‘ಕಳೆದ ಇಪ್ಪತ್ತೈದು ವರ್ಷಗಳ ನಮ್ಮ ಕನ್ನಡ ಸಾಹಿತ್ಯ ಸಂದರ್ಭವನ್ನು ಗಮನಿಸಿದವರಿಗೆ ನಮ್ಮ ಯುವಜನತೆಯ ಫೇವರೆಟ್ ತೇಜಸ್ವಿ ಎಂಬ ಸಂಗತಿ ಅರಿವಾಗುತ್ತದೆ’ ಎನ್ನುತ್ತಾರೆ ಡಾ. ಎಚ್.ಎಸ್. ಸತ್ಯನಾರಾಯಣ. ಅವರು ‘ತೇಜಸ್ವಿ ಕೆಲವು ಪ್ರಸಂಗಗಳು’ ( ತೇಜಸ್ವಿ ಕುರಿತು ಬರಹ) ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.
ನಾವೆಲ್ಲ ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಓದುತ್ತಾ ಬೆಳೆದವರು. ಓದಿನ ಅಭಿರುಚಿಯನ್ನು ಬೆಳೆಸಿದ ಕನ್ನಡದ ಲೇಖಕರಲ್ಲಿ ತೇಜಸ್ವಿ ಕೂಡ ಪ್ರಮುಖರು. ಅವರ ಬರವಣಿಗೆ ಎಲ್ಲ ಬಗೆಯ ಓದುಗರನ್ನೂ ಅಯಸ್ಕಾಂತದಂತೆ ಸೆಳೆದಿದೆ. ಹೊಸತಲೆಮಾರಿನ ಓದುಗರಿಗಂತೂ ತೇಜಸ್ವಿಯವರ ಬದುಕು ಬರಹಗಳೆರಡೂ ಅಚ್ಚುಮೆಚ್ಚು. ಇದಕ್ಕೆ ಅವರು ಬರವಣಿಗೆಯಲ್ಲಿ ಸಾಧಿಸಿದ್ದ ಸರಳ, ಖಚಿತ, ವೈನೋದಿಕ ದರ್ಶನಗಳ ಸಿದ್ದಿ ಒಂದು ಕಾರಣವಾದರೆ, ಅವರ ಬದುಕಿನ ಬಗೆ ಮತ್ತೊಂದು ವಿಶೇಷ ಕಾರಣವಾಗಿದೆ. ಕುವೆಂಪು ಕೊಟ್ಟ 'ನಿರಂಕುಶ ಮತಿಗಳಾಗಿ' ಎಂಬ ಕರೆಯನ್ನು ತಮ್ಮ ಜೀವನದಲ್ಲಿ ಅಕ್ಷರಶಃ ಅಳವಡಿಸಿಕೊಂಡ ತೇಜಸ್ವಿ ಅಧಿಕಾರ, ಕೀರ್ತಿ, ಪ್ರಶಸ್ತಿ, ಸನ್ಮಾನ, ಗುಂಪುಗಾರಿಕೆ ಮುಂತಾದವುಗಳಿಂದ ದೂರವಾಗಿ, ನಗರ ಜೀವನ ಕ್ರಮವನ್ನು ನಿರಾಕರಿಸಿ ಕಾಡು ಕೊಂಡು, ತೋಟ ಮಾಡಿ ಕೃಷಿಯ ಜೀವನವನ್ನು ಆಯ್ಕೆ ಮಾಡಿಕೊಂಡರು. ಅಲ್ಲಿ ಕುಳಿತು ತಮ್ಮ ಮುಖ್ಯ ಬರಹಗಳ ಕೆಲಸ ಮಾಡಿದರು. ಬೇಟೆ, ಮೀನುಶಿಕಾರಿ, ಪಕ್ಷಿ ವೀಕ್ಷಣೆ, ಫೋಟೋಗ್ರಫಿ, ಕಾಡು ಸುತ್ತಾಟ, ಕ್ರಿಮಿ ಕೀಟಗಳ ಅಧ್ಯಯನ, ರೈತಚಳವಳಿಗಳ ಹೋರಾಟ ಮುಂತಾದವುಗಳ ಒಡನಾಡಿಯಾದರು. ಈ ಅರಣ್ಯ ಫ್ರೀ ಲ್ಯಾನ್ಸರ್ ಪ್ರವೃತ್ತಿಯೇ ನಮ್ಮ ಯುವಜನತೆಯನ್ನು ಚುಂಬಕಶಕ್ತಿಯಂತೆ ಆಕರ್ಷಿಸಿದೆ. ಮೇಲೆ ಹೇಳಿದ ಎಲ್ಲ ಗುಣಗಳ ಅಪೂರ್ವ ಸಂಯೋಜಕ ಪ್ರತಿಭೆಯಾದ ಪೂರ್ಣಚಂದ್ರ ತೇಜಸ್ವಿಯವರು ಸ್ವತಃ ಶಿವರಾಮ ಕಾರಂತರೇ ಅಭಿಪ್ರಾಯ ಪಟ್ಟಿರುವಂತೆ 'ಕಾರಂತರ ಮುಂದುವರಿದ ರೂಪ'. ಕನ್ನಡಭಾಷೆ ಮಾತ್ರವಲ್ಲ ಭಾರತೀಯ ಭಾಷೆಗಳಲ್ಲಿಯೂ ನಮ್ಮ ಕಾರಂತ, ಬಿ.ಜಿ.ಎಲ್. ಸ್ವಾಮಿ, ತೇಜಸ್ವಿಯವರಂತಹ ಬಹುಶಿಸ್ತೀಯ ಸಂಯೋಜನೆಯ ಪ್ರತಿಭೆಗಳು ಅಪರೂಪದಲ್ಲಿ ಅಪರೂಪ.
ತೇಜಸ್ವಿಯವರು ಇದ್ದಾಗ ಅವರ ಬಗ್ಗೆ ನಾಡು ತೋರಿದ ಪ್ರತಿಕ್ರಿಯೆಯನ್ನು ನಾವು ಗಮನಿಸಿದ್ದೇವೆ. ಯಾವುದೇ ಜ್ವಲಂತ ಸಮಸ್ಯೆಗಳ ಬಗ್ಗೆ ಬಸವನಗುಡಿಯಲ್ಲಿ ಕುಳಿತು ಲಂಕೇಶ್ ಏನು ಹೇಳುತ್ತಾರೆ, ಮೈಸೂರಿನಲ್ಲಿರುವ ಕೆ. ರಾಮದಾಸ್, ದೇವನೂರು ಮಹಾದೇವ ಏನು ಹೇಳುತ್ತಾರೆ, ಮೂಡಿಗೆರೆಯಲ್ಲಿ ಕುಳಿತು ತೇಜಸ್ವಿ ಏನನ್ನುತ್ತಾರೆಂದು ಇಡೀ ನಾಡು ಕುತೂಹಲದಿಂದ ಎದುರು ನೋಡುತ್ತಿತ್ತು. ಅದರಲ್ಲೂ ತೇಜಸ್ವಿಯವರ ವಿವೇಚನಾಯುಕ್ತ ಮಾರ್ಮಿಕ ಮಾತುಗಳು ಎಷ್ಟೋ ಮನಸ್ಸುಗಳ ತಹತಹಿಕೆಯ ಅಭಿವ್ಯಕ್ತಿಗೆ ದಾರಿ ತೋರುತ್ತಿತ್ತು. ಅವರ ಬರವಣಿಗೆ ಶಕ್ತಿ ಮತ್ತು ಪ್ರಭಾವಗಳಿಂದಾಗಿಯೇ ಇದು ಸಾಧ್ಯವಾಯ್ತು ಎನಿಸುತ್ತದೆ. ಕಳೆದ ಇಪ್ಪತ್ತೈದು ವರ್ಷಗಳ ನಮ್ಮ ಕನ್ನಡ ಸಾಹಿತ್ಯ ಸಂದರ್ಭವನ್ನು ಗಮನಿಸಿದವರಿಗೆ ನಮ್ಮ ಯುವಜನತೆಯ ಫೇವರೆಟ್ ತೇಜಸ್ವಿ ಎಂಬ ಸಂಗತಿ ಅರಿವಾಗುತ್ತದೆ. 2007ಲ್ಲಿ ತೇಜಸ್ವಿಯವರು ತೀರಿಕೊಂಡ ಬಳಿಕ ಅವರ ಕುರಿತ ವಿಶೇಷ ಆಸಕ್ತಿ ಗಮನಗಳನ್ನು ಯುವಜನತೆ ತಾಳಿದೆ. ತೇಜಸ್ವಿಯವರ ಪುಸ್ತಕಗಳನ್ನು ಓದುವ, ಚರ್ಚಿಸುವ, ಅವರ ಕಥೆಗಳನ್ನು ರಂಗರೂಪ, ಸಾಕ್ಷ್ಯ ಚಿತ್ರಕ್ಕೆ ತರುವ, ನಿರುತ್ತರಕ್ಕೆ ಭೇಟಿ ಕೊಡುವ, ಬೆಟ್ಟ ಗುಡ್ಡಗಾಡುಗಳಲ್ಲಿ ಚಾರಣ ಮಾಡುವ, ತೇಜಸ್ವಿ ಹೆಸರಿನಲ್ಲಿ ಕಮ್ಮಟ, ಸ್ಪರ್ಧೆಗಳನ್ನು ಆಯೋಜಿಸುವ ಪ್ರವೃತ್ತಿಗಳು ಇತ್ತೀಚೆಗೆ ಹೆಚ್ಚಾಗಿವೆ. ತೇಜಸ್ವಿಯವರನ್ನು ಕುರಿತ ಉಪನ್ಯಾಸಗಳಿಗೆ ನಮ್ಮ ಯುವಜನತೆ ತೋರುವ ಉತ್ಸಾಹವನ್ನು ನಾನು ಹಲವಾರು ಬಾರಿ ಕಂಡಿದ್ದೇನೆ. ನಮ್ಮ ಕನ್ನಡದ ಲೇಖಕರೊಬ್ಬರಿಗೆ ಲಭ್ಯವಾಗಿರುವ ಈ ಬಗೆಯ ತಾರಾ ಮೌಲ್ಯದ ಹಿಂದೆ ಅವರ ವ್ಯಕ್ತಿತ್ವ ಮತ್ತು ಬರವಣಿಗೆಯ ವರ್ಚಸ್ಸು ಅತ್ಯಂತ ಪ್ರಭಾವಶಾಲಿಯಾಗಿದೆ.
ನಮ್ಮ ಪೂರ್ವ ಕವಿಗಳಲ್ಲಿ ಹರಿಹರ, ರಾಘವಾಂಕ, ಕುಮಾರವ್ಯಾಸ ಮುಂತಾಗಿ ಹಲವರ ಬಗ್ಗೆ ದಂತಕತೆಗಳಿವೆ. ಅವರ ಕಾವ್ಯದ ಓದಿಗೆ ಆ ಬಗೆಯ ಕತೆಗಳಿಂದ ಅಷ್ಟೇನೂ ಪ್ರಯೋಜನವಾಗುವುದಿಲ್ಲವಾದರೂ ಓದಲು, ಕೇಳಲು