ಕೆನಡಾದಲ್ಲಿರುವ ಅಚ್ಚ ಕನ್ನಡಿಗ ಲೇಖಕ ಡಾ. ರಾಮಭಟ್ ಬಾಳಿಕೆ


"ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾನ ಪಠ್ಯ ಪುಸ್ತಕಗಳನ್ನೂ ಬರೆದರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್ ಆದರು. ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ ಕೂಡಾ ಅದರು," ಎನ್ನುತ್ತಾರೆ ಪಾರ್ವತಿ ಜಿ.ಐತಾಳ್. ಅವರು ಬಾಳಿಕೆ ರಾಮ ಭಟ್ ಅವರ ‘ಬಾಳಿಕೆಯಿಂದ ಕೆನಡಾಕ್ಕೆ’ ಕೃತಿ ಕುರಿತು ಬರೆದ ವಿಮರ್ಶೆ.

ಡಾ.ರಾಮಭಟ್ ಬಾಳಿಕೆ ಹುಟ್ಟಿದ್ದು 1943 ಒಕ್ಟೋಬರ್ 2ರಂದು ಕಾಸರಗೋಡು ಜಿಲ್ಲೆಗೆ ಸೇರಿದ ಧರ್ಮತ್ತಡ್ಕ ಎಂಬ ಪುಟ್ಟ ಹಳ್ಳಿಯ ಬಾಳಿಕೆ ಎಂಬ ಮನೆಯಲ್ಲಿ. ಒಂದು ಮಧ್ಯಮ ವರ್ಗದ ಹವ್ಯಕ ಬ್ರಾಹ್ಮಣರ ತುಂಬು ಕುಟುಂಬದಲ್ಲಿ. ಅಡಿಕೆ ತೋಟ, ಬತ್ತದ ಗದ್ದೆ ಮತ್ತು ಗೇರು-ಮಾವು-ಹಲಸು ಹಾಗೂ ಇತರ ಹಲವು ಬಗೆಯ ಮರಗಳಿದ್ದ ಗುಡ್ಡಗಳ ನಡುವೆ. ಆಗ ತೀರಾ ಹಿಂದುಳಿದಿದ್ದ ಆ ಹಳ್ಳಿಯಲ್ಲಿದ್ದದ್ದು ಒಂದೇ ಒಂದು ಶಾಲೆ. ಅಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮಂಜೇಶ್ವರದಲ್ಲಿ ಹೈಸ್ಕೂಲು ಮುಗಿಸಿದಾಗ 'ಇನ್ನು ಕಲಿತದ್ದು ಸಾಕು ರಾಮಾ, ತೋಟ-ಗದ್ದೆಗಳನ್ನು ನೋಡಿಕೋ' ಎಂಬ ರಾಗ ಶುರುವಾಗಿತ್ತು. ಆದರೆ ಓದಿನಲ್ಲಿ ಯಾವಾಗಲೂ ಮುಂದಿದ್ದ ರಾಮಭಟ್ ಹಠ ಹಿಡಿದು ಕಾಸರಗೋಡು ಸರಕಾರಿ ಕಾಲೇಜಿಗೆ ಹೋಗಿ ಪಿಡಿಸಿಗೆ ಸೇರಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ಪುನಃ ಹಠ ಹಿಡಿದು ಆಗ ತುಂಬಾ ಅಪರೂಪವಾಗಿದ್ದ ಎಂಜಿನಿಯರಿಂಗ್ ಓದಲು ಸುರತ್ಕಲ್ಲಿನ ಕೆ.ಆರ್.ಇ.ಸಿ.ಸೇರಿದರು. ಅಲ್ಲಿಂದ ನಂತರ ಹಿಂದಿರುಗಿ ನೋಡಲೇ ಇಲ್ಲ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಬಿ.ಇ.ಮಾಡಿ ಪ್ರಾಧ್ಯಾಪಕರುಗಳ ಬೆಂಬಲದಿಂದ ಮದರಾಸಿನ ಐ.ಐ.ಟಿ.ನಲ್ಲಿ ಸ್ಕಾಲರ್ಶಿಪ್ ಪಡೆದು ಎಂ.ಟೆಕ್ ಮಾಡಿದರು. ಅಲ್ಲೂ ಓದಿನಲ್ಲಿ ಜಾಣ್ಮೆ ತೋರಿಸಿದ ಅವರನ್ನು ಅಲ್ಲಿನ ಪ್ರಾಧ್ಯಾಪಕರುಗಳು ಪಿ.ಹೆಚ್.ಡಿ.ಮಾಡುವಂತೆ ಒತ್ತಾಯಿಸಿದರು. ಮನೆಯಿಂದ ಓದು ಸಾಕೆಂಬ ಒತ್ತಾಯ ಬರುತ್ತಲೇ ಇತ್ತು. ಮೂರು ವರ್ಷದಲ್ಲಿ ಪಿ.ಹೆಚ್.ಡಿ ಮುಗಿಸಿ 'ಸೌಂಡ್ ಅಂಡ್ ವೈಬ್ರೇಷನ್( ನಾದ ಮತ್ತು ಕಂಪನ)' ಎಂಬ ವಿಷಯದ ಮೇಲೆ ಅವರು ಬರೆದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿತು. ಇಲ್ಲಿಗೆ ಅವರ ಸಾಧನೆಯ ಮೊದಲ ಘಟ್ಟ ಮುಗಿದಿತ್ತು.

