ಕಾವ್ಯ ಯಾವತ್ತಿಗೂ ಬಿಡುಗಡೆಯ ಹಾದಿ


"ಕಲೆ ಮನುಷ್ಯನನ್ನು ವಿಕೃತಿಗಳಿಂದ ಪಾರುಮಡುತ್ತದೆ. ಶುದ್ಧಗಳಿಸುತ್ತದೆ. ನಿಜಾರ್ಥದಲ್ಲಿ "ಬೆಳಗುತ್ತದೆ". ಅಂತೆಯೇ ಕಾಯಕಕ್ಕೂ ಅಂಥ ಶಕ್ತಿಯಿದೆ. ಕಾಯಕವೇ ಒಂದು ಧ್ಯಾನ. ಚರ್ಮ ಹದಗೊಳಿಸಿ ಚಪ್ಪಲಿ ಮಾಡುವ ಕಾಯಕದಲ್ಲಿ ಅಂಥ ಧ್ಯಾನವನ್ನು ಕಾಣುವ ಕವಿ ಅವನನ್ನು ತೊಗಲಯೋಗಿ ಎನ್ನುತ್ತಾರೆ. ಕುವೆಂಪು ಅವರು ರೈತ ನನ್ನು ನೇಗಿಲ ಯೋಗಿ ಅಂದಂತೆ," ಎನ್ನುತ್ತಾರೆ ಗೀತಾ ವಸಂತ. ಅವರು ಡಾ. ಶಿವಣ್ಣ ತಿಮ್ಲಾಪುರ ಅವರ ‘ತೊಗಲ ಯೋಗಿ’ ಕವನಸಂಕಲನದ ಕುರಿತು ಬರೆದ ವಿಮರ್ಶೆ.

ಶಿವಣ್ಣ ತಿಮಲಾಪುರ ಅವರ 'ತೊಗಲ ಯೋಗಿ' ಕವನ ಸಂಕಲನದ ಕವಿತೆಗಳು ಸಮುದಾಯವೊಂದರ ದಟ್ಟ ಸಾಂಸ್ಕೃತಿಕ ಸ್ಮೃತಿಗಳನ್ನು ಉದ್ದೀಪಿಸುತ್ತವೆ. ಪುರಾಣ ಹಾಗೂ ಚರಿತ್ರೆಯ ರೂಪಕಗಳನ್ನು ಸೃಜಿಸುತ್ತಲೇ ವರ್ತಮಾನದ ಸಂಕಟಗಳನ್ನು ಧ್ವನಿಸುತ್ತವೆ. ಕುಲಕಥನಗಳ ಸೂಕ್ಷ್ಮ ಧ್ವನಿಯನ್ನು ವರ್ತಮಾನದ ಅರಿವಿಗೆ ಕಸಿಕಟ್ಟಿ ಇಲ್ಲಿನ ಕವಿತೆಗಳು ಕಸುವುಗೊಂಡಿವೆ. ಕುಲದ ಕುಲುಮೆಯಲ್ಲಿ ಕುದಿವ ಜಗದಲ್ಲಿ ಮನುಷ್ಯತ್ವದ ತಂಪು ಹುಡುಕುವ ಕವಿತೆಗಳು ಮೆಲ್ಲಗೆ ಎದೆಗಿಳಿಯುತ್ತ ಹೋಗುತ್ತವೆ.

ಕೇರಿಯಾದ ಕೇರಿಯೆಲ್ಲಾ
ಕಂಗೊಳಿಸಿ
ಬೀದಿಯಾದ ಬೀದಿಯೆಲ್ಲಾ ಬೆಳಗಿದವು
ತೋಟಿಯ ದಯದಿ
ನಿನ್ನ ಕಾಯಕಕೆ ಎಡೆಯುoಟೆ?
ಕುಲದ ಕುಲುಮೆಯಲಿ
ಕುದಿವ ಈ ಜಗದಿ

ಕಲೆ ಮನುಷ್ಯನನ್ನು ವಿಕೃತಿಗಳಿಂದ ಪಾರುಮಡುತ್ತದೆ. ಶುದ್ಧಗಳಿಸುತ್ತದೆ. ನಿಜಾರ್ಥದಲ್ಲಿ "ಬೆಳಗುತ್ತದೆ". ಅಂತೆಯೇ ಕಾಯಕಕ್ಕೂ ಅಂಥ ಶಕ್ತಿಯಿದೆ. ಕಾಯಕವೇ ಒಂದು ಧ್ಯಾನ. ಚರ್ಮ ಹದಗೊಳಿಸಿ ಚಪ್ಪಲಿ ಮಾಡುವ ಕಾಯಕದಲ್ಲಿ ಅಂಥ ಧ್ಯಾನವನ್ನು ಕಾಣುವ ಕವಿ ಅವನನ್ನು ತೊಗಲಯೋಗಿ ಎನ್ನುತ್ತಾರೆ. ಕುವೆಂಪು ಅವರು ರೈತ ನನ್ನು ನೇಗಿಲ ಯೋಗಿ ಅಂದಂತೆ.