ಮಜವಾಗಿರುತ್ತವೆ. ಜಗತ್ನಸಿದ್ದ ಲೇಖಕನಾದ ಶೇಕ್ಸ್ಪಿಯರ್ ಕುರಿತಾಗಿ ಒಂದೇ ಒಂದು ದಂತಕತೆಯೂ ಇಲ್ಲವೆಂಬುದನ್ನು ಗಮನಿಸಿದ ನಮ್ಮ ವಿದ್ವಾಂಸರೊಬ್ಬರು ದಂತಕತೆಗಳನ್ನು ಸೃಜಿಸುವ ಭಾರತೀಯರ ಮನೋಧರ್ಮ ವನ್ನು ಮೆಚ್ಚಿಕೊಂಡಿದ್ದರು. ಟಿ.ಎಸ್. ವೆಂಕಣಯ್ಯ, ಕಾರಂತ, ಬೇಂದ್ರೆ, ಮಾಸ್ತಿ, ಕುವೆಂಪು ಮುಂತಾದವರ ವ್ಯಕ್ತಿತ್ವವನ್ನು ಕುರಿತ ಬಗೆಬಗೆಯ ಪ್ರಸಂಗಗಳನ್ನು ಚಿತ್ರಿಸುವ ಕೆಲವು ಪುಸ್ತಕಗಳು ಪ್ರಕಟವಾಗಿವೆ. ನಮ್ಮ ಸಮಕಾಲೀನ ಕನ್ನಡ ಲೇಖಕರಲ್ಲಿ ತೇಜಸ್ವಿಯವರ ಬಗ್ಗೆ ಅವರು ಹಾಗಂತೆ, ಹೀಗಂತೆ ಎಂಬ ಅನೇಕ ಸಂಗತಿಗಳು ಅವರ ವಾರಿಗೆಯ ಲೇಖಕರಿಗಿಂತ ತುಸು ಹೆಚ್ಚೇ ಚಾಲ್ತಿಯಲ್ಲಿದ್ದವು. ಅವುಗಳಲ್ಲಿ ಕೆಲವನ್ನು ಕಲೆಹಾಕಿ, ಅವರ ಒಡನಾಟದ ನನ್ನ ಅನುಭವಗಳನ್ನೂ ಸೇರಿಸಿ "ತೇಜಸ್ವಿ ಕೆಲವು ಪ್ರಸಂಗಗಳು" ಎಂಬ ಈ ಕೃತಿಯನ್ನು ರೂಪಿಸುವ ಆಲೋಚನೆ ಮನಸ್ಸಿಗೆ ಬಂದಿದ್ದೇ ತಡ ದಿನಕ್ಕೆ ಐದಾರು ಪ್ರಸಂಗಗಳನ್ನು ಬರೆಯುತ್ತಾ ಹೋದೆ. ಎಂಟು ದಿನಗಳಲ್ಲಿ ಎಪ್ಪತ್ತು ಪುಟ್ಟ ಪುಟ್ಟ ಅಧ್ಯಾಯಗಳು ಸಿದ್ಧವಾದವು. ಸ್ವಲ್ಪ ಸಂಯಮ ತೋರಿದ್ದರೆ ಮತ್ತಷ್ಟು ಸಂಗತಿಗಳ ಸಾಂದ್ರ ಬರಹ ಸಾಧ್ಯವಾಗುತ್ತಿತ್ತೇನೋ! ಮುಂದೆ ಈ ಬಗೆಯ ಬರಹದಲ್ಲಿ ತೊಡಗುವವರು ಈ ಕೆಲಸವನ್ನು ಮತ್ತಷ್ಟು ಸಮರ್ಪಕ ವಾಗಿ ಮಾಡಿಯಾರು. ನನ್ನ ಅವಸರ ಮತ್ತು ಅಸಂಯಮದ ಭಾರವನ್ನು ಮುಂದಿನ ಲೇಖಕರ ಹೆಗಲಿಗಿಡುತ್ತಿದ್ದೇನೆ.
