
‘ಅಕ್ಕ’ ರಾಜ್ಯ ಪ್ರಶಸ್ತಿಗೆ ಕೆ.ಎಲ್.ಇ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅಶೋಕ ನರೋಡೆ ಆಯ್ಕೆ
KLE College: ಮಹಾಲಿಂಗಪೂರದ ಕೆ.ಎಲ್.ಇ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಅಶೋಕ ನರೋಡೆ ಅವರನ್ನು ಬೆಂಗಳೂರಿನ ಪ್ರತಿಷ್ಠಿತ ಅಕ್ಕನಮನೆ ಪ್ರತಿಷ್ಠಾನ ದವರು ಕೊಡಮಾಡುವ ರಾಜ್ಯ ಮಟ್ಟದ “ಅಕ್ಕ ರಾಜ್ಯ ಪ್ರಶಸ್ತಿ 2025” ಕ್ಕೆ ಆಯ್ಕೆ ಮಾಡಲಾಗಿದೆ. ಅಕ್ಕನ ಮನೆ ಪ್ರತಿಷ್ಠಾನದ ಅಧ್ತಕ್ಷರಾದ ಹೇಮಲತಾ ಸಿ.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಅಕ್ಕನಮನೆ ಪ್ರತಿಷ್ಠಾನವು ಕಳೆದ ಹದಿನೈದು ವರುಷಗಳಿಂದ ಸಾಹಿತ್ಯಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ಬಾರಿ ಜಾನಪದ ಸಂಭ್ರಮ ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಸವಿನೆನಪಿನಲ್ಲಿ ರಾಜ್ಯದ 50 ಜನ ಕನ್ನಡ ಬೋಧಿಸುತ್ತಿರುವ ಶಿಕ್ಷಕರಿಗೆ ಅಕ್ಕ ಪ್ರಶಸ್ತಿ ನೀಡಿ ಗೌರವಿಸಲಿದ್ದು ಡಾ. ಅಶೋಕ ನರೋಡೆಯವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾರ್ಚ 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಹಾಲ್ ದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಡಾ.ಅಶೋಕ ನರೋಡೆಯವರು ಕಳೆದ ಮೂವ್ವತ್ತಾರು ವರುಷಗಳಿಂದ ಮಹಾಲಿಂಗಪೂರದ ಕೆಎಲ್ಇ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ ಜೊತೆಗೆ ಸಾಹಿತ್ಯ ರಚನೆ, ಸಾಂಸ್ಕೃತಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಲ್ಕು ವಿಶ್ವವಿದ್ಯಾಲಯಗಳ ಎಂಫಿಲ್ ಮತ್ತು ಪಿಎಚ್ ಡಿ ಮಾರ್ಗದರ್ಶಕರಾಗಿದ್ದಾರೆ.
ಕಾವ್ಯ, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ವ್ಯಕ್ತಿ ಚರಿತ್ರೆ, ಜಾನಪದ, ಪ್ರವಾಸ ಕಥನ, ಸಂಪಾದನೆ ಕ್ಷೇತ್ರಗಳಲ್ಲಿ ಈವರೆಗೆ 150ಕ್ಕಿಂತ ಹೆಚ್ಚು ಕೃತಿಗಳನ್ನು ನೀಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ, ಗಡಿನಾಡಿನ ಜಾನಪದ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಶ್ರೇಯಸ್ಸು ಇವರದು. ಸಾಹಿತ್ಯ- ಸಾಂಸ್ಕೃತಿಕ ರಾಯಭಾರಿಗಳಾದ ಡಾ. ಅಶೋಕ ನರೋಡೆಯವರಿಗೆ “ಅಕ್ಕ ರಾಜ್ಯ ಪ್ರಶಸ್ತಿ- 2025” ಸಲ್ಲುತ್ತಿರುವುದು ಅಭಿನಂದನೀಯ.