ಮುಂದೆ ರಾಮಭಟ್ ತಿರುವನಂತಪುರ ಸಮೀಪದ ತುಂಬಾ ರಾಕೆಟ್ ಸೆಂಟರಿನಲ್ಲಿ(ISRO) ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲಿದ್ದಾಗ ಮುಳ್ಳೇರಿಯಾ ಸಮೀಪದ ಕೊಲ್ಲಂಪಾರೆಯ ಪಾರ್ವತಿ ಭಟ್ ಅವರೊಂದಿಗೆ ವಿವಾಹವಾಯಿತು.‌ ತುಂಬಾದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡುವಷ್ಟರಲ್ಲಿ ಅವರಿಗೆ ಇಂಗ್ಲೆಂಡಿನ ಒಂದು ವಿಜ್ಞಾನ ಸಂಸ್ಥೆಯಿಂದ ಕರೆ ಬಂತು. ಅವರು ಪತ್ನಿಯೊಂದಿಗೆ ಅಲ್ಲಿಗೆ ಹೋಗಿ ಅಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರಿಗೆ ಅಮೆರಿಕಾದ ನಾಸಾ(NASA) ದಿಂದ ಆಹ್ವಾನ ಬಂತು. ಅಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡುವಷ್ಟರಲ್ಲಿ ಕೆನಡಾದ ಮಾಂಟ್ರಿಯಲ್ ನ ಕಾನ್ ಕಾರ್ಡಿಯಾ ವಿಶ್ವವಿದ್ಯಾಲಯದವರು ಅವರನ್ನು ಅಹ್ವಾನಿಸಿದರು. ರಾಮಭಟ್ ಅಲ್ಲಿಗೆ ಹೋದವರು ಮುಂದೆ ಅಲ್ಲಿಯೇ ನೆಲೆಸಿ ಶೈಕ್ಷಣಿಕ (ವಿಜ್ಞಾನ)ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನಿತ್ತರು. ನೂರಾರು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಳನ್ನಿತ್ತರು. ಮತ್ತು ಅನೇಕ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದರು. ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾನ ಪಠ್ಯ ಪುಸ್ತಕಗಳನ್ನೂ ಬರೆದರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್ ಆದರು. ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ ಕೂಡಾ ಅದರು.