ಕಾವ್ಯ ಯಾವತ್ತಿಗೂ ಬಿಡುಗಡೆಯ ಹಾದಿ. ಅದೊಂದು ಶೋಧ. ಅದು ಸಿದ್ದಗೊಂಡಿರುವ ಗುರಿ ಅಲ್ಲ. ಈ ಶೋಧದಲ್ಲಿ ಅದು ಪರಮ ಸತ್ಯದ ಮಿಂಚುಗಳನ್ನು ಕಾಣಿಸಿಬಿಡುವುದುಂಟು. ಅಲ್ಲಮನಲ್ಲಿ ಆಗುವುದು ಹಾಗೇ. ಅಲ್ಲಮನನ್ನು ಅಲ್ಲಲ್ಲಿ ಮೈದುಬಿಕೊಂಡಂತೆ ಬರೆದ ಕೆ. ಬಿ. ಸಿದ್ದಯ್ಯ ನವರ ನೆರಳು ಶಿವಣ್ಣ ಅವರ ಕಾವ್ಯದಲ್ಲೂ ಸುಳಿದಾಡಿದೆ. "ಈ ದೇಹ ನನ್ನ ದೇಹ ಇಡೀ ದೇಹ ಮುಟ್ಟಬಾರದೆಂದು ಕೇಳಿ ಕೇಳಿ ಕೇಳಿ ಕಟ್ಟಕಡೆಗೆ ಮುಟ್ಟಬೇಕೆಂದು ಅರಿತು ಕಾಯವನ್ನು ಕಾಯಕದಿಂದ ವಿಸರ್ಜಿಸಿದೆ ಮಲಮೂತ್ರ ವಿಸರ್ಜಿಸಿದಂತೆ’ ಎಂಬ ಸಿದ್ದಯ್ಯನವರ ಸಾಲು ಇಲ್ಲಿ ಅನುರಣಿಸುತ್ತದೆ. ಇದು ಅನುಕರಣೆಯಲ್ಲ. ಈ ಕಾಲದ ಮುಖ್ಯ ಕವಿಯೊಬ್ಬನ ಸಂವೇದನೆಯನ್ನು ಹಿಗ್ಗಿಸುವ ಪರಿಯಿದು. ಕುಲಮದವನ್ನು ವಿಸರ್ಜಿಸಿ ಮುನ್ನಡೆಯಲು ಕಾಯಕ ಮಾಧ್ಯಮವಾಗುತ್ತದೆ. ಬಸವಣ್ಣನ ದೇಹವೇ ದೇಗುಲ ಎಂಬ ಪರಿಕಲ್ಪನೆಯಂತೆ ಇದು ಆದ್ಯಾತ್ಮಿಕ ಸಾಕ್ಷಾತ್ಕಾರವೂ ಹವ್ದು. ಸಮಜೊ ಸಾoಸ್ಕೃತಿಕ ಚಲನೆಯೂ ಹವ್ದು. ಅಕ್ಷರವನ್ನು ಮುಟ್ಟಿದ ಚಲನೆಯೂ ಇಂತಹದೆ. ಮುಟ್ಟಬಾರದವರ ಅರಿವನ್ನು ಮುಟ್ಟಿ ತೋರಿಸಿದ್ದು ಇದೆ ಅಕ್ಷರ. ಆ ಮೂಲಕ ಎಲ್ಲರನ್ನೂ ಮುಟ್ಟಿ ಎಚ್ಚರಿಸಿದ್ದು ಇಂಥ ಕಾವ್ಯ ಸಂವೇದನೆಯ ವಿಶೇಷತೆ. ಬುದ್ಧನ ಕರುಣೆ, ಮೈತ್ರಿಯ ಹಾದಿಯಲ್ಲಿ ಸಾಗುವ ಈ ಕವಿತೆಗಳು ಎಲ್ಲೂ ಕಹಿಯನ್ನು ಬಿತ್ತುವುದಿಲ್ಲ. ಹಳಸಿದ ಅನ್ನ ನೀಡಿದವರ ಮಕ್ಕಳಿಗೂ ಇಂದು ಅದಕ್ಕೆ ಪ್ರತಿಯಾಗಿ ಅನ್ನ ಅರಿವೆ ಅಕ್ಷರ ನೀಡುತ್ತಿದ್ದೇವೆಂದು ಘನತೆಯಿಂದ ಮಾತಾಡುತ್ತದೆ.

