ಮೊದಲ ಭಾಗಕ್ಕಿಂತ ಇದರಲ್ಲಿ ಶಾಲೆಯ ಶಿಕ್ಷಕ ಅಭಿಮನ್ಯು ಮೇಷ್ಟ್ರು ಹೆಚ್ಚು ಆವರಿಸಿಕೊಂಡಿದ್ದಾರೆ. ಮಕ್ಕಳಿಗೆ ಮತ್ತು ಊರಿಗೆ ಒಳ್ಳೆಯದು ಮಾಡಬೇಕೆಂಬ ಅವರ ಧ್ಯೇಯ ಮತ್ತು ಆದರ್ಶ ವ್ಯಕ್ತವಾಗಿ ನಿರೂಪಿಸಲ್ಪಟ್ಟಿದೆ ಎನ್ನುತ್ತಾರೆ ರಶ್ಮಿ ಉಳಿಯಾರು. ಅವರು ಅನಂತ ಕುಣಿಗಲ್ ಅವರ ‘ಕಾಡ್ಗಿಚ್ಚು’ ಕಾದಂಬರಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಕೃತಿ: ಕಾಡ್ಗಿಚ್ಚು
ಲೇಖಕ: ಅನಂತ ಕುಣಿಗಲ್ (ರೌದ್ರಾವರಣಂ ಭಾಗ ೨)
ಪುಟಗಳು: 152
ಪ್ರಕಾಶನ: ಅವ್ವ ಪುಸ್ತಕಾಲಯ
ಲೇಖಕರ ರೌದ್ರಾವರಣಂ ಎಂಬ ಚೊಚ್ಚಲ ಕಾದಂಬರಿಯ ಮುಂದುವರೆದ ಭಾಗವಿದು. ಮೊದಲ ಭಾಗಕ್ಕಿಂತ ಇದು ಹೆಚ್ಚು ಲಯ ಕಂಡುಕೊಂಡಿದೆ. ಕಥೆಯ ಓಘದಲ್ಲಿ ಮತ್ತು ವೇಗದಲ್ಲಿ ಒಂದು ಹಿಡಿತವಿದೆ. ಮೊದಲಿನಂತೆ ಇದು ಸಹ ಒಂದಿಷ್ಟು ಸಿನಿಮೀಯ ಎನ್ನಿಸಿದರೂ ಓದಿಸಿಕೊಂಡು ಹೋಗುತ್ತದೆ.
ಇದರಲ್ಲಿ ಬಹಳ ಇಷ್ಟವಾಗುವುದು ಪುಟ್ಟ ಅಗಸ್ತ್ಯನ ಮುಗ್ಧತೆ. ಅದು ನಕ್ಸಲ್ ಗುಂಪಿನ ನಾಯಕನೊಡಗಿನ ಅವನ ಮಾತುಗಳಿರಬಹುದು ಅಥವಾ ತನ್ನ ಮುದ್ದು ಹೆಣ್ಣು ನಾಯಿಮರಿ ರೂಬಿಯ ಕುರಿತಾಗಿ ಇರಬಹುದು. ಒಬ್ಬನೇ ಕಾಡಲ್ಲಿ ದಿಕ್ಕು ತೋಚದಂತಾದಾಗ, ಅವನಿಗಿರುವ ಧೈರ್ಯ ಮತ್ತು ಸಮಯ ಪ್ರಜ್ಞೆ ನೋಡಿ, ಶಾಲೆಗೆ ಹೋಗದಿದ್ದರೂ, ಬಾಬಣ್ಣನ ಸಹವಾಸ ನೀಡಿರುವ ಲೈಫ್ ಸರ್ವೈವಲ್ ಜ್ಞಾನದ ಬಗ್ಗೆ ಅರಿವಾಗುತ್ತದೆ. ಮೊದಲ ಭಾಗಕ್ಕಿಂತ ಇದರಲ್ಲಿ ಶಾಲೆಯ ಶಿಕ್ಷಕ ಅಭಿಮನ್ಯು ಮೇಷ್ಟ್ರು ಹೆಚ್ಚು ಆವರಿಸಿಕೊಂಡಿದ್ದಾರೆ. ಮಕ್ಕಳಿಗೆ ಮತ್ತು ಊರಿಗೆ ಒಳ್ಳೆಯದು ಮಾಡಬೇಕೆಂಬ ಅವರ ಧ್ಯೇಯ ಮತ್ತು ಆದರ್ಶ ವ್ಯಕ್ತವಾಗಿ ನಿರೂಪಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಈಗಿನ ರಾಜಕೀಯ ವ್ಯವಸ್ಥೆಯ ಒಳಸುಳಿಗಳ ಒಂದು ಪಾರ್ಶ್ವ ನೋಟವನ್ನಿಲ್ಲಿ ಕಾಣಬಹುದು. ಹಾಗೆಯೇ ಬಾಬಣ್ಣನ ದಯನೀಯತೆ ಮರುಕ ಹುಟ್ಟಿಸುತ್ತದೆ.
ಇದು ಸಹ ಗಾತ್ರದಲ್ಲಿ ಸಣ್ಣ ಕಾದಂಬರಿಯೇ ಆಗಿದ್ದು ಸಮಯವಿದ್ದರೆ ಒಂದೇ ಗುಕ್ಕಿನಲ್ಲಿ ಓದಬಹುದಾಗಿದೆ. ಮೊದಲ ಭಾಗದಲ್ಲಿ ಖಳನಾಯಕನಾಗಿ ಐನೋರು ಚಿತ್ರಿಸಲ್ಪಟ್ಟರೆ ಇಲ್ಲಿ ಅವರ ಪಾತ್ರದ ವ್ಯಾಪ್ತಿ ಕಡಿಮೆಯಾಗಿದೆ. ಅಲ್ಲದೇ ಊರಿನ ಮುಖ್ಯಸ್ಥರಾದ ಶಿವಲಿಂಗೇಗೌಡರು ಮೇಷ್ಟ್ರ ಸಹಾಯದಿಂದ ರಾಜಕೀಯ ಬೆಳವಣಿಗೆಗೆ ಬೆಂಬಲ ನೀಡಿದ ಎಂ.ಎಲ್.ಎ. ಆದ ಷಣ್ಮುಖಯ್ಯ ಕೊನೆ ಕೊನೆಗೆ ಖಳನಾಯಕನಾಗಿ ಮುಂದುವರೆಯುವ ಸಾಧ್ಯತೆ ತೋರಿತು. ಎರಡೂ ಪುಸ್ತಕಗಳಲ್ಲಿ ಐನೋರ ಪಾತ್ರವನ್ನು ನಿರೂಪಿಸುವಾಗ ಒಂದಷ್ಟು ಸೂಕ್ಷ್ಮತೆಯಿಂದ ಚಿತ್ರಿಸಬಹುದಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಅಗಸ್ತ್ಯ ಭೇಟಿ ಮಾಡಿದ ನಕ್ಸಲ್ ಗುಂಪು ಏನಾಯಿತು ಎಂಬ ಪ್ರಶ್ನೆಗೂ ಉತ್ತರ ಬೇಕಿದೆ. ಲೇಖಕರಿಗೆ ಇದನ್ನು ಒಂದು ಸರಣಿ ಪುಸ್ತಕವನ್ನಾಗಿ ಮಾಡುವ ಇರಾದೆ ಇದ್ದಂತೆ ಕಾಣುತ್ತಿದೆ. ಕೊನೆಯ ಪುಟದಲ್ಲಿ ಮುಂದುವರೆಯಬಹುದು...! ಎಂಬ ಶಬ್ದ ಅದನ್ನು ಸೂಚಿಸುತ್ತದೆ. ಇಲ್ಲಿ ಕಾಡು ಸಹ ಪ್ರಮುಖ ಪಾತ್ರವಾಗಿದೆ. ಕುತೂಹಲಕರ ಘಟ್ಟದಲ್ಲಿ ಕಾದಂಬರಿ ಸಶೇಷವಾಗಿದೆ. ಒಟ್ಟಾರೆಯಾಗಿ ಲೇಖಕರ ಈ ಸರಣಿಯ ಮುಂದಿನ ಪುಸ್ತಕಕ್ಕಾಗಿ ಖಂಡಿತವಾಗಿ ಕಾದು ಓದಬಹುದು. ಆದಷ್ಟು ಬೇಗ ಅದು ಸಾಧ್ಯವಾಗಲಿ ಎನ್ನುವುದು ನನ್ನ ಹಾರೈಕೆ!
ಧನ್ಯವಾದಗಳು
-ರಶ್ಮಿ ಉಳಿಯಾರು
“ಪರಿಸರದತ್ತ ಯೋಚನೆ ಬರುವಂತೆ ಮಾಡಿ ಸಂರಕ್ಷಣೆ ಇನ್ನು ಸಹ ಮನಸು ಮಾಡಿದರೆ ಸಾಧ್ಯ ಅನ್ನೋ ಅರಿವು ಬರುತ್ತದೆ”...
"ಕಾದಂಬರಿ ವಿಶಿಷ್ಟ ಎನಿಸಲು ಪ್ರಮುಖ ಕಾರಣ ಕಾದಂಬರಿಯನ್ನು ಸರಳಾದೇವಿಯೊಂದಿಗೆ ಆರಂಭಿಸಿರುವುದು. ಮಹಾರಾಣಿಯ ಚರಿತೆ ...
“ಭಾರತ ದೇಶದ ಸ್ವಾತಂತ್ರವು, ಯಾರೊಬ್ಬರ ಪ್ರಯತ್ನದಿಂದ ಬಂದುದಲ್ಲ. ದೇಶದ ಹಲವಾರು ಜನರ ತ್ಯಾಗ, ಬಲಿದಾನದಿಂದ ಭಾರತ ...
©2024 Book Brahma Private Limited.