Back To Top

 ‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದಾಗ ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ ತುಸು ಸಹನೆ ಬಿಟ್ಟು ಆಡುವ ಮಾತು “ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ”. ಇನ್ನು ಕೆಲವು ಸಲ ‘ಮೆಟ್ಟಿಲೇ ಹೊಡಿತೀನಿ’ ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ ಅವನ ಹುಟ್ಟು ಅವನ ತಂದೆ-ತಾಯಿ ಚಾರಿತ್ರ್ಯ ಬಹಿರಂಗವಾಗಿ ಬಯಲಿಗೆಳೆಯುವ ಸಾಹಸಿಕದ ಒಂದು ಹೆಜ್ಜೆ ಹಿಂದಕ್ಕೆ ಈ ತರದ ತುಸು ಮೃದುವಲ್ಲದ ತೀರಾ ಕಟುವಲ್ಲದ ನುಡಿಗಳು ಬರುವುದು ಸಹಜ.

ನಿಜಕ್ಕೂ ಇದು ಬೈಯೋದಕ್ಕಿಂತ ದನಗಳ ಆರೈಕೆಗೆ ಬಳಸುವ ಮಾತು ಅಂದ್ರೆ ನೀವು ನಂಬುತ್ತೀರಾ? ನಿಮಗೆ ಗೊತ್ತು ನಾವು ಲಿಂಗಾಯತರು ಸಾಮಾನ್ಯವಾಗಿ ಕೃಷಿ ಮಾಡುತ್ತೇವೆ. ಕಾಲ ಈಗಿನ ಹಾಗೇ ಮೊದಲೆಲ್ಲಾ ಇಷ್ಟು ಯಾಂತ್ರಿಕರಣ ವ್ಯಾಪಕವಾಗಿರಲಿಲ್ಲ. ಹಾಗಾಗಿ ಕೃಷಿಕರ ಮನೆಯಲ್ಲಿ ಎತ್ತುಗಳು ಇರುತ್ತಿದ್ದವು, ಆ ಕಾರಣವಾಗಿ ಜೊತೆಗೆ ಇನ್ನು ಕೆಲವು ಜಾನುವಾರುಗಳು ಇರುತ್ತಿದ್ದವು. ಅವುಗಳಿಗೂ ನಮ್ಮಂತೆ ಬಾಧೆಗಳು ರೋಗಗಳು ಕಾಡುತ್ತಿರುತ್ತವೆ.

ಹೆಚ್ಚಾಗಿ ಜುಲೈ-ಆಗಸ್ಟ್ ತಿಂಗಳುಗಳಲ್ಲಿ (ಮಳೆ ಜಾಸ್ತಿ ಬರುವ ಸಂದರ್ಭದಲ್ಲಿ ಹಸಿರು ಮೇವು ಸದಾ ಬಾಯಿ ಆಡುಸುವುದರಿಂದ) ಜಾನುವಾರುಗಳಿಗೆ ಅಸ್ಥವ್ಯಸ್ಥ ಆಗೋದು ಬಾಯಿ ಬರೋದು/ಬಾಯಿ ಕೆಟ್ಟುಹೋಗೋದು ಅಂತಾರೆ. ಅಂದ್ರೆ ಅವುಗಳ ನಾಲಿಗೆ ಮೇಲೆ ಮುಳ್ಳುಗಳಂತೆ ಬಂದಿರುತ್ತವೆ. ಇದು ಒಣಮೇವಿನ ಕೊರತೆಯಿಂದಲೊ ಹವಾಮಾನ ಬದಲಾವಣೆಯಿಂದಲೊ ಗೊತ್ತಿಲ್ಲ. ಈ ತರ ಆದಾಗ ಅವುಗಳ ಆರೈಕೆ ಸಾಕಿದ ಮಾಲೀಕರು ತಾವೇ ಕೈಗೊಳ್ಳುವ ನಾಟಿ ಚಿಕಿತ್ಸೆ ಒಂದು ಬಗೆಯೇ ‘ಮೆಟ್ ಹಚ್ಚಿ ತಿಕ್ಕುವುದು'(ಅವುಗಳ ಬಾಯಲ್ಲಿ ಉಪ್ಪಿನಕಾಯಿಟ್ಟು ಮೆಟ್ಟಿಂದ ಗಸಗಸ ತಿಕ್ಕುವುದು).