ನನ್ನ ಈ ಪುಸ್ತಕಕ್ಕೆ ಹಾ.ಮಾ. ನಾಯಕರು ಟಿ.ಎಸ್. ವೆಂಕಣ್ಣಯ್ಯನವರ ಬಗ್ಗೆ ಬರೆದ ಕೃತಿಯೇ ಸ್ಪೂರ್ತಿ. ಅದನ್ನು ಎಷ್ಟುಸಲ ಓದಿರುವೆನೋ ಗೊತ್ತಿಲ್ಲ! ಆ ಬಗೆಯ ಪುಸ್ತಕವೊಂದನ್ನು ತೇಜಸ್ವಿಯವರನ್ನು ಕುರಿತು ಹೊರತರಬೇಕೆಂಬ ಹಂಬಲವಂತೂ ಎಷ್ಟೋ ದಿನದಿಂದ ಮನದಲ್ಲಿ ಬೇರುಬಿಟ್ಟಿತ್ತು. ಅದು ಈಗ ಸಾಧ್ಯವಾಗುತ್ತಿರುವುದು ಒಂದು ಬಗೆಯ ನೆಮ್ಮದಿ ತಂದಿದೆ. ಇಲ್ಲಿರುವ ಪ್ರಸಂಗಗಳು ಅನುಭವಿಸಿದ. ಕೇಳಿದ, ಓದಿದ ಸಂಗತಿಗಳನ್ನು ಅವಲಂಬಿಸಿವೆ. ನನ್ನ ಗಮನಕ್ಕೆ ಬಂದ ಕೆಲವು ಸಂಗತಿಗಳ ಪೂರಕ ಸಾಹಿತ್ಯದ ಪಟ್ಟಿಯೊಂದನ್ನು ಈ ಪುಸ್ತಕದ ಕೊನೆಯಲ್ಲಿ ಕೃತಜ್ಞತಾ ಪೂರ್ವಕವಾಗಿ ನೀಡಿದೆ. ಈ ಬಗೆಯ ಪುಸ್ತಕಗಳನ್ನು ಇಂಗ್ಲಿಷಿನಲ್ಲಿ anecdotes ಎಂದು ಕರೆಯುತ್ತಾರೆ. ಕನ್ನಡದಲ್ಲಿ "ಉಪಾಖ್ಯಾನ' ಅಥವಾ 'ದಂತಕಥೆ'ಗಳೆಂದು ವರ್ಣಿತವಾಗಿರುವ ಈ ಬಗೆಯ ಬರಹಗಳನ್ನು ಹಾ.ಮಾ. ನಾಯಕರು 'ಚಿಟ್ಟೆ ಕತೆ'ಗಳೆಂದು ಕರೆದಿದ್ದಾರೆ. ಹೂವಿಂದ ಹೂವಿಗೆ, ಒಂದೆಡೆಯಿಂದ ಮತ್ತೊಂದೆಡೆಗೆ ಹಾರಾಡುವ ಚಿಟ್ಟೆಗಳನ್ನು ದಂತಕತೆಗೆ ಹೋಲಿಸಿರುವುದು ಸೂಕ್ತವಾಗಿದೆ. ತೇಜಸ್ವಿಯವರಂತಹ ಸೆಲೆಬ್ರಿಟಿ ಲೇಖಕರ ಕುರಿತಾದ ಇಲ್ಲಿನ ಬರಹಗಳು ಅವರ ವ್ಯಕ್ತಿತ್ವವನ್ನು ಓದುಗರಿಗೆ ಸುಲಭವಾಗಿ ಪರಿಚಯಿಸುತ್ತವೆ.
ಕಥೆಗಳ ಮೂಲಕ ಓದುಗರ ಮನದಲ್ಲಿ ನೆಲೆನಿಂತ ಲೇಖಕನೊಬ್ಬನ ವ್ಯಕ್ತಿತ್ವವನ್ನು ಭಿನ್ನ ನೆಲೆಯಲ್ಲಿ ಕಾಣಲು, ಕಾಣಿಸಲು ನೆರವಾಗುತ್ತವೆ. ಅಲ್ಲದೆ, ಹೊಸ ಓದುಗರನ್ನು ತೇಜಸ್ವಿಯವರ ಬರಹಗಳತ್ತ ಸೆಳೆಯಬಲ್ಲ ವಾಹಕ ವಾಗಿಯೂ ಪ್ರಯೋಜನಕ್ಕೆ ಬರುತ್ತವೆ.
