Back To Top

 ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ | ತರುಣ್ ಶರಣ್

ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ | ತರುಣ್ ಶರಣ್

ಅಂದು ಡಿಸೆಂಬರ್ 19, 2023 ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ. ಗುಜರಾತ್ ಟೈಟನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯನನ್ನು ಮುಂಬೈ ಇಂಡಿಯನ್ಸ್‌ಗೆ ಹರಾಜು ಮಾಡಲಾಗಿತ್ತು. 2022ಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ, 2022 ರಲ್ಲಿ ನಾಯಕನಾಗಿ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರು. ಅದೇ ಸೀಸನ್ ನಲ್ಲಿ ಗುಜರಾತ್ ತಂಡವನ್ನು ಐಪಿಎಲ್ ಚಾಂಪಿಯನ್ ಮಾಡಿದ್ದ ಪಾಂಡ್ಯ, 2023ರಲ್ಲೂ ಗುಜರಾತ್ ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಮೂಲಕ ಹಾರ್ದಿಕ್ ನಾಯಕನಾಗಿ ಜನರ ಮನಸ್ಸಿಗೆ ಹತ್ತಿರವಾಗಿದ್ದರು. 2024ರ ಐಪಿಎಲ್ ಮೆಗಾ ಆಕ್ಷನ್ ಸಂದರ್ಭ, ಗುಜರಾತ್ ತಂಡ ಹಾರ್ದಿಕ್‌ರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟಿದ್ದರು. 15 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾಂಡ್ಯ ವಾಪಾಸಾದ ಬಗ್ಗೆ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಯಾವಾಗ ಮುಂಬೈ ಇಂಡಿಯನ್ಸ್ ತಂಡ, ನಾಯಕ ರೋಹಿತ್ ಶರ್ಮಾ‌ರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್‌ರನ್ನು ತಮ್ಮ ತಂಡದ ನಾಯಕ ಎಂದು ಘೋಷಿಸಿತ್ತೋ, ಅದು ಜನರಲ್ಲಿ ಬೇಸರ ತಂದಿತ್ತು.

ಅಲ್ಲಿಂದ ಪಾಂಡ್ಯನ ಬದುಕಿನಲ್ಲಿ ಒಂದಷ್ಟು ಒತ್ತಡಗಳು ಶುರುವಾಯಿತು. ಹಾರ್ದಿಕ್ ಪಾಂಡ್ಯ‌ರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದರು. ಇನ್ಸ್ಟಾಗ್ರಾಂನಲ್ಲಿ ಪಾಂಡ್ಯನ ಪೋಸ್ಟ್‌ಗೆ ಬಹಳ ಕೆಟ್ಟದಾಗಿ ಕಾಮೆಂಟ್ ಮಾಡಿದರು ಮುಂಬೈ ಅಭಿಮಾನಿಗಳು. ಈ ಮೂಲಕ ವಿವಿಧ ರೀತಿಯಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದರು. ಆದರೆ ಹಾರ್ದಿಕ್ ಪಾಂಡ್ಯ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಐಪಿಎಲ್‌ನಲ್ಲಿ ನಾಯಕರಾಗಿ ತಮ್ಮ ಜವಾಬ್ದಾರಿ ನಿಭಾಯಿಸತೊಡಗಿದರು.

ಐಪಿಎಲ್ ಶುರುವಾದರೂ ಅಭಿಮಾನಿಗಳ ಸಿಟ್ಟು ಕಡಿಮೆ ಆಗಿರಲಿಲ್ಲ. ಪಂದ್ಯಗಳು ನಡೆಯುವಾಗ, ಸ್ಟೇಡಿಯಂಗೆ ಆಗಮಿಸಿದ ಜನರೆಲ್ಲ ಹಾರ್ದಿಕ್ ಪಾಂಡ್ಯ ವಿರುದ್ಧವಾಗಿ ಘೋಷಣೆ‌ಗಳನ್ನು ಕೂಗಿದರು, ಜೋರಾಗಿ ಕಿರುಚಾಡಿದರು. ರೋಹಿತ್ ಶರ್ಮನನ್ನು ಫೀಲ್ಡ್‌ನಲ್ಲಿ ಸರಿಯಾಗಿ ನಿಲ್ಲಿಸುತ್ತಿಲ್ಲ, ದೂರ ನಿಲ್ಲಿಸುತ್ತಿದ್ದಾರೆ ಎಂದೂ ಜನ ನಿಂದಿಸತೊಡಗಿದರು. ಇವೆಲ್ಲ ಸುದ್ದಿ ಇಡೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಾರ್ದಿಕ್ ಮೇಲಿನ ಜನರ ದ್ವೇಷ ಹೆಚ್ಚಿತು.

