Date: 12-02-2024
Location: ಬೆಂಗಳೂರು
ದಾವಣಗೆರೆಯ ಕನ್ನಡ ಭವನದಲ್ಲಿ 2024 ಫೆಬ್ರವರಿ 11ರ, ಶನಿವಾರ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಕಥಾ ಸಂಕಲನ ‘ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕದ ಬಿಡುಗಡೆ ಸಮಾರಂಭ ನೆರವೇರಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕ ಜಿ.ಪಿ. ಬಸವರಾಜು ಎಲ್ಲಾ ಕಡೆ ಪುಸ್ತಕ ಬಿಡುಗಡೆಯಾಗುತ್ತಿವೆ. ಕೆಲವರು ಪುಸ್ತಕ ಬಿಡುಗಡೆ ಆಗುತ್ತವೆ ಆದರೆ ಓದುವವರಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳು ಬಂದಿರುವುದರಿಂದ ಓದುಗರ ಸ್ವರೂಪ ಬದಲಾಗಿದೆ. ತೇಜಸ್ವಿ, ಕುವೆಂಪು ಅವರ ಪುಸ್ತಕಗಳು ಅಗಾಧವಾಗಿ ಖರ್ಚಾಗುತ್ತವೆ. ಹೊಸ ತಲೆಮಾರು ಓದುತ್ತಾರೆ. ಏಕೆಂದರೆ ಅವರಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಅದೇ ರೀತಿಯ ಪುಸ್ತಕಗಳನ್ನು ಎಲ್ಲಾ ವರ್ಗದ ಜನರು ಬಯಸುತ್ತಾರೆ ಎಂದು ಹೇಳಿದರು.
ಬರೆಯುವವರ ಸಂಖ್ಯೆ ಈಗ ಹೆಚ್ಚಾಗದೆ. ಏಕೆಂದರೆ ದಮನಿತ, ಅಲಕ್ಷಿತ, ಅಳಿವಿನ ಅಂಚಿನಲ್ಲಿರುವ ಸಮುದಾಯಗಳಿಗೂ ಕೂಡ ಶಿಕ್ಷಣ ಸಿಕ್ಕಿರುವುದರಿಂದ ಬರೆಯುವವರು ಅಧಿಕವಾಗಿದ್ದಾರೆ. ಸಾಹಿತ್ಯದಲ್ಲಿ ಸವಾಲಾಗಿರುವುದು ಕಾವ್ಯ. ಆದರೆ ಅದೇ ಎಲ್ಲರಿಗೂ ಸುಲಭವಾಗಿದೆ. ಸಂಕೀರ್ಣ ಅನುಭವಗಳನ್ನು ಕಟ್ಟಿಕೊಡುವುದೇನಿದ್ದರೂ ಕಥೆ ಎಂದು ಅಭಿಪ್ರಾಯಪಟ್ಟರು.
ಪುಸ್ತಕದ ಕುರಿತು ಲೇಖಕರು ಮತ್ತು ತುಮಕೂರಿನ ಪ್ರಾಧ್ಯಾಪಕರಾದ ಡಾ. ರವಿಕುಮಾರ ನೀಹ ಅವರು ಮಾತನಾಡಿ ಪುಸ್ತಕದಲ್ಲಿರುವ ಕಥೆಗಳು ಮನುಷ್ಯನ ಅಂತಃಕರಣವನ್ನು ತೆರೆದಿಡುತ್ತವೆ. ಕಳ್ಳು ಬಳ್ಳಿಯಂತಹ ಕಥೆಯಲ್ಲಿ ಒಂದೇ ಜಾತಿಯ ಜಮೀನ್ದಾರಿಕೆಯ ಮನುಷ್ಯ ತನ್ನದೇ ಜಾತಿಯವನನ್ನು ಜೀತಕೊಳಪಡಿಸುವುದನ್ನು ಲೇಖಕಿ ಸೂಕ್ಷ್ಮವಾಗಿ ವಿವರಿಸುತ್ತಾ ಅಂತರಂಗದಲ್ಲಿ ವಿರೋಧಿಸುತ್ತಾರೆ ಎಂದರು.
