
ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇದ್ದವನು ಪತ್ರಕರ್ತನಾಗಬಲ್ಲ; ಶಿವಾನಂದ ಕಳವೆ
Ujire: ಗಮನಿಸುವಿಕೆ, ದಾಖಲಿಸಿಕೊಳ್ಳುವಿಕೆ, ಪ್ರಶ್ನಿಸುವಿಕೆ, ಪರಿಚಯಿಸುವಿಕೆ ಆಧಾರಿತ ಬರವಣಿಗೆಯ ಅಭಿವ್ಯಕ್ತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪತ್ರಕರ್ತರಾಗಬಯಸುವವರಿಗೆ ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇರಬೇಕು. ಸಮಗ್ರ ಜ್ಞಾನದೊಂದಿಗೆ ಇದ್ದರೆ ಮಹತ್ವದ್ದನ್ನು ದಾಟಿಸುವ ಸಂವಹನಕಾರರಾಗಬಹುದು ಎಂದು ಪರಿಸರ ತಜ್ಞ ಚಿಂತಕ, ಲೇಖಕ ಶಿವಾನಂದ ಕಳವೆ ಎಸ್.ಡಿ.ಎಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ‘ಪರಿಸರ ಕೇಂದ್ರಿತ ಚಿಂತನೆ ಮತ್ತು ಅಭಿವ್ಯಕ್ತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುರಿತು ಮಾತನಾಡಿದರು.
ಪರಿಸರ ಸಂಬಂಧಿತ ಮಾಹಿತಿ ಕಲೆಹಾಕುವ ಸಂಯಮ ಮತ್ತು ಸಂಗ್ರಹಿತ ವಿವರಗಳನ್ನು ವಿವೇಚಿಸಿ ಅಭಿವ್ಯಕ್ತಿಸುವ ಪ್ರಯತ್ನಗಳ ಮೂಲಕ ಪರಿಸರ ಪರವಾದ ಕಾಳಜಿಯನ್ನು ಮೂಡಿಸಬಹುದು. ಯಾರೂ ಗಮನಿಸದೇ ಇರುವ ಸಂಗತಿಯನ್ನು ಬರೆದರೆ ಜನ ಓದುತ್ತಾರೆ. ಪರಿಸರದಲ್ಲಿ ತಿಳಿದುಕೊಳ್ಳಬೇಕಾದ ಅನೇಕ ಕೌತುಕದ ಅಂಶಗಳು ಅಡಗಿವೆ. ಅವುಗಳನ್ನು ತಿಳಿದುಕೊಂಡು ಜನರಿಗೆ ದಾಟಿಸುವ ಕಾಳಜಿ ತೋರಬೇಕು. ಆ ಮೂಲಕ ಪರಿಸರದ ಪರವಾದ ಸಂವಹನದ ವಿನೂತನ ಮಾದರಿಗಳನ್ನು ಸೃಷ್ಟಿಸಬಹುದು ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಮತ್ತು ಕಾಲೇಜಿನ ಉಪನ್ಯಾಸಕ ಬಳಗ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.