ಮಧ್ಯಮ ವರ್ಗದ ಪರಿಸ್ಥಿತಿ, ಕಷ್ಟಗಳನ್ನು ಅರ್ಥ ಮಾಡಿಕೊಂಡು ಕಥೆಗಳನ್ನ ಕಟ್ಟಿದ್ದಾರೆ


"ಈ ಕಥೆಗಳು ನಮ್ಮ ಕಥೆಯೂ ಆಗಬಹುದಾದರಿಂದ ಓದುಗರಿಗೆ ಅದು ಹತ್ತಿರವಾಗುತ್ತದೆ. ಅವರು ಕೇವಲ ಒಂದು ಘಟನೆಯನ್ನು ಕಥೆಯಾಗಿಸದೆ ಆಳವಾದ ವಿಷಯಗಳನ್ನು ಕುರಿತು ಬರೆದಿದ್ದಾರೆ," ಎನ್ನುತ್ತಾರೆ ಅಂಬಿಕಾ ರಾವ್. ಅವರು ವ್ಯಾಸರಾಯ ಬಲ್ಲಾಳ ಅವರ ‘ವ್ಯಾಸರಾಯ ಬಲ್ಲಾಳರ ಆಯ್ದ ಕಥೆಗಳ’ ಕೃತಿ ಕುರಿತು ಬರೆದ ಅನಿಸಿಕೆ.

ವ್ಯಾಸರಾಯ ಬಲ್ಲಾಳರು ಡಿಸೆಂಬರ್ 1, 1923ರಲ್ಲಿ ಉಡುಪಿಯಲ್ಲಿ ಜನಿಸಿದರು. ಇವರು ತಮ್ಮ ಸಣ್ಣಕತಾ ಸಂಕಲನ ಹಾಗೂ ಕಾದಂಬರಿಗಳಿಂದ ಕನ್ನಡದ ಸಾಹಿತ್ಯ ಪ್ರೇಮಿಗಳಿಗೆ ಚಿರಪರಿಚಿತರಾಗಿದ್ದಾರೆ. ಅದರೊಂದಿಗೆ ನಾಟಕ, ಮಕ್ಕಳ ಸಾಹಿತ್ಯ , ಲೇಖನಗಳನ್ನು ಶ್ರೀಯುತರು ಬರೆದಿದ್ದಾರೆ. ಕೆಲಸಕ್ಕಾಗಿ ಇವರು ಮುಂಬೈಯನ್ನು ಸೇರಿದರು. ನಿವೃತ್ತರಾದ ಮೇಲೂ ಮುಂಬೈಯಲ್ಲಿ ಹಲವಾರು ವರ್ಷ ಇದ್ದರು. ಹೀಗಾಗಿ ಮುಂಬೈ ನಗರದ ಸಂಕೀರ್ಣತೆಯನ್ನು ವೈಲಕ್ಷಣಗಳನ್ನು ಬಲ್ಲಾಳರು ತುಂಬಾ ಆಳವಾಗಿ ಅರಿತಿದ್ದರು. ಇವರು ಬರೆದಿರುವ ಮುಕ್ಕಾಲು ಭಾಗ ಕಥೆ ಕಾದಂಬರಿಗಳು ಆ ಊರಿನ ಹಿನ್ನೆಲೆಯಲ್ಲೇ ನಡೆಯುತ್ತದೆ. ಮಧ್ಯಮ ವರ್ಗದ ಪರಿಸ್ಥಿತಿ, ಕಷ್ಟ, ಅವರ ಮನಸ್ಸುಗಳನ್ನು ಅರ್ಥ ಮಾಡಿಕೊಂಡು ಕಥೆಗಳನ್ನು ಕಟ್ಟಿದ್ದಾರೆ. ಈ ಕಥೆಗಳು ನಮ್ಮ ಕಥೆಯೂ ಆಗಬಹುದಾದರಿಂದ ಓದುಗರಿಗೆ ಅದು ಹತ್ತಿರವಾಗುತ್ತದೆ. ಅವರು ಕೇವಲ ಒಂದು ಘಟನೆಯನ್ನು ಕಥೆಯಾಗಿಸದೆ ಆಳವಾದ ವಿಷಯಗಳನ್ನು ಕುರಿತು ಬರೆದಿದ್ದಾರೆ.