1983ರಲ್ಲಿ ನಾಸಾದಲ್ಲಿದ್ದಾಗ ರಾಮಭಟ್ಟರ ಅನನ್ಯ ಸಾಧನೆಯನ್ನು ಗುರುತಿಸಿ ಅವರಿಗೆ ನಾಸಾದ ಲಾಂಗ್ಲೆ ರಿಸರ್ಚ್ ಸೆಂಟರ್ ನವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ಕೆನಡಾ, ಅಮೆರಿಕಾ ಮತ್ತು ಇಂಡಿಯಾದ ಹಲವು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳ ಫೆಲೋಷಿಪ್ ಗಳು ಕೂಡಾ ಅವರಿಗೆ ದೊರಕಿದವು. ಭಾರತದಲ್ಲಿ ಮುಂಚೂಣಿಯಲ್ಲಿರುವ ಕುರುಕ್ಷೇತ್ರ ರೂರ್ಕಿ, ವೆಲ್ಲೋರ್ ಮೊದಲಾದ ಆಯ್ದ ಸಂಸ್ಥೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದರು. ಇ, ಇಂಡಿಯಾದ ಹಲವು ತಾಂತ್ರಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಅವಕಾಶವನ್ನು ಸಂಯುಕ್ತ ದೇಶಗಳ ಅಭಿವೃದ್ಧಿ ಯೋಜನೆಯಲ್ಲಿ ಅವರು ಪಡೆದರು.

ರಾಮಭಟ್ಟರಿಗೆ ಮೊದಲಿನಿಂದಲೂ ಸಾಹಿತ್ಯ-ಸಂಗೀತ-ಶಾಸ್ತ್ರಿಯ ನೃತ್ಯ-ಯಕ್ಷಗಾನ-ಹರಿಕಥೆ ಮೊದಲಾದ ಸಾಂಪ್ರದಾಯಿಕ ಕಲೆಗಳಲ್ಲಿ ಬಹಳ ಆಸಕ್ತಿ. ಚಿಕ್ಕಂದಿನಿಂದಲೂ ಸಣ್ಣ ಪುಟ್ಟ ಲೇಖನ, ಕಥೆ-ಕವನಗಳನ್ನು ಬರೆಯುತ್ತಿದ್ದ ಅವರು ಬದುಕಿನಲ್ಲಿ ನೆಲೆಯೂರಿದ ನಂತರ ಮೊದಲು 'ನಗೆಗೆ ಇರಲಿ ಬಾಳಿಕೆ' ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಬಾಲ್ಯದ ನೆನಪುಗಳು, ಸುತ್ತಮುತ್ತಲ ಬದುಕಿನ ಅವಲೋಕನ, ವಿದೇಶಗಳಲ್ಲಿ ತಮ್ಮ ಅನುಭವಗಳು-ಅನ್ನಿಸಿಕೆಗಳು, ಕೌಟುಂಬಿಕ ಬದುಕಿನಲ್ಲಿ ಕಂಡ ಸಂತೋಷಗಳು ಅವರ ಕಾವ್ಯಕ್ಕೆ ವಸ್ತುಗಳಾದವು. ಆ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತು 1984ರಲ್ಲಿ ಪ್ರಕಟಿಸಿತು. ಆಗಿನ ಅಧ್ಯಕ್ಷರಾಗಿದ್ದ ಹೆಚ್.ಬಿ.ಜ್ವಾಲನಯ್ಯನವರು ಅದಕ್ಕೆ ಮುನ್ನುಡಿಯನ್ನೂ ಬರೆದಿದ್ದರು. ರಾಮಭಟ್ ಅವರ ಎರಡನೆಯ ಕೃತಿ 'ನಾದ' ಎಂಬ ವಿಜ್ಞಾನ ಕೃತಿ.‌ ಅದರಲ್ಲಿ ಅವರು ತಮ್ಮ ಪಿ.ಹೆಚ್.ಡಿ.ಸಂಶೋದನೆಗೆ ಸಂಬಂಧಪಟ್ಟ ಹಲವಾರು ವಿವರಗಳನ್ನು ಕನ್ನಡದಲ್ಲಿ ಬರೆದಿದ್ದರು. ಅವರ ಇಷ್ಟದ ವಿಷಯವಾದ ಸಂಗೀತ ಮತ್ತು ಸಂಗೀತೋಪಕರಣಗಳಲ್ಲಿ ನಾದ ಹೇಗೆ ಉಂಟಾಗುತ್ತದೆ ಎಂಬುದನ್ನೂ ವಿವರಿಸಿದರು. ಈ ಪುಸ್ತಕವನ್ನು 1986ರಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದರು.