ಪಾಂಡ್ಯ ದುರಾದೃಷ್ಟವೋ ಏನೋ! ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ಭಾರೀ ಕಳಪೆಯಾಗಿತ್ತು. 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಗೆದ್ದು, ಪ್ಲೇ ಆಫ್ ರೇಸ್‌ನಿಂದ ಮುಂಬೈ ಹೊರಬಿತ್ತು. ಈ ಬಗ್ಗೆ ಹಿರಿಯ ಕ್ರಿಕೆಟ್ ಆಟಗಾರರೂ ಬೇಸರ ವ್ಯಕ್ತಪಡಿಸಿ, ನೇರವಾಗಿ ಹಾರ್ದಿಕ್ ನಾಯಕತ್ವವನ್ನೇ ಹೊಣೆಯಾಗಿಸಿದರು. “ಹಾರ್ದಿಕ್ ನಾಯಕನದ ಮೇಲೆ ಪಂದ್ಯದ ಸಮಯದಲ್ಲಿ ಆಟಗಾರರ ಮಧ್ಯೆ ಒಳ್ಳೆಯ ಸಮನ್ವಯ ಕಂಡುಬರಲಿಲ್ಲ. ನಾನು ಆಡಿದ ತಂಡವನ್ನು ಈ ಸ್ಥಿತಿಯಲ್ಲಿ ನೋಡಲು ಬೇಸರವಾಗುತ್ತಿದೆ” ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದರು.

ಐಪಿಎಲ್ ನಲ್ಲಿ ಯಶಸ್ವಿ ತಂಡಗಳಲ್ಲೊಂದಾಗಿರೋ, ಐದು ಬಾರಿ ಚಾಂಪಿಯನ್ಸ್ ಮುಂಬೈ ತಂಡ, ಹೀನಾಯ ಪ್ರದರ್ಶನ ನೀಡಿದ್ದಕ್ಕೆ ಹಾರ್ದಿಕ್‌ರನ್ನೇ ದೂರಲಾಯಿತು. ಇದರ ಮಧ್ಯೆ ಆತನ ಜೀವನದಲ್ಲಿ ಇನ್ನೊಂದು ಸಮಸ್ಯೆ ಎದುರಾಯಿತು. ಪಾಂಡ್ಯನ ಹೆಂಡತಿ ನತಾಶಾ ಸ್ಟ್ಯಾಂಕೋವಿಕ್, ಐಪಿಎಲ್ ನಲ್ಲಿ ಪಾಂಡ್ಯನ ಕಳಪೆ ಪ್ರದರ್ಶನವನ್ನು ದೂರಿ ಡಿವೋರ್ಸ್ ಗೆ ಮುಂದಾದರು. 14 ಪಂದ್ಯಗಳಿಂದ ಕೇವಲ 216 ರನ್ ಬಾರಿಸಿದ್ದರು ಪಾಂಡ್ಯ.

ಜನರಿಂದ ಕೆಟ್ಟ ಅಭಿಪ್ರಾಯ, ವೈವಾಹಿಕ ಜೀವನದಲ್ಲಿ ಸಮಸ್ಯೆ, ಹೀಗೆ ಎಲ್ಲವೂ ಒಟ್ಟಾಗಿ ಬಂದರೂ, ಹಾರ್ದಿಕ್ ಎಲ್ಲವನ್ನೂ ಎದುರಿಸಿದರು. ಐಪಿಎಲ್ ಮುಗಿಯುತ್ತಿದ್ದಂತೆ 2024 ಟಿ20 ವಿಶ್ವಕಪ್ ತಯಾರಿ ನಡೆಯಲು ಆರಂಭವಾಯಿತು. ಜೀವನದಲ್ಲಿ ಯಾವಾಗ ದೇವರು ಕಷ್ಟ – ಸುಖಗಳನ್ನು ಕೊಡುತ್ತಾರೆ ಎಂದು ಊಹಿಸಲಾಗುವುದಿಲ್ಲ. ಪಾಂಡ್ಯನಿಗೂ ತನ್ನ ಭವಿಷ್ಯದ ಬಗ್ಗೆ ಅರಿವಿರಲಿಲ್ಲ. ಅರ್ಜುನ ಅವಾರ್ಡ್ ಮತ್ತು ಸರ್ ಗಾರ್ಫಿಲ್ದ್ ಪದಕ ವಿಜೇತನಾದ ಹಾರ್ದಿಕ ಪಾಂಡ್ಯ, 2024ರ ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದರು.

ರೋಹಿತ್ ಶರ್ಮ, ಅಕ್ಷರ್ ಪಟೇಲ್, ಅರ್ಶ್ ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬೂಮ್ರಾರವರ ಉತ್ತಮ ಪ್ರದರ್ಶನದಿಂದ, ಭಾರತ ತಂಡ ಒಂದು ಪಂದ್ಯವನ್ನೂ ಸೋಲದೇ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಿದ್ಧವಾದರು.

“ಹೀರೋ” ಎಂಬುವ ಪದದ ಅರ್ಥವೇನು? ಕಷ್ಟದ ಸಮಯದಲ್ಲಿ ಎದುರಾಳಿಯ ವಿರುದ್ಧ ಹೋರಾಡಿ ಗೆಲ್ಲುವವನನ್ನೇ ಹೀರೋ ಎಂದು ಕರೆಯುತ್ತಾರೆ. ಅದರಂತೆಯೇ ಹಾರ್ದಿಕ್ ಫೈನಲ್ ಮ್ಯಾಚ್‌ನಲ್ಲಿ ಭಾರತದ ಪಾಲಿಗೆ ಹೀರೋ ಆದರು.‌ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ, 7 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಬಹುತೇಕ ಗೆಲುವಿನ ಕಡೆಗೆ ಸಾಗುತ್ತಿತ್ತು. ಭಾರತದ ಕೈಯಿಂದ ಪಂದ್ಯ ಜಾರುತ್ತಿದೆ ಅನ್ನುವಾಗ, ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಅವರ ಕೈಗೆ ಚೆಂಡು ನೀಡಿ ಬೌಲ್ ಮಾಡಲು ಹೇಳಿದರು.

ಮ್ಯಾಚ್ ಕೈ ಬಿಟ್ಟು ಹೋಗುವ ಸನ್ನಿವೇಶ ಹಾರ್ದಿಕ ಪಾಂಡ್ಯ ಬೌಲಿಂಗ್ ಮಾಡಲು ನಿಂತಿದ್ದರು. 17 ನೇ ಓವರ್ ಹಾಕಿದ ಹಾರ್ದಿಕ್, ಮೊದಲ ಎಸೆತದಲ್ಲೇ ಅರ್ಧಶತಕ ಬಾರಿಸಿ ಭರ್ಜರಿ ಆಟವಾಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ಕ್ಲಾಸಿನ್ ಅವರ ವಿಕೆಟ್ ಕಬಳಿಸಿದರು. ಅದಲ್ಲದೇ 20ನೇ ಓವರ್ ಎಸೆಯುವ ಸೌಭಾಗ್ಯವೂ ಪಾಂಡ್ಯ ಅವರಿಗೆ ಒದಗಿತ್ತು. ಸ್ಟ್ರೈಕ್ ನಲ್ಲಿ ಆಫ್ರಿಕಾದ ಫಿನಿಶರ್ ಖ್ಯಾತಿಯ ಡೇವಿಡ್ ಮಿಲ್ಲರ್ ನಿಂತಿದ್ದರು. ಹಾರ್ದಿಕ್ ಫುಲ್ ಟಾಸ್ ಹಾಕಿದ್ದರು. ಅದನ್ನು ಬಾನೆತ್ತರಕ್ಕೆ ಬೀಸಿದರು. ಸಿಕ್ಸ್ ಹೋಗೇ ಬಿಟ್ಟಿತು ಅನ್ನುವಾಗ ಬೌಂಡರಿ ಬಳಿ, ಭಾರತದ ಸೂರ್ಯಕುಮಾರ್ ಯಾದವ್ ಅತ್ಯಾಕರ್ಷಕ ಕ್ಯಾಚ್ ಹಿಡಿದರು.