ಬಲ್ಲಾಳರ ಬಂಡಾಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ, ಇದಲ್ಲದೆ ಅನಾಕೃ ಪ್ರಶಸ್ತಿ ನಿರಂಜನ ಪ್ರಶಸ್ತಿ ಮತ್ತು ಮಾಸ್ತಿ ಪ್ರಶಸ್ತಿಗಳು ಹಾಗೂ ಇನ್ನೂ ಹಲವು ಗೌರವಗಳು ಇವರಿಗೆ ಸಂದಿದೆ.

ವ್ಯಾಸರಾಯ ಬಲ್ಲಾಳರು ಜನವರಿ 30, 2008 ಬೆಂಗಳೂರಿನಲ್ಲಿ ನಿಧನರಾದರು. ತಮ್ಮ 85 ವರ್ಷಗಳ ಬದುಕಿನಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದರು.

ಗೆದ್ದಲು ಮತ್ತು ದೀಪ ; ವಿಕಾರವಾದ ಅಸಹ್ಯವೆನಿಸುವ ಮುಖವನ್ನು ಕಂಡಾಗ ನಮ್ಮ ಮನಸ್ಸಿಗೆ ಪೂರ್ವ ಕಲ್ಪನೆಯಂತೆ ಅವರು ಬಡವರು ಕೆಲಜಾತಿಯವರು ನಮ್ಮನ್ನು ಹಣ ಕೇಳಲು ಬರುತ್ತಾರೆ ಎನಿಸುತ್ತದೆ. ಅದೇ ರೀತಿಯ ಒಬ್ಬ ಮನುಷ್ಯನು ಮೊದಲನೇ ದರ್ಜೆಯ ಭೋಗಿಗೆ ಹತ್ತಿದ್ದನ್ನು ನೋಡಿದ ಮಿಸ್ಟರ್ ರಾವ್ ಹಿಂದಿನ ಭೋಗಿಗೆ ಹೋಗಿ ಎನ್ನುತ್ತಾರೆ. ಆ ಮನುಷ್ಯ ಟಿಟಿ ಬಂದಾಗ ಹೇಗೋ ಇವರ ಕಾಲು ಹಿಡಿದು ದಂಡದ ಹಣ ಹಾಗೂ ಟಿಕೆಟ್ ನ ಹಣವನ್ನು ರಾವ್ ಇಂದ ಪಡೆಯುತ್ತಾನೆ. ತಾನು ಪುಸ್ತಕದ ಅಂಗಡಿಯಲ್ಲಿ ಕೆಲಸ ಮಾಡುವುದಾಗಿಯೂ ಪುಸ್ತಕಗಳಿಗೆ ಗೆದ್ದಲು ಹಿಡಿದಿರುವುದರಿಂದ ತಾನು ಕೆಲಸ ಕಳೆದು ಕೊಳ್ಳುತ್ತಿರುವುದಾಗಿಯೂ ಹೇಳುತ್ತಾನೆ. ಏನೋ ಒಮ್ಮೆ ಸಹಾಯ ಮಾಡಿ ಕೊಡವಿಕೊಂಡು ಹೋಗೋಣ ಎಂದುಕೊಳ್ಳುತ್ತಾರೆ ಮಿಸ್ಟರ್ ರಾವ್. ಕೆಲವು ದಿನಗಳ ನಂತರ ಮತ್ತೆ ಅವರ ಆಫೀಸ್ ಗೆ ಬಂದು ಕೆಲಸ ಕೊಡಿಸುವಂತೆ ಆ ಮನುಷ್ಯ ಬೇಡಿಕೊಳ್ಳುತ್ತಾನೆ. ಆಫೀಸಿನ ಸಹೋದ್ಯೋಗಿಗಳ ಎದುರಿನಲ್ಲಿ ಅವನೊಡನೆ ಮಾತನಾಡಲು ಮುಜುಗರವಾಗಿ "ಇಲ್ಲಿ ಯಾವ ಕೆಲಸವೂ ಇಲ್ಲ ಇದ್ದರೂ ನಿನ್ನಂತವನಿಗೆ ಕೊಡುವುದಿಲ್ಲ" ಎಂದು ಹೇಳಿ ಕಳಿಸಿಬಿಡುತ್ತಾರೆ.

