ಸ್ಪಷ್ಟ ಚೌಕಟ್ಟಿನ ಒಳಗೆ ಗುರುತಿಸುವ ಪ್ರಯತ್ನ


"ಉತ್ತರ ಕನ್ನಡದ ಆಡು ಮಾತಿನ ಬಳಕೆ ಇದ್ದರೂ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯಲ್ಲಿ ಕಥೆ ಮತ್ತು ಚಿತ್ರಣಗಳೆರಡೂ ದಟ್ಟವಾಗಿವೆ; ಕಾದಂಬರಿಯ ಹಿಂದಿನ ಶ್ರಮವನ್ನು ತೋರಿಸುತ್ತವೆ. ಈ ಬಗ್ಗೆ ಕಾದಂಬರಿಕಾರ್ತಿ ಕೂಡ ತನ್ನ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಭಾರತಿ ಹೆಗಡೆ ಅವರ ‘ಉಪ್ಪಾಗೆ ಹರಳು’ ಕೃತಿ ಕುರಿತು ಬರೆದ ಅನಿಸಿಕೆ.

ಉತ್ತರಕನ್ನಡದ ಒಂದು ಪುಟ್ಟ ಟಿಪಿಕಲ್ ಗ್ರಾಮದ “ಹಿತ್ತಲಗಿಡ” ಉಪ್ಪಾಗೆ ಹಣ್ಣಿಗೆ ಏಕಾಏಕಿ ವಾಣಿಜ್ಯ ಮೌಲ್ಯ ಬಂದಾಗ ಅದು ಏನೇನು ಅನಾಹುತಗಳನ್ನು ಮಾಡಿತು ಎಂಬುದನ್ನು ಬಹಳ ಸರಳವಾಗಿ, ಸ್ಪಷ್ಟ ಚೌಕಟ್ಟಿನ ಒಳಗೆ ಗುರುತಿಸುವ ಪ್ರಯತ್ನ – ಉಪ್ಪಾಗೆ ಹರಳು. ಭಾರತಿ ಹೆಗಡೆ ಅವರ ಕಾದಂಬರಿ. ಬಹುರೂಪಿ ಪ್ರಕಟಣೆ ಇದು.

ಉತ್ತರ ಕನ್ನಡದ ಆಡು ಮಾತಿನ ಬಳಕೆ ಇದ್ದರೂ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯಲ್ಲಿ ಕಥೆ ಮತ್ತು ಚಿತ್ರಣಗಳೆರಡೂ ದಟ್ಟವಾಗಿವೆ; ಕಾದಂಬರಿಯ ಹಿಂದಿನ ಶ್ರಮವನ್ನು ತೋರಿಸುತ್ತವೆ. ಈ ಬಗ್ಗೆ ಕಾದಂಬರಿಕಾರ್ತಿ ಕೂಡ ತನ್ನ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ.

ಉಪ್ಗೆ ಎಂಬ ಪುಟ್ಟ ಗ್ರಾಮದ ಹೆಗಡೇರುಗಳು, ಅಲ್ಲಿನ ಒಕ್ಕಲುಗಳು, ಆರ್ಥಿಕತೆ, ಗ್ರಾಮದ ಬದುಕಿನ ವಿವರಗಳನ್ನು ಕೊಡುತ್ತಾ ಹೋಗುವ ಈ ಕಾದಂಬರಿಯಲ್ಲಿ ನನಗೆ ಕುತೂಹಲಕರ ಎನ್ನಿಸಿದ್ದು, ಇಲ್ಲಿ ಬರುವ ಪಾತ್ರಗಳು “ಎಲ್ಲರೂ ಒಳ್ಳೆಯವರೇ!” ವಾಣಿಜ್ಯೀಕರಣದ ಫಲವಾಗಿ ಬರುವ ಕೆಡುಕುಗಳು ಕೂಡ ಇಲ್ಲಿ “ಒಳ್ಳೆಯವರ ಕೆಡುಕುಗಳೇ.” ಹೀಗೆ ಒಳ್ಳೆಯತನದ ಹಾದಿಯಲ್ಲೇ ಸಾಗಿದ ಕಾದಂಬರಿ ಬಹುತೇಕ ಸುಖಾಂತ್ಯದ ಹಳೆಯ ಕ್ಲಾಸಿಕಲ್ ಶೈಲಿಯಲ್ಲಿ “ಯಾರಿಗೂ ಕೆಡುಕು ಮಾಡದೇ” ಮುಗಿಯುತ್ತದೆ. ನಿಜಕ್ಕೆಂದರೆ, ನನಗೆ ಈ ಕಾದಂಬರಿಗೆ ಏನೂ ಸಂಬಂಧವಿಲ್ಲದ ಗುಳ್ವಾಡಿ ವೆಂಕಟರಾಯರ “ಸದ್ಧರ್ಮ ವಿಜಯವು” (ಇಂದಿರಾಬಾಯಿ) ಕಾದಂಬರಿ ನೆನಪಾಯಿತು!

ಕಾದಂಬರಿಯಲ್ಲಿ ಬರುವ ಬಂಗಾರತ್ತೆ, ಜಾನಕಿ, ನಾಣು ಹೆಗಡೇರು, ಯಮುನ ಎಲ್ಲರೂ ಕರಾವಳಿ ಜಿಲ್ಲೆಗಳ ಯಾವುದೇ ಗ್ರಾಮದಲ್ಲಿ ಸುಲಭವಾಗಿ ಕಾಣಸಿಗುತ್ತಾರೆ. ಹಾಗಾಗಿ ಕಾದಂಬರಿ ಓದಿಗೆ ಆಪ್ತ ಅನ್ನಿಸುತ್ತದೆ.

ಇಡಿಯ ಕಾದಂಬರಿ ಹೊರಗೆ ನಿಂತು ಊರಿನ ಘಟನೆಗಳ ವರದಿ ನೀಡುವ ಸ್ವರೂಪದಲ್ಲಿರುವುದರಿಂದ, ಪಾತ್ರಗಳ ಆಳಕ್ಕೆ ತಲುಪುವುದು ಮತ್ತು ಒಳಿತಿನಲ್ಲೂ ಇರಬಹುದಾದ ಕೆಡುಕಿನ-ಸ್ವಾರ್ಥದ ಸಹಜ ಮುಖಗಳನ್ನು, ಬಡತನದ ಸಂಕೀರ್ಣತೆಗಳನ್ನು ಇನ್ನಷ್ಟು ಆಳವಾಗಿ ನೋಡುವುದು ಸಾಧ್ಯವಾಗದಿರುವುದು, ಪರಿಸರಕ್ಕೆ ಸಂಬಂಧಿಸಿದಂತೆ ಕಾದಂಬರಿ ತಳೆಯುವ ನಿಲುವುಗಳು ತೀರಾ ಸರಳ ಅನ್ನಿಸುವುದು ಕಾದಂಬರಿಯ ಮಿತಿ ಅನ್ನಿಸಿತು.

 

MORE FEATURES

ಬದುಕಿನ ಬೇಗೆಯ ಉದರದಲಿ ಹುಟ್ಟಿದ ಕಾವಿನ ಕತೆಗಳು

04-05-2025 ಬೆಂಗಳೂರು

"ನಂಬಿಕೆಯ ನೆಲೆಯಲ್ಲಿ ಕೌಟುಂಬಿಕವಾಗಿ ಯೋಚಿಸುವಂತೆ ಮಾಡುವ "ಅಪ್ಪ ಬರ್ತಾನ" ಕತೆಯು ಮಕ್ಕಳ ಮನೊಬಲವನ್ನು...

ಕಥಾ ಪಾತ್ರವಾದರೂ ಜನರ ಭಾವುಕತೆಯ ಭಾವವಾಗಿದ್ದವನು ಆತ

04-05-2025 ಬೆಂಗಳೂರು

"ಅದೊಂದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಜನ ಅವನಿಗಾಗಿ ಹುಡುಕಾಡಿಬಿಟ್ಟಿದ್ದರಂತೆ. ಅವನ ಅಡ್ರೆಸ್ ಹುಡುಕ ಹೋಗಿ ನಿರ...

ಗಜಲ್ ಎಂಬುದು ಒಂದು ಧ್ಯಾನಸ್ಥ ಸ್ಥಿತಿ

04-05-2025 ಬೆಂಗಳೂರು

"ಮಿತ್ರ ಆನಂದ ಭೋವಿಯವರ ಗಜಲ್ ಗಳಲ್ಲಿ ನಾನು ಹೆಚ್ಚಾಗಿ ಕಂಡಿದ್ದು ವಿಷಾದದ ಭಾವ ಇಲ್ಲಿ ನನ್ನದೆನ್ನುವುದು ಯಾವುದೂ ಇ...