ಹ್ಮ, ಅವೇ ಹಳ್ಳಿಜನ ಮೆಟ್ಟುವ ಚರ್ಮದ ಅತಿ ಬಿರುಸಾದ ಗಟ್ಟಿ ಪಾದರಕ್ಷೆಗಳು. ಈಗಿನ ವ್ಯವಸ್ಥೆ ಈ ತರ ಯಾವುದೇ ಸಾಕಿ ಸಲಹುದೇ ಅವುಗಳಲ್ಲೂ ಪ್ರಾಣಿ ಜಾತಿಭೇದ ಮಾಡಿ ಕೆಲವನ್ನು ಮಾತ್ರ ಶ್ರೇಷ್ಠ-ಕನಿಷ್ಠ ಎಂದು ಉದ್ದುದ್ದ ಭಾಷಣ ಬಿಗಿದು ದೈವತ್ವಕ್ಕೆರಿಸಿದವರು; ಇಂತಹ ಸನ್ನಿವೇಶ ಕಂಡಿರುತ್ತಾರೋ ಇಲ್ಲವೋ, ಕೇಳಿ ಏನೆನ್ನುತ್ತಾರೋ ಗೊತ್ತಿಲ್ಲ. ಇರಲಿ ಈಗ ಇಲ್ಲಿ ಕೇಳಿ ಬಾಧೆಗೊಳಗಾದ ದನ ಹುಲ್ಲು ತಿನ್ನೋಕಾಗಲ್ಲ, ನೀರು ಕುಡಿಯೋಕಾಗಲ್ಲ ಮುಳ್ಳು ಬಂದಿರೋ ಕಾರಣಕ್ಕಾಗಿ.

ಅಲ್ಲಾ! ಈ ಒಕ್ಕಲಿಗರು ಮೂಕ ಬಸವಣ್ಣ, ನಮ್ ಹಿರಿಯಣ್ಣ, ಭೂಮಿ ತಾಯಿ ಚೊಚ್ಚಲ ಮಗ, ಶಿವನ ವಾಹನ ಎಂದು ಬಲವಾಗಿ ನಂಬುವವರೇ ತಾವು ದಿನಾ ಮೆಟ್ಟೋ ಮೆಟ್ಟಿಗೆ/ಕೆರುವಿಗೆ ಮನೆಯಲ್ಲಿನ ಉಪ್ಪಿನಕಾಯಿ ಹಚ್ಚಿ ಅದರ ಮೂಗುದಾರ ಮಗಾಡ ಹಿಡಿದು ಎಳೆದು ದವಡೆಗೆ ಕೈ ಹಾಕಿ ಬಾಯಿ ಪೊಳ್ಳು ಮಾಡಿ ಉಪ್ಪಿನಕಾಯಿಟ್ಟು ಮೆಟ್ ಇಂದ ಗಸಗಸ ತಿಕ್ಕುತ್ತಾರೆ. ಇದರಿಂದ ಮುಳ್ಳು ಮುರಿತವಂತೆ 1-2 ದಿನ ಹೀಗೆ ಮಾಡಿದಾಗ ಅವು ಪುನಃ ಮೊದಲಿನ ಹಾಗೆ ಚೇತರಿಸಿಕೊಂಡು ನೀರು ಕುಡಿಯೋದು ಮೇವು ತಿನ್ನೋಕೆ ಶುರು ಮಾಡುತ್ತವೆ.
ಇದು ತಪ್ಪು, ಪಾಪ, ಅಪರಾಧ ಯಾವುದು ಅಲ್ಲ. ನಾನೇಕೆ ಹೇಳಿದೆ ಅಂದರೆ ಇಲ್ಲಿ ನಂಬಿಕೆಗೆ ಆವಾಗಿನಿಂದಲೂ ಒಂದು ಮೀತಿ ಅಂತ ಇತ್ತಲ್ವಾ!? ಅದಕ್ಕಾಗಿ ಹೇಳಿದೆ.

ಈಗ ನಮ್ಮ ಮನೆಯಲ್ಲಿ ಆದ ಒಂದು ಘಟನೆ ಹೇಳ್ತೀನಿ ಕೇಳಿ!

ಇವಾಗಲಾದರೂ ಅಷ್ಟೇ ನಮ್ಮಜ್ಜ ನಮ್ಮಪ್ಪ ಸಿಟ್ಟು ಬಂದಾಗ “ಮೆಟ್ಟs ಮೆಟ್ಟs ಹಚ್ಚಿ ತಿಕತೀನಿ, ಹೆಡಕs ಹೆಡಕs ಹಿಡದು ಹೊರಗ ಹಾಕ್ತೀನಿ, ಯಾಕ್ ಕಡಿಲ್ಯಾತದೇನು? ತುರ್ಸ ಅಂದೆನ, ಹಲ್ಲ್ ಬಂದಾವೇನ ಮುಕಳ್ಯಾಗ?” ಇತ್ಯಾದಿ.. ಇನ್ನೂ ಸುಮಾರು ಇವೆ. ಅವೆಲ್ಲ ಆಫ್ ದಿ ರೆಕಾರ್ಡ್, ಬರಿಯೋಕಾಗಲ್ಲ ನಮ್ದು ಮೊದಲೇ ಕೂಡು ಕುಟುಂಬ. ಒಂದೇ ಮನೆ, ಒಂದೇ ತೋಟ, ಒಂದೇ Atlas ದೊಡ್ಡ ಸೈಕಲ್ಲು, ಒಂದೇ Suzuki ಬೈಕು, ಒಂದೇ ಎತ್ತಿನ ಗಾಡಿ, ಒಂದೇ ದನದ ಕೊಟ್ಟಿಗೆ ಅದರಲ್ಲಿ 3 ಆಕಳು,2ಎತ್ತು,1 ಹೋರಿ ಕರು.