ಮತ್ತೆ ಒಂದು ತಿಂಗಳ ನಂತರ ಮಿಸ್ಟರ್ ರಾವ್ ಅವರ ಮನೆಗೆ ಬಾಂಧ್ರಾ ಇಂದ ಬಂದ ಒಬ್ಬ ಪಾದ್ರಿ ಆ ವಿಚಿತ್ರ ಮನುಷ್ಯನ ಬಗ್ಗೆ ಹೇಳಿ ನಿಮಗೆ 11 ರೂಪಾಯಿ ಬಾಕಿ ಕೊಡಬೇಕೆಂದು ಹೇಳಿದ್ದಾರೆ ಎಂದು ಕೊಡುತ್ತಾರೆ. ಆ ಮನುಷ್ಯನ ಹೆಸರು ಶಂಕರ್ ಮೋರೆ ಎನ್ನುತ್ತಾರೆ. ಶಂಕರ್ ನನ್ನು ಪಾದ್ರಿ ದೇವತಾ ಮನುಷ್ಯ ಎಂದು ಹೊಗಳಲು ಕಾರಣವೇನು? ಮಿಸ್ಟರ್ ರಾವ್ ಮತ್ತು ಶಂಕರ್ ಮೋರೆ ಇಬ್ಬರಲ್ಲಿ ದೀಪ ಯಾರು ಗೆದ್ದಲು ಯಾರು ಎಂದು ತಿಳಿಯಲು ಕಥೆಯನ್ನು ಓದಬೇಕು.

ಬಂಧ ; ಈ ಕಥೆಯಲ್ಲಿ ಜೀವನದ ಹಲವಾರು ರೀತಿಯ ಬಂಧಗಳನ್ನು ನಾವು ಕಾಣಬಹುದು. ಕಥೆಯ ಮುಖ್ಯ ಪಾತ್ರವಾದ ಶ್ರೀಖಂಡೆ ಅವರ ಕೆಲಸದೊಂದಿಗಿನ ಬಂಧ ತನ್ನ ಸಂಸಾರ ಮಕ್ಕಳೊಂದಿಗಿನ ಬಂಧ ಹಾಗೂ ಪಕ್ಷಿಗಳೊಂದಿಗಿನ ಬಂಧ ಮುಂತಾದವು.

ಶ್ರೀಖಂಡೆ ಒಂದು ದೊಡ್ಡ ಕಂಪನಿಯಲ್ಲಿ ಆಫೀಸಿನ ವ್ಯವಸ್ಥೆಯನ್ನು ನೋಡಿಕೊಳ್ಳುವವ. ಆಫೀಸಿನ ಸ್ವಚ್ಛತೆಯಿಂದ ಹಿಡಿದು ಎಂ.ಡಿ ಅವರಿಗೆ ಸಮಾನು ಒದಗಿಸುವವರೆಗೆ ಎಲ್ಲವೂ ಅವನದೇ ಜವಾಬ್ದಾರಿ. ಎಲ್ಲರಿಗಿಂತ ಮೊದಲು ಬಂದು ಕಡೆಗೆ ಹೊರಡುವ ಶ್ರೀಖಂಡ ಇಲ್ಲದೆ ಆಫೀಸ್ ನಲ್ಲಿ ತೃಣಮಪಿ ನ ಚಲಂತಿ!!

ಅವನು ಕೆಲಸಕ್ಕಾಗಿ ಅಷ್ಟೊಂದು ಸಮಯವನ್ನು ಕೊಡುವುದು ಹೆಂಡತಿಗೆ ಕೋಪ ಬರಿಸುತ್ತದೆ. ಅದಕ್ಕೆ ಸರಿಯಾಗಿ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿದ ಅವರ ಮಗಳು ಬೇರೆ ಜಾತಿಯ ಹುಡುಗನೊಂದಿಗೆ ಪ್ರೀತಿಸಿ ಮದುವೆಯಾಗಿ ಹೋಗುತ್ತಾಳೆ. ಮಗನಿಗೆ ಸರಿಯಾದ ಕೆಲಸ ಇರುವುದಿಲ್ಲ. ಹೆಂಡತಿ ಇದೆಲ್ಲಕ್ಕೂ ಶ್ರೀಖಂಡೆಯನ್ನೇ ಕಾರಣವಾಗಿಸುತ್ತಾಳೆ.

ಆಫೀಸಿನ ಎಂಡಿ ಕೋಣೆಯ ಬಿಸಿಲು ಮಂಚದಲ್ಲಿ ಇರುವ ಎಸಿಯ ಕೆಳಗಿನ ಪಾರಿವಾಳಗಳಂತೆ ಅವನ ಮನೆಯಲ್ಲಿ ಬಂದು ಗೂಡು ಕಟ್ಟಿಕೊಂಡಿರುವ ಗುಬ್ಬಿ ಗಳ ಬಗ್ಗೆಯೂ ಶ್ರೀಖಂಡನಿಗೆ ಅತೀವ ಪ್ರೀತಿ. ಮಗಳು ಮೊಮ್ಮಗನನ್ನು ಬಿಡಲಾರದೆ ಅವರ ಮನೆಗೂ ಹೋಗಿ ಬಂದು ಮಾಡುವ ಅವನು ಮಗನನ್ನು ಪ್ರೀತಿಯಿಂದ ಕಾಣುತ್ತಾನೆ.