ತೇಜಸ್ವಿಯವರ ವ್ಯಕ್ತಿತ್ವದ, ಚಿಂತನೆಯ ಸ್ಕೂಲ ವ್ಯಕ್ತಿತ್ವವೊಂದರ ಪರಿಚಯ ಈ ಕೃತಿಯಿಂದ ಸಾಧ್ಯವಾಗಬಹುದೆಂದು ನಾನು ಆಶಿಸಿದ್ದೇನೆ. ಮೊದಲೇ ಸೂಚಿಸಿದಂತೆ ಇಲ್ಲಿರುವುದು ಕೆಲವೇ ಕೆಲವು ಸಂಗತಿಗಳು ಮಾತ್ರ ಬಗೆಯುತ್ತಾ ಹೋದರೆ ಈ ಬಗೆಯ ಸಾವಿರಾರು ಕಥೆಗಳನ್ನು ಹೆಕ್ಕಿ ತೆಗೆಯಬಹುದಾದಷ್ಟು ಸಮೃದ್ಧವಾದ ಆಕರಗಳು ಲಭ್ಯವಿವೆ. ಮುಂದೆ ಈ ಬಗೆಯ ಪುಸ್ತಕಗಳನ್ನು ಬರೆಯುವವರು ಮತ್ತಷ್ಟು ವ್ಯಾಪಕವಾಗಿ ಈ ಕೆಲಸದಲ್ಲಿ ನಿರತರಾದಾರೆಂಬ ನಂಬುಗೆ ನನ್ನದು. ಈ ಪುಸ್ತಕವನ್ನು ಎಲ್ಲಿಂದ ಬೇಕಾದರೂ ಓದಬಹುದು ಮತ್ತು ಸಣ್ಣ ಸಣ್ಣ ಬರಹಗಳಾದ್ದರಿಂದ ಹೆಚ್ಚಿನ ವ್ಯವಧಾನವನ್ನು ಬಯಸದು. ಪುಸ್ತಕದ ಬರಹ, ಆಕಾರ, ಮುಖ ಬೆಲೆ ಯಾವ ವಿಚಾರದಲ್ಲಿಯೂ ಓದುಗರಿಗೆ ಹೊರೆಯಾಗಬಾರದೆಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ಸಾಧ್ಯವಾದಷ್ಟೂ ಹಾಗೇ ಮಾಡಲು ಪ್ರಯತ್ನಿಸಿದ್ದೇನೆ. ತೇಜಸ್ವಿಯವರನ್ನು ಇಷ್ಟಪಡುವ ಎಲ್ಲ ಓದುಗರಿಗೂ ಈ ಪುಟ್ಟ ಕೃತಿಯು ಇಷ್ಟವಾದೀತು.
ಈ ಕೃತಿಯನ್ನು ತೇಜಸ್ವಿಯವರ ನೆನಪಿಗೆ ಗೌರವಪೂರ್ವಕವಾಗಿ ಅರ್ಪಿಸಿದ್ದೇನೆ. ಅವರ ವ್ಯಕ್ತಿತ್ವ ಮತ್ತು ಬರಹಗಳೆರಡೂ ನನ್ನನ್ನು ಬಹುವಾಗಿ ಆವರಿಸಿಕೊಂಡಿವೆ. ತೇಜಸ್ವಿಯವರ ಒಡನಾಟ ಲಭ್ಯವಾಗಿದ್ದು ನನ್ನ ಆದೃಷ್ಟವೇ ಸರಿ. ಈ ಎಲ್ಲ ಕಾರಣಗಳಿಂದ ಅವರ ನೆನಪಿಗೆ ಈ ಪುಸ್ತಕವನ್ನು ಅಂಕಿತ ಗೊಳಿಸಿದ್ದೇನೆ. ತೇಜಸ್ವಿ, ರಾಜೇಶ್ವರಿ ಮತ್ತು ಕಡಿದಾಳು ಶಾಮಣ್ಣ ಅವರುಗಳನ್ನು ಕುರಿತು ನಾನು ಈ ಮೊದಲೇ ಬರೆದ ಲೇಖನಗಳನ್ನು ಅನುಬಂಧದಲ್ಲಿ ಸೇರಿಸಿರುವೆ. ತೇಜಸ್ವಿಯವರ ಮಗಳು ಶ್ರೀಮತಿ ಸುಸ್ಮಿತಾ ಅವರು ತಮ್ಮ ತಂದೆಯ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಹಂಚಿಕೊಂಡಿದ್ದ ನೆನಪುಗಳನ್ನೂ ಅನುಬಂಧದಲ್ಲಿ ಸೇರಿಸಿದ್ದೇನೆ. ಇದಕ್ಕೆ ಸಮ್ಮತಿಸಿದ ಸುಸ್ಮಿತಾ ಅವರನ್ನು, ಪ್ರಜಾವಾಣಿ ಪತ್ರಿಕೆಯ ಸೌಜನ್ಯವನ್ನೂ ಕೃತಜ್ಞತೆಯಿಂದ ಸ್ಮರಿಸುವೆ. ಈ ಲೇಖನಗಳಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತೇಜಸ್ವಿಯವರ ಪ್ರಸ್ತಾಪ ಬರುವುದರಿಂದ ಈ ಪುಸ್ತಕದ ಕೊನೆಯಲ್ಲಿ ಅವುಗಳನ್ನು ಸೇರಿಸುವುದು ಸೂಕ್ತವೆನಿಸಿತು. ಹಾಗಾಗಿ, ಅವುಗಳನ್ನು ಸಹಿಸಿಕೊಳ್ಳುವ ಕಷ್ಟವೂ ಓದುಗರಿಗಿದೆ.
ಎಂದಿನಂತೆ ಪ್ರಿಯ ಗೆಳೆಯರಾದ ಕೊಟ್ರೇಶ್ ಕೊಟ್ಟೂರು ಈ ಪುಸ್ತಕವ ವಿನ್ಯಾಸ ಮಾಡಿಕೊಟ್ಟಿದ್ದಾರೆ. ರೂಪಶ್ರೀ ಕಲಿಗನೂರು ಸೊಗಸಾದ ಮುಖಪುಟ ಮಾಡಿಕೊಟ್ಟಿದ್ದಾರೆ. ಮುಖಪುಟದಲ್ಲಿರುವ ತೇಜಸ್ವಿಯವರ ಸೊಗಸಾದ ಭಾವಚಿತ್ರ ತೆಗೆದವರು ಎ.ಎನ್. ಮುಕುಂದ ಅವರು, ಶ್ರೀಮತಿ ಉಮಾ ಮುಕುಂದ್ ಅವರು ಪತಿ ತೆಗೆದ ಚಿತ್ರವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ರೂಪಶ್ರೀ, ಮುಕುಂದ್ ಮತ್ತು ಉಮಾ ಮುಕುಂದ್ ಅವರುಗಳಿಗೆ ನನ್ನ ನಮನಗಳು ಸಲ್ಲುತ್ತವೆ. ಪಂಚು ಪ್ರಮೋದ್ ಸಾಗರ ಅವರು ತಾವು ರಚಿಸಿದ ತೇಜಸ್ವಿಯವರ ಚಿತ್ರಗಳನ್ನು ಈ ಪುಸ್ತಕಕ್ಕಾಗಿ ಕಳಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಆಭಾರಿಯಾಗಿದ್ದೇನೆ. ರಕ್ಷಾಪುಟದ ಹಿಂಬದಿಯಲ್ಲಿರುವ ಚಿತ್ರ ನನ್ನ ಪಾಲಿಗೆ ಅಪರೂಪದ್ದು. ನಾನು ಮೂಡಿಗೆರೆಯ ಕಾಲೇಜಿನಲ್ಲಿರುವಾಗ ಅಲ್ಲಿ ಧನಂಜಯ್ ಜೀವಾಳ ಮತ್ತಿತರ ಗೆಳೆಯರು ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಲು ತೇಜಸ್ವಿಯವರು ಬಂದಿದ್ದಾಗಿನ ಚಿತ್ರವದು. ಅದನ್ನು ಈ ಪುಸ್ತಕದ ರಕ್ಷಾಪುಟದಲ್ಲಿ ಸೇರಿಸುವ ಮೂಲಕ ನನ್ನ ನೆನಪುಗಳನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನವಿದು. ಎಷ್ಟೋ ವರ್ಷಗಳ ಹಿಂದಿನ ಈ ಫೋಟೋವನ್ನು ನನಗೆ ಒದಗಿಸಿದವರು ಪತ್ರಕರ್ತ ಅಚ್ಚನಹಳ್ಳಿ ಸುಚೇತನ ಅವರು. ಅವರಿಗೂ ನನ್ನ ನಮಸ್ಕಾರಗಳು ಸಲ್ಲುತ್ತವೆ. ಉಳಿದಂತೆ, ಯಂತ್ರೋದ್ಧಾರಕ ಪ್ರಿಂಟರ್ಸ್ ಮಾಲೀಕರಾದ ಅನಿಲ್ ಕುಮಾರ್ ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟಿದ್ದಾರೆ. ಅವರಿಗೂ, ಅವರ ಸಿಬ್ಬಂದಿ ವರ್ಗಕ್ಕೂ ಮತ್ತು ಪ್ರೀತಿಯಿಂದ ಪ್ರಕಟಿಸುತ್ತಿರುವ ಅಲಂಪು ಪ್ರಕಾಶನದ ಗೆಳೆಯರನ್ನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ.
ಈ ಪುಸ್ತಕವನ್ನು ಕನ್ನಡದ ಓದುಗರು ಪ್ರೀತಿಯಿಂದ ಬರಮಾಡಿಕೊಳ್ಳುವರೆಂದು ನಿರೀಕ್ಷಿಸುತ್ತೇನೆ. ತೇಜಸ್ವಿಯವರ ಬಗೆಗಿನ ಆಸಕ್ತಿಯನ್ನು ನಮ್ಮ ಮುಂದಿನ ತಲೆಮಾರಿಗೆ ರವಾನಿಸುವ ಹೊಣೆ ನಮ್ಮ ಮೇಲಿದೆ. ಆದ್ದರಿಂದ ಈ ಪುಸ್ತಕವನ್ನು ಎಳೆಯರ ಕೈಗಿಡಲು ಸಾಧ್ಯವಾದಷ್ಟೂ ಪ್ರಯತ್ನಿಸೋಣ ಎಂದು ವಿನಮ್ರತೆ ಯಿಂದ ಪ್ರಾರ್ಥಿಸುತ್ತ ನನ್ನ ಈ ಮಾತುಗಳಿಗೆ ವಿರಾಮ ಹೇಳುತ್ತೇನೆ, ನಮಸ್ಕಾರಗಳು.
-ಡಾ. ಎಚ್.ಎಸ್. ಸತ್ಯನಾರಾಯಣ
“ಪರಿಸರದತ್ತ ಯೋಚನೆ ಬರುವಂತೆ ಮಾಡಿ ಸಂರಕ್ಷಣೆ ಇನ್ನು ಸಹ ಮನಸು ಮಾಡಿದರೆ ಸಾಧ್ಯ ಅನ್ನೋ ಅರಿವು ಬರುತ್ತದೆ”...
"ಕಾದಂಬರಿ ವಿಶಿಷ್ಟ ಎನಿಸಲು ಪ್ರಮುಖ ಕಾರಣ ಕಾದಂಬರಿಯನ್ನು ಸರಳಾದೇವಿಯೊಂದಿಗೆ ಆರಂಭಿಸಿರುವುದು. ಮಹಾರಾಣಿಯ ಚರಿತೆ ...
“ಭಾರತ ದೇಶದ ಸ್ವಾತಂತ್ರವು, ಯಾರೊಬ್ಬರ ಪ್ರಯತ್ನದಿಂದ ಬಂದುದಲ್ಲ. ದೇಶದ ಹಲವಾರು ಜನರ ತ್ಯಾಗ, ಬಲಿದಾನದಿಂದ ಭಾರತ ...
©2024 Book Brahma Private Limited.