ರಾಮಭಟ್ ಅವರ ಮುಂದಿನ ಕೃತಿ ಅವರು ಇಂಗ್ಲಿಷ್ ನಲ್ಲಿ ಬರೆದ 'The Divine Anjaneya-Story of Hanuman' ಎಂಬ ಸುಮಾರು 230 ಪುಟಗಳ ಒಂದು ಕಾದಂಬರಿ. ಭಾರತಿಯ ಸಂಸ್ಕೃತಿ, ವೇದ-ಪುರಾಣ -ಇತಿಹಾಸಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದ ಅವರು ಆಂಜನೇಯನ ಹುಟ್ಟಿನ ಹಿನ್ನೆಲೆ, ಬೆಳವಣಿಗೆ ಮತ್ತು ಅತ ಮಾಡಿದ ಸಾಹಸಗಳು, ರಾಮಾಯಣ ಯುದ್ಧದಲ್ಲಿ ಅವನ ಪಾತ್ರ-ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.‌ ಇದನ್ನು ಕೆನಡಾದ iuniverse ಪ್ರಕಟಿಸಿದ್ದಾರೆ. ಮತ್ತು ಅದು ಅಮೆಝಾನ್ ನಲ್ಲೂ ಲಭ್ಯವಿದೆ. ಮುಂದೆ ಅವರು ಆಂಜನೇಯನ ಚೀನೀ ಪರಿಕಲ್ಪನೆ ಅಧಾರಿತ 'Xuang Zhang's Mission to the West with, monkey King: ಅನ್ನುವ 768 ಪುಟಗಳ ಬೃಹತ್ ಕಾದಂಬರಿಯನ್ನು ಬರೆದರು. ಇದು ಅವರ ಮಾಸ್ಟರ್ ಪೀಸ್ ಅನ್ನಬಹುದು. ಎಪಿಕ್ ಸಯಲಿಯಲ್ಲಿರುವ ಇದನ್ನು ಮಹಾಕಾದಂಬರಿ ಎಂದು ಹೇಳಬಹುದು. ಇದರ ಹಿಂದಿನ ಪ್ರೇರಣೆ ಅವರು ಒಂದು ವಿಜ್ಞಾನ ಸಮ್ಮೇಳನಕ್ಕೆಂದು ಮಾಡಿದ ಚೀನಾ ಭೇಟಿ. ತಮ್ಮ ಚೀನೀ ಸ್ನೆಹಿತ ಮಿಂಗ್ ಯುವಾನ್ ವೆನ್ ಅವರ ಬಳಿ ಚೀನಾದ ಯಾವುದಾದರೂ ಪೌರಾಣಿಕ ಕಥೆಯನ್ನು ಸುಚಿಸಲು ಕೇಳಿಕೊಂಡಾಗ ಅವರು Journey to the West ಎಂಬ ಕೃತಿಯನ್ನು ಓದಲು ಹೆಳಿದರು. ಅದ್ಭುತವಾದ ಆ ಕೃತಿಯಲ್ಲಿ ಬರುವ 'ಸುನ್ ವೂಕಾಂಗ್' ಎಂಬ ಪಾತ್ರವು ರಾಮಭಟ್ಟರಿಗೆ ಕುತೂಹಲಕರವಾಗಿ ತೋರಿತು. ಅದರ ಆಧಾರದಲ್ಲಿ ಇಂಗ್ಲಿಷ್ ನಲ್ಲಿ ಒಂದು ಕೃತಿಯನ್ನು ಬರೆಯುವ ಆಲೋಚನೆ ಬಂತು. (ಇದೆ ಸಮಯದಲ್ಲಾಗಿತ್ತು ಚೀನಿಯರಿಗೆ ಆಂಜನೇಯನನ್ನು ಪರಿಚಯಿಸಲೆಂದು ಅವರು 'ಆಂಜನೇಯ' ಕೃತಿಯನ್ನು ಬರೆದದ್ದು. ಕೂಡಲೇ ಅದು ಚೀನೀ ಭಾಷೆಗೆ ಅನುವಾದಗೊಂಡಿತು.) ಆಂಜನೇಯನ ಕುರಿತು ಚೀನೀ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಹಲವಾರು ವಿಚಾರಗಳ ಕುರಿತು ತಿಳಿದುಕೊಂಡ ಭಟ್ಟರು ಅದರೊಂದಿಗೆ ಭಾರತೀಯ ಕಲ್ಪನೆಗಳಿಗಿರುವ ಅದ್ಭುತ ಸಾಮ್ಯವನ್ನು ಗುರುತಿಸಿ ಇಂಗ್ಲಿಷ್ ಗೆ ಅನುವಾದಗೊಂಡ ಆ ಪುರಾಣಗಳನ್ನು ಓದಿ ಒಂದು ಕಾದಂಬರಿಯನ್ನು ಬರೆದು ಬಿಟ್ಟರು. ಚೀನಾದ ಪಶ್ವಿಮಕ್ಕಿರುವ ಭಾರತದಿಂದ ಚೀನಿ ಬೌದ್ದ ಪುರೋಹಿತನಾದ ಝುವಾನ್ ಝಾಂಗ್ ಭಾರತಕ್ಕೆ ವಾನರ ರಾಜ ಸುನ್ ವೂಕಾಂಗ್ ನ ಜತೆಗೆ ಬೌದ್ದ ಗ್ರಂಥಗಳನ್ನು ತರಲು ಹೋಗುತ್ತಾನೆ. ದಾರಿಯಲ್ಲಿ ಬರುವ ಸಾವಿರಾರು ಅಡೆತಡೆಗಳನ್ನು ಎದುರಿಸಿ ಬೌದ್ಧರ ಪವಿತ್ರ ಗ್ರಂಥಗಳನ್ನು ತನ್ನ ದೇಶಕ್ಕೆ ತರುವ ಕೆಲಸದಲ್ಲಿ 'ಮಂಕಿ ಕಿಂಗ್ 'ನ ಸಂಪೂರ್ಣ ಸಹಕಾರ ಸಿಕ್ಕಿ ಅವನ ಉದ್ದೇಶ ಫಲಿಸುವುದೇ ಈ ಕೃತಿಯ ವಸ್ತು. ಅದನ್ನೂ ಡೆಲ್ಲಿಯ ಆದಿತ್ಯ ಪ್ರಕಾಶನದವರು 2014ರಲ್ಲಿ ಪ್ರಕಟಿಸಿದರು.