ಆದರೆ ಒಂದು ದಿನ ಅವನ ಜೀವನವೇ ಕಳಚಿ ಬೀಳುತ್ತದೆ. ಆಫೀಸಿಗೆ ಬಂದ ಹೊಸ ಎಂಡಿ ಅವರ ಕೊಠಡಿಯ ಹೊರಗಿನ ಪಾರಿವಾಳಗಳು ಅದರ ಹೆಕ್ಕೆಗಳನ್ನು ನೋಡಿ ಕೋಪಗೊಳ್ಳುತ್ತಾರೆ. ಅವರು ಬಂದಿರುವ ವಿಷಯ ತಿಳಿಯದೆ ಶ್ರೀ ಖಂಡ ಅದೇ ಸಮಯಕ್ಕೆ ಪಾರಿವಾಳಗಳಿಗೆ ಕಾಳು ಹಾಕುತ್ತಿರುತ್ತಾನೆ. ಇದು ಸಂದರ್ಭವನ್ನು ಹದಗೆಡಿಸಿ ಶ್ರೀಖಂಡನನ್ನು ಕೆಲಸದಿಂದ ತೆಗೆಯುವ ಹಂತ ಮುಟ್ಟುತ್ತದೆ. ಹಾಗಾದರೆ ಶ್ರೀಖಂಡನ ಕೆಲಸ ಹೋಯಿತೇ? ಮನೆಯಲ್ಲಿದ್ದ ಗುಬ್ಬಚ್ಚಿ ಗೂಡು ಏಕೆ ಖಾಲಿ ಆಯಿತು? ಅವರ ಮಗಳು ಮನೆಗೆ ಬಂದಳೆ? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಥೆಯಲ್ಲಿದೆ. ಮನುಷ್ಯನ ಹಲವಾರು ಸಂಬಂಧಗಳನ್ನು ಒಟ್ಟಿಗೆ ಹೆಣೆದಿರುವ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

ತ್ರಿಕಾಲ ; ಈ ಕಥೆಯಲ್ಲಿ ಮುಂಬೈನ ಮನೆಗಳಲ್ಲಿನ ಜಾಗದ ಕೊರತೆ ಹೊಂದಾಣಿಕೆಯೊಂದಿಗೆ ಜೀವನದಲ್ಲಿ ಜನರು ಮಾಡಿಕೊಳ್ಳುವ ಹೊಂದಾಣಿಕೆಯನ್ನು ಸಮೀಕರಿಸಿ ಹೇಳಿದ್ದಾರೆ. ರುಕ್ಮಬಾಯಿ ಮದುವೆಯಾಗಿ ಗಂಡನೊಂದಿಗೆ ಹೊಸ ಮನೆಗೆ ಬಂದಾಗ "ಇಷ್ಟು ದೊಡ್ಡ ಮನೆಯ?" ಎನ್ನುತ್ತಾರೆ. ಆದರೆ ಸಂಸಾರ ಬೆಳೆದಂತೆ ಮಗ ಅವನ ಮದುವೆ ಸೊಸೆ ಎಲ್ಲಾ ಬಂದಾಗ ಮನೆ ಅಷ್ಟು ದೊಡ್ಡದು ಎನಿಸುವುದಿಲ್ಲ. ಮದುವೆಯಾದ ಹೊಸದರಲ್ಲಿ ರುಕ್ಮ ಅವರ ಗಂಡ ಒಂದು ದೊಡ್ಡ ಪೆಂಡಿಲಂ ಗಡಿಯಾರ ತಂದಿಡುತ್ತಾರೆ. ಕಥೆಯ ಉದ್ದಕ್ಕೂ ಅದರ ಗಂಟೆಯ ಶಬ್ದ ಬದಲಾಗುವ ಕಾಲದ ಪ್ರತಿನಿಧಿ ಅನಿಸುತ್ತದೆ.