ಹಸಿವು ಅವಮಾನ ಹಿಂಸೆಗೆ ಪ್ರತಿಯಾಗಿ ಜೀವ ಕಾರುಣ್ಯವನ್ನು ಮುಂದೊಡ್ದುವದು ಕುದ್ದು ಹದಗೊಂಡ ಪಕ್ವ ಮನಸಿಗಷ್ಟೇ ಸಾಧ್ಯ. ಅದು ತಾಪವನ್ನು ತಪವಾಗಿಸುವ ಪರಿವರ್ತನೆಯ ಹಾದಿ. ಅಂಥ ಹಾದಿಯೊಂದು ಕವಿತೆಗಳಲ್ಲಿ ಕಾಣಿಸುತ್ತತೆ.

ಶಿವಣ್ಣ ವರ್ತಮಾನದ ಹಿಂಸೆಯ ರಾಜಕೀಯ ಸ್ವರೂಪವನ್ನು ಧ್ಯಾನಿಸದೆ ಇಲ್ಲ. ಅವರ ತಣ್ಣಗಿನ ಪ್ರತಿರೋಧ ಸಮಾಜದ ಸಾಕ್ಷಿಪ್ರಜ್ಞೆಯನ್ನು ಕದಲಿಸುತ್ತದೆ. ಅಂಥ ಹಲವು ಕವಿತೆಗಳು ಸಂಕಲನದಲ್ಲಿವೆ. ಇದಕ್ಕೂ ಮಿಗಿಲಾಗಿ

ತುಮಕೂರಿನ ನೆಲದ ಕಸುವನ್ನು, ತಮ್ಮ ಕುಲದ ಅನನ್ಯತೆಯನ್ನು, ಕುಲಕಸುಬಿನ ಪರಿಕರಗಳನ್ನು ಆತ್ಮಶೋಧನೆಯ ಪರಿಕರಗಳಾ ಗಿಸುವ ಸೃಜನಶೀಲತೆಯನ್ನು ಶಿವಣ್ಣ ನವರ ಕಾವ್ಯ ಪ್ರಕಟಿಸುತ್ತದೆ. ಗಲ್ಲೆಬಾನಿಯ ನೀರು ಕೂಡ ಪವಿತ್ರ ಜಲವೇ ಹೌದು ಎಂದು ಆತ್ಮ ಘನತೆಯಿಂದ ನುಡಿಯುತ್ತದೆ.

MORE FEATURES

ವಾಯುಸೇನೆಗೆ ಸೇರಲು ಇಚ್ಚಿಸುವವರಿಗೆ ಕೃತಿಯಲ್ಲಿ ಕೆಲವು ಕಿವಿಮಾತುಗಳಿವೆ; ಜೋಗಿ

08-05-2025 ಬೆಂಗಳೂರು

"ಪೂರ್ಣಿಮಾ ಮಾಳಗಿಮನಿ ತಮ್ಮ ಅಲ್ಪಾವಧಿಯ ವೃತ್ತಿ ಜೀವನದ ನೆನಪುಗಳನ್ನು ಬರೆದಿದ್ದಾರೆ. ಮಹಿಳೆಯೊಬ್ಬರು ವಾಯುಸೇನೆಯ ...

ಕನ್ನಡದ ಅಪರೂಪದ ಚಿಂತಕ ಜಿ.ಎಸ್.ಸಿದ್ದಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ಲೋಕದ ಯಾವ ಗುಂಪುಗಾರಿಕೆಗೂ ಸೇರದ ಜಿ.ಎಸ್.ಸಿದ್ದಲಿಂಗಯ್ಯ ಒಬ್ಬಂಟಿಯಾಗಿಯೇ ಸಾಗಿದರು. ಅವರಿಗಿಂತ ಕಿರಿಯರ...

ಅಪರೂಪದ ಕವಿ-ವಾಗ್ಮಿ ನಮ್ಮ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ವಲಯದ ಗುಂಪುಗಾರಿಕೆಯಿಂದ ಬಲುದೂರ ಉಳಿದಿರುವ ಸಿದ್ಧಲಿಂಗಯ್ಯನವರದು ಬಹುತೇಕ ಒಂಟಿ ಪಯಣವೇ. ಇವರಿಗೆ ಆಪ್ತರ...