ಯಲ್ಲಪ್ಪ ರೆಡ್ಡಿಯಂತಹ ಪರಿಸರ ಪ್ರೇಮಿಯನ್ನು ನಾನು ಕಂಡಿಲ್ಲ; ನಾಗೇಶ ಹೆಗಡೆ

Date: 14-09-2024

Location: ಬೆಂಗಳೂರು


ಬೆಂಗಳೂರು: ಜನ ಪ್ರಕಾಶನ, ಬೆಂಗಳೂರು ವಿಜ್ಞಾನ ವೇದಿಕೆ ಮತ್ತು ಕೃಷಿ ಭಾರತ್ ಫೌಂಡೇಶನ್ ವತಿಯಿಂದ ಡಾ.ಅ.ನ. ಯಲ್ಲಪ್ಪ ರೆಡ್ಡಿ ಅವರ ‘ಮೇದಿನಿ ಜೊತೆ ನನ್ನ ಕಥೆ’ ನೆನಪುಗಳು ಮತ್ತು ಸಮಕಾಲೀನ ಸಂಗತಿಗಳ ಪರಾಮರ್ಶೆ ಕೃತಿಯ ಲೋಕಾರ್ಪಣಾ ಸಮಾರಂಭವು 2024 ಸೆ.14 ಶನಿವಾರದಂದು ನಗರದ ನ್ಯಾಷನಲ್ ಕಾಲೇಜಿನ ಹೆಚ್.ಎನ್. ಮಲ್ಟಿಮೀಡಿಯಾ ಹಾಲ್ ನಲ್ಲಿ ನಡೆಯಿತು.

ವೇದಿಕೆಯಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಗೌರವಾನ್ವಿತ ನ್ಯಾಯಮೂರ್ತಿ, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನದಾಸ್ ಮಾತನಾಡಿ, "ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಯಲ್ಲಪ್ಪ ರೆಡ್ಡಿ ಅವರ ಎಲ್ಲಾ ಬರಹಗಳ, ಅನುಭವಗಳ, ಚಿಂತನೆಗಳನ್ನೊಳಗೊಂಡ ಬದುಕಿನ ಒಂದು ಸಮಗ್ರ ಕೃತಿ ಬೇಕಾಗಿದೆ. ಅದು ಮುಂದಿನ ಪೀಳಿಗೆಗೆ ಅತ್ಯವಶ್ಯಕ. ಇಂದು ಬಿಡುಗಡೆಗೊಂಡಿರುವ ‘ಮೇದಿನಿ ಜೊತೆ ನನ್ನ ಕಥೆ’ ಕೃತಿಯಲ್ಲಿ ಅವರ ಬದುಕಿನ ಅನುಭವದ ಒಂದು ಮಗ್ಗುಲು ಮಾತ್ರ ಯಿದೆ. ಅವರು ಮನಸ್ಸು ಮಾಡಿದರೆ ಲೋಕಾದಲತ್ ನ ಅನುಭವವನ್ನು ಸಮಗ್ರವಾಗಿ ಒಂದು ಕೃತಿಯ ಮುಖೇನ ಸಮಾಜಕ್ಕೆ ಕೊಡಬಹುದು," ಎಂದರು

"ನಾವೆಲ್ಲರೂ ಸಂಗೀತವನ್ನು ಕಿವಿಯನ್ನ ಇಂಪಾಗಿಸಲು ಕೇಳುತ್ತೇವೆ, ನೃತ್ಯವನ್ನು ಕಣ್ಣಿಗೆ ತಂಪಾಗಿಸಲು ನೋಡುತ್ತೇವೆ. ಆದರೆ ಅವರ ದೃಷ್ಟಿಯಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಅವರು ಸಾಗರ, ಸರೋವರ ಮತ್ತು ನದಿಗಳನ್ನು ಕಾಣುತ್ತಾರೆ. ಬೆಟ್ಟ, ಗುಡ್ಡ, ಪರ್ವತ, ಕಾಡು-ಮೇಡುಗಳನ್ನು ಅವರು ಕಾಣುತ್ತಾರೆ. ಇದನ್ನು ಅವರು ಮಾತ್ರ ಕಂಡುಕೊಳ್ಳುವುದು ಅಲ್ಲದೇ, ಸಮಾಜಕ್ಕೆ ಕೂಡ ತೋರಿಸುತ್ತಾರೆ. ಇಂತಹ ಅನೇಕ ಅವರ ಅನುಭವಗಳ, ಪ್ರಯೋಗಗಳ ಅವಶ್ಯಕತೆ ಮುಂದಿನ ಪೀಳಿಗೆಗೆ ಬೇಕಾಗಿದೆ. ಹಾಗಾಗಿ ಅಂತಹ ಕೆಲಸ ಇಂತಹ ಸಂದರ್ಭದಲ್ಲಿ ಆಗಬೇಕೆಂಬುವುದು ನನ್ನ ಮನವಿ," ಎಂದು ಹೇಳಿದರು