ಗಂಡನ ನಿಧನದ ನಂತರ ರುಕ್ಮಾಗೆ ತಮ್ಮ ಕೊಠಡಿಯೇ ಸರ್ಸ್ವವಾಗುತ್ತದೆ. ಅಲ್ಲಿನ ಗಡಿಯಾರವನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಮೊಮ್ಮಗ ಜಯಂತ ಅದೇ ಕೋಣೆಯಲ್ಲಿ ಆಡಿ ಬೆಳೆಯುತ್ತಾನೆ. ನಂತರ ಅವನು ಒಬ್ಬ ಗುಜರಾತಿ ಹುಡುಗಿಯನ್ನು ಪ್ರೀತಿಸಿ ತಂದೆ ತಾಯಿಯರ ಇಷ್ಟದ ವಿರುದ್ಧ ಮದುವೆಯಾಗುತ್ತಾನೆ. ಈಗ ನವ ದಂಪತಿಗಳಿಗೆ ಕೋಣೆಯನ್ನು ಹೊಂದಿಸಬೇಕು ಅದಕ್ಕಾಗಿ ರುಕ್ಮಾ ತಾಯಿಯನ್ನು ಬಾಲ್ಕನಿಗೆ ಕಳಿಸುತ್ತಾರೆ.

ರುಕ್ಮಾ ತಾಯಿಗೆ ಮನೆಗೆ ಬಂದಾಗಿನಿಂದ ಬಾಲ್ಕನಿ ಭಯ ಹುಟ್ಟಿಸುತ್ತದೆ. ಏಕೆಂದರೆ ಹತ್ತಿರದ ಸ್ಮಶಾನಕ್ಕೆ ಹೋಗಲು ಬಾಲ್ಕನಿ ಪಕ್ಕವೇ ಹಾದಿ. ಆಗಾಗ್ಗೆ ಕೇಳುವ "ರಾಮ್ ನಾಮ್ ಸತ್ಯಹೇ" ಅವರನ್ನು ಅಧೀರರನ್ನಾಗಿಸುತ್ತದೆ. ಹೀಗಾಗಿ ಅದು ಯಾವಾಗಲೂ ಮುಚ್ಚೆ ಇರುತ್ತಿತ್ತು. ಆದರೆ ಈಗ ಅದೇ ಅವರ ಕೋಣೆ. ಅಲ್ಲಿ ಕುಳಿತು ತಮ್ಮ ಹಿಂದಿನ ಕೋಣೆಯತ್ತ ನೋಡುತ್ತಿರುತ್ತಾರೆ. ಗುಜರಾತಿ ಸೊಸೆ ಹೊಸ ಯೋಜನೆಗಳನ್ನು ಮಾಡುತ್ತಾ ಅತ್ತೆ ಮತ್ತು ಅಜ್ಜಿ ಇಬ್ಬರನ್ನು ಸಣ್ಣ ಕೊಠಡಿಗಳಿಗೆ ವರ್ಗಾಯಿಸುವ ಯೋಚನೆ ಮಾಡುತ್ತಾಳೆ. ಅವರಿಬ್ಬರೂ ಇದರಿಂದ ಆತಂಕಗೊಳ್ಳುತ್ತಾರೆ. ರುಕ್ಮಬಾಯಿ ತನ್ನ ಮನೆಯಲ್ಲಿಯೇ ತಾಣವಿಲ್ಲದಂತೆ ಆಗಿದ್ದಕ್ಕೆ ದುಃಖಿಸುತ್ತಾ ಒಂದು ದಿನ ಪ್ರಾಣ ಬಿಡುತ್ತಾರೆ. ದೊಡ್ಡ ಗಡಿಯಾರ ಗಂಟೆ ಹೊಡೆಯುತ್ತಲೇ ಇರುತ್ತದೆ. ಇದರಲ್ಲಿ ಮೂರು ಪೀಳಿಗೆಗಳ ಕಥೆ ಅವರ ಹೊಂದಾಣಿಕೆ ಎಲ್ಲವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಈ ಪುಸ್ತಕದ ಉಳಿದ ಕಥೆಗಳೂ ಚೆನ್ನಾಗಿದೆ. ಸಂಪಿಗೆ ಹೂ ಕಥೆ ಹೆಣ್ಣಿನ ಸುಪ್ತ ಭಾವನೆಗಳನ್ನು ಹೇಳುತ್ತದೆ. ಮುಸ್ಸಂಜೆ ಕಥೆಯಲ್ಲಿ ಮಿಸ್ಟರ್ ರಾವ್ ಅವರ ನಿವೃತ್ತಿಯ ಘಟನೆಯನ್ನು ಕಥೆಯಾಗಿಸದ್ದಾರೆ. ಅವರು ಒಂದು ಗಂಟೆಯ ಲೋಕಲ್ ರೈಲಿನ ಪ್ರಯಾಣದಲ್ಲಿ ಸಿಗುತ್ತಿದ್ದ ಸ್ನೇಹಿತರಿಗೆ ವಿದಾಯ ಹೇಳುವುದು ಸುಲಭ ಎಂದು ಕೊಂಡಿರುತ್ತಾರೆ ಆದರೆ ಆದ್ದದ್ದು ಏನು? ನನಗಿದು ಅಪೂರ್ವವಾದ ಕಥೆ ಅನಿಸಿತು. #ಮಲ್ಲಿಗೆ ಕಥೆಯಲ್ಲಿ ಹೋಟೆಲ್ ನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸೋಮು ಪುಸ್ತಕದಲ್ಲಿ ಆಸಕ್ತಿ ತೋರಿಸುವುದನ್ನು ಕಂಡು ನಿರೂಪಕರು ಅವನೊಂದಿಗೆ ಸ್ನೇಹ ಬೆಳೆಸುತ್ತಾರೆ. ಅವನು ನಿರೂಪಕರ ಪರಿಚಿತರಾದ ಶ್ರೀನಿವಾಸರಾಯರ ಬಳಿ ವಿದ್ಯಾರ್ಥಿಯಾಗಿ ಓದುತ್ತಿದ್ದಾನೆ ಎಂದು ತಿಳಿದು ಸಂತೋಷ ಕಾಡು ಪಡುತ್ತಾರೆ.‌ ಆದರೆ ಆ ಹುಡುಗನ ಜೀವನದ ಸಂಘರ್ಷ ಮುಂಬಾಯಿಯ ಜೀವನ, ಕೊನೆಗೆ ಅವನ ಅಂತ್ಯವನ್ನು ಓದುವಾಗ ಓದುಗರ ಕಣ್ಣು ಮಂಜಾಗುತ್ತದೆ. ಅಂತಹ ಎಷ್ಟೋ ಕಾಡು ಮಲ್ಲಿಗೆಗಳು ಎಲೆ ಮರೆಯಲ್ಲಿಯೇ ಬಾಡಿಬಿಡುತ್ತದಯವೆ.ಈ ರೀತಿಯ ಕಥೆಯನ್ನು ಬಿಚ್ಚಿಟ್ಟಿರುವುದು ಬಲ್ಲಾಳರ ವಿಶೇಷ .#ತಾಮ್ರದ ಬಳೆ ಇದು ಮನುಷ್ಯನ ನಂಬಿಕೆಗಳ ಬಗ್ಗೆ ಬರೆದ ಕಥೆಯಾಗಿದೆ.