ರಾಮಭಟ್ಟರ ಕೊನೆಯ ಕೃತಿ 'ಬಾಳಿಕೆಯಿಂದ ಕೆನಡಾಕ್ಕೆ' ಎಂಬ ಅವರ ಆತ್ಮಕಥನ. ಇದು ಎಪ್ಪತ್ತೆರಡು ಪುಟಗಳ ಒಂದು ಪುಟ್ಟ ಕೃತಿ. ‌ಇದರಲ್ಲಿ ಅವರು ತಮ್ಮ ಬದುಕಿನ ಮುಖ್ಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಸ್ತತಃ ಹಾಡುಗಾರರೂ ಆಗಿರುವ ರಾಮಭಟ್ ಅವರಿಗೆ ಸಂಗೀತ ವಿದುಷಿಯೇ ಮಡದಿಯಾಗಿ ಸಿಕ್ಕಿದ್ದು ಅವರ ಅದೃಷ್ಡ.‌ ಪ್ರಾಸಬದ್ಧವಾಗಿರುವ ಕವಿತೆಗಳನ್ನು ಬರೆಯುವ ಅವರ ಹಾಡುಗಳಿಗೆ ಪಾರ್ವತಿಯವರೇ ರಾಗ ಹಾಕಿ ಕೆನಡಾದ ಕನ್ನಡ ಕೂಟದಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಂಡು ಎಲ್ಲರೂ ಜತೆಯಾಗಿ ಹಾಡುತ್ತಿದ್ದರು. ಮಡದಿಯ ಪ್ರೋತ್ಸಾಹದಿಂದ ಅವರು ಮೃದಂಗ ನುಡಿಸುವುದನ್ನೂ ಕಲಿತರು. ಎಂಬತ್ತರ ದಶಕದಲ್ಲಿ ಒಮ್ಮೆ ಕನ್ನಡ ಕೂಟದ ವಾರ್ಷಿಕೋತ್ಸವದಲ್ಲಿ ಭಟ್ಟರು ರಚಿಸಿದ 'ಪುರಂದರದಾಸ' ರೂಪಕವು ಪ್ರದರ್ಶಿಸಲ್ಪಟ್ಟು ಬಹಳ ಜನಮನ್ನಣೆಯನ್ನು ಗಳಿಸಿತ್ತು. ಅವರು ಮಾಡಿದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಹರಿಕಥೆಯೂ ಜನರನ್ನು ರಂಜಿಸಿತ್ತು. ಭಟ್ಟರು ತಮ್ಮ ಮಗಳಂದಿರಾದ ಮಮತಾ ಮತ್ತು ಅಪರ್ಣಾ ಇಬ್ಬರಿಗೂ ಭಾರತೀಯ ಕಲೆಗಳಾದ ನೃತ್ಯ- ಸಂಗೀತಗಳನ್ನು ಪ್ರಸಿದ್ಧ ಗುರುಗಳ ಮೂಲಕ ಕಲಿಸಿದ್ದರಲ್ಲದೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲೂ ತರಬೇತಿ ನೀಡಿದ್ದರು. ಇಂದು ಇಬ್ಬರು ಮಕ್ಕಳೂ ತಮ್ಮ ವೈದ್ಯ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಒಳ್ಳೆಯ ಹೆಸರು ಗಳಿಸಿದ್ದಾರೆ.

ಎಂಬತ್ತೊಂದರ ಇಳಿವಯಸ್ಸಿನ ರಾಮಭಟ್ ಅವರ ಆರೋಗ್ಯದಲ್ಲಿ ಇಂದು ಏರುಪೇರಾಗಿದೆ. ಸರಾಗವಾಗಿ ಓದುವುದಾಗಲಿ ಬರೆಯುವುದಾಗಲಿ ಅವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತಿಯಲ್ಲಿದ್ದರೂ ಕೃತಿಗಳನ್ನು ಅವರೀಗ ಕೃತಿಗಳನ್ನು ರಚಿಸುತ್ತಿಲ್ಲ. ಆದರೆ ಅವರು ಈಗಾಗಲೇ ಬರೆದಿರುವ ಸಾವಿರಾರು ಪುಟಗಳ ಸಾಹಿತ್ಯವು ಜನರಿಗೆ ಇನ್ನಾದರೂ ತಲುಪಬೇಕಾಗಿದೆ ಎಂಬುದು ನನ್ನ ಪ್ರಾಮಾಣಿಕ ಅನ್ನಿಸಿಕೆ.

- ಪಾರ್ವತಿ ಜಿ.ಐತಾಳ್

MORE FEATURES

ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು

17-10-2024 ಬೆಂಗಳೂರು

“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...

ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ

16-10-2024 ಬೆಂಗಳೂರು

"ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rat...