ಆ ಪಂದ್ಯದಲ್ಲಿ ಹಾರ್ದಿಕ್ ಮೂರು ವಿಕೆಟ್ ಕಬಳಿಸಿ ಪಂದ್ಯದ ಹೀರೋವಾಗಿ ಹೊರಹೊಮ್ಮಿದರು. ವಿಶ್ವಕಪ್ ಬೆನ್ನಲ್ಲೇ, ಅಂತರ ರಾಷ್ಟ್ರೀಯ ಟಿ20 ಆಲ್ರೌಂಡರ್‌ಗಳ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ ನಂ.1 ಸ್ಥಾನ ಪಡೆದರು. ಈ ಸ್ಥಾನ ಪಡೆದ ಭಾರತ ಮೊದಲ ಭಾರತದ ಮೊದಲ ಆಲ್ರೌಂಡರ್ ಎನಿಸಿದರು. ಇದೆಲ್ಲ ನಡೆದದ್ದು ಕೇವಲ ಒಂದು ವರ್ಷದಲ್ಲಿ. ಎಂತಹ ಸ್ಫೂರ್ತಿದಾಯಕ ಕಥೆ ಹಾರ್ದಿಕ್ ಪಾಂಡ್ಯ ಅವರದ್ದು.

ಜಗತ್ತೇ ನಮ್ಮ ವಿರುದ್ಧ ಇದ್ದರೂ, ಎಲ್ಲರೂ ನಾವು ಸೋಲುತ್ತೇವೆ ಎಂದು ಅಭಿಪ್ರಾಯಪಟ್ಟರೂ, ಗೆಲ್ಲುತ್ತೇನೆ ಎಂಬುವ ಹಠ, ನಂಬಿಕೆ ನಮ್ಮಲ್ಲಿ ಇದ್ದರೆ ನಾವೂ ಯಶಸ್ವಿಯಾಗಬಹುದು ಎಂಬುವುದಕ್ಕೆ ಇವರ ಜೀವನವೇ ಸಾಕ್ಷಿ. ಜೀವನದಲ್ಲಿ ಎಂತಹ ಸಮಸ್ಯೆ ಇದ್ದರೂ ಕೂಡ ನಾವು ಇಷ್ಟ ಪಡುವ ಕೆಲಸವನ್ನು ಬಹಳ ಭಕ್ತಿಯಿಂದ ನಿರ್ವಹಿಸಿದರೆ ನಮಗೆ ಖಂಡಿತವಾಗಿ ಯಶಸ್ಸು ಸಿಗುತ್ತದೆ. ಯಾರು ತನ್ನನ್ನು ಕೀಳಾಗಿ ನೋಡಿದರೂ ಅವರೇ ಇವತ್ತು ಹೀರೊ ಎಂದು ಪ್ರೋತ್ಸಾಹಿಸುತ್ತಿದ್ದಾರೆ. ಹಾರ್ದಿಕ್‌ನ ಯಶಸ್ಸು ನಮ್ಮ ಜೀವನಕ್ಕೆ ನಂಬಿಕೆ ಎನ್ನುವ ಪದದ ಅರ್ಥ ತೋರಿಸಿಕೊಡುತ್ತದೆ.

ತರುಣ್ ಶರಣ್
ಬಿವೋಕ್ (ಡಿಎಂಎಫ್) ವಿದ್ಯಾರ್ಥಿ
ಎಸ್‌ಡಿಎಂ ಕಾಲೇಜು, ಉಜಿರೆ

Prev Post

ನವಯುಗದ ದಾರಿ | ಸೌಮ್ಯ ನೇತ್ರೇಕರ್

Next Post

ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.

post-bars

Leave a Comment

Related post