ಪರಿಸರ ವಿಜ್ಞಾನಿ, ಪತ್ರಕರ್ತ, ಲೇಖಕ ನಾಗೇಶ ಹೆಗಡೆ ಮಾತನಾಡಿ, "ನೆಲದ ಮೇಲಿರುವಂತಹ ವಿಷಕಾರಿ ವಸ್ತುಗಳನ್ನು ನೆಲದ ಕೆಳಗೆ ಹಾಕಿ ನಂತರದಲ್ಲಿ ಭೂಮಿಯು ಜೀವ ವಿಕಾಸಕ್ಕೆ ದಾರಿ ಮಾಡಿ ಕೊಟ್ಟಿತು. ಭೂಮಿಯ ಅಡಿಯಿಂದ ಅಗೆದು ನಾವು ಇವತ್ತು ಚಿನ್ನವನ್ನ ಎಷ್ಟು ಅಗಾಧವಾಗಿ ಬಳುಸುತ್ತಿದ್ದೇವೆಯೋ ಅದು ದ್ವೇಷ, ಅಸೂಯೆ ಯಂತಹ ವಿಚಾರಗಳಿಗೆ ಮುಖ್ಯ ಕಾರಣವಾಗಿದೆ. ಭೂಮಿಯನ್ನು ಅಗೆದು ಪಡದುಕೊಳ್ಳುವಂತಹ ಯೋಚನೆ ಸಾಕು, ನಮಗೆ ಆಕಾಶದ ಮೇಲಿಂದ ಸಿಗುತ್ತಿರುವ ಸಂಪತ್ತು ಅಗಾಧ ಎನ್ನುವ ಯೋಚನೆ ನನಗೆ ಬರಲು ಮುಖ್ಯ ಕಾರಣ ಯಲ್ಲಪ್ಪ ರೆಡ್ಡಿಗಳು. ಇನ್ನು ಒಂದು ಮರದ ಬೇರು ಭೂಮಿಯಲ್ಲಿ ಎಷ್ಟು ಆಳದ ವರೆಗೆ ಹೋಗುತ್ತದೆಯೋ ಅಷ್ಟು ಆಳದವರೆಗೆ ನಮಗೆ ಬಾವಿಯನ್ನು ತೋಡಲು ಅವಕಾಶವಿರುತ್ತದೆ. ಒಂದು ವೇಳೆ ಅದಕ್ಕಿಂತ ಜಾಸ್ತಿಯಾಗಿ ಭೂಮಿಯನ್ನು ಕೊರೆದರೆ ನೀರು ಸಿಗಲು ಸಾಧ್ಯವೇ ಇಲ್ಲ ಎಂಬುವ ವಿಚಾರವನ್ನು ನನ್ನ ಅರಿವಿಗೆ ತಂದವರು ಕೂಡ ಅವರೇ," ಎಂದರು.

"ಯಲ್ಲಪ್ಪ ರೆಡ್ಡಿಗಳ ಪರಿಸರದ ಬಗ್ಗೆಗಿನ ಪ್ರೀತಿ, ಕಾಳಜಿ ಅವರಿಗೆ ಅರಣ್ಯ ಇಲಾಖೆಯ ವಿರುದ್ಧ ಇದ್ದಂತಹ ಕೋಪದಿಂದ ನನಗೆ ಗೊತ್ತಾಯಿತು. ಇನ್ನು ಜ್ಞಾನ ಭಾರತಿ ಮೆಟ್ರೋ ಸುತ್ತಮುತ್ತಲೂ ಪರಿಮಳ ಯುಕ್ತವಾದ ನೈಸರ್ಗಿಕವಾದ, ಅಪ್ಪಟ ಸಾವಯವ ಮಣ್ಣು ತಯಾರಾಗಲು ಯಲ್ಲಪ್ಪ ರೆಡ್ಡಿ ಅವರೇ ಕಾರಣ. ಅವರು 1200 ಎಕರೆಗೆ ಬಯೋಡೈವರ್‍ ಸಿಟಿ ಪಾರ್ಕ್ ಮಾಡಲೇಬೇಕೆಂದು ಪಟ್ಟು ಹಿಡಿಯದೇ ಇದ್ದರೇ, ಅದು ಬೇರೆ ಸಂಸ್ಥೆಗಳಿಗೆ ಹಂಚಿಕೆಯಾಗುತ್ತಿತ್ತು. ಪರಿಸರಕ್ಕೆ ಅಂತಹ ಅದ್ಭುತವಾದ ಕೊಡುಗೆಯನ್ನು ಯಲ್ಲಪ್ಪ ರೆಡ್ಡಿ ಅವರು ನೀಡಿದ್ದಾರೆ. ಪರಿಸರದೊಂದಿಗೆ ಬಹಳಷ್ಟು ಪ್ರೀತಿಯಿಂದ ನೋಡುವಂತಹ ಅಂತಹ ಪರಿಸರ ಪ್ರೇಮಿಯನ್ನು ನಾನು ನೋಡಿಲ್ಲ. ನಿಸರ್ಗ ಅವರನ್ನ ಇನ್ನಷ್ಟು ಸಶಕ್ತವಾಗಿ ಇರಿಸಲಿ, ಪ್ರಕೃತಿ ಅವರ ಪ್ರಕೃತಿಯನ್ನು ರಕ್ಷಣೆ ಮಾಡಲಿ ಎಂಬುವುದೇ ನನ್ನ ಆಶಯ." ಎಂದು ತಿಳಿಸಿದರು.

