ಕಾದಂಬರಿಯಲ್ಲಿ ಲೇಖಕರ ಅಧ್ಯಯನಶೀಲತೆ ಎದ್ದು ಕಾಣುತ್ತದೆ


"ಅರವಳಿಕೆಯಿಂದಾಗಿ ಮನುಷ್ಯನಲ್ಲಿ ಪ್ರಜ್ಞೆ ಜಾಗೃತವಾಗಿರುವುದಿಲ್ಲವೇ? ಪ್ರಾಣಿಗಳಿಗೆ ತಮ್ಮ ದೇಹದ ಬಗ್ಗೆ ಅರಿವಿರುತ್ತದೆಯೇ? ಪ್ರಾಣಿಗಳೂ ಆತ್ಮಹತ್ಯೆ ಮಾಡಿಕೊಳ್ಳುವವೇ? ಕೆಲವೊಮ್ಮೆ ಪರಾವಲಂಬಿ ಕೀಟಗಳು ಆತಿಥೇಯ ಕೀಟಗಳ ಸಾವಿಗೆ ಹೇಗೆ ಕಾರಣವಾಗುತ್ತವೆ?"...ಈ ರೀತಿಯ ಅನೇಕ ವೈಜ್ಞಾನಿಕ ಸಂಗತಿಗಳನ್ನೂ ಸಹ ಗಣೇಶಯ್ಯನವರು ಮೂಲಕತೆಯ ವೇಗಕ್ಕೆ, ರೋಚಕತೆಗೆ ಧಕ್ಕೆ ಬಾರದಂತೆ ಕೃತಿಯಲ್ಲಿ ಪ್ರಸ್ತುತಪಡಿಸಿದ್ದಾರೆ” ಎನ್ನುತ್ತಾರೆ ನಾಗೇಂದ್ರ ಎ.ಆರ್. ಅವರು ಡಾ| ಕೆ.ಎನ್.ಗಣೇಶಯ್ಯ ಅವರ ‘ಜಲ-ಜಾಲ’ ಕಾದಂಬರಿ ಕುರಿತು ಬರೆದ ವಿಮರ್ಶೆ.

ಕೃತಿ: ಜಲ-ಜಾಲ
ಲೇಖಕರು: ಡಾ| ಕೆ.ಎನ್.ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ

ತಮ್ಮ ಆರಂಭದ ಓದಿಗಾಗಿ ಎಂತಹ ಪುಸ್ತಕಗಳನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿರುವ ಹೊಸ ಓದುಗರಿಗೆ, ನಾನು ಸೂಚಿಸುವ ಪುಸ್ತಕಗಳ ಪೈಕಿ 'ಜಲ-ಜಾಲ'ವೂ ಒಂದಾಗಿರುತ್ತದೆ. ಸುಮಾರು ನೂರೈವತ್ತು ಪುಟಗಳ ಕಿರುಗಾತ್ರದ ಈ ಕೃತಿಯಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ್ದು ಸರಳವಾದ ಭಾಷೆ ಮತ್ತು ಬಿಗಿಯಾದ ನಿರೂಪಣೆ !! ಪ್ರತಿ ಪುಟವನ್ನು ತಿರುವಿದಾಗಲೂ ಮುಂದೇನು, ಮತ್ತೇನು ಎಂಬ ಪ್ರಶ್ನೆಗಳು ಓದುಗನನ್ನು ಕಾಡುತ್ತಲೇ ಇರುತ್ತವೆ. ರೋಚಕಮಯವಾದ ಈ ಕಾದಂಬರಿಯ ಕೊನೆಯ ಪುಟದಲ್ಲೂ ಸಿಗುವ ಅನೂಹ್ಯವಾದ ಸಂಗತಿಯಿಂದ, ನನಗೆ ಈ ಪುಸ್ತಕವನ್ನು ಓದಿದ್ದು ಯಾವುದೋ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನೇ ನೋಡಿದಂತಾಯಿತು !!

