'ಕವಿತೆಗಳಲ್ಲಿ ಹೊಸತನ ಮತ್ತು ಗಟ್ಟಿತನ ಎರಡೂ ಇವೆ. ನೀವು ಸಂವೇದನೆಯ ಮೂಲದ್ರವ್ಯವನ್ನು ಉಳಿಸಿ ಕೊಂಡೇ ವಾಸ್ತವಿಕ ಪ್ರಜ್ಞೆಯನ್ನು ರೂಢಿಸಿ ಕೊಂಡವರು. ಇದರಿಂದ ಹಲವು ಸೂಕ್ಷ್ಮಗಳನ್ನು ಅಭಿವ್ಯಕ್ತಿಸುವುದು ನಿಮಗೆ ಸಾಧ್ಯವಾಗಿದೆ' ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರು ನಾಗಶ್ರೀ ಅಜಯ್ ಅವರ ನಾಲ್ಕು ಋತುಗಳ ಹುಡುಗಿ ಸಂಕಲನಕ್ಕೆ ಬರೆದ ಆಪ್ತ ಮಾತು ನಿಮ್ಮ ಓದಿಗಾಗಿ.
ಆತ್ಮೀಯ ನಾಗಶ್ರೀಯವರೇ,
ನೀವು ವಿಶ್ವಾಸ ಪೂರ್ವಕವಾಗಿ ಕಳುಹಿಸಿದ ‘ನಾಲ್ಕು ಋತುಗಳ ಹುಡುಗಿ’ ಸಂಕಲನವನ್ನು ಓದಿದೆ. ನಿಮ್ಮ ಕವಿತೆಗಳಲ್ಲಿ ಹೊಸತನ ಮತ್ತು ಗಟ್ಟಿತನ ಎರಡೂ ಇವೆ. ನೀವು ಸಂವೇದನೆಯ ಮೂಲದ್ರವ್ಯವನ್ನು ಉಳಿಸಿ ಕೊಂಡೇ ವಾಸ್ತವಿಕ ಪ್ರಜ್ಞೆಯನ್ನು ರೂಢಿಸಿ ಕೊಂಡವರು. ಇದರಿಂದ ಹಲವು ಸೂಕ್ಷ್ಮಗಳನ್ನು ಅಭಿವ್ಯಕ್ತಿಸುವುದು ನಿಮಗೆ ಸಾಧ್ಯವಾಗಿದೆ. ನನಗೆ ಇಷ್ಟವಾದ ಅಂಶವೆಂದರೆ ನೀವು ಬದುಕಿನ ಎಲ್ಲಾ ಸಂಗತಿಗಳ ಬಗೆಗೂ ಎಚ್ಚರದಿಂದಿರುವವರು. ಅಂತರಂಗ ಸಂಬಂಧಿ ಭಾವನಾಭವದಂತೆ ಜಗತ್ತಿನ ನಿತ್ಯ ವ್ಯಾಪಾರಗಳಿಗೂ ಸ್ಪಂದಿಸುವುದು ಹೀಗಾಗಿಯೇ ನಿಮಗೆ ಸಾಧ್ಯವಾಗಿದೆ.
ನೀವು ವಿಂಗಡಣೆ ಮಾಡಿ ಕೊಂಡಿರುವ ನಾಲ್ಕು ಋತುಗಳು ಬಂಧ ಮತ್ತು ವಸ್ತುವಿನ ದೃಷ್ಟಿಯಿಂದ ಕೂಡ ನಾಲ್ಕು ಸಾಧ್ಯತೆಗಳಾಗಿರುವ ರೀತಿ ನನಗೆ ಇಷ್ಟವಾಯಿತು. ಮೊದಲ ಭಾಗದಲ್ಲಿ ವಾಸ್ತವಿಕ ನೆಲೆಯ ಜೊತೆಗೆ ನೆನಪಿನ ಗಹನತೆ, ಸ್ವೀಕರಾರ್ಹತೆಗೆ ಮಹತ್ವ ಸಿಕ್ಕಿದೆ. ‘ಬಿರುಸು ಮಳೆಯಲ್ಲಿ’ಯಂತಹ ಶಕ್ತ ಕವಿತೆ ಅಂತರಂಗ ಸಂಬಂಧಿ ಮಾನವಾನುಭವವನ್ನು ಹಿಡಿಯುವ ನಿಮ್ಮ ಶಕ್ತಿಗೆ ಸಾಕ್ಷಿಯಾಗಿದೆ. ‘ನೀಲಿ ಮೋಹದ ತರುಣಿ’ಯಲ್ಲಿನ ನೀಲಿ ಕೇವಲ ಬಣ್ಣವಾಗಿ ಉಳಿಯದೆ ಅನಂತ ವಿಸ್ತಾರವನ್ನು ಹಿಡಿದಿಟ್ಟ ರೀತಿ ಇಷ್ಟವಾಯಿತು. ಎರಡನೆಯ ಭಾಗದ ಕವಿತೆಗಳು ವ್ಯಕ್ತಿಕೇಂದ್ರಿತವಾಗಿದ್ದರೂ ಕೌಟಂಬಿಕ ನೆಲೆಯಲ್ಲಿ ಉಳಿಸಿ ಕೊಳ್ಳುವ ಸಾಮಾಜಿಕ ಪ್ರಜ್ಞೆಯ ಸಾಧ್ಯತೆಯಂತೆ ಕಾಣುತ್ತದೆ. ಇಲ್ಲಿ ಭಾವನಾತ್ಮಕ ಪ್ರಕ್ರಿಯೆಯ ಜೊತೆಗೆ ವಾಸ್ತವದ ಅರಿವೂ ಕೂಡ ಕಾಣಿಸುತ್ತದೆ. ‘ಜ್ವರದ ರಾತ್ರಿ’ಯಂತಹ ಕವಿತೆ ನಿಮ್ಮ ಗಟ್ಟಿತನಕ್ಕೆ ನಿದರ್ಶನವಾಗಿದೆ.
ಮೂರನೆಯ ಭಾಗದಲ್ಲಿ ಕವಿತೆಗಳು ಕಡಿಮೆ ಇದ್ದರೂ ತೀವ್ರತೆ ಅದನ್ನು ಸರಿದೂಗಿಸಿದೆ. ಇಲ್ಲಿ ಸಮಚಿತ್ತದ ನಿರುದ್ವಿಗ್ನ ಸ್ಥಿತಿಯಿಂದ ಮೆಲುದನಿಯ ಕಾವ್ಯ ಅವೀರ್ಭವಿಸಿದೆ. ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟು ಕೊಂಡು ವ್ಯಕ್ತಿ-ಪರಿಸರಕ್ಕೆ ಸ್ಪಂದಿಸುವ ಗುಣವನ್ನು ಇಲ್ಲಿ ಕಾಣಬಹುದು. ‘ಈಗಷ್ಟೇ ಅರಿವಾಗಿದೆ’ ಈ ಭಾಗದಲ್ಲಿ ನನಗೆ ಬಹಳ ಇಷ್ಟವಾದ ಕವಿತೆ. ಇನ್ನು ಕೊನೆಯ ಭಾಗದ ಕವಿತೆಗಳು ವ್ಯಕ್ತಿ ಕೇಂದ್ರಿತ ಎನ್ನುವಂತೆ ಭಾಸವಾದರೂ ಪರಿಚಿತ ಚಿತ್ರಗಳ ಮೂಲಕವೇ ಸಾಮಾನ್ಯ ಚಿತ್ರವೊಂದು ಮೂಡುತ್ತಲೇ ವಿಭಿನ್ನ ಅನುಭೂತಿಯ ಗಾಢ ಆವರಣವೊಂದು ತೆರೆದು ಕೊಳ್ಳುತ್ತದೆ, ಆಗಲೂ ಅಲ್ಲಿ ಮೂಡುವುದು ವಿಶ್ವಾತ್ಮಕವಾದ ಅನ್ವೇಷಣೆಯೊಂದು ತೆರೆದು ಕೊಳ್ಳುತ್ತದೆ. ಪರಿಸರ ಮತ್ತು ಭಾವಕೇಂದ್ರದಲ್ಲಿ ನಿಂತು ಧ್ಯಾನಿಸುವ ಮನಸ್ಥಿತಿಯನ್ನು ಇಲ್ಲಿ ಗಮನಿಸ ಬಹುದು. ಈ ಭಾಗದಲ್ಲಿ ‘ಅವಳ ಹುಡುಕಾಟ’ ಕವಿತೆ ಹೆಚ್ಚು ಕಾಡಿತು.
ಮೊದಲ ಸಂಕಲನದಲ್ಲಿಯೇ ನಿಮ್ಮ ಅನನ್ಯತೆಯನ್ನು ತೋರಿಸಿದ್ದೀರಿ, ನಿಮ್ಮಿಂದ ಇನ್ನಷ್ಟು ಪ್ರಯೋಗಶೀಲ ಕಾವ್ಯವನ್ನು ನಾನು ಮುಂಬರುವ ದಿನಗಳಲ್ಲಿಯೂ ನಿರೀಕ್ಷಿಸುವೆ.
ನಿಮಗೆ ಶುಭವಾಗಲಿ
ಎನ್.ಎಸ್.ಶ್ರೀಧರ ಮೂರ್ತಿ
“ಪರಿಸರದತ್ತ ಯೋಚನೆ ಬರುವಂತೆ ಮಾಡಿ ಸಂರಕ್ಷಣೆ ಇನ್ನು ಸಹ ಮನಸು ಮಾಡಿದರೆ ಸಾಧ್ಯ ಅನ್ನೋ ಅರಿವು ಬರುತ್ತದೆ”...
"ಕಾದಂಬರಿ ವಿಶಿಷ್ಟ ಎನಿಸಲು ಪ್ರಮುಖ ಕಾರಣ ಕಾದಂಬರಿಯನ್ನು ಸರಳಾದೇವಿಯೊಂದಿಗೆ ಆರಂಭಿಸಿರುವುದು. ಮಹಾರಾಣಿಯ ಚರಿತೆ ...
“ಭಾರತ ದೇಶದ ಸ್ವಾತಂತ್ರವು, ಯಾರೊಬ್ಬರ ಪ್ರಯತ್ನದಿಂದ ಬಂದುದಲ್ಲ. ದೇಶದ ಹಲವಾರು ಜನರ ತ್ಯಾಗ, ಬಲಿದಾನದಿಂದ ಭಾರತ ...
©2024 Book Brahma Private Limited.