ಒಂದು ಸಲಾ ನಾ ನೋಡಿದರಲ್ಲಿ ಇದು ಜಾಸ್ತಿ ನೆನಪು. (ಈಗ ಹೇಳಬೇಕು ಅನ್ಸುತ್ತೆ ಅದಕ್ಕಾಗಿ) ನಮ್ಮ ದನಗಳಿಗೆ ಒಂದು ಆದ್ಮೇಲೆ ಒಂದಕ್ಕೆ ಬಾಯಿಬರುತ್ತಾ ಇದ್ದವು. ಆಗಿನ್ನು ಸಣ್ಣವನಿದ್ದೆ ಒಂದು ದಿನ ಮಧ್ಯಾಹ್ನ ಒಂದ ಆಕಳು ನೀರು ಕುಡಿಲಿಲ್ಲ 2 ದಿನದಿಂದ ಹುಲ್ಲು, ಗುಗ್ಗರಿ, ನುಚ್ಚು ಯಾವುದು ಸರಿಯಾಗಿ ತಿನ್ನುತ್ತಿರಲಿಲ್ಲ. ನೀರು ಕುಡಿಸುವಾಗ ನಮ್ಮಜ್ಜ (ಯಾರೇ ಒಕ್ಕಲಿಗರು ಆದ್ರೂ ಹೀಗೆ) ಕುಡಿ! ಕುಡಿ! ನೀರ್ ಠ್ಣಾs ಠ್ಣಾs ಎಂದು ಗೊಟರು ಶಬ್ದ ಹಾಕುತ್ತಾರೆ.

ಅದು ಏನು ಮಾಡಿದರೂ ಕುಡಿಯಲೇ ಇಲ್ಲ. ಸ್ವಲ್ಪ ಹೊತ್ತು ಅದನ್ನೇ ನೋಡಿ “ಶೀಫು ಆಯಿ ಬಲ್ಲಿ ಹೋಗಿ ಒಂದ್ ವಾಟ್ಗಾ ಉಪ್ಪಿನಕಾಯ್ ತಗೊಣಬಾ ಪಾ! ಅಂದ. ನಾನು ಯಾಕ್ ಮುತ್ತ್ಯಾ? ಅಂದೆ. ದನಕ್ಕ ಬಾಯಿ ಬಂದದ ಅಂದ. ಆತು ಅಂದು ಅಡುಗೆಮನೆಗೆ ಹೋಗಿ ತಗೊಂಡು ಬಂದೆ. ನೀವು ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ. ನಮ್ಮಜ್ಜ ದಿನಾ ‘ತಂದಿ ಬಸವಣ್ಣಪ್ಪ, ತಾಯಿ ಗೌರವ್ವ’ ಅಂತ ಅವುಗಳಿಗೆ ಭಕ್ತಿಯಿಂದ ನಮಸ್ಕಾರ ಮಾಡೋನು. ಅವತ್ತು ಆಕಳು ಬಾಯಿ ತೆರೆಯದಿದ್ದಕ್ಕೆ ಏನೆಲ್ಲಾ ಬೈದಾ; ಯಪ್ಪಾ! ಆ ಜಾಗದಲ್ಲಿ ಈಗಿನ ಹೆಣ್ಮಕ್ಳು ಯಾರಾದ್ರೂ ಆಗಿದ್ರೆ, ನನ್ನ ತೇಜೋವಧೆ ಮಾಡಿದ ಈ ಮುದುಕ ಅಂತ ಕೋರ್ಟ್ ನಲ್ಲಿ ಕೇಸ್ ಹಾಕ್ತಿದ್ರು. ಅದರಲ್ಲಿ ಒಂದು ಬೈಗುಳ ಮಾತ್ರ ಹೇಳ್ತೀನಿ ಕೇಳಿ “ಅಲಾ! ಹಡಸು ತಳಿ ನಿನ್ ಗುದ್ದ ಕೆಡವಿ ನೀರ್ ತುಂಬೊರಿಲ್ಲ್ ಅದಕ್ಕ ಮಾಡಾತಿ” ಇಷ್ಟೇ ಕಡೆಗೆ ನಮ್ಮಜ್ಜ -ಕಾಕಾ ಸೇರಿ ಅದನ್ನ ಕೆಳಗೆ ಕೆಡವಿ ಬಾಯಿಗೆ ಹಚ್ಚಿ ತಿಕ್ಕಿದ್ರು ಮೆಟ್ಟ.

ಪ್ರಸಾದ ಗುಡ್ಡೋಡಗಿ
ಬಿ. ಎ‌. 4th ಸೆಮಿಸ್ಟರ್
ಕರ್ನಾಟಕ ಕಾಲೇಜು, ಧಾರವಾಡ

Prev Post

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

Next Post

ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

post-bars

Leave a Comment

Related post