ಅಮೆರಿಕಾದ ನೌಕಾದಳದಲ್ಲಿ ನಡೆದ ವಿಚಿತ್ರವಾದ ಪ್ರಯೋಗವೊಂದರಿಂದ ಹತ್ತು ಮಂದಿ ಆಫ್ರೋ ಅಮೆರಿಕನ್ ಸೈನಿಕರು ನೀರುಪಾಲಾಗುತ್ತಾರೆ. ಆದರೆ ಅಮೆರಿಕಾ ಸರ್ಕಾರ ಒಂದು ಸುದ್ದಿಗೋಷ್ಠಿಯನ್ನು ಕರೆದು, "ನೀರಿನ ಸೆಳೆತದಿಂದಾಗಿ ಮೂವರು ಸೈನಿಕರು ಪ್ರಾಣ ಕಳೆದುಕೊಂಡರು" ಎಂದು ತಿಳಿಸುತ್ತದೆ. ಹಾಗಿದ್ದರೆ ಸೈನಿಕರಿಗೆ ಪ್ರಾಣಹಾನಿ ಮಾಡಿದ ಆ ಪ್ರಯೋಗವಾದರೂ ಏನು? ಮೃತರಾದ ಮಂದಿಯೆಷ್ಟು? ಈ ಒಂದು ಘಟನೆ ಅಮೆರಿಕಾ ಸರ್ಕಾರಕ್ಕೆ ಜಾಗತಿಕ ಮಟ್ಟದಲ್ಲಿ ಹೇಗೆ ತೀವ್ರವಾದ ಮುಖಭಂಗವನ್ನು ತರುತ್ತದೆ? ಈ ಘಟನೆಯ ನಂತರದ ವಿದ್ಯಮಾನಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಏಕೆ ಕಾಣಿಸಿಕೊಳ್ಳುತ್ತವೆ? ಒಂದೆಡೆಯಲ್ಲಿ ರಕ್ಷಣಾ ವ್ಯವಸ್ಥೆ, ಗುಪ್ತಚರ ವ್ಯವಸ್ಥೆ, ರಾಜಕೀಯ ವ್ಯವಸ್ಥೆಗಳು.... ಮತ್ತೊಂದೆಡೆಯಲ್ಲಿ ಮಾಧ್ಯಮದ ಸಾಮರ್ಥ್ಯದಲ್ಲಿ ನಂಬಿಕೆಯಿರಿಸಿದ ಓರ್ವ ಪತ್ರಕರ್ತೆ !! ಈ ಸಂಘರ್ಷದ ಕತೆಯನ್ನು ಪುಸ್ತಕ ಓದಿ ಆನಂದಿಸಿ.

"ಅರವಳಿಕೆಯಿಂದಾಗಿ ಮನುಷ್ಯನಲ್ಲಿ ಪ್ರಜ್ಞೆ ಜಾಗೃತವಾಗಿರುವುದಿಲ್ಲವೇ? ಪ್ರಾಣಿಗಳಿಗೆ ತಮ್ಮ ದೇಹದ ಬಗ್ಗೆ ಅರಿವಿರುತ್ತದೆಯೇ? ಪ್ರಾಣಿಗಳೂ ಆತ್ಮಹತ್ಯೆ ಮಾಡಿಕೊಳ್ಳುವವೇ? ಕೆಲವೊಮ್ಮೆ ಪರಾವಲಂಬಿ ಕೀಟಗಳು ಆತಿಥೇಯ ಕೀಟಗಳ ಸಾವಿಗೆ ಹೇಗೆ ಕಾರಣವಾಗುತ್ತವೆ?"...ಈ ರೀತಿಯ ಅನೇಕ ವೈಜ್ಞಾನಿಕ ಸಂಗತಿಗಳನ್ನೂ ಸಹ ಗಣೇಶಯ್ಯನವರು ಮೂಲಕತೆಯ ವೇಗಕ್ಕೆ, ರೋಚಕತೆಗೆ ಧಕ್ಕೆ ಬಾರದಂತೆ ಕೃತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಕಾದಂಬರಿಯಲ್ಲಿ ಲೇಖಕರ ಅಧ್ಯಯನಶೀಲತೆ ಎದ್ದು ಕಾಣುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನದ ಅತಿಯಾದ ಬೆಳವಣಿಗೆ ಯಾವೆಲ್ಲ ವಿಪತ್ತುಗಳನ್ನು ತಂದೊಡ್ಡಬಹುದು ಎಂಬ ಅರಿವನ್ನು ಈ ಕೃತಿ ಮೂಡಿಸುತ್ತದೆ. ಮಾತ್ರವಲ್ಲ, ಸರಿಯಾಗಿ ಬಳಸಿದರೆ ಮಾಧ್ಯಮ ಎಂತಹ ಪ್ರಖರವಾದ ಆಯುಧವಾಗಬಲ್ಲದು ಎಂದೂ ತಿಳಿಸುತ್ತದೆ. ಒಂದೇ ಗುಕ್ಕಿಗೆ ಓದಿ ಮುಗಿಸಬಹುದಾದ ಸಂಗ್ರಹಯೋಗ್ಯವಾದ ಕೃತಿ. ಸಿಕ್ಕಾಗ ಕೊಂಡು ಓದಿ.

- ನಾಗೇಂದ್ರ ಎ.ಆರ್

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...