ಟಿವಿ9 ಮುಖ್ಯ ನಿರ್ಮಾಪಕ ರಂಗನಾಥ ಭಾರದ್ವಾಜ್, "ಯಲ್ಲಪ್ಪ ರೆಡ್ಡಿ ಅವರನ್ನ ನೋಡುವಾಗ ನನಗೆ ಆಶ್ಚರ್ಯವಾಗುವುದು ಅವರ ದೇಹದಲ್ಲಿ ಹರಿಯುತ್ತಿರುವ ರಕ್ತ ಕೆಂಪ್ಪಾಗಿದೆಯೋ, ಅಥವಾ ಹಸಿರಾಗಿದೆಯೋ? ಎಂದು. ಅವರ ಕೃತಿಗಳಲ್ಲಿ ಬಹಳಷ್ಟು ವಿಚಾರಗಳ ಅನಾವರಣವಾಗಿದೆ ಅದು ಬಾಲ್ಯದಿಂದ ಹಿಡಿದು ಯಾರ್‍ಯಾರ ಜೊತೆ ಅವರ ಒಡನಾಟವಿತ್ತು ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ. ಪರಿಸರದ ಬಗ್ಗೆ ಸಾಕಷ್ಟು ಕಾಳಜಿಯಿರುವ ಯಲಪ್ಪ ರೆಡ್ಡಿ ಅವರ ಬರಹಗಳು ಮುಂದಿನ ಪೀಳಿಗೆಗೆ, ಇಂದಿನ ಪೀಳಿಗೆಗೆ ಅವಶ್ಯಕ. ಏಕೆಂದರೆ ನಾವು ಮಣ್ಣು ಮತ್ತು ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಹಾಳು ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಯೋಗ್ಯವಾದ ಮಣ್ಣು ಹಾಗೂ ಶುದ್ಧ ಕುಡಿಯುವ ನೀರು ಬೇಕೇ ಬೇಕು. ಇದೆಲ್ಲವನ್ನೂ ಮನದಲ್ಲಿಟ್ಟುಕೊಂಡು ಪರಿಸರವನ್ನು ಉಳಿಸುವ ಕಾರ್ಯ ವಾಗಬೇಕು," ಎಂದರು.

ವೇದಿಕೆಯಲ್ಲಿ ಕೃತಿಯ ಕರ್ತೃ ಯಲ್ಲಪ್ಪ ರೆಡ್ಡಿ, ಬರಹಗಾರ, ಶಿಕ್ಷಣ ತಜ್ಞ ಡಾ. ಚಂದನ್ ಗೌಡ, ಎನ್.ಇ.ಎಸ್ ಗೌರವಾನ್ವಿತ ಕಾರ್ಯದರ್ಶಿ ವೆಂಕಟಶಿವ ರೆಡ್ಡಿ, ಕೃಷಿಭಾರತ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಟಿ.ಸಿ, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಕೃತಿಯ ಸಂಪಾದಕ ಎಂ.ಆರ್. ರಕ್ಷಿತ್, ಕೃತಿಯ ಸಂಪಾದಕ, ಬೆಂಗಳೂರು ವಿಜ್ಞಾನ ವೇದಿಕೆ ಕಾರ್ಯದರ್ಶಿ ಪ್ರೊ.ಸುಚರಿತ ಚಂದ್ರ ಎಂ, ಕನ್ನಡ ಆವೃತ್ತಿ ಅನುವಾದಕ ನಿರಂಜನ ಪರಂಜಾಪೆ, ಮಾಯಾ ಚಂದ್ರ, ಹೇಮಾವತಿ ಶಂಕರ ನಾರಾಯಣ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

 

MORE NEWS

ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಕರಾಗಿ ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ

20-09-2024 ಬೆಂಗಳೂರು

ಮೈಸೂರು: ನಾಡಿನ ಪ್ರಸಿದ್ಧ ಹಿರಿಯ ಸಾಹಿತಿ, ಸಂಶೋಧಕ ಹಂಪ ನಾಗರಾಜಯ್ಯ ಅವರು ಈ ಬಾರಿ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದ...

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮೂರು ದಿನಗಳ ಕಮ್ಮಟ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

19-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲ...

ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು; ಲಲಿತಾ ಸಿದ್ಧಬಸವಯ್ಯ

19-09-2024 ಬೆಂಗಳೂರು

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...