Date: 21-09-2024
Location: ಬೆಂಗಳೂರು
"ಕತ್ತಲಾಗುತ್ತಿದ್ದಂತೆ ನಗರದ ಚಿತ್ರಣ ಬದಲಾಗುವುದು ಸಹಜ, ಯಾವ್ಯಾವುದೊ ಉದ್ದೇಶಗಳಿಗೆ ಲೈವ್ ಬ್ಯಾಂಡಿಗೆ ಜನರು ಭೇಟಿ ಕೊಡುತ್ತಾರೆ. ಲೈವ್ ಬ್ಯಾಂಡಿನ ನೈಜ ಚಿತ್ರಣವನ್ನೆ ಕಟ್ಟಿಕೊಟ್ಟಿರುವುದು, ಮತ್ತೆ ಅಲ್ಲಿಗೆ ಬರುವವರ ಮನಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ರೀತಿಯೂ ಚೆನ್ನಾಗಿದೆ," ಎನ್ನುತ್ತಾರೆ ಚಂದ್ರಶೇಖರ್. ಆರ್. ಅವರು ನೌಷದ್ ಜನ್ನತ್ ಅವರ ‘ಬೇವಾಚ್’ ಕಾದಂಬರಿ ಕುರಿತು ಬರೆದ ಅನಿಸಿಕೆ.
ಕಾದಂಬರಿ ಶೀರ್ಷಿಕೆ : ಬೇವಾಚ್
ಲೇಖಕರು : ನೌಷದ್ ಜನ್ನತ್
ಪ್ರಕಾಶಕರು : ವೀರಲೋಕ ಬುಕ್ಸ್
ಕಾದಂಬರಿ, ಬೆಂಗಳೂರಿನ ಕತ್ತಲ ಲೋಕವೊಂದರ ನಿಜ ಸ್ಥಿತಿಯ ದರ್ಶನ ಮಾಡಿಸುತ್ತದೆ. ಯಾವುದೇ ಜವಾಬ್ದಾರಿಗಳ ಅರಿವಿಲ್ಲದ, ಕುಡಿತ ಮೋಜು ಮಸ್ತಿಯಲ್ಲಿ ಕಾಲ ಕಳೆಯುವ ಯುವಕನೊಬ್ಬ ಕುರುಡು ಮೋಹದ ಬಲೆಯೊಳಗೆ ಸಿಲುಕಿ ಪರಿತಪಿಸುವಂತಾಗಿ ಅದರಿಂದ ಪಾಠ ಕಲಿತು, ವೇಶ್ಯೆಯರ ಸಂಗ ಮಾಡಬೇಕೆಂಬ ಯೋಚನೆಯಲ್ಲಿದ್ದ ಸ್ನೇಹಿತನಿಗೆ ತನ್ನ ಕಥೆ-ವ್ಯಥೆಯನ್ನು ಪೂರ್ತಿಯಾಗಿ ಹೇಳಿರುವ ನಿರೂಪಣೆ ಓದಿಸಿಕೊಂಡು ಹೋಗುತ್ತದೆ.
ಕತ್ತಲಾಗುತ್ತಿದ್ದಂತೆ ನಗರದ ಚಿತ್ರಣ ಬದಲಾಗುವುದು ಸಹಜ, ಯಾವ್ಯಾವುದೊ ಉದ್ದೇಶಗಳಿಗೆ ಲೈವ್ ಬ್ಯಾಂಡಿಗೆ ಜನರು ಭೇಟಿ ಕೊಡುತ್ತಾರೆ. ಲೈವ್ ಬ್ಯಾಂಡಿನ ನೈಜ ಚಿತ್ರಣವನ್ನೆ ಕಟ್ಟಿಕೊಟ್ಟಿರುವುದು, ಮತ್ತೆ ಅಲ್ಲಿಗೆ ಬರುವವರ ಮನಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ರೀತಿಯೂ ಚೆನ್ನಾಗಿದೆ.
ಪ್ರೀತಿಯ ನಾಟಕದಲ್ಲಿ ಅಮಾಯಕ ಹೆಣ್ಣು ಮಕ್ಕಳ ನಂಬಿಕೆಗಳನ್ನು ಹುಸಿಗೊಳಿಸುವ ವಾಸ್ತವದ ಚಿತ್ರಣವಿದೆ. ಒಮ್ಮೆ ದಂಧೆಯ ಪ್ರಪಂಚದ ಒಳ ಹೊಕ್ಕ ಮೇಲೆ ಆ ಪಾಪಕೂಪದಿಂದ ಈಚೆ ಬರಲಾಗದೆ ಹಣದ ವ್ಯಾಮೋಹಕ್ಕೆ ಬಿದ್ದು ತನ್ನ ಜೀವನವನ್ನು ಹುಡುಗಿಯೊಬ್ಬಳು ಹೇಗೆ ಹಾಳು ಮಾಡಿಕೊಳ್ಳುತ್ತಾಳೆ ಎನ್ನುವುದನ್ನೂ ಪೂರ್ಣವಾಗಿ ನಿರೂಪಿಸಿದ್ದಾರೆ.
ತನ್ನ ತಪ್ಪು ಇಲ್ಲದಿದ್ದರೂ ನರಕಯಾತನೆ ಅನುಭವಿಸುವ ಯುವಕ ಮತ್ತು ನಂಬಿದ ಹುಡುಗನಿಂದ ಮೋಸ ಹೋಗಿ, ದುಡ್ಡು ಮಾಡಲೇಬೇಕೆಂಬ ಹುಚ್ಚು ಆಸೆಯಿಂದ ತಾನೇ ತಾನಾಗಿ ಪಾಪದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಹುಡುಗಿ ಇಬ್ಬರ ಪಾತ್ರಗಳೂ ಮನಸ್ಸನ್ನು ತಲ್ಲಣಗೊಳಿಸುತ್ತದೆ. ಅಷ್ಟೇನೂ ಅತಿರಂಜಕವಲ್ಲದ ಸರಳವಾದ ನಿರೂಪಣೆಯಲ್ಲೆ ಓದಿಸಿಕೊಂಡು ಹೋಗುವ, ಯುವ ಜನಾಂಗ ಹೇಗಿರಬಾರದು ಎಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೃತಿ " ಬೇವಾಚ್ "
- ಚಂದ್ರಶೇಖರ್. ಆರ್
‘ಹೇಗೆ ಅಪರಾಧಗಳು ನಡೆಯುತ್ತವೆ ಎಂದು ಗೊತ್ತಾದರೆ ನಾವು ಆ ರೀತಿಯ ಅಪರಾಧಗಳಿಗೆ ಹೇಗೆ ಬಲಿಯಾಗದಿರಬಹುದು ಎಂಬ ತಿಳುವ...
‘ಗ್ರಾಮ-ವಿಕಾಸದ ತಂತ್ರಗಳ ಜೊತೆ ಜೊತೆಯಲ್ಲಿ ಅದರಲ್ಲಿ ತೊಡಗಿರುವವರು ಹೇಗಿರಬೇಕು ಎನ್ನುವುದನ್ನು ಉದಾಹರಣೆಗಳೊಂದಿಗ...
ಬೆಂಗಳೂರು: ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನವನ್ನು 2024 ಜೂನ್ 09ರಂದು ಕಲಾಗ್...
©2024 Book Brahma Private Limited.