MORE FEATURES

ಇದು ದೇಹದ ರಾಷ್ಟ್ರಗೀತೆ

29-05-2025 ಬೆಂಗಳೂರು

ಯಾವಾಗ ಮನುಷ್ಯನ ಅಂಗಾಂಗಗಳ ಜಾಲ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆಯೋ ಆಗ ಆತ ಉತ್ತಮವಾದದ್ದನ್ನು ಸಾಧಿಸುತ್ತಾನ...

ಮುರಿದ ಕಡಲಿನೊಳಗೆ ಈಜಲಾಗದ ಸಂಕಟ

28-05-2025 ಬೆಂಗಳೂರು

ಸಮಕಾಲೀನ, ಐತಿಹಾಸಿಕ ಅಥವಾ ಪೌರಾಣಿಕ ಈ ಯಾವ ವಸ್ತುವನ್ನೆತ್ತಿಕೊಂಡರೂ ಅಲ್ಲಿ ಭಾವುಕತೆ ಅತಿರಂಜಕತೆ ಭಾಷಾ ವೈಭವಗಳು ಪ್ರಧಾ...

ಪರ್ವತವಾಣಿಯವರೆಂದರೆ 'ನ' ಗುಣಿತದ ಮೊದಲ ಮೂರು ಅಕ್ಷರಗಳು

28-05-2025 ಬೆಂಗಳೂರು

“ಮೊದಲು ನಟ, ನಂತರ ನಾಟಕಕಾರ, ಆನಂತರದಲ್ಲಿ ನಿರ್ದೇಶಕ ಈ ಮೂರೂ ಆಗಿದ್ದ ಪರ್ವತವಾಣಿಯವರು, ಕಳೆದ ಶತಮಾನದ ನಾಲ್ಕನೇ ...