ಪ್ರಾಸ್ತವಿಕ ಮಾತುಗಳನ್ನಾಡಿದ ಕತೆಗಾರ್ತಿ ಕತೆಗಾರ್ತಿ ಬಿ. ಟಿ.ಜಾಹ್ನವಿ ಅವರು ನನ್ನ ಮೊದಲ ಪುಸ್ತಕ 1987ರಲ್ಲಿ ಪ್ರಕಟಗೊಂಡಿತು. ನನ್ನಲ್ಲಿ ಬರೆಯುವ ಉರುಪು ಮೂಡಿಸಿದವರು ಲಂಕೇಶ್ ಎಂದರು. ಈ ಮೊದಲೆಲ್ಲ ನನ್ನ ಪುಸ್ತಕಗಳು ಮೊದಲೆಲ್ಲಾ ಪ್ರಕಟಗೊಂಡರೂ ಪ್ರಕಾಶನದಲ್ಲೇ ಉಳಿದು ಬಿಟ್ಟವು. ಪ್ರಕಾಶನ ಮತ್ತು ಪುಸ್ತಕ ರಾಜಕಾರಣದಲ್ಲಿ ಬೇಸತ್ತು ಬರೆಯುದನ್ನೇ ನಿಲ್ಲಿಸಿದೆ. ಆದರೆ ಪ್ರಕಾಶಕರು ಹಿರಿಯರು ಸಾಹಿತಿಗಳ ಹಿತೈಷಿಗಳ ಹಾರೈಕೆಯಿಂದ ಮತ್ತೆ ಬರೆಯುತ್ತಿದ್ದೇನೆ ಈ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಬಿ ರಾಮಚಂದ್ರಪ್ಪ ಮಾತನಾಡಿ ಇಂದಿನ ಯುವ ಪೀಳಿಗೆಗೆ ಜಾಹ್ನವಿ ಅಂತ ಕಥೆಗಾರ್ತಿಯರ ಕಥೆಗಳು ಅವಶ್ಯಕವಿದ್ದು ಸೂಕ್ಷ್ಮ ಸಂವೇದನೆಗಳ ಮೂಲಕ ಅವರನ್ನು ತಲುಪಲು ಸಾಧ್ಯವಾಗುತ್ತಿವೆ. ಕನ್ನಡ ಸಾಂಸ್ಕೃತಿಕ ಲೋಕದ ಯಾವ ಕತೆಗಾರರು ಮುಟ್ಟಲಾಗದ ಒಳ ಜಗತ್ತೊಂದನ್ನು ಅವರು ಯಾವ ಸಿದ್ಧಾಂತಕ್ಕೂ ಒಳಗಾಗದೆ ಬಹುಜನರ ಸಾಮಾಜಿಕ ಮೌಲ್ಯ ಮತ್ತು ನ್ಯಾಯ ತಿಳಿಸುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ನೀನಾಸಂ ನ ವಾಣಿ, ವಿದ್ಯಾ ಅವರು ಪ್ರಸ್ತುತ ಪಡಿಸಿದ ಬಿ.ಟಿ.ಜಾಹ್ನವಿ ಅವರ “ದೂಪ್ದಳ್ಳಿ ಸೆಕ್ಸಿ ದುರುಗ” ರಂಗ ಪ್ರಸ್ತುತಿ ಎಲ್ಲರ ಮೆಚ್ಚುಗೆ ಗಳಿಸಿತು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ, ಪ್ರೊ.ಎ.ಬಿ ರಾಮಚಂದ್ರಪ್ಪ, ಸಾಹಿತಿಗಳಾದ ಸೌಮ್ಯ ಕೋಡೂರು, ಕೌದಿ ಪ್ರಕಾಶನದ ಡಾ. ಮಮತ, ಹಾಗೂ ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...
ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...
ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡ...
©2024 Book Brahma Private Limited.