿರುವುದು ಕಡಿಮೆ ಆಗಿರುವುದು ಕೂಡ ಇದಕ್ಕೆ ಕಾರಣವಿರಬಹುದು. ನಮ್ಮಲ್ಲಿರುವ ಹೆಚ್ಚಿನ ಪುಸ್ತಕಗಳು ಪುರಾಣಗಳನ್ನು ಇನ್ನೊಂದು ಬಗೆಯಲ್ಲಿ ಹೇಳುತ್ತವೆ. ಇಲ್ಲವೇ ನೀತಿಕತೆಗಳಾಗಿವೆ. ಹಾಗಾಗಿ ನಮ್ಮ ಮಕ್ಕಳು ಮನರಂಜನೆಗಾಗಿ ಪಶ್ಚಿಮ ದೇಶಗಳ ಕತೆಗಳತ್ತ ವಾಲಿವೆ. ಕಳೆದ ನೂರು ವರ್ಷಗಳಲ್ಲಿ ಜಂಗಲ್ ಬುಕ್ ಕತೆಯನ್ನು ಇಂಡಿಯನ್ ಬರಹಗಾರನೊಬ್ಬ ಏಕೆ ಬರೆಯಲಾಗಲಿಲ್ಲ? ಇಂಡಿಯಾದಲ್ಲಿ ಯಾವುದೇ ಪುಸ್ತಕದ ಅಂಗಡಿಗೆ ಹೋಗಿ ನೋಡಿ, ಅಲ್ಲಿನ ಮಕ್ಕಳ ಪುಸ್ತಕಗಳ ಕಪಾಟಿನಲ್ಲಿ ಪಶ್ಚಿಮ ದೇಶದ ಬರಹಗಾರರ ಪುಸ್ತಕಗಳೇ ತುಂಬಿ ತುಳುಕುತ್ತಿರುತ್ತವೆ. ಇಂಡಿಯಾದ ಬರಹಗಾರರಿಗೆ ತುಂಬಾ ಕಡಿಮೆ ಜಾಗ ಮಾಡಿಕೊಡಲಾಗಿರುತ್ತೆ.
ಈ ನಿಟ್ಟಿನಲ್ಲಿ, ಮಹಿ: ನೀಲಿಬೆಟ್ಟಗಳ ಮೇಲೆ ಹಾರಿದ ಆನೆ ಕತೆಯು ಮಕ್ಕಳ ಪುಸ್ತಕದ ವಿಚಾರದಲ್ಲಿ ಒಂದು ಮೈಲಿಗಲ್ಲನ್ನು ಹುಟ್ಟುಹಾಕಲು ಮಾಡಿದ ಪ್ರಾಮಾಣಿಕ ಪ್ರಯತ್ನವಾಗಿದೆ. ಮುಂದೊಂದು ದಿನ, ಈ ಕತೆ ಅನಿಮೇಶನ್ ರೂಪದಲ್ಲಿ ನಾವೆಲ್ಲರೂ ನೋಡುವಂತೆ ಆಗಲಿದೆ ಎಂಬುದು ನನ್ನ ಬಯಕೆ. ಅಷ್ಟೇ ಅಲ್ಲದೇ ಈ ಪುಸ್ತಕವನ್ನು ಓದುವ ಯುವ ಓದುಗರು ಸೇರಿ ಹಲವಾರು ಬರಹಗಾರರು ಮಕ್ಕಳಿಗಾಗಿ ಈ ಬಗೆಯಲ್ಲಿ ಹೆಚ್ಚಿನ ಪುಸ್ತಕಗಳನ್ನು ಹೊರತರುತ್ತಾರೆ ಎಂಬ ಕನಸನ್ನೂ ಹೊತ್ತಿದ್ದೇನೆ. ಹಾಗಾದಾಗ, ಒಂದು ದಿನ ನಾವು ಜಗತ್ತಿನ ತುಂಬೆಲ್ಲಾ ಭಾರತೀಯ ಕತೆಗಳೇ ಕೇಳುವ ಹಾಗೂ ಕಾಣುವ ಗಳಿಗೆಗಳು ಬರಲಿವೆ. ರಾಮಾಯಣ, ಮಹಾಭಾರತ, ಪಂಚತಂತ್ರ, ವಿಕ್ರಮ ಬೇತಾಳ ಕತೆಗಳು ಸಾವಿರಾರು ವರ್ಷಗಳಿಂದ ಜಗತ್ತಿನ ಮೂಲೆ ಮೂಲೆಯನ್ನು ತಲುಪಿಲ್ಲವೇ ಹಾಗೆಯೇ ನಮ್ಮ ಹೊಸ ಹೊಸ ಮಕ್ಕಳ ಕತೆಗಳೂ ತಲುಪಲಿ.
- ಆನಂದ್ ನೀಲಕಂಠನ್
"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...
“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...
"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...
©2024 Book